Advertisement

Agriculture: ಗ್ರಾಮೀಣ ಬದುಕಿನ ಚಾವಡಿ ಚರ್ಚೆ; ಕೇವಲ ನೆನಪು

01:28 AM Jul 05, 2024 | Team Udayavani |

ಮಳೆಗಾಲ ಆರಂಭವಾಯಿತೆಂದರೆ ಗ್ರಾಮೀ ಣ ಭಾಗಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಚಾಲನೆ. ಭತ್ತದ ಕೃಷಿ ಇನ್ನೂ ಬತ್ತದ ದಿನಗಳು. ಗದ್ದೆಯ ಸುತ್ತ ಮನೆಯ ಮಂದಿ. ಬೀಜದ ಬಿತ್ತನೆ, ಉಳುಮೆ, ನಾಟಿ ಹೀಗೆ ಭತ್ತದ ಕೃಷಿ ಕೆಲಸ. ಯಂತ್ರಗಳಿನ್ನೂ ಬಾರದ ದಿನಗಳಲ್ಲಿ ಉಳುಮೆಗೆ ಎತ್ತು, ಕೋಣಗಳ ಬಳಕೆಯೇ ಜಾಸ್ತಿ. ಅಂತೂ ಮಳೆಗಾಲ ಎಂದರೆ ಕೃಷಿಕರಿಗೆ ವಿರಾಮವಿಲ್ಲದ ಕಾಲ. ಹಿಂದೆ ಗ್ರಾಮೀಣ ಬದುಕು ಎಂದರೆ ಕೃಷಿ ಆಧಾರಿತ ಬದುಕು. ಅಂದಿನ ಕೃಷಿಕುಟುಂಬಗಳೂ ಅವಿಭಕ್ತ. ಹಾಗಾಗಿ ಮನೆ ತುಂಬಾ ಮಂದಿ. ಸೂರ್ಯ ಮುಳುಗುವ ತನಕ ಕೃಷಿಕಾಯಕ. ಸಂಜೆ ಸ್ವಲ್ಪ ವಿರಾಮ. ಕೃಷಿ ಕೆಲಸದ ನಡುವೆ ಸ್ವಲ್ಪ ಬಿಡುವು.

Advertisement

ದೂರದರ್ಶನ, ಮೊಬೈಲ್‌ಗ‌ಳಿಲ್ಲದ ಕಾಲ. ಮಾತೇ ಮಾಣಿಕ್ಯ. ಹಾಗಾಗಿ ಸುತ್ತ ಮುತ್ತಲಿನ ಮನೆಯವರು ಒಂದೆಡೆ ಕುಳಿತು ಹರಟೆ ಹೊಡೆಯುವ ಕಾಲ. ಮನೆಯ ಮುಂದಿರುವ ವಿಶಾಲವಾದ ಚಾವಡಿಯೇ ಮಾತಿನ ಮಂಟಪಕ್ಕೆ ವೇದಿಕೆ. ಚಾವಡಿಯ ಚರ್ಚೆಯಲ್ಲಿ ಕೆಲಸದ ಆಯಾಸವನ್ನು ಕಳೆಯಲು ಮಾತಿನ ನಡುವೆ ಒಂದಿಷ್ಟು ಹಾಸ್ಯ. ನಡು ನಡುವೆ ಒಗಟು, ಗಾದೆಗಳ ವರಸೆ. ಮುದ್ದಣ ಹೇಳುವಂತೆ “ಕರ್ಮಣಿ ಸರದೊಳ್‌ ಚೆಂಬವಳಮಂ ಕೋದಂತೆ’. ಆಗಾಗ ಪುರಾಣ ಪ್ರವಚನ. ಅಪರೂಪಕ್ಕೊಮ್ಮೆ ಕರಾವಳಿ ಹಾಗೂ ಮಲೆನಾಡ ಭಾಗದಲ್ಲಿ ತಾಳಮದ್ದಲೆ. ಇವುಗಳೆಲ್ಲ ಮನೋರಂಜನೆಯ ಒಂದು ಸಾಧನ. ಈ ಮೂಲಕ ಮನಸ್ಸಿಗೆ ಮುದ. ಮುಕ್ತವಾಗಿ ಬೆರೆತು ಆಹ್ಲಾದಗೊಳ್ಳುವ ಸಮಯ. ಇವುಗಳಿಗಿಂತ ಮುಖ್ಯವಾದುದು ಇಲ್ಲಿ ನಡೆಯುವ ಕಾಯಕದ ಕುರಿತ ವಿಶಿಷ್ಟ ಚರ್ಚೆಗಳು. ಈ ಚರ್ಚೆಯಲ್ಲಿ ಭಾಗವಹಿಸುವವರೂ ಸುತ್ತಲಿನ ಮನೆಗಳ ಕೃಷಿಕರು.}

ಕಾಯಕಜೀವಿಗಳು. ಬಹಳ ಓದಿದವರಲ್ಲ. ಪದವಿಗಾಗಿ ಕಾಲೇಜು ಮೆಟ್ಟಿಲೇ ರಿದವರೂ ಅಲ್ಲ. ಕೃಷಿಯೇ ಕಾರ್ಯಕ್ಷೇತ್ರ. ಅದೇ ಕಲಿಕೆಯ ತಾಣ. ಪ್ರಯೋಗಶಾಲೆ. ಅದರೊಂದಿಗೆ ಸುತ್ತಲು ಹಬ್ಬಿರುವ ಕಾಡುಗಳು. ಕಾಡಿನ ಪ್ರಾಣಿ ಹಾಗೂ ಪಕ್ಷಿಗಳು. ಹಿರಿಯರಿಂದ ಹರಿದು ಬಂದ ಅನುಭವವೇ ಅವರ ಪ್ರಧಾನ ಜ್ಞಾನಸಂಪತ್ತು. ಹಿರಿಯರ ಜ್ಞಾನದ ಆಧಾರದ ಮೇಲೆ ನೂತನ ಪ್ರಯೋಗ. ಹೊಸ ಆವಿಷ್ಕಾರ. ಈ ಮೂಲಕ ದೊರೆತ ಅನುಭವಗಳು. ಹೀಗೆ ಸೇರಿದಾಗ ಈ ಅನುಭವಗಳ ಮಂಥನ ನಡೆಯುತ್ತಿತ್ತು. ಕೃಷಿಗೆ ಸಂಬಂಧಿಸಿದಂತೆ ಅವರವರ ಅನುಭವಗಳ ವಿನಿಮಯ ನಡೆಯುತ್ತಿತ್ತು. ಬೆಳೆ ಹಾನಿ, ಅಧಿಕ ಇಳುವರಿ, ಕಡಿಮೆ ಇಳುವರಿ, ಕೃಷಿಗೆ ಹಾನಿಕಾರಕವಾದ ರೋಗಗಳು, ಕ್ರಿಮಿಕೀಟಗಳ ಬಾಧೆ, ಅದಕ್ಕೆ ಪರಿಹಾರ ಹೀಗೆ ಹಲವು ವಿಚಾರಗಳ ಸುತ್ತ ಚರ್ಚೆ ಸಾಗುತ್ತಿತ್ತು. ಹೊಸ ಬೆಳೆಯ ಮೂಲಕ ಅಧಿಕ ಲಾಭ ಗಳಿಸಿದ ರೈತರ ಕುರಿತೂ ವಿಷಯ ಪ್ರಸ್ತಾವವಾಗುತ್ತಿತ್ತು.

ಕೃಷಿಯಲ್ಲಿ ಅಧಿಕ ಲಾಭ ತರಲು ಕೈಗೊಂಡ ಕ್ರಮಗಳ ಕುರಿತೂ ಕೆಲವರು ತಮ್ಮ ಅನುಭವಗಳನ್ನು ಹಂಚಿ ಕೊಳ್ಳುತ್ತಿದ್ದರು. ಕೃಷಿಯನ್ನು ಬಾಧಿಸುವ ವಿವಿಧ ರೋಗಗಳ ನಿಯಂತ್ರಣಕ್ಕೆ ತಮ್ಮ ಅನುಭವದ ಆಧಾರದಲ್ಲಿ ಕೈಗೊಂಡ ಕ್ರಮಗಳು ಮತ್ತು ಅದರ ಪರಿಣಾಮ. ಹೀಗೆ ಅನುಷ್ಠಾನ ಯೋಗ್ಯ ಅನು ಭವಾಧಾರಿತ ಜ್ಞಾನ. ಈ ಅನುಭವಗಳು ಯಾವುದೇ ಪುಸ್ತಕಗಳಲ್ಲಿ ಸಿಗದು. ಮಸ್ತಕವೇ ಈ ಅನುಭವಗಳ ಭಂಡಾರ. ಇಲ್ಲಿನ ಪ್ರಯೋಗ ಹಾಗೂ ಫ‌ಲಿತಾಂಶಗಳೂ ಕೃಷಿ ಅಧಾರಿತ ದುಡಿಮೆಯನ್ನು ಆಧರಿಸಿ ಬೆಳೆದು ಬಂದವುಗಳು. ಕೇವಲ ಓದಿನಿಂದ ಬಂದ ಯಾರದ್ದೋ ಅನುಭವಗಳು ಇವುಗಳಲ್ಲ. ಈ ಅನುಭವಗಳ ಹಿಂದೆ ವ್ಯಾಪಕವಾದ ಪ್ರಯೋಗಶೀಲತೆ ಇದೆ. ಕೃಷಿ ಭೂಮಿಯಲ್ಲಿ ಕೃಷಿಯೊಂದಿಗೆ ಹೋರಾಟ ನಡೆಸಿದ ಕಥನಗಳಿವೆ. ಸುತ್ತಲಿನ ಕಾಡು ಮತ್ತು ಪ್ರಾಣಿ, ಪಕ್ಷಿಗಳ ಒಡನಾಟದಲ್ಲಿ ಕಂಡುಕೊಂಡ ಅನುಭವಗಳಿವೆ. ಅವುಗಳ ಕುರಿತು ನೂರಾರು ನಂಬಿಕೆಗಳೂ ಇವೆ.

ಇಂದು ಗ್ರಾಮೀಣ ಬದುಕೂ ಹೊಸತನಕ್ಕೆ ತೆರೆದುಕೊಂಡಿದೆ. ಗ್ರಾಮೀಣ ಬದುಕಿನ ಮೇಲೂ ನಗರ ಸಂಸ್ಕೃತಿಯು ತನ್ನ ಪ್ರಭಾವ ಬೀರಿದೆ. ಅಭಿವೃದ್ಧಿ ಎಂಬ ಪದವೂ ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತಿದೆ. ದೂರದರ್ಶನ ಹಾಗೂ ಮೊಬೈಲ್‌ ಅತ್ಯಗತ್ಯ ಉಪಕರಣಗಳಾಗಿವೆ. ಅವುಗಳ ಬಳಕೆ ಅಗತ್ಯಕ್ಕಿಂತ ಅಧಿಕವಾಗುತ್ತಿದೆ. ಯಂತ್ರಗಳ ಆಗಮನದಿಂದ ಅಭಿವೃದ್ಧಿಯಾಗಿದೆ. ಆದರೆ ಮನುಷ್ಯರ ನಡುವಿನ ಮಾತಿನ ಸಂಭ್ರಮ ಹಾಗೂ ಸಂಬಂಧಗಳು ಯಾಂತ್ರಿಕವಾಗಿವೆ. ಭಾವನಾತ್ಮಕ ಸಂಬಂಧಗಳಿಗಿತ ವ್ಯಾವಹಾರಿಕ ಸಂಬಂಧಗಳಿಗೆ ಪ್ರಾಶಸ್ತ್ಯ  ಬಂದಿದೆ. ಮನೆಯಲ್ಲಿರುವ ಮಂದಿಗಳ ನಡುವೆಯೇ ಮಾತುಕತೆಗಳು ವಿರಳವಾಗುತ್ತಿರುವಾಗ ಅಕ್ಕಪಕ್ಕದ ಮನೆಯವರು ಮಾತಿಗೆಲ್ಲಿ ಸಿಗುತ್ತಾರೆ? ಹಾಗಾಗಿ ಚಾವಡಿ ಚರ್ಚೆ ಇಂದು ಕೇವಲ ನೆನಪು.

Advertisement

ಪ್ರಕೃತಿ ಅಥವಾ ಗ್ರಾಮೀಣ ಬದುಕಿನಿಂದ ದೂರವಾದಂತೆ ಪ್ರಕೃತಿಯಿಂದ ಮನುಷ್ಯ ಕಲಿಯುವ ಪಾಠವೂ ಕಡಿಮೆಯಾಗುತ್ತಿದೆ. ಎಷ್ಟೋ ನಂಬಿಕೆಗಳು, ಆಚರಣೆಗಳು ನಶಿಸಿ ಹೋಗುತ್ತಿವೆ. ಕೃಷಿ, ಪ್ರಕೃತಿಯೊಂದಿಗಿನ ಒಡನಾಟದಲ್ಲಿ ಹುಟ್ಟಿಕೊಂಡ ಅನೇಕ ಅನುಭವ ಅಧಾರಿತ ವಿಚಾರಗಳು ಇಂದು ಅರ್ಥ ಕಳೆದುಕೊಳ್ಳುತ್ತಿವೆ. ಕೆಲವೇ ಹಿರಿಯರು ಹಳ್ಳಿಗಳಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ಕಷ್ಟಪಟ್ಟು ಅದನ್ನು ಉಳಿಸುವ ಕಾಯಕದಲ್ಲಿ¨ªಾರೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಚಾವಡಿ ಚರ್ಚೆಯನ್ನು ನಿರೀಕ್ಷಿಸುವುದೂ ಕಷ್ಟ. ಚಾವಡಿ ಚರ್ಚೆಯಲ್ಲಿ ಭಾಗವಹಿಸಿದ ನಮ್ಮ ನಡುವೆ ಬದುಕಿರುವ ಹಿರಿಯರೊಂದಿಗೆ ಚರ್ಚಿಸಿ ಅವರ ಅನು ಭವಗಳನ್ನು ಸಂಗ್ರಹಿಸುವ ಮತ್ತು ವಿಜ್ಞಾನದ ಹಿನ್ನೆಲೆಯಲ್ಲಿ ಅವುಗಳ ಅಧ್ಯಯನ ಇಂದು ಹೆಚ್ಚು ಪ್ರಸ್ತುತ.

– ಡಾ. ಶ್ರೀಕಾಂತ್‌, ಸಿದ್ದಾಪುರ

Advertisement

Udayavani is now on Telegram. Click here to join our channel and stay updated with the latest news.

Next