Advertisement

ಬೆಂಗಳೂರಲ್ಲೇ ಏರೋ ಇಂಡಿಯಾ ಶೋ

06:00 AM Sep 09, 2018 | Team Udayavani |

ಬೆಂಗಳೂರು: ಲೋಹದ ಹಕ್ಕಿಗಳ ಹಾರಾಟಕ್ಕೆ ವಿಶ್ವ ಪ್ರಸಿದ್ಧಿ ಪಡೆದಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ 2019ರ ಫೆ.20ರಿಂದ 24ರ ವರೆಗೆ ಬೆಂಗಳೂರಿನಲ್ಲೇ ನಡೆಯಲಿದೆ.

Advertisement

ವೈಮಾನಿಕ ಪ್ರದರ್ಶನ ಸ್ಥಳಾಂತರ ವಿಚಾರದಲ್ಲಿ ಕರ್ನಾಟಕಕ್ಕೆ ಗೆಲುವು ಸಿಕ್ಕಿದ್ದು, 2019ರ ಫೆಬ್ರವರಿಯಲ್ಲಿ ಬೆಂಗಳೂರಿನ ಯಲಂಹಕದ ವಾಯುನೆಲೆಯಲ್ಲಿ ಪ್ರದರ್ಶನ ನಡೆಯಲಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯ ಶನಿವಾರ ಅಧಿಕೃತವಾಗಿ ಮಾಹಿತಿ ನೀಡಿದೆ.

ರಕ್ಷಣಾ ಇಲಾಖೆಯ ಮೇಲೆ ಒತ್ತಡ ತಂದು ಉತ್ತರ ಪ್ರದೇಶದ ರಾಜಧಾನಿ ಲಕ್ನೋಗೆ ವೈಮಾನಿಕ ಪ್ರದರ್ಶನ ಸ್ಥಳಾಂತರಿಸಿಕೊಳ್ಳಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಯತ್ನಿಸಿದ್ದರು ಎಂದು ಹೇಳಲಾಗಿತ್ತು. ಆದರೆ, ರಾಜ್ಯ ಸರ್ಕಾರ ಮತ್ತು ಇಲ್ಲಿನ ವಿವಿಧ ಸಂಘಟನೆಗಳು, ವಿದ್ಯಾರ್ಥಿಗಳು, ನಾಗರಿಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೂ ಬೆಂಗಳೂರಿನಲ್ಲೇ ಏರೋ ಇಂಡಿಯಾ ಪ್ರದರ್ಶನ ಉಳಿಸಿಕೊಳ್ಳುವ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಲಕ್ನೋಗೆ ಸ್ಥಳಾಂತವಾಗುತ್ತದೆನ್ನುವ ಬಗ್ಗೆ ತಿಂಗಳ ಹಿಂದೆಯೇ ಸಾಕಷ್ಟು ಸುದ್ದಿಯಾಗಿತ್ತು. ಆದರೆ, ಕೇಂದ್ರ ಸರ್ಕಾರ ಅಥವಾ ರಕ್ಷಣಾ ಸಚಿವಾಲಯ ಇದನ್ನು ಒಪ್ಪಿರಲಿಲ್ಲ. ಏರೋ ಇಂಡಿಯಾ ಶೋ ಬೆಂಗಳೂರಿನಲ್ಲೇ ಉಳಿಸಿಕೊಳ್ಳುವ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಪ್ರಧಾನಿಯವರಿಗೆ ಪತ್ರ ಬರೆದು ಸ್ಥಳಾಂತರಿಸದಂತೆ ಕೋರಿಕೊಂಡಿದ್ದರು. ಜತೆಗೆ ಕಾಂಗ್ರೆಸ್‌ನ ಎನ್‌ಎಸ್‌ಯುಐ ಕೂಡ ಇದನ್ನು ಖಂಡಿಸಿತ್ತು.

ಏರೋ ಶೋ ಸ್ಥಳಾಂತರ ಸಂಬಂಧ ಸತತ ಒಂದು ತಿಂಗಳಿಗೂ ಅಧಿಕ ಕಾಲ ಕೇಂದ್ರ  ಹಾಗೂ ರಾಜ್ಯ ಸರ್ಕಾರದ ನಡುವೆ ಶಿಥಲ ಸಮರ ನಡೆದಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವರು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದು, ಲಕ್ನೋಗೆ ಏರೋ ಶೋ ಸ್ಥಳಾಂತರಿಸುವಂತೆ ಮನವಿ ಮಾಡಿದ್ದರು. ಅಂತಿಮವಾಗಿ ಕೇಂದ್ರ ಸರ್ಕಾರವು ರಾಜ್ಯದ ಒತ್ತಡಕ್ಕೆ ಮಣಿದಿದೆ. ಬೆಂಗಳೂರಿನಲ್ಲೇ ಏರೋ ಶೋ ನಡೆಸಲು ನಿರ್ಧರಿಸಿದೆ.

Advertisement

ಇದು ಬರೀ ಶೋ ಅಲ್ಲ
ರಕ್ಷಣಾ ಕ್ಷೇತ್ರದ ಸುಧಾರಿತ ಉತ್ಪನ್ನಗಳ ಪ್ರದರ್ಶನ, ಹೊಸ ಸಂಶೋಧನೆಗಳ ಮಾಹಿತಿ ವಿನಿಮಯ ಹಾಗೂ ವ್ಯವಹಾರ ಉತ್ಪನ್ನಗಳ ಖರೀದಿ, ಮಾರಾಟಕ್ಕೂ ಏರೋ ಶೋ ಸಾಕ್ಷಿ. ಭಾರತೀಯ ಸೇನೆ, ರಕ್ಷಣಾ ವಸ್ತುಗಳ ಪ್ರದರ್ಶನ ಸಂಸ್ಥೆ ಪ್ರತಿ ಎರಡು ವರ್ಷಕ್ಕೊಮ್ಮೆ ಏರ್ಪಡಿಸುವ ವೈಮಾನಿಕ ಪ್ರದರ್ಶನಕ್ಕೆ 22 ವರ್ಷಗಳ ಇತಿಹಾಸ ಇದೆ. ಈವರೆಗೆ 11 ಏರ್‌ ಶೋ ಯಲಹಂಕದಲ್ಲೇ ನಡೆದಿದೆ. ಎಚ್‌ಎಎಲ್‌, ಡಿಆರ್‌ಡಿಒ, ಎಡಿಎ, ಬೆಲ್‌, ಎನ್‌ಎಎಲ್‌ ಸೇರಿ ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಲವು ಸಂಸ್ಥೆಗಳ ಜತೆಗೆ ಸ್ಟಾರ್ಟ್‌ಅಪ್‌ ಸಂಸ್ಥೆಗಳು ಭಾಗವಹಿಸಲಿವೆ. ದೇಶ ವಿದೇಶಗಳ ಯುದ್ಧ ವಿಮಾನ, ಹೆಲಿಕಾಪ್ಟರ್‌ ನಿಲುಗಡೆಗೆ ಬೇಕಾದ ಹ್ಯಾಂಗರ್‌ ವ್ಯವಸ್ಥೆ ಬೆಂಗಳೂರು ಹೊರತುಪಡಿಸಿ ದೇಶದ ಬೇರೆಲ್ಲೂ ಇಲ್ಲ.

ರಾಜಕೀಯ ಲೆಕ್ಕಾಚಾರ
ಏರೋ ಶೋ ಉತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡುವುದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ ಎಂಬ ವರದಿ ಹಾಗೂ ಕಾಂಗ್ರೆಸ್‌, ಜೆಡಿಎಸ್‌ ಇದನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದ್ದರಿಂದ ಬೆಂಗಳೂರಿನಲ್ಲೇ ಏರೋ ಶೋ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಏರೋ ಇಂಡಿಯಾ ಶೋ ಈ ಬಾರಿಯೂ ಬೆಂಗಳೂರಿನಲ್ಲೇ ನಡೆಯಲಿದೆ. ಬೆಂಗಳೂರಿನಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರವಾಗುತ್ತದೆ ಎಂಬ ಸುದ್ದಿ ಆತಂಕ ತಂದಿತ್ತು. ಈಗ ರಕ್ಷಣಾ ಸಚಿವಾಲಯ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಕೇಂದ್ರದ ಈ ನಿರ್ಧಾರ ಖುಷಿ ತಂದಿದೆ.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ವಿನಾಕಾರಣ ಕಾಂಗ್ರೆಸ್‌ ಮುಖಂಡರು ವಿವಾದ ಸೃಷ್ಟಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಏರೋ ಶೋ ಬೇರೆ ರಾಜ್ಯಕ್ಕೆ ಸ್ಥಳಾಂತರಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡಿದ ಕಾಂಗ್ರೆಸ್‌ ನಾಯಕರು ಕ್ಷಮೆ ಕೇಳಬೇಕು. ಉದ್ದೇಶ ಪೂರ್ವಕವಾಗಿ ಕೇಂದ್ರ ಸರ್ಕಾರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿ, ಗೊಂದಲ ಸೃಷ್ಟಿಸುತ್ತಿರುವುದು ಈಗ ದೃಢಪಟ್ಟಿದೆ.
– ಬಿ.ಎಸ್‌.ಯಡಿಯೂರಪ್ಪ, ವಿಧಾನ ಸಭೆ ಪ್ರತಿಪಕ್ಷದ ನಾಯಕ

ನಮ್ಮೆಲ್ಲರ ಹೋರಾಟದಿಂದ ಕೇಂದ್ರ ಸರ್ಕಾರ ತಡವಾಗಿಯಾದರೂ ಎಚ್ಚೆತ್ತುಕೊಂಡಿದೆ. ಬೆಂಗಳೂರಿನಲ್ಲಿ ಏರ್‌ಶೋ ನಡೆಯಬೇಕೆನ್ನುವುದು ರಾಜಕೀಯ ಉದ್ದೇಶಕ್ಕಲ್ಲ. ಇದೊಂದು  ಪ್ರಮುಖ ಕಾರ್ಯಕ್ರಮವಾಗಿದ್ದು, ವಿಶ್ವಮಟ್ಟದಲ್ಲಿ ಬೆಂಗಳೂರು ಗುರುತಿಸಿಕೊಳ್ಳುವಂತೆ ಮಾಡಿದೆ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷಘಿಆ

Advertisement

Udayavani is now on Telegram. Click here to join our channel and stay updated with the latest news.

Next