Advertisement

ಅಧಿವೇಶನಕ್ಕೂ ಮುನ್ನ ಸರ್ಕಾರದ ವಿರುದ್ಧ ಉಗ್ರ ಹೋರಾಟ: ಖಂಡ್ರೆ

09:55 AM Jan 31, 2020 | Team Udayavani |

ರಾಯಚೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆರ್ಥಿಕವಾಗಿ ದಿವಾಳಿಯಾಗಿದ್ದು, ಅಭಿವೃದ್ಧಿ ಮಾಡದೆ ವಿಪಕ್ಷಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿವೆ. ಫೆ.17ರಿಂದ ಅಧಿವೇಶನ ಶುರುವಾಗುತ್ತಿದ್ದು, ಅಷ್ಟರೊಳಗೆ ಸರ್ಕಾರದ ವೈಫಲ್ಯ ಖಂಡಿಸಿ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿವಿಧ ವಸತಿ ಯೋಜನೆಗಳಡಿ 3.5 ಲಕ್ಷ ಮನೆಗಳು ಮಂಜೂರಾಗಿದ್ದು, ಅನುದಾನ ನೀಡದ ಕಾರಣ ಕಾಮಗಾರಿಗಳು ಅರೆಬರೆಯಾಗಿವೆ. ಅಂದಾಜು 1,500 ಸಾವಿರ ಕೋಟಿ ರೂ.ಬರಬೇಕಿದ್ದು, ನಯಾ ಪೈಸೆ ಬಿಡುಗಡೆಯಾಗಿಲ್ಲ. ಫಲಾನುಭವಿಗಳಿಗೆ 15 ದಿನಕ್ಕೊಮ್ಮೆ ಹಣ ನೀಡಬೇಕು. ಜೋಪಡಿ ಕಿತ್ತು ಹಾಕಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಕಂಡ ಕಂಡಲ್ಲಿ ಸಾಲ ಮಾಡಿಕೊಂಡಿದ್ದು, ಬಡ್ಡಿ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾತೆತ್ತಿದರೆ ನಮ್ಮದು ರೈತಪರ ಸರ್ಕಾರ ಎನ್ನುತ್ತಿದ್ದರು. ಆದರೆ, ಮಳೆ ಇಲ್ಲದ ಪ್ರದೇಶಗಳ ರೈತರಿಗಾಗಿ ಜಾರಿ ಮಾಡಿದ್ದ ಕೃಷಿ ಭಾಗ್ಯ ಯೋಜನೆಯನ್ನೇ ಈ ಸರ್ಕಾರ ಕೈ ಬಿಟ್ಟಿದೆ ಎಂದು ಟೀಕಿಸಿದರು.

ಸಿಎಎ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ಕಾಯ್ದೆ ಹಿಂದೆ ಜಾರಿಯಲ್ಲಿತ್ತು. ಆದರೆ, ಕೇಂದ್ರ ಸರ್ಕಾರ ಧರ್ಮಾಧಾರಿತವಾಗಿ ಜಾರಿಗೆ ಮಾಡಿದ್ದಕ್ಕೆ ನಮ್ಮ ವಿರೋಧವಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು.
– ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next