Advertisement

ಸಲ್ಮಾನ್‌ ಖಾನ್‌ ‘ಟೈಗರ್‌ ಜಿಂದಾ ಹೈ’ಬಿಡುಗಡೆಗೆ ಬೆದರಿಕೆ

03:57 PM Dec 21, 2017 | |

ಮುಂಬಯಿ: ಬಾಲಿವುಡ್‌ನ‌ ಸೂಪರ್‌ಸ್ಟಾರ್‌  ಸಲ್ಮಾನ್‌ ಖಾನ್‌  ನಾಯಕ ನಟರಾಗಿ  ಅಭಿನಯಿಸಿರುವ  ಯಶ್‌ ರಾಜ್‌ ಫಿಲಂಸ್‌  ಅವರ “ಟೈಗರ್‌ ಜಿಂದಾ ಹೈ’ಸಿನೆಮಾ ಇದೇ  ಶುಕ್ರವಾರದಂದು  ಬಿಡುಗಡೆಯಾಗಲಿದ್ದು  ಸಾಮಾನ್ಯ ಥಿಯೇಟರ್‌ಗಳಲ್ಲಿ  ಈ  ಚಿತ್ರದ  ಪ್ರದರ್ಶನಕ್ಕೆ  ತಡೆಯೊಡ್ಡುವ  ಬೆದರಿಕೆಯನ್ನು  ಮಹಾರಾಷ್ಟ್ರ  ನವ ನಿರ್ಮಾಣ ಸೇನೆ  ಒಡ್ಡಿದೆ.  

Advertisement

ಡಿ.22ರ ಶುಕ್ರವಾರದಂದು  ಮರಾಠಿ ನಟ ಅಂಕುಶ್‌ ಚೌಧರಿ ಅಭಿನಯದ  ಸಿನೆಮಾ “ದೇವಾ’ ತೆರೆಗೆ  ಅಪ್ಪಳಿಸಲಿದ್ದು  ಥಿಯೇಟರ್‌ಗಳಲ್ಲಿ  ಪ್ರೈಮ್‌  ಟೈಮ್‌ನಲ್ಲಿ  ಈ  ಚಿತ್ರದ  ಪ್ರದರ್ಶನಕ್ಕೆ  ಅವಕಾಶ ನೀಡದೇ  ಹೋದಲ್ಲಿ  ಸಲ್ಮಾನ್‌  ಅಭಿನಯದ  ಸಿನೆಮಾದ  ಪ್ರದರ್ಶನಕ್ಕೆ  ತಡೆಯೊಡ್ಡುವುದಾಗಿ  ಎಂಎನ್‌ಎಸ್‌ನ  ಸಿನೇಮಾ ಘಟಕದ  ಮುಖ್ಯಸ್ಥರಾದ  ಅಮೇಯ ಖೋಪ್ಕರ್‌ ಅವರು ಸಿನೆಮಾ ಪ್ರದರ್ಶಕರಿಗೆ ಬರೆದಿರುವ ಪತ್ರದಲ್ಲಿ  ಎಚ್ಚರಿಕೆ ನೀಡಿದ್ದಾರೆ. 

ಮರಾಠಿ  ಚಲನಚಿತ್ರ “ದೇವಾ’ದ  ಪ್ರದರ್ಶನಕ್ಕೆ  ಸಲ್ಮಾನ್‌ ಅಭಿನಯದ  “ಟೈಗರ್‌ ಜಿಂದಾ ಹೈ’ ಸಿನೆಮಾ ಅಡ್ಡಿಯುಂಟು ಮಾಡಿದ್ದೇ ಆದಲ್ಲಿ  ಈ ಸಿನೆಮಾದ ಪ್ರದರ್ಶನಕ್ಕೆ  ಅವಕಾಶ  ನೀಡಲಾಗದು. ಆದರೆ ಮಲ್ಟಿಪ್ಲೆಕ್ಸ್‌ಗಳಲ್ಲಿ  ಸಲ್ಮಾನ್‌  ಖಾನ್‌ ಅಭಿನಯದ  ಚಿತ್ರದ  ಪ್ರದರ್ಶನಕ್ಕೆ  ಎಂಎನ್‌ಎಸ್‌  ಕಾರ್ಯಕರ್ತರು  ಯಾವುದೇ  ಅಡ್ಡಿ ಉಂಟು ಮಾಡಲಾರರು ಎಂದವರು  ತಮ್ಮ  ಪತ್ರದಲ್ಲಿ  ಸ್ಪಷ್ಟಪಡಿಸಿದ್ದಾರೆ. 

ಇನ್ನೊಂದು  ಮರಾಠಿ ಸಿನೇಮಾವಾದ  “ಗಚ್ಚಿ’ಯ ಬಿಡುಗಡೆ ಕೂಡಾ  ಥಿಯೇಟರ್‌ಗಳ  ಅಭಾವದ  ಕಾರಣದಿಂದಾಗಿ  ಮುಂದೂಡಲ್ಪಟ್ಟಿದೆ. ಯಶ್‌ ರಾಜ್‌  ಫಿಲಂಸ್‌ ನಗರದಲ್ಲಿ  ಎಲ್ಲ  ಸಿನೇಮಾ ಹಾಲ್‌ಗ‌ಳನ್ನು  ಮುಂಗಡವಾಗಿ  ಕಾದಿರಿಸಿರುವುದರಿಂದ  “ದೇವಾ’ ಸಿನೆಮಾವನ್ನು  ಪ್ರದರ್ಶಿಸಲು  ಯಾವೊಂದೂ  ಥಿಯೇಟರ್‌ಗಳೂ  ಮುಂದೆ  ಬರುತ್ತಿಲ್ಲ. ಮರಾಠಿ  ಭಾಷೆಯ  ಉಳಿವಿಗಾಗಿ  ಪಕ್ಷ ಹೋರಾಟ ನಡೆಸುತ್ತಾ ಬಂದಿದೆ.  ಮರಾಠಿ  ಚಿತ್ರ ನಿರ್ಮಾಪಕರೊಂದಿಗೆ  ಸಮನ್ವಯತೆಯಿಂದ  ಕಾರ್ಯನಿರ್ವಹಿಸುವಂತೆ  ಖೋಪ್ಕರ್‌ ತಮ್ಮ ಪತ್ರದಲ್ಲಿ  ಸಿನೆಮಾ ಪ್ರದರ್ಶಕರಿಗೆ  ಮನವಿ ಮಾಡಿಕೊಂಡಿದ್ದಾರೆ.  ಒಂದು  ವೇಳೆ ಈ  ಮನವಿಯನ್ನು ಧಿಕ್ಕರಿಸಿದ್ದೇ ಆದಲ್ಲಿ  ಎಂಎನ್‌ಎಸ್‌  ತನ್ನದೇ  ಆದ  ಭಾಷೆಯಲ್ಲಿ  ಪ್ರತ್ಯುತ್ತರ ನೀಡಬೇಕಾದೀತು ಎಂದವರು  ಇದೇ ವೇಳೆ  ಎಚ್ಚರಿಕೆ  ನೀಡಿದ್ದಾರೆ. 

ಸಚಿವ ತಾಬ್ಡೆಗೂ  ಪತ್ರ
ಇದೇ  ವಿಚಾರವಾಗಿ ಅಮೇಯ ಖೋಪ್ಕರ್‌ ಅವರು ರಾಜ್ಯದ  ಸಂಸ್ಕೃತಿ ಸಚಿವ ವಿನೋದ್‌ ತಾಬ್ಡೆ ಅವರಿಗೂ  ಪತ್ರವೊಂದನ್ನು ಬರೆದಿದ್ದು ರಾಜ್ಯ ಸರಕಾರ ಮರಾಠಿ ಸಿನೆಮಾ ನಿರ್ಮಾಪಕರ  ಸಂಕಷ್ಟಕ್ಕೆ  ಸ್ಪಂದಿಸಬೇಕು ಎಂದು  ಆಗ್ರಹಿಸಿದ್ದಾರೆ. ಒಂದು ವೇಳೆ ಸರಕಾರ  ಯಾವುದೇ  ಕ್ರಮ ಕೈಗೊಳ್ಳದೇ ಹೋದಲ್ಲಿ  ಎಂಎನ್‌ಎಸ್‌ “ಟೈಗರ್‌ ಜಿಂದಾ ಹೈ’ ಚಿತ್ರದ ನಿರ್ಮಾಪಕರ ವಿರುದ್ಧ ತನ್ನದೇ ಶೈಲಿಯಲ್ಲಿ  ಪ್ರತಿಭಟನೆ ನಡೆಸಲಿದೆ ಎಂದವರು  ಎಚ್ಚರಿಕೆ  ನೀಡಿದ್ದಾರೆ. 

Advertisement

ಥಿಯೇಟರ್‌ಗಳಲ್ಲಿ ಪ್ರೈಮ್‌ ಟೈಮ್‌ನಲ್ಲಿ  ಮರಾಠಿ ಸಿನೆಮಾದ  ಪ್ರದರ್ಶನಕ್ಕೆ  ಸಂಬಂಧಿಸಿದಂತೆ  ಸರಕಾರ  ಈಗಾಗಲೇ  ನಿಯಮಾವಳಿಯನ್ನು  ರೂಪಿಸಿದ್ದು ಈ ನಿಯಾಮವಳಿಯನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು  ಸರಕಾರದ  ಜವಾಬ್ದಾರಿಯಾಗಿದೆ ಎಂದು ಎಂಎನ್‌ಎಸ್‌ನ  ನಾಯಕರೋರ್ವರು  ತಿಳಿಸಿದರು. 

ವರ್ಷದ  ಕೊನೆಯಲ್ಲಿ  ಸಲ್ಮಾನ್‌ ಅಭಿನಯದ ಸಿನೆಮಾ ಬಿಡುಗಡೆಗೊಳ್ಳುತ್ತಿರುವುದು  ಥಿಯೇಟರ್‌ಗಳ  ಮಾಲಕರಲ್ಲಿ  ಹೊಸ  ಆಶಾವಾದವನ್ನು ಮೂಡಿಸಿದೆ. ಸಲ್ಮಾನ್‌ ಅಭಿನಯದ ಸಿನೆಮಾ ಬಿಡುಗಡೆಯಾದ  ಮೊದಲ ಮೂರು ದಿನಗಳ  ಅವಧಿಯಲ್ಲಿ  ಥಿಯೇಟರ್‌ಗಳಲ್ಲಿ  ಗರಿಷ್ಠ  ಆದಾಯ ಸಂಗ್ರಹವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ  ಸಲ್ಮಾನ್‌ ಅಭಿನಯದ  ಸಿನೆಮಾವನ್ನು  ಪ್ರದರ್ಶಿಸಲು  ಅವಕಾಶ ನೀಡದಿರುವ ಎಂಎನ್‌ಎಸ್‌ನ ಬೆದರಿಕೆ  ಸರಿಯಲ್ಲ.  ಅಲ್ಲದೆ  ಕಳೆದ  2-3ತಿಂಗಳುಗಳಿಂದೀಚೆಗೆ ಯಾವೊಂದೂ  ಚಲನಚಿತ್ರವೂ ಥಿಯೇಟರ್‌ಗಳಿಗೆ ಉತ್ತಮ ಆದಾಯವನ್ನು ತಂದುಕೊಟ್ಟಿಲ್ಲ.  

ಬಲುನಿರೀಕ್ಷಿತ “ಪದ್ಮಾವತಿ’ ಸಿನೇಮಾ  ಡಿ.1ರಂದು  ಬಿಡುಗಡೆಗೊಳ್ಳುವ  ನಿರೀಕ್ಷೆ  ಇತ್ತಾದರೂ  ಸಿನೆಮಾ ವಿವಾದದಲ್ಲಿ  ಸಿಲುಕಿದ  ಪರಿಣಾಮ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ  ಸಲ್ಮಾನ್‌ ಖಾನ್‌ ಅಭಿನಯದ  ಸಿನೆಮಾ ಪ್ರದರ್ಶನಕ್ಕೆ  ತಡೆಯೊಡ್ಡುವ ಎಂಎನ್‌ಎಸ್‌ ಬೆದರಿಕೆ ಥಿಯೇಟರ್‌ಗಳ  ಮಟ್ಟಿಗೆ  ಆತಂಕಕಾರಿ  ಬೆಳವಣಿಗೆಯಾಗಿದೆ.  “ಟೈಗರ್‌ ಜಿಂದಾ ಹೈ’ ಸಿನೆಮಾವನ್ನು ಪ್ರದರ್ಶಿಸಿದಲ್ಲಿ  ಹಿಂಸಾಚಾರ  ನಡೆಸುವ  ಎಂಎನ್‌ಎಸ್‌ ಬೆದರಿಕೆ  ಕುರಿತಂತೆ  ಪೊಲೀಸರು  ಮತ್ತು ರಾಜ್ಯ ಸರಕಾರ  ಸೂಕ್ತ  ನಿರ್ಧಾರವನ್ನು  ಕೈಗೊಳ್ಳಲಿದೆ ಎಂದು  ಮುಂಬಯಿ ಉಪನಗರದ ಥಿಯೇಟರ್‌  ಒಂದರ ಮೆನೇಜರ್‌ ಓರ್ವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next