ಮೈಸೂರು: “ತಲೆ ಕೆಡಿಸಿ ಕೊಳ್ಳಬೇಡಿ. ಸ್ವಲ್ಪ ದಿನವಷ್ಟೇ ಕಾಯಿರಿ. ದಿಲ್ಲಿಯಲ್ಲಿ ತೀರ್ಮಾನ ಆಗಿದೆ. ಆ ಬಗ್ಗೆ ಚರ್ಚೆ ಬೇಡ. ನೀವು ನನ್ನ ಬೆಂಬಲವಾಗಿ ನಿಲ್ಲಿ, ಸಾಕು’.ಹೀಗೆಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ಮತ್ತೆ “ಸಿಎಂ ಚರ್ಚೆ’ಗೆ ನಾಂದಿ ಹಾಡಿದ್ದಾರೆ.
ಮೈಸೂರು-ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯುವ ಭಾಗವಾಗಿ ಇಲ್ಲಿನ ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಿದ್ದ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, “ಬಿಜೆಪಿಯಲ್ಲಿ ಅಂತೂ ನಮ್ಮವ ರಿಗೆ ಅವಕಾಶವಿಲ್ಲ. ಜೆಡಿಎಸ್ ಇನ್ಮುಂದೆ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ನನಗೆ ಶಕ್ತಿ ತುಂಬಬೇಕು’ ಎಂದು ಕೋರಿದರು.
“ನಾನು ಮೈಸೂರಿನ ಅಳಿಯ. ನನಗೂ ದೊಡ್ಡ ಜವಾಬ್ದಾರಿ ಇದೆ. ಇಲ್ಲಿ ಲಕ್ಷ್ಮಣ ಅವರನ್ನು ಸೋಲಿಸಿ ದರೆ ನನಗೆ ಹಾಗೂ ಒಕ್ಕಲಿಗ ಸಚಿವ ರಿಗೆ ಬಹಳ ತೊಂದರೆ ಆಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು’ ಎಂದು ಮನವಿ ಮಾಡಿದರು.
“ಪ್ರತಾಪಸಿಂಹ ಹಾಗೂ ಡಿ.ವಿ. ಸದಾನಂದ ಗೌಡ ಕೊಡಬೇಕಾದ ಸಂದೇಶವನ್ನು ಈಗಾಗಲೇ ಕೊಟ್ಟಿ ದ್ದಾರೆ. ಇದನ್ನು ಸಮಾಜದವರು ಅರಿಯಬೇಕು’ ಎಂದರು.
“ಹಿಂದೆ ಸಿದ್ದರಾಮಯ್ಯ ನನ್ನನ್ನು ಸಚಿವ ಮಾಡಿರಲಿಲ್ಲ. ಅನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಬರಲಿಲ್ಲ. ಆಗ, ಹಿಂದಿನದ್ದೆಲ್ಲವನ್ನೂ ಮರೆತು ನಾನೇ ಮುಂದಾಳತ್ವ ವಹಿಸಿಕೊಂಡೆ. ಮುಂದೆ ನಿಮ್ಮನ್ನು ಡಿಸಿಎಂ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು’ ಎಂದರು.