Advertisement

ಮೈಕಲ್‌ ಮಾತು ಕಂಪನ ತಂದೀತು: ಮೋದಿ

06:00 AM Dec 06, 2018 | Team Udayavani |

ಹೊಸದಿಲ್ಲಿ: ವಿವಿಐಪಿ ಕಾಪ್ಟರ್‌ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್‌ ಮೈಕಲ್‌ನನ್ನು ಭಾರತಕ್ಕೆ ಗಡೀಪಾರು ಮಾಡಿದ ಬೆನ್ನಲ್ಲೇ, ಕಾಂಗ್ರೆಸ್‌-ಬಿಜೆಪಿ ನಡುವೆ ಪರಸ್ಪರ ಪ್ರತ್ಯಾ ರೋಪ ಶುರುವಾಗಿದೆ. ಈ ನಡುವೆ ದಿಲ್ಲಿಯ ವಿಶೇಷ ಕೋರ್ಟ್‌ ಆತನನ್ನು ಐದು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿ ಆದೇಶಿಸಿದೆ. ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಮೈಕಲ್‌, ಸತ್ಯ ನುಡಿಯಲು ಆರಂಭಿಸಿದನೆಂದರೆ ಯಾರ್ಯಾರು ನಿಂತ ನೆಲ ಕಂಪಿಸ ತೊಡಗುತ್ತದೋ ಎಂಬುದನ್ನು ಊಹಿಸಲೂ ಅಸಾಧ್ಯ’ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಪಾಳಯದಲ್ಲೊಂದು ನಡುಕ ಹುಟ್ಟಿಸಿದ್ದಾರೆ.

Advertisement

“ನಾನು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಅನಂತರ ಅದರ ತನಿಖೆ ನಡೆಸಿ ಈಗ ಹಗರಣ ದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಭಾರತಕ್ಕೆ ಕರೆತರಲಾಗಿದೆ. ಆ ವ್ಯಕ್ತಿಯ ವಿಚಾರಣೆ ಆರಂಭವಾಗಿದ್ದು ಆತ ಬಾಯಿಬಿಡುವ ವಿಚಾರಗಳು ಎಂಥ ಪ್ರಳಯ ಸೃಷ್ಟಿಸುತ್ತದೋ’ ಎಂದು ಹೇಳಿದರು.

ಸುಜೇವಾಲಾ ತಿರುಗೇಟು
“ಚುನಾವಣೆ ಸಂದರ್ಭದಲ್ಲಿ ಅನುಕೂಲ ವಾಗಲೆಂದೇ ಮೋದಿಯವರು ಮೈಕಲ್‌ನನ್ನು ಈಗ ಭಾರತಕ್ಕೆ ಹಸ್ತಾಂತರಿಸಿಕೊಂಡು ತಂದಿದ್ದಾರೆ’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇವಾಲ ಆರೋಪಿಸಿದ್ದಾರೆ. “ಮೈಕಲ್‌ನನ್ನು ಕರೆಯಿಸಿಕೊಂಡು ಚುನಾವಣೆಗಳಲ್ಲಿ ವಿಪಕ್ಷಗಳ ನಾಯಕರಿಗೆ ಹಾಗೂ ಅವರು ನಡೆಸುವ ಪ್ರಚಾರ ಕಾರ್ಯಗಳಿಗೆ ಮಸಿ ಬಳಿಯಲು ಬಿಜೆಪಿ ಸುಳ್ಳಿನ ಬಲೆ ಹೆಣೆಯುವ ಷಡ್ಯಂತ್ರವನ್ನೂ ಹೊಂದಿದೆ’ ಎಂದೂ ದೂರಿದ್ದಾರೆ.

ನಿಮ್ಮ ನಿಲುವೇನು?
ಅಗಸ್ಟಾ ವೆಸ್ಟ್‌ಲ್ಯಾಂಡ್‌ ಪ್ರಕರಣದಲ್ಲಿ ಭಾರತಕ್ಕೆ ಹಸ್ತಾಂತರಿಸಲ್ಪಟ್ಟಿರುವ ಮೈಕಲ್‌ನ ಬಗ್ಗೆ ನಿಮ್ಮ ನಿಲುವೇನು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ಹಾಗೂ ವಿಪಕ್ಷಗಳನ್ನು ಪ್ರಶ್ನಿಸಿದ್ದಾರೆ. ಜೈಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಶ್ಚಿಯನ್‌ ಮೈಕಲ್‌ನನ್ನು ಬಂಧಿಸಬೇಕೇ, ಬೇಡವೇ? ವಿಪಕ್ಷಗಳು ಈ ಬಗ್ಗೆ ಏನನ್ನುತ್ತವೆ? ಆತನನ್ನು ರಕ್ಷಿಸಲು ವಿಪಕ್ಷಗಳು ಬಯಸುತ್ತಿವೆಯೇ? ಇವೆಲ್ಲವಕ್ಕೂ ಉತ್ತರಬೇಕಿದೆ’ ಎಂದು ಲೇವಡಿ ಮಾಡಿದ್ದಾರೆ.

ಮೈಕಲ್‌ಗೆ 5 ದಿನಗಳ ಸಿಬಿಐ ಬಂಧನ
ಅಗಸ್ಟಾ ವೆಸ್ಟ್‌ಲ್ಯಾಂಡ್‌ನ‌ಲ್ಲಿ ದಲ್ಲಾಳಿತನ ಮಾಡಿದ ಆರೋಪಕ್ಕೆ ಗುರಿಯಾಗಿರುವ ಕ್ರಿಸ್ಟಿಯನ್‌ ಮೈಕಲ್‌ಗೆ ದಿಲ್ಲಿಯ ಸ್ಥಳೀಯ ನ್ಯಾಯಾಲಯ ಐದು ದಿನಗಳ ಕಾಲ ಸಿಬಿಐ ಬಂಧನಕ್ಕೆ ಒಪ್ಪಿಸಿದೆ. 14 ದಿನಗಳ ಬಂಧನಕ್ಕೆ ಒಪ್ಪಿಸುವಂತೆ ಸಿಬಿಐ ಕೇಳಿತ್ತು. ಆದರೆ, ಸದ್ಯಕ್ಕೀಗ ಐದು ದಿನಗಳ ಬಂಧನಕ್ಕೆ ನೀಡಲಾಗಿದೆ. ಅಲ್ಲದೆ, ಮೈಕಲ್‌ ತನ್ನ ವಕೀಲರ ಜತೆ ದಿನಕ್ಕೆರಡು ಬಾರಿ ತಲಾ 1 ಗಂಟೆಯ ಅವಧಿಯವರೆಗೆ ಮಾತುಕತೆ ನಡೆಸಬಹುದು ಎಂದು ನ್ಯಾಯಾಲಯ ತಿಳಿಸಿದೆ.

Advertisement

ಕಾಂಗ್ರೆಸ್‌ ಯುವ ನಾಯಕನ ವಜಾ
ಕ್ರಿಸ್ಟಿಯನ್‌ ಮೈಕಲ್‌ ಪರವಾಗಿ ವಕಾಲತ್ತು ವಹಿಸುವ ಮೂಲಕ ಕಾಂಗ್ರೆಸಿಗೆ ಮುಜುಗರ ಉಂಟು ಮಾಡಿದ್ದ, ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಕಾನೂನು ಸಲಹೆಗಾರರಾಗಿರುವ ಆಲೋಕ್‌ ಜೋಸೆಫ್ರನ್ನು ಹುದ್ದೆಯಿಂದ ಕಾಂಗ್ರೆಸ್‌ ವಜಾಗೊಳಿಸಿದೆ. 

ಬ್ರಿಟನ್‌ನಿಂದ ಮನವಿ
ಸಿಬಿಐ ಬಂಧನಕ್ಕೊಳಗಾಗಿರುವ ಮೈಕಲ್‌ನನ್ನು ಭೇಟಿ ಮಾಡಲು ಬ್ರಿಟನ್‌ ರಾಜತಾಂತ್ರಿಕ ಅಧಿಕಾರಿಗಳಿಗೆ ಅನುಮತಿ ನೀಡಬೇಕೆಂದು ಭಾರತದಲ್ಲಿನ ಬ್ರಿಟಿಷ್‌ ಹೈ ಕಮೀಷನ್‌ ಭಾರತಕ್ಕೆ ಮನವಿ ಸಲ್ಲಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹೈ ಕಮೀಷನ್‌ ವಕ್ತಾರ, “ಕಳೆದ ವರ್ಷ ದುಬಾೖಯಲ್ಲಿ ಮೈಕಲ್‌ ಬಂಧನವಾದಾಗಿನಿಂದ ಆತನ ಕುಟುಂಬದ ಬೆಂಬಲಕ್ಕೆ ಹೈಕಮಿಷನ್‌ ನಿಂತಿದೆ. ಮೈಕಲ್‌ ಭೇಟಿಗೆ ಅನುಮತಿ ಕೋರಲಾಗಿದೆ’ ಎಂದಿದ್ದಾರೆ.

ಗಡೀಪಾರಿನ ಹಿಂದೆ ದೋವಲ್‌ ಕೈಚಳಕ!
ಮೈಕಲ್‌ನನ್ನು ದುಬಾೖಯಿಂದ ಭಾರತಕ್ಕೆ ಕರೆ ತಂದಿದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ಕರಾರುವಾಕ್‌ ತಂತ್ರಗಾರಿಕೆ ಎಂಬ ಮಾತು ಕೇಳಿಬರುತ್ತಿದೆ. 2017ರಲ್ಲಿ ದುಬಾೖಯಲ್ಲಿ ಬಂಧಿತನಾಗಿದ್ದ ಮೈಕಲ್‌, ಬೇಗನೆ ಜಾಮೀನು ಪಡೆದಿದ್ದ. ಆದರೆ ಆತನ ಪಾಸ್‌ಪೋರ್ಟ್‌ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಇದೆಲ್ಲದರ ಮಾಹಿತಿ ಪಡೆದ ಧೋವಲ್‌, ಸಿಬಿಐನ ಜಂಟಿ ನಿರ್ದೇಶಕ ಸಾಯಿ ಮನೋಹರ್‌ ಹಾಗೂ ಗುಪ್ತಚರ ದಳವಾದ “ರಾ’ ಅಧಿಕಾರಿಗಳುಳ್ಳ ವಿಶೇಷ ತಂಡವೊಂದನ್ನು ರಚಿಸಿ ದುಬಾೖಗೆ ಕಳುಹಿಸಿದ್ದರು. ತಂಡ ಅಲ್ಲಿ ಕಾನೂನು ಹೋರಾಟ ಮಾಡಿತ್ತು. ಈ ಸಾಕ್ಷ್ಯಗಳನ್ನು ಮಾನ್ಯ ಮಾಡಿದ ಅಲ್ಲಿನ ಕೋರ್ಟ್‌, ಮೈಕಲ್‌ ಜಾಮೀನು ರದ್ದುಗೊಳಿಸಿ ಭಾರತಕ್ಕೆ ಹಸ್ತಾಂತರಿಸಲು ಆದೇಶಿಸಿತ್ತು. ಆದರೆ, ಹಸ್ತಾಂತರ ಪ್ರಕ್ರಿಯೆಗೆ ಸೌದಿ ತತ್‌ಕ್ಷಣವೇ ಒಪ್ಪಿರಲಿಲ್ಲ. ಈ ಹಂತದಲ್ಲಿ ಭಾರತದ ವಿದೇಶಾಂಗ ಇಲಾಖೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತಂದು ಮೈಕಲ್‌ನನ್ನು ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next