Advertisement

ಎಳನೀರಿನಿಂದ ಮಲವಂತಿಗೆಗೆ ವ್ಯಾಪಿಸಿದ ಅಡಿಕೆ ಎಲೆಚುಕ್ಕಿ, 15,000ಕ್ಕೂ ಅಧಿಕ ಗಿಡಕ್ಕೆ ಹಾನಿ

09:19 AM Nov 05, 2022 | Team Udayavani |

ಬೆಳ್ತಂಗಡಿ : ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯದಿಂದ ಕೊಲೆಟೋಟ್ರಿಕಮ್‌ ಗ್ಲೋಯೋನ್ಪೊರಿಯೊಯಿಡ್ಸ್‌ ಎಂಬ ಶಿಲೀಂಧ್ರದಿಂದ ಉಂಟಾದ ಅಡಿಕೆ ಎಲೆಚುಕ್ಕಿ ರೋಗ ಇದೀಗ ಬೆಳ್ತಂಗಡಿ ತಾಲೂಕಿನ ಎಳನೀರಿನ ಕೆಳಭಾಗಕ್ಕೂ ಹರಡಿದೆ.

Advertisement

ಶಿವಮೊಗ್ಗ, ಚಿಕ್ಕಮಗಳೂರು, ದ.ಕ., ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಗಳ 2,0534.50 ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ ಈಗಾಗಲೇ ಬಾಧಿಸಿದೆ. ಈ ಮಧ್ಯೆ ಸಂಸೆ ಆಸುಪಾಸಿನ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರು ವ್ಯಾಪ್ತಿಯ ಬಡಾಮನೆ, ಗುತ್ಯಡ್ಕ, ಬಂಗಾರಪಲ್ಕೆ, ಕುಕ್ಕಡದ 150ರಿಂದ 200 ಎಕ್ರೆಗೂ ಅಧಿಕ ಅಡಿಕೆ ಕೃಷಿಗೆ ಎಲೆ ಚುಕ್ಕಿರೋಗ ಬಾಧಿಸಿ ರೈತರು ಸಂಪೂರ್ಣ ಅಡಿಕೆ ಕೃಷಿಯನ್ನೇ ಕಳೆದುಕೊಂಡಿದ್ದಾರೆ. ಎಳನೀರು ಪ್ರದೇಶ ದಟ್ಟ ಕಾಡಿನ ಮಧ್ಯೆ ಇರುವುದರಿಂದ ಅತೀ ಸೂಕ್ಷ್ಮವಾಗಿ ಪರಿಗಣಿಸಬೇಕೆಂದು ವಿಜ್ಞಾನಿಗಳೇ ತಿಳಿಸಿದ್ದರು.

15,000ಕ್ಕೂ ಅಧಿಕ ಅಡಿಕೆ ಗಿಡಕ್ಕೆ ಹಾನಿ
ಎಳನೀರು ಭಾಗದಿಂದ 6 ಕಿ.ಮೀ. ಕೆಳಗಿರುವ ಮಲವಂತಿಗೆ ಗ್ರಾಮದ ಹೊಳೆಕೆರೆ, ಕೆಮ್ಮಟೆ, ಕುಕ್ಕಿಮಾರು, ಬಾಳೆಹಿತ್ಲು, ಓಣಿಯೇಲು, ನೇತ್ರಕೊಡಂಗೆ, ಪೈಯೆ, ಕೂರ ಸುತ್ತಮುತ್ತಲಿನ 25 ಕೃಷಿಕರ 40 ಎಕರೆಯಲ್ಲಿ ಒಂದೂವರೆ ತಿಂಗಳಿಂದ ಎಲೆಚುಕ್ಕಿ ರೋಗದ ಲಕ್ಷಣ ಕಂಡುಬಂದಿದೆ. ಈ ಗ್ರಾಮದ ಸಮೀಪದ ಮಿತ್ತಬಾಗಿಲು, ಕಡಿರುದ್ಯಾವರ ಮೊದಲಾದ ಗ್ರಾಮಗಳಲ್ಲೂ ಅಡಿಕೆ ತೋಟ ಇದ್ದು ಆತಂಕ ಎದುರಾಗಿದೆ.

4 ಕೋ.ರೂ. ಘೋಷಿಸಿದ್ದ ಸರಕಾರ
ಕಳೆದ ತಿಂಗಳಷ್ಟೇ ಸರಕಾರವು ರೋಗ ನಿಯಂತ್ರಣಕ್ಕೆ ಶಿಲೀಂಧ್ರ ನಾಶಕಗಳನ್ನು ಖರೀದಿಸಲು ಪ್ರತೀ ಹೆಕ್ಟೇರ್‌ಗೆ 4 ಸಾವಿರ ರೂ.ಗಳಂತೆ ಆರಂಭದಲ್ಲಿ 10 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ಮೊದಲನೇ ಸಿಂಪರಣೆಗೆ 4 ಕೋ.ರೂ. ಅನುದಾನ ನೀಡಲು ಸಮ್ಮತಿಸಿತ್ತು. ಅದರಲ್ಲಿ ಬೆಳ್ತಂಗಡಿ ತಾಲೂಕಿನ ಎಳನೀರು ಭಾಗದ 150 ಕುಟುಂಬಗಳ ಪೈಕಿ 59 ಕುಟುಂಬಗಳ 69 ಹೆಕ್ಟೇರ್‌ ಪ್ರದೇಶವನ್ನು ಸೇರಿತ್ತು.

ಅಧಿಕ ತೇವಾಂಶವೇ ಕಂಟಕ
ಅಡಿಕೆ ಮರಗಳಿಗೆ ಸಮರ್ಪಕವಾಗಿ ಬಿಸಿಲು, ಮಳೆ ಬೀಳಬೇಕು. ಆದರೆ ಮಲವಂತಿಗೆಯ ಸುತ್ತ ರಾಷ್ಟ್ರೀಯ ಉದ್ಯಾನವನವಿರುವುದರಿಂದ ವರ್ಷಪೂರ್ತಿ ನೀರಿನ ಹರಿವಿರುತ್ತದೆ. ತೇವಾಂಶ ಹೆಚ್ಚಿರುವುದರಿಂದ ಎಲೆಚುಕ್ಕಿ ರೋಗ ಬೇಗನೆ ಹರಡುತ್ತಿದೆ. ಹಿಂಗಾರ, ಎಲೆಗಳು ಕೆಂಪುಬಣ್ಣಕ್ಕೆ ತಿರುಗಿ ಮರಗಳು ಸಾಯಲಾರಂಭಿಸಿವೆ. ಸರಕಾರ ಇದರ ಗಂಭೀರತೆಯನ್ನು ಮನಗಾಣಬೇಕಿದೆ ಎಂದು ಮಲವಂತಿಗೆ ಕೆಮ್ಮಟಿಯ ಕೃಷಿಕ ಸೀನಪ್ಪ ಗೌಡ ಆಗ್ರಹಿಸಿದ್ದಾರೆ.

Advertisement

ನಿವಾರಣೆ ಹೇಗೆ?
ಮುಂದಿನ ಎರಡು ವರ್ಷಗಳಲ್ಲಿ ಎಲೆಚುಕ್ಕಿ (ರೆಡ್‌ ಮೈಟ್‌) ರೋಗ ಸಂಪೂರ್ಣ ಹತೋಟಿಗೆ ತರುವ ಸಲುವಾಗಿ ಸರಕಾರ ಗಂಭೀರ ಚಿಂತನೆ ನಡೆಸಿದೆ. ಇದಕ್ಕಾಗಿ ರೈತರು ಹೆಕ್ಸ್‌ಕೊನೊಜಾಲ್‌ (Hexconozole)ಅಥವಾ ಪ್ರೊಪಿಕೊಜಾಲ್‌ (Propicozole)ದ್ರಾವಣವನ್ನು ಒಂದು ಲೀಟರ್‌ ನೀರಿಗೆ 1 ಎಂ.ಎಲ್‌. ನಷ್ಟು ಬೆರೆಸಿ ಸೋಗೆ ಪೂರ್ತಿ ಆವರಿಸುವಂತೆ ಸಿಂಪಡಿಸುವಂತೆ ಸಲಹೆ ನೀಡಲಾಗಿದೆ ಎಂದು ಬೆಳ್ತಂಗಡಿಯ ಹಿರಿಯ ತೋಟಗಾರಿಕೆ ನಿರ್ದೇಶಕ ಕೆ.ಎಸ್‌. ಚಂದ್ರಶೇಖರ್‌ ತಿಳಿಸಿದ್ದಾರೆ.

– ಚೈತ್ರೇಶ್‌ ಇಳಂತಿಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next