Advertisement

Congress: ಕಲಬುರಗಿ ದಕ್ಷಿಣಕ್ಕೆ ಅಲ್ಲಮಪ್ರಭು, ಅಫಜಲಪುರಕ್ಕೆ 80 ವಯಸ್ಸಿನ ಎಂ.ವೈ.ಗೆ ಟಿಕೆಟ್

02:21 PM Apr 06, 2023 | Team Udayavani |

ಕಲಬುರಗಿ: ಜಿಲ್ಲೆಯ ಒಂಭತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಸ್ಪರ್ಧಾ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಇನ್ನೊಂದು ಕ್ಷೇತ್ರ ಮಾತ್ರ ಬಾಕಿ ಉಳಿದಿವೆ.

Advertisement

ಗುರುವಾರ ಕಾಂಗ್ರೆಸ್ ತನ್ನ ಎರಡನೇ ಪಟ್ಟಿ ಪ್ರಕಟಿಸಿದ್ದು, ಇದರಲ್ಲಿ ಕಲಬುರಗಿ ದಕ್ಷಿಣಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಹಾಗೂ ಅಫಜಲಪುರಕ್ಕೆ ಹಾಲಿ ಶಾಸಕ ಎಂ.ವೈ.‌ಪಾಟೀಲ್ ಅವರಿಗೆ ಮಣೆ ಹಾಕಲಾಗಿದೆ.

ಮೊದಲ ಪಟ್ಟಿಯಲ್ಲಿ ಜೇವರ್ಗಿ ಕ್ಷೇತ್ರಕ್ಕೆ ಡಾ.‌ಅಜಯಸಿಂಗ್, ಚಿತ್ತಾಪುರದಿಂದ ಪ್ರಿಯಾಂಕ್ ಖರ್ಗೆ, ಸೇಡಂದಿಂದ ಡಾ. ಶರಣಪ್ರಕಾಶ ಪಾಟೀಲ್, ಚಿಂಚೋಳಿಯಿಂದ ಸುಭಾಷ ರಾಠೋಡ, ಕಲಬುರಗಿ ಉತ್ತರ ಕ್ಷೇತ್ರದಿಂದ ಖನೀಜ್ ಫಾತೀಮಾ, ಆಳಂದದಿಂದ ಬಿ.ಆರ್. ಪಾಟೀಲ್ ಅವರನ್ನು ಅಂತಿಮಗೊಳಿಸಿದ್ದರೆ, ಗುರುವಾರ ಪ್ರಕಟಿಸಲಾದ ಎರಡನೇ ಪಟ್ಟಿಯಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಹಾಗೂ ಅಫಜಲಪುರಕ್ಕೆ ಶಾಸಕ ಎಂ.ವೈ ಪಾಟೀಲ್ ಅವರನ್ನು ಅಂತಿಮಗೊಳಿಸಲಾಗಿದೆ.

ಕಲಬುರಗಿ ದಕ್ಷಿಣಕ್ಕೆ ಬೀಗರ ನಡುವೆ ಟಿಕೆಟ್ ಗಾಗಿ ಪೈಪೋಟಿ ಏರ್ಪಟ್ಟಿತ್ತು. ಯುವ ಉದ್ಯಮಿ ಸಂತೋಷ ಬಿಲಗುಂದಿ ಹಾಗೂ ಅಲ್ಲಮಪ್ರಭು ಪಾಟೀಲ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಇದರ ನಡುವೆ ಮಾಜಿ ಮೇಯರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣು ಮೋದಿ ಪ್ರಬಲ ಆಕಾಂಕ್ಷಿಯಾಗಿದ್ದರು. ಕೊನೆಗೆ ಅಳೆದು ತೂಗಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಟಿಕೆಟ್ ಅಂತಿಮಗೊಳಿಸಲಾಗಿದ್ದು, ಪ್ರಬಲ ಪೈಪೋಟಿ ನೀಡುವುದನ್ನು ಅವಲೋಕಿಸಿ ಹಾಗೂ ಸಮೀಕ್ಷೆ ಆಧರಿಸಿ ಟಿಕೆಟ್ ನೀಡಲಾಗಿದೆ.

ಇದನ್ನೂ ಓದಿ:ಚಿತ್ರೀಕರಣಕ್ಕೆ ರೆಡಿಯಾದ ‘ಯುವ’

Advertisement

ಕಳೆದ 2018ರ ಚುನಾವಣೆಯಲ್ಲಿ ಐದು ಸಾವಿರ ಮತಗಳ ಅಂತರದಿಂದ ಪರಾಭವಗೊಂಡ ನಂತರ ಕಳೆದ ಐದು ವರ್ಷಗಳುದ್ದಕ್ಕೂ ಕ್ಷೇತ್ರದಾದ್ಯಂತ ಸಂಚರಿಸಿ ಪಕ್ಷ ಸಂಘಟಿಸಿರುವುದನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿದೆ ಎಂದು ಅದರಲ್ಲೂ ಬಿಜೆಪಿ ವಶದಲ್ಲಿರುವ ಕಲಬುರಗಿ ದಕ್ಷಿಣ ಕಾಂಗ್ರೆಸ್ ಬಾವುಟ ಹಾರಿಸಲು ಸೂಕ್ತ ಅಭ್ಯರ್ಥಿ ಅಲ್ಲಮಪ್ರಭು ಎಂಬುದನ್ನು ಅವಲೋಕಿಸಿ ಟಿಕೆಟ್ ನೀಡಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಮಗನ ಬದಲು ತಂದೆಗೆ ಮಣೆ: ಅಫಜಲಪುರ ಶಾಸಕ ಎಂ.ವೈ ಪಾಟೀಲ್ ಅವರಿಗೆ ಈಗ 80 ವರ್ಷ. ವಯಸ್ಸಿನ ಕಾರಣ ತಾವು ಸ್ಪರ್ಧಿಸುವುದಿಲ್ಲ.‌ ಹೀಗಾಗಿ‌‌ ಮಗನಾಗಿರುವ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರುಣಕುಮಾರ ಪಾಟೀಲ್ ಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದ್ದರು.

ಇದರ ನಡುವೆ ಮತ್ತೊಬ್ಬ ಮಗ ಡಾ. ಸಂಜು ಪಾಟೀಲ್ ಟಿಕೆಟ್ ಗೆ ಅರ್ಜಿ ಹಾಕಿದ್ದರು. ಹೀಗಾಗಿ ಟಿಕೆಟ್ ಗೊಂದಲ ಗೂಡಾಗಿತ್ತು. ಅದಲ್ಲದೇ ಅರುಣ ಪಾಟೀಲ್ ಗೆ ಟಿಕೆಟ್ ನೀಡುವ ಬಗ್ಗೆ ವಿರೋಧ ವ್ಯಕ್ತವಾಗಿತ್ತು.‌ ಆದರೆ ಎಂ.ವೈ ಪಾಟೀಲ್ ರಿಗೆ ಮತ್ತೆ ಟಿಕೆಟ್ ನೀಡಿದರೆ ಪಕ್ಷ ಗೆಲ್ಲುತ್ತದೆ ಎಂಬುದನ್ನು ಅರಿತು ಮಣೆ ಹಾಕಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇನ್ನೊಂದು ಕ್ಷೇತ್ರ ಬಾಕಿ: ಜಿಲ್ಲೆಯ ಕಲಬುರಗಿ ಗ್ರಾಮೀಣ ಮೀಸಲು ಕ್ಷೇತ್ರಕ್ಕೆ ಮಾತ್ರ ಟಿಕೆಟ್ ಘೋಷಣೆ ಮಾಡಿಲ್ಲ. ಮಾಜಿ ಸಚಿವ ರೇವು ನಾಯಕ ಬೆಳಮಗಿ ಈಚೆಗೆ ಕಾಂಗ್ರೆಸ್ ಸೇರಿದ್ದು, ಇವರ ಹಾಗೂ ಮಾಜಿ ಸಚಿವ ಜಿ. ರಾಮಕೃಷ್ಣ ಮಗ ವಿಜಯಕುಮಾರ ರಾಮಕೃಷ್ಣ ನಡುವೆ ಪೈಪೋಟಿ ಏರ್ಪಟ್ಟಿದೆ.‌ ಈಗಾಗಿ ಕೊನೆ ಘಳಿಗೆವರೆಗೂ ಕಾದು ನೋಡಲು ಮುಂದಾಗಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next