Advertisement

ಕೃಷಿ ಸಾಲ: ಪರಿಣಾಮಕಾರಿ ಅನುಷ್ಠಾನ ಅನಿವಾರ್ಯ

01:24 AM Feb 09, 2021 | Team Udayavani |

ಸಣ್ಣ ರೈತರನ್ನು ವಿವಿಧ ರೀತಿಯ ಬೆಳೆಗಳತ್ತ ಗಮನಹರಿಸುವಂತೆ ಮಾಡಿ ಹೆಚ್ಚಿನ ಆದಾಯ ಗಳಿಸುವತ್ತ ಕೊಂಡೊಯ್ಯುವ ಪ್ರಯತ್ನ ಸರಕಾರದಿಂದ ನಡೆಯುತ್ತಲೇ ಬಂದಿದೆ. ಇದಕ್ಕೆ ಪೂರಕವಾದ ಆರ್ಥಿಕ ಶಕ್ತಿಯನ್ನು ತುಂಬುವ ಯತ್ನ ಸರಕಾರಿ ನಿಯಂತ್ರಿತ ಬ್ಯಾಂಕ್‌ಗಳು ಹಾಗೂ ಸಹಕಾರಿ ಸಂಸ್ಥೆಗಳು ಮಾಡುತ್ತಿವೆ. ಇದು ಸರಕಾರದ ಜವಾಬ್ದಾರಿಯೂ ಆಗಿದೆ.

Advertisement

ದಶಕಗಳಿಂದ ಕೃಷಿ ಕ್ಷೇತ್ರಕ್ಕೆ ರಿಯಾಯಿತಿ ಬಡ್ಡಿದರ ದಲ್ಲಿ ಸಾಲ ಮತ್ತು ಸರಕಾರದಿಂದ ಹರಿದು ಬರುತ್ತಿರುವ ಸಹಾಯಧನದ ಪ್ರಮಾಣ ಏರಿಕೆಯಾಗುತ್ತಲೇ ಇದ್ದರೂ ಕೃಷಿ ವಲಯ ನಿರೀಕ್ಷಿತ ಮಟ್ಟದಲ್ಲಿ ವೃದ್ಧಿಯಾಗಿಲ್ಲ. ಕೃಷಿ ಕ್ಷೇತ್ರದ ಬೆಳವಣಿಗೆಗೆ “ಕೃಷಿ ಸಾಲ’ ನಿರೀಕ್ಷಿತ ಕೊಡುಗೆ ನೀಡಲು ವಿಫ‌ಲವಾಗದೇ ಇದ್ದಿದ್ದರೆ ಶೇ.85ರಷ್ಟು ಕೃಷಿ ಕುಟುಂಬಗಳ ತಲಾ ಆದಾಯ ಏರಿಕೆಯಾಗದಿರಲು ಏನು ಕಾರಣ ಎಂಬುದೇ ಪ್ರಶ್ನೆ. ಕೃಷಿ ಕ್ಷೇತ್ರವನ್ನು ಹೊರತುಪಡಿಸಿ ಇತರ ಕ್ಷೇತ್ರಗಳಿಗೆ ಒದಗಿಸಲಾದ ರಿಯಾಯಿತಿ ದರದ ಆರ್ಥಿಕ ನೆರವು ಗಣನೀಯ ಪ್ರಮಾಣದಲ್ಲಿ ಸಕಾರಾತ್ಮಕ ಪರಿಣಾಮ ಬೀರಿದೆ ಎಂಬುದನ್ನು ಗಮನಿಸಬೇಕಾಗಿದೆ.

ಕೇಂದ್ರ ಸರಕಾರ ಪ್ರತೀ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌/ಸಹಕಾರಿ ಸಂಸ್ಥೆಯ ಮೂಲಕ ಕೃಷಿ ವಲಯಕ್ಕೆ ನೀಡಬೇಕಾಗಿರುವ ಸಾಲ ಮತ್ತು ಸಹಾಯಧನದ ಪ್ರಮಾಣವನ್ನು ಹೆಚ್ಚಿಸುತ್ತಲೇ ಇದೆ. ದಾಖಲೆಗಳಲ್ಲಿ ಎಲ್ಲ ಸಂಸ್ಥೆಗಳು ತಮಗೆ ನೀಡಿರುವ ಆರ್ಥಿಕ/ಭೌತಿಕ ಗುರಿಯನ್ನು ಸಾಧಿಸಿದ ವರದಿಗಳು ಬರುತ್ತಲೇ ಇವೆ.

2011-12ರ ಅವಧಿಗೆ 4.75 ಲಕ್ಷ ಕೋಟಿ ರೂ. ಕೃಷಿ ಸಾಲದ ಗುರಿಯನ್ನು ನಿಗದಿಪಡಿಸಿದ್ದರೆ, 20-21 ಕ್ಕೆ ಈ ಗುರಿಯನ್ನು 15 ಲಕ್ಷ ಕೋಟಿ ರೂ.ಗಳಿಗೆ ಏರಿಕೆ ಮಾಡಲಾಗಿತ್ತು. ಸಹಾಯಧನದ ರೂಪದಲ್ಲಿ 21,175 ಕೋ. ರೂ. ಪ್ರೋತ್ಸಾಹವನ್ನು ಸರಕಾರ ಘೋಷಣೆ ಮಾಡಿತ್ತು. ಆದರೆ ಇಷ್ಟೊಂದು ಬೃಹತ್‌ ಪ್ರಮಾಣದ ಸಹಾಯಧನ ಆಧಾರಿತ ರಿಯಾಯಿತಿ, ಆರ್ಥಿಕ ನೆರವು ಅರ್ಹ ಫ‌ಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ವಿತರಣೆ ಆಗುತ್ತಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಬೇಕಾಗಿದೆ.

ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಳೆದ ಹತ್ತು ವರ್ಷಗಳಿಂದ ಕೃಷಿ ಸಾಲದ ಪ್ರಮಾಣ ಶೇ. 500ರಷ್ಟು ಏರಿಕೆಯಾಗಿದೆ. ಆದರೆ ಒಟ್ಟು 12.56 ಕೋಟಿ ಸಣ್ಣ ರೈತರ ಪೈಕಿ ಶೇ. 20ರಷ್ಟು ಮಾತ್ರ ಇದರ ಫ‌ಲಾನುಭವಿಗಳು. ಕೃಷಿ ಕ್ಷೇತ್ರಕ್ಕೆ ಹರಿದು ಬರುತ್ತಿರುವ ರಿಯಾಯಿತಿ ದರದ ಸಾಲದ ಪ್ರಮಾಣ ಗಣನೀಯವಾಗಿ ಏರಿಕೆ ಯಾಗುತ್ತಿದ್ದರೂ ಶೇ. 95ರಷ್ಟು ಟ್ರ್ಯಾಕ್ಟರ್‌ ಮತ್ತು ಇತರ ಕೃಷಿ ಉಪಕರಣಗಳನ್ನು ಕೊಳ್ಳಲು ರೈತರು ಬ್ಯಾಂಕೇತರ ಸಂಸ್ಥೆಗಳ ಶೇ. 18ರ ಬಡ್ಡಿಯ ಸಾಲಗಳಿಗೆ ಮೊರೆ ಹೋಗುತ್ತಿರುವುದು ವಿಪರ್ಯಾಸ. ಬ್ಯಾಂಕ್‌ಗಳಲ್ಲಿ ಈ ರೀತಿಯ ಸೌಲಭ್ಯಗಳಿಗೆ ಶೇ. 11ರಷ್ಟು ಬಡ್ಡಿ ವಿಧಿಸಲಾಗುತ್ತಿದೆ.

Advertisement

ಭಾರತೀಯ ರಿಸರ್ವ್‌ ಬ್ಯಾಂಕ್‌ ಕಲೆ ಹಾಕಿರುವ ಮಾಹಿತಿ ಪ್ರಕಾರ ಶೇ. 15ರಷ್ಟು ಸಣ್ಣ ಹಿಡುವಳಿದಾರರು (2.5 ಎಕರೆಗಳಿಗಿಂತ ಕಡಿಮೆ ಹಿಡುವಳಿ ಇರುವವರು) ಬ್ಯಾಂಕ್‌ ಮತ್ತು ಸಹಕಾರಿ ಸಂಸ್ಥೆಗಳಿಂದ ರಿಯಾಯಿತಿ ದರದ ಸಾಲ ಪಡೆದಿದ್ದರೆ, ಶೇ. 79ಕ್ಕೂ ಹೆಚ್ಚಿನ ದೊಡ್ಡ ಹಿಡುವಳಿದಾರರು ಬ್ಯಾಂಕ್‌ಗಳ ಕೃಷಿ ಸಾಲ ಯೋಜ ನೆಗೂ ಫ‌ಲಾನುಭವಿಗಳು ಎಂಬುದು ಗಮನಾರ್ಹ.
2015-16ರಲ್ಲಿ ಪ್ರಕಟವಾದ ಸಮೀಕ್ಷೆಯೊಂದರ ಪ್ರಕಾರ ಒಟ್ಟು 12.56 ಕೋಟಿ ಸಣ್ಣ /ಅತೀ ಸಣ್ಣ ರೈತರು ದೇಶದ ಶೇ.86ರಷ್ಟು ಕೃಷಿ ಭೂಮಿಯ ಒಡೆತನ ಹೊಂದಿದ್ದರೂ ರಿಯಾಯಿತಿ ದರದ ಸಾಲ ಸೌಲಭ್ಯಗಳು ಹೆಚ್ಚಿನ ಪ್ರಮಾಣದಲ್ಲಿ ದೊಡ್ಡ ರೈತರು ಹಾಗೂ ಕೃಷಿ ಆಧಾರಿತ ವ್ಯವಹಾರ ನಡೆಸುವವರ ಪಾಲಾಗಿದೆ.

ಆರ್‌ಬಿಐ ನಿರ್ದೇಶನದ ಪ್ರಕಾರ ಬ್ಯಾಂಕ್‌ಗಳು ನೀಡುವ ನಿವ್ವಳ ಸಾಲದ ಪ್ರಮಾಣದಲ್ಲಿ ಕನಿಷ್ಠ ಶೇ. 18ರಷ್ಟು ಕೃಷಿಕರಿಗೆ ನೇರವಾಗಿ ವಿತರಿಸಬೇಕಾಗಿದ್ದು, ಇದರಲ್ಲಿ ಶೇ. 8ರಷ್ಟು ಸಣ್ಣ / ಅತೀ ಸಣ್ಣ ರೈತರಿಗೆ ನೀಡಬೇಕಾಗಿದೆ. ಅಲ್ಲದೆ ಶೇ. 4.5ರಷ್ಟನ್ನು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಒದಗಿಸಬಹುದಾಗಿದೆ. ಆದರೆ ವಾಸ್ತವವಾಗಿ ಆರ್‌ಬಿಐ ನ ನಿರ್ದೇಶನ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆಯೇ ಎನ್ನುವುದು ನಮ್ಮೆಲ್ಲರ ಪ್ರಶ್ನೆ.

ಆರ್‌ಬಿಐ ನಡೆಸಿದ ಆಂತರಿಕ ಸಮೀಕ್ಷೆಯ ಪ್ರಕಾರ 2019ರಲ್ಲಿ ಕೆಲವು ರಾಜ್ಯಗಳಲ್ಲಿ ವಿತರಣೆಯಾದ ಕೃಷಿ ಸಾಲದ ಪ್ರಮಾಣ ಆಯಾ ರಾಜ್ಯಗಳ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಗಿಂತಲೂ ಹೆಚ್ಚಾಗಿತ್ತು. ಕೆಲವು ರಾಜ್ಯಗಳಲ್ಲಿ ವಿತರಣೆಯಾದ ಬೆಳೆ ಸಾಲದ ಪ್ರಮಾಣ ಅಲ್ಲಿನ ರೈತರು ಬೀಜ, ರಸಗೊಬ್ಬರ, ಕೃಷಿ ಸಂಬಂಧಿತ ವಸ್ತುಗಳು ಹಾಗೂ ಕೃಷಿ ಚಟುವಟಿಕೆಗಳಲ್ಲಿ ವಿನಿಯೋಗಿಸಿದ ಬಂಡವಾಳಕ್ಕಿಂತ ಸುಮಾರು 200ರಿಂದ 300 ಪಟ್ಟು ಜಾಸ್ತಿಯಾಗಿತ್ತು ಎಂದು ವರದಿಯಾಗಿದೆ.

ಸರಕಾರವು ನೀಡುತ್ತಿರುವ ಸಹಾಯಧನ, ಆರ್ಥಿಕ ಸಂಸ್ಥೆಗಳ ಮೂಲಕ ವಿತರಿಸಲಾಗುತ್ತಿರುವ ರಿಯಾಯಿತಿ ದರದ ಸಾಲ ಸೌಲಭ್ಯಗಳು ಅನ್ನದಾತರ ಆರ್ಥಿಕ ಬೆಳವಣಿಗೆ ಹಾಗೂ ಸ್ವಾವಲಂಬಿ ಜೀವನೋಪಾಯಕ್ಕಾಗಿ ನಿಗದಿಯಾಗಿದ್ದರೂ ನಿರೀಕ್ಷಿತ ಫ‌ಲಿತಾಂಶ ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿರುವುದು ದೂರದೃಷ್ಟ . ಸರಕಾರದ ನೂತನ ಕೃಷಿ ಯೋಜನೆ ಈ ಬಗ್ಗೆ ಯಾವುದೇ ಪ್ರಸ್ತಾವ/ನಿರ್ದೇಶನವನ್ನು ಒಳಗೊಂಡಿಲ್ಲ.

ರೈತರಿಗೆ ನೀಡಲಾಗುವ ಒಟ್ಟು ಸಾಲದ ಪ್ರಮಾಣದ ಮೇಲೆ ಸಹಾಯಧನ ರಿಯಾಯಿತಿ ನಿಗದಿಪಡಿಸುವ ಬದಲಾಗಿ ಪ್ರತೀ ಹೆಕ್ಟೇರ್‌ ಉಳುಮೆ ಹಾಗೂ ನಿರ್ದಿಷ್ಟ ಬೆಳೆ, ಚಟುವಟಿಕೆಗಳನ್ನು ಆಧರಿಸಿ ನೀಡುವಂತಾಗಬೇಕು. ಬಹಳಷ್ಟು ಮುಂದುವರಿದಿರುವ ತಂತ್ರಜ್ಞಾನ ಬಳಕೆ ಯಿಂದ ಪ್ರತಿ ಕೃಷಿ ಕುಟುಂಬಗಳ ನಿರ್ದಿಷ್ಟ ಅಗತ್ಯದ ಮಾಹಿತಿಯನ್ನು ಸಂಗ್ರಹಿಸಿ, ಬಂಡವಾಳದ ಸಹಿತ ಎಲ್ಲ ಬೇಡಿಕೆಗಳನ್ನು ಏಕಗವಾಕ್ಷಿ ಯೋಜನೆಯ ಮೂಲಕ ಸರಬರಾಜು ಮಾಡುವುದರಿಂದ ಬಂಡವಾಳದ ಸದುಪಯೋಗವಾಗಬಹುದು.

ಕೃಷಿ ಸಾಲ ಯೋಜನೆಯನ್ನು ಅನುಷ್ಠಾನಗೊಳಿಸು ತ್ತಿರುವ ಆರ್ಥಿಕ ಸಂಸ್ಥೆಗಳು ತಮ್ಮ ಆರ್ಥಿಕ ಶಕ್ತಿ ತಂತ್ರಜ್ಞಾನ ವ್ಯವಹಾರ ಹಾಗೂ ಮಾನವ ಸಂಪ ನ್ಮೂಲಗಳ ಮೂಲಕ ತಾವು ವಿತರಿಸಿದ ಸಾಲದ ಮೊತ್ತ ಉದ್ದೇಶಿತ ಚಟುವಟಿಕೆಗಳಿಗೆ ವಿನಿಯೋ ಗವಾಗುವಂತೆ ಖಚಿತಪಡಿಸುವ ಜವಾಬ್ದಾರಿಯನ್ನು ನಿರ್ವಹಿಸಲು ಸಫ‌ಲವಾದರೆ ಮಾತ್ರ ಅಪೇಕ್ಷಿತ ಫ‌ಲ ಸಾಧನೆಯಾಗಬಹುದು. ಕೇವಲ ಸಾಲ ವಿತರಣೆ ಹಾಗೂ ಸಾಲ ವಸೂಲಿಗಷ್ಟೆ ಸೀಮಿತವಾಗಿರುವ “ಕೃಷಿ ಸಾಲ ಯೋಜನೆ’ ಇನ್ನಷ್ಟು ಪರಿಣಾಮಕಾರಿಯಾಗಲೂ ನಿರ್ದಿಷ್ಟ ನಿರ್ದೇಶನದ ಅಗತ್ಯವಿದೆ. ಬ್ಯಾಂಕ್‌ಗಳಲ್ಲಿ ನಿಯೋಜನೆಗೊಂಡಿರುವ / ಸೇರ್ಪಡೆಗೊಳ್ಳುತ್ತಿರುವ ಕೃಷಿ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿ ಸುವಂತೆ ಸರಕಾರ ಹಾಗೂ ಆಡಳಿತ ವರ್ಗ ಸ್ಪಷ್ಟ ನಿಲುವನ್ನು ತಾಳಬೇಕಾಗಿರುವುದು ಅನಿವಾರ್ಯ. ಇಲ್ಲವಾದಲ್ಲಿ ಈ ಯೋಜನೆ ಬರೀ ಘೋಷಣೆಗಷ್ಟೇ ಸೀಮಿತವಾಗಲಿದೆ.

– ಬೆಳ್ಳಿಪ್ಪಾಡಿ ರಾಜೇಂದ್ರ ರೈ

Advertisement

Udayavani is now on Telegram. Click here to join our channel and stay updated with the latest news.

Next