Advertisement

ಬಚ್ಚನ್, ರೇಖಾ ರಹಸ್ಯ ಲವ್ ಕಹಾನಿ! ಜಯಾ ಮಾಡಿದ್ದೇನು ಗೊತ್ತಾ?

12:51 PM Jun 21, 2018 | Sharanya Alva |

ಬಿಗ್ ಬಿ ಅಮಿತಾಬ್ ಹಾಗೂ ಸ್ಟಾರ್ ನಟಿಯಾಗಿದ್ದ ರೇಖಾ ನಡುವಿನ ಲವ್ ಅಫೇರ್ ಬಾಲಿವುಡ್ ನಲ್ಲಿ ಈವರೆಗೂ ಚರ್ಚಿತವಾಗುತ್ತಿರುವ ವಿಷಯವಾಗಿದೆ. ಆದರೂ ಅತೀ ಹೆಚ್ಚು ಗಾಸಿಫ್ ಗೆ ಒಳಗಾಗಿರುವ ಈ ಲವ್ ಸ್ಟೋರಿ ಬಗ್ಗೆ ಯಾವತ್ತೂ ಇಬ್ಬರೂ ಬಹಿರಂಗವಾಗಿ ಒಪ್ಪಿಕೊಂಡಿಲ್ಲ!

Advertisement

ಅಮಿತಾಬ್ ಮತ್ತು ರೇಖಾ ಇಬ್ಬರೂ ಬಾಲಿವುಡ್ ಸಿನಿಮಾ ರಂಗದ ದಂತಕಥೆಯಾಗಿದ್ದ ನಟರು..ಇಬ್ಬರ ನಡುವೆ ಯಾವಾಗ ಪ್ರೀತಿಯ ಮೊಳೆಕೆಯೊಡೆದು ಹೇಗೆ ಕೊನೆಗೊಂಡಿತ್ತು ಎಂಬುದೇ ಕುತೂಹಲದ ಸಂಗತಿಯಾಗಿದೆ…

ಪ್ರೇಮ ಕಹಾನಿ ಆರಂಭವಾಗಿದ್ದೇ ಇಲ್ಲಿಂದ…

1976 ರಲ್ಲಿ ಬಂಗಾಲಿ ಲೇಖಕ ನಿರಂಜನ ಗುಪ್ತಾರ ಬಂಗಾಲಿ ಕಾದಂಬರಿ ‘ರಾತ್ರಿರ್ ಯಾತ್ರಿ’ ಆಧರಿತ ಚಿತ್ರ ‘ದೋ ಅಂಜಾನೆ‘ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಬಚ್ಚನ್ ಮತ್ತು ರೇಖಾರ ಪ್ರೇಮ ಕಹಾನಿ ಶುರುವಾಗಿತ್ತು. ಅದಾಗಲೇ ಅಮಿತಾಬ್ ಜಯಾ ಅವರನ್ನು ಮದುವೆಯಾಗಿ ಆಗಿತ್ತು! ಆರಂಭದ ದಿನದಲ್ಲಿ ಇಬ್ಬರ ಗುಪ್ತ್, ಗುಪ್ತ್ ಸಂಬಂಧ ಯಾರಿಗೂ ತಿಳಿದಿರಲಿಲ್ಲವಾಗಿತ್ತು..ಇಬ್ಬರೂ ರೇಖಾ ಅವರ ಗೆಳೆಯರೊಬ್ಬರ ಬಂಗ್ಲೆಯಲ್ಲಿ ಜೊತೆಗೂಡಿ ಕುಶಲೋಪರಿ ನಡೆಸುತ್ತಿದ್ದರಂತೆ! ಅವೆಲ್ಲಕ್ಕಿಂತ ಇಂಟರೆಸ್ಟಿಂಗ್ ಸುದ್ದಿ ಯಾವುದೆಂದರೆ ರೇಖಾ ಮತ್ತು ಬಚ್ಚನ್ ಗುಟ್ಟಾಗಿ ಮದುವೆಯಾಗಿದ್ದಾರೆಂಬುದು ಯಾರಿಗೂ ತಿಳಿದಿರಲಿಲ್ಲವಾಗಿತ್ತಂತೆ..

ಆ ಒಂದು ಘಟನೆ ನಡೆಯುವವರೆಗೂ ಬಚ್ಚನ್ ಮತ್ತು ರೇಖಾ ನಡುವಿನ ಲವ್ ಅಫೇರ್ ಯಾರ ಗಮನವನ್ನೂ ಸೆಳೆದಿರಲಿಲ್ಲವಾಗಿತ್ತು.

Advertisement

ಯಾವುದು ಆ ಘಟನೆ?

1978ರಲ್ಲಿ ಗಂಗಾ ಕೀ ಸೌಗಂಧ್ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನಟಿ ರೇಖಾ ಜೊತೆ ಸಹ ನಟರೊಬ್ಬರು ಅಸಭ್ಯವಾಗಿ ವರ್ತಿಸಿದ್ದನ್ನು ಕಂಡು ಬಿಗ್ ಬಿ ತಾಳ್ಮೆ ಕಳೆದುಕೊಂಡು ರೇಗಾಡಿದ್ದರು. ಈ ಘಟನೆ ಬಳಿಕ ಬಚ್ಚನ್ ಹಾಗೂ ರೇಖಾ ಅಫೇರ್ ಬೆಳಕಿಗೆ ಬಂದಿತ್ತು, ಅಷ್ಟೇ ಅಲ್ಲ ಮಾಧ್ಯಮದವರ ಗಮನವನ್ನೂ ಸೆಳೆದಿತ್ತು! ಇಬ್ಬರೂ ತಮ್ಮ ಬಗ್ಗೆ ಹಬ್ಬಿದ ಸುದ್ದಿಯನ್ನು ತಳ್ಳಿ ಹಾಕಿದ್ದರು. ಆದರೆ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ವಿಷಯ ಜಗಜ್ಜಾಹೀರಾಗಿತ್ತು. ಸಿಲ್ ಸಿಲಾ ನಿರ್ದೇಶಕ ಯಶ್ ಛೋಪ್ರಾ ಕೂಡಾ ಒಂದು ಸಂದರ್ಶನದಲ್ಲಿ ಇಬ್ಬರ ನಡುವಿನ ಅಫೇರ್ ಅನ್ನು ಖಚಿತಪಡಿಸಿದ್ದರು!

ಹೀಗೆಯೇ ರೇಖಾ, ಅಮಿತಾಬ್ ನಡುವಿನ ಅಫೇರ್ ಗಾಸಿಫ್ ಬೇರೆ, ಬೇರೆ ರೂಪು ಪಡೆಯುತ್ತಾ ಮಾಧ್ಯಮಗಳ ಹೆಡ್ ಲೈನ್ಸ್ ಆಗತೊಡಗಿತ್ತು. ಬಚ್ಚನ್, ರೇಖಾ ರಹಸ್ಯವಾಗಿ ಮದುವೆಯಾಗಿದ್ದಾರೆಂಬುದೂ ಕೂಡಾ ದೊಡ್ಡ ಸುದ್ದಿಯಾಗಿತ್ತು. ಈ ಎಲ್ಲಾ ಊಹಾಪೋಹಗಳಿಗೆ ಹೆಚ್ಚು ಇಂಬು ನೀಡಿದ್ದು ರೇಖಾ ಅವರು ರಿಷಿ ಕಪೂರ್ ಮತ್ತು ನೀತೂ ಸಿಂಗ್ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದು!

ಹೌದು ರೇಖಾ ಅಂದು ಹಣೆಗೆ ಸಿಂಧೂರ ಮತ್ತು ಕೊರಳಲ್ಲಿ ಮಾಂಗಲ್ಯ ಸೂತ್ರ ಧರಿಸಿ ಬಂದ ಕಾರಣ ಮದುವೆ ಮಂಟಪದಲ್ಲಿ ಎಲ್ಲರ ಗಮನ ಸೆಳೆದಿತ್ತು. ರೇಖಾ “ಶ್ರೀಮತಿ”ಯ ಲುಕ್ ನಲ್ಲಿ ಬಂದಿರುವುದು ಚರ್ಚೆಗೂ ಗ್ರಾಸವಾಯಿತು.

ತದನಂತರ ಸಿನಿಮಾ ಸೆಟ್ ನಲ್ಲಿಯೂ ಅಮಿತಾಬ್ ಬಳಿ ತೆರಳಿ ಸಹಜವಾಗಿಯೇ ಮಾತನಾಡಿಸುತ್ತಿದ್ದರು..ಇದು ಮತ್ತಷ್ಟು ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಯಾಕೆಂದರೆ ಎಲ್ಲರೂ ಜಯಾ ಹೇಗೆ ಇದನ್ನೆಲ್ಲಾ ಸಹಿಸಿಕೊಳ್ಳುತ್ತಿರಬಹುದು ಎಂಬ ಬಗ್ಗೆಯೇ ಮಾತನಾಡುತ್ತಿದ್ದರು.

ಜಯಾ ಬಚ್ಚನ್ ವಿಷಯ ತಿಳಿದ ಮೇಲೆ ಮಾಡಿದ್ದೇನು ಗೊತ್ತಾ?

ಸಿಂಧೂರ, ಮಂಗಳ ಸೂತ್ರ ಧರಿಸಿ ಬಂದ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗಿ, ಚರ್ಚೆಯಾದ ಮೇಲೆ ಜಯಾ ಬಚ್ಚನ್ ನಟಿ ರೇಖಾ ಅವರನ್ನು ನೇರವಾಗಿ ಊಟಕ್ಕಾಗಿ ಮನೆಗೆ ಆಹ್ವಾನ ನೀಡಿದ್ದರಂತೆ. ಅಂದಿನ ಡಿನ್ನರ್ ವೇಳೆ ಏನ್ ಬೇಕಾದ್ರೂ ಆಗಲಿ ನಾನು ಯಾವುದೇ ಕಾರಣಕ್ಕೂ ನನ್ನ ಗಂಡ(ಅಮಿತಾಬ್ ) ನನ್ನು ಬಿಟ್ಟುಕೊಡಲಾರೆ ಎಂದು ಕಡ್ಡಿಮುರಿದಂತೆ ಹೇಳಿ ಬಿಟ್ಟಿದ್ದರಂತೆ. ಅಷ್ಟೇ ಅಲ್ಲ ಈ ವಿಷಯವನ್ನು ಜಯಾ ಕೂಡಾ ಮುಚ್ಚಿಟ್ಟಿದ್ದರಂತೆ. ಕೊನೆಗೆ ರೇಖಾಗೆ ಮನವರಿಕೆಯಾಗತೊಡಗಿದ್ದು, ಒಂದೋ ನಾನು ಮಿಸಸ್ ಬಚ್ಚನ್ ಆಗಬೇಕು ಇಲ್ಲವೇ ಏಕಾಂಗಿಯಾಗಿ ಉಳಿಯಬೇಕು ಎಂದು ನಿರ್ಧರಿಸಿದ್ದರಂತೆ!

ಸುಮಾರು 1984ರ ಹೊತ್ತಿಗೆ ಫಿಲ್ಮ್ ಫೇರ್ ಮ್ಯಾಗಜೀನ್ ಗೆ ರೇಖಾ ನೀಡಿದ್ದ ಸಂದರ್ಶನದಲ್ಲಿ, ತನ್ನ ಹಾಗೂ ಅಮಿತಾಬ್ ನಡುವಿನ ಸಂಬಂಧವನ್ನು ತಳ್ಳಿ ಹಾಕಿದ್ದರು.

ಯಾಕೆ ಇದನ್ನೆಲ್ಲಾ ಮಾಡಬೇಕು? ಅವರು ಅವರ(ಬಚ್ಚನ್) ಇಮೇಜ್, ಕುಟುಂಬ, ಮಕ್ಕಳನ್ನು ರಕ್ಷಿಸಿಕೊಳ್ಳುತ್ತಾರೆ. ನನ್ನ ಪ್ರೀತಿಯ ಬಗ್ಗೆಯಾಗಲಿ, ಅವರು ನನ್ನ ಪ್ರೀತಿಸುತ್ತಿರುವ ವಿಷಯದ ಬಗ್ಗೆ ಸಾರ್ವಜನಿಕರು ಯಾಕೆ ತಿಳಿದುಕೊಳ್ಳಬೇಕು? ನಾನು ಅವರನ್ನು ಪ್ರೀತಿಸುತ್ತೇನೆ, ಅವರು ನನ್ನ ಪ್ರೀತಿಸುತ್ತಾರೆ. ಒಂದು ವೇಳೆ ಈ ಬಗ್ಗೆ ಅವರು ಪ್ರತಿಕ್ರಿಯಿಸಬೇಕು ಎಂದಿದ್ದರೆ ಅದು ಅವರು ಖಾಸಗಿಯಾಗಿ ಹೇಳುತ್ತಾರೆ. ನಾನು ಇದರಿಂದ ತುಂಬಾ ನಿರಾಸೆಗೊಳಗಾಗಿದ್ದೇನೆ ಎಂದು ರೇಖಾ ಹೇಳಿದ್ದರು. ಮಿಸ್ಟರ್ ಬಚ್ಚನ್ ಈಗಲೂ ಹಳೇ ಫ್ಯಾಶನ್ ವ್ಯಕ್ತಿ, ಅವರು ಯಾರ ಮನಸ್ಸನ್ನೂ ನೋಯಿಸುವುದಿಲ್ಲ, ಹೀಗಾಗಿ ಅವರು ಯಾಕೆ ಅವರ ಪತ್ನಿ ಮನಸ್ಸನ್ನು ನೋಯಿಸುತ್ತಾರೆ ಎಂದು ಮಾರ್ಮಿಕವಾಗಿ ರೇಖಾ ಹೇಳಿದ್ದರು.

ಬಚ್ಚನ್ ಯಾವತ್ತೂ ತುಟಿ ಬಿಚ್ಚಿಲ್ಲ!

ಇಷ್ಟೆಲ್ಲಾ ಸುದ್ದಿಗಳು ಹರಿದಾಡಿದರೂ ಕೂಡಾ ಅಮಿತಾಬ್ ಬಚ್ಚನ್ ಯಾವತ್ತೂ ಸಾರ್ವಜನಿಕವಾಗಿ ಇಬ್ಬರ ನಡುವಿನ ಪ್ರೀತಿಯ ಬಗ್ಗೆ ಯಾವುದೇ ಹೇಳಿಕೆಯನ್ನು ಕೊಟ್ಟಿಲ್ಲವಾಗಿತ್ತು. ಮತ್ತೊಂದೆಡೆ ರೇಖಾ ತಾನು ಪ್ರೀತಿಸುತ್ತಿರುವುದನ್ನು ಒಪ್ಪಿಕೊಂಡಿದ್ದರು. ಈ ಇಬ್ಬರು ತಾರಾ ಜೋಡಿ ಜತೆಯಾಗಿ ನಟಿಸಿದ್ದ ಕೊನೆಯ ಚಿತ್ರ ಬಾಲಿವುಡ್ ನ ಸಿಲ್ ಸಿಲಾ!

ರೇಖಾಳ ಮೂಲ ಹೆಸರು ಭಾನುರೇಖಾ ಜೆಮಿನಿ ಗಣೇಶನ್..1954ರ ಅಕ್ಟೋಬರ್ 10ರಂದು ಜನಿಸಿದ್ದ ಭಾನುರೇಖಾ ಅವರ ತಂದೆ ತಮಿಳು ಚಿತ್ರರಂಗದ ಖ್ಯಾತ ನಟ ಜೆಮಿನಿ ಗಣೇಶನ್, ತಾಯಿ ಪ್ರಸಿದ್ಧ ತೆಲುಗು ನಟಿ ಪುಷ್ಪವಲ್ಲಿ.

ಮುಖೇಶ್ ಜೊತೆ ವಿವಾಹವಾದ ರೇಖಾ…

ಅಮಿತಾಬ್ ಹಾಗೂ ರೇಖಾ ನಡುವಿನ ಪ್ರೇಮ್ ಕಹಾನಿಗೆ ತೆರೆ ಬಿದ್ದ ಮೇಲೆ, 1990ರ ಹೊತ್ತಿಗೆ ರೇಖಾ ಮದುವೆಯಾಗಲು ನಿರ್ಧರಿಸಿದ್ದರು. ಈ ಬಗ್ಗೆ ಇತ್ತೀಚೆಗೆ ಬಿಡುಗಡೆಗೊಂಡಿರುವ ರೇಖಾ ಅವರ ಜೀವನ ಚರಿತ್ರೆಯಲ್ಲಿ ಮದುವೆ ನಡೆದ ಬಗ್ಗೆ ಹೇಳಿಕೊಂಡಿದ್ದಾರೆ.

ರೇಖಾ ಉದ್ಯಮಿ ಮುಖೇಶ್ ಜೊತೆ ವಿವಾಹವಾಗಿದ್ದರು.ಲಂಡನ್ ನಲ್ಲಿ ತಂಗಿದ್ದ ಈ ಜೋಡಿಗೆ ಆರಂಭದಲ್ಲಿ ಎಲ್ಲವೂ ತುಂಬಾ ಸುಂದರವಾಗಿತ್ತು. ಆದರೆ ಒಂದು ವಾರ ಕಳೆಯುವಷ್ಟರಲ್ಲಿ ರೇಖಾಗೆ ಆಘಾತವಾಗಿತ್ತು! ಯಾಕೆಂದರೆ ಮುಖೇಶ್ ದಿನಂಪ್ರತಿ ಹಲವಾರು ಮಾತ್ರೆಗಳನ್ನು ಸೇವಿಸುತ್ತಿರುವುದು ಗಮನಕ್ಕೆ ಬಂದಿತ್ತು. ಅಲ್ಲದೇ ಮುಖೇಶ್ ಯಾವುದೋ ಸಮಸ್ಯೆಯಲ್ಲಿದ್ದಿರಬೇಕೆಂದು ಶಂಕಿಸಿದ್ದರು. ಒಂದು ದಿನ ನಿಸ್ತೇಜ ಕಂಗಳಿಂದ ರೇಖಾಳನ್ನು ದಿಟ್ಟಿಸುತ್ತಿರುವಾಗ..ನನ್ನೊಳಗೆ ‘ಎಬಿ’(ಅಮಿತಾಬ್ ಬಚ್ಚನ್) ಇದ್ದಾರೆ ಎಂದು ಹೇಳಿದ್ದರಂತೆ!

ಸುಮಾರು 3 ತಿಂಗಳು ಕಳೆಯುವಷ್ಟರಲ್ಲಿ ತನ್ನ ಗಂಡನಿಗೆ ಮಾನಸಿಕ ಅಸ್ವಸ್ಥತೆ ಇರುವುದು ಗೊತ್ತಾಗುತ್ತೆ. ಕೊನೆಗೂ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ರೇಖಾಗೆ ಸಾಧ್ಯವಾಗಿಲ್ಲ. ಅಂತೂ ಮುಖೇಶ್ ಹಾಗೂ ಅವರ ಮನೆಯವರಿಂದ ಅಂತರ ಕಾಯ್ದುಕೊಳ್ಳಲು ರೇಖಾ ನಿರ್ಧರಿಸಿದ್ದರು. ಅಲ್ಲದೇ ಅವರ ಮನೆಯವರ ದೂರವಾಣಿ ಕರೆಯನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದರು.

ಒಂದು ದಿನ ಮಾನಸಿಕ ಒತ್ತಡಕ್ಕೆ, ಅಸ್ವಸ್ಥತೆಗೆ ಒಳಗಾಗಿದ್ದ ಗಂಡ ಮುಖೇಶ್ ತನ್ನ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದರು. ಕೇವಲ ಏಳು ತಿಂಗಳೊಳಗಾಗಿ ಇಷ್ಟೆಲ್ಲಾ ಘಟನೆ ರೇಖಾಳ ಬಾಳಲ್ಲಿ ನಡೆದು ಹೋಗಿತ್ತು. ಹೌದು ರೇಖಾ ತನ್ನ ಜೀವನದುದ್ದಕ್ಕೂ ಪ್ರೀತಿಯ ವಿಷಯದಲ್ಲಿ ದುರದೃಷ್ಟವಂತೆ!

ಒಂದು ಊಹಾಪೋಹದ ಪ್ರಕಾರ ರೇಖಾ ತನ್ನ 19ನೇ ವಯಸ್ಸಿನಲ್ಲಿ ನಟ ವಿನೋದ್ ಮೆಹ್ರಾ ಜತೆ ವಿವಾಹವಾಗಿದ್ದರು ಎಂಬುದು! ಬಳಿಕ ಈ ಬಗ್ಗೆ ಇದು ಸತ್ಯಕ್ಕೆ ದೂರವಾದ ವಿಷಯ ಎಂದು ರೇಖಾ ಸ್ಪಷ್ಟನೆ ಕೊಟ್ಟಿದ್ದರು.

ಯಶ್ ಕೊಹ್ಲಿ ಜತೆ ರೇಖಾ ರಹಸ್ಯವಾಗಿ ಮದುವೆಯಾಗಿದ್ದಾರೆಂದು ಗುಲ್ಲೆದ್ದಿತ್ತು. ಅದಾದ ನಂತರ ಬಾಲಿವುಡ್ ನಟ ಜಿತೇಂದ್ರ ಜತೆ ರೇಖಾಗೆ ಸಂಬಂಧ ಇತ್ತು ಎಂಬುದು ಒಂದು ಗಾಸಿಫ್.

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next