Advertisement

ಮತ್ತೆ ಗಲ್ಲಿನಿಂದ ಪಾರಾದ ದಂಡುಪಾಳ್ಯ

04:15 PM Oct 28, 2017 | Team Udayavani |

ಬೆಂಗಳೂರು: ಕಳೆದ 17 ವರ್ಷಗಳ ಹಿಂದೆ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ದಂಡುಪಾಳ್ಯ ತಂಡದ ಮೂವರು ಆರೋಪಿಗಳಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ಹೈಕೋರ್ಟ್‌ ರದ್ದುಪಡಿಸಿದ್ದು, ಮೂವರಿಗೂ ಹತ್ತು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Advertisement

ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ದಂಡುಪಾಳ್ಯಗ್ಯಾಂಗ್‌ನ ಮುನಿಕೃಷ್ಣ, ವೆಂಕಟೇಶ್‌, ನಲ್ಲತಿಮ್ಮನಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಖಾಯಂಗೊಳಿಸುವಂತೆ ಸಲ್ಲಿಕೆಯಾಗಿದ್ದ ಕ್ರಿಮಿನಲ್‌ ಮೇಲ್ಮನವಿ ಅರ್ಜಿಗಳನ್ನು ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ರವೀಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್‌  ಮೈಕೆಲ್‌  ಕುನ್ಹಾ  ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಆರೋಪಿಗಳೇ ಮಹಿಳೆಯನ್ನು ಕೊಲೆಗೈದಿದ್ದಾರೆ ಎಂಬುದಕ್ಕೆ ಪ್ರಬಲ ಸಾಕ್ಷ್ಯಾಧಾರಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್‌ ವಿಫ‌ಲವಾಗಿದೆ ಎಂದು ಅಭಿಪ್ರಾಯಪಟ್ಟಿರುವ  ನ್ಯಾಯಪೀಠ, ಮರಣದಂಡನೆ ಶಿಕ್ಷೆಯನ್ನು ಮಾರ್ಪಾಡುಗೊಳಿಸಿ 10 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿದೆ. ಇದೇ ಪ್ರಕರಣದ ಮತ್ತೋರ್ವ ಆರೋಪಿ ಲಕ್ಷ್ಮಮ್ಮ ಅವರನ್ನು ದೋಷಮುಕ್ತಗೊಳಿಸಿದೆ.

ಪ್ರಕರಣವೇನು?
ಕಾಮಾಕ್ಷಿಪಾಳ್ಯದ ಸುಧಾ ಎಂಬುವವರನ್ನು 2000ನೇ ಮಾರ್ಚ್‌ 22ರಂದು ಕತ್ತುಕೊಯ್ದು ಕೊಲೆಮಾಡಿ ಚಿನ್ನಾಭರಣ ದೋಚಿ ನಾಲ್ವರು ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿ ಸಿಟಿ ಸಿವಿಲ್‌ ಸೆಷನ್ಸ್‌ ಕೋರ್ಟ್‌ಗೆ  ದೋಷಾರೋಪ  ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನಾಲ್ವರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ 2010ರ ಸೆಪ್ಟೆಂಬರ್‌ನಲ್ಲಿ ತೀರ್ಪು ನೀಡಿತ್ತು.

ಕಡಿಮೆ ಅವಧಿಯಲ್ಲಿ 38 ಅರ್ಜಿಗಳ ಇತ್ಯರ್ಥ
ಕೊಲೆ, ಸುಲಿಗೆ ಪ್ರಕರಣಗಳ ಸಂಬಂಧ ದಂಡುಪಾಳ್ಯ ಗ್ಯಾಂಗ್‌ನ ವಿರುದ್ಧದ  38 ಕ್ರಿಮಿನಲ್‌ ಮೇಲ್ಮನವಿಗಳನ್ನು  ಹೈಕೋರ್ಟ್‌ ವಿಭಾಗೀಯ ಪೀಠ ಇತ್ಯರ್ಥಪಡಿಸಿದೆ. ಕಳೆದ ಜುಲೈ 9ರಿಂದ ದಂಡುಪಾಳ್ಯಗ್ಯಾಂಗ್‌ನ ವಿರುದ್ಧದ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ರವೀಮಳಿಮs… ಹಾಗೂ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ವಿಭಾಗೀಯ ಪೀಠ ಅರ್ಜಿಗಳನ್ನು ಇತ್ಯರ್ಥಪಡಿಸಿದೆ.

Advertisement

ದಂಡುಪಾಳ್ಯಗ್ಯಾಂಗ್‌ಗೆ ಮರಣದಂಡನೆ ಖಾಯಂಗೊಳಿಸುವಂತೆ 13 ಅರ್ಜಿಗಳು ಹಾಗೂ  25 ಮೇಲ್ಮನವಿಗಳನ್ನು ವಿಭಾಗೀಯಪೀಠ  ಇತ್ಯರ್ಥಪಡಿಸಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿಯೇ ವಿಭಾಗೀಯ ಪೀಠ ತ್ವರಿತವಾಗಿ  ಇತ್ಯರ್ಥಪಡಿಸಿದ್ದು ಇದೇ ಮೊದಲು ಎಂದು ಅರ್ಜಿದಾರರ ಪರ ವಕೀಲರು ಅಭಿಪ್ರಾಯಟ್ಟರು. ಅರ್ಜಿದಾರರ  ಪರ ವಕೀಲ ಹಸ್ಮತ್‌ಪಾಷಾ ಹಾಗೂ ಪ್ರಾಸಿಕ್ಯೂಶನ್‌ ಪರ ಎಚ್‌.ಎನ್‌ ನಿಲಗೋಳ್‌ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next