Advertisement

Adyanadka; ಕರ್ಣಾಟಕ ಬ್ಯಾಂಕ್‌ನಲ್ಲಿ ಕಳ್ಳತನ: ನಗದು, ಚಿನ್ನಾಭರಣ ಪತ್ತೆಗೆ ಮುಂದುವರಿದ ಶೋಧ

09:57 PM Mar 06, 2024 | Team Udayavani |

ವಿಟ್ಲ:ಅಡ್ಯನಡ್ಕ ಕರ್ಣಾಟಕ ಬ್ಯಾಂಕ್‌ ಶಾಖೆಯಿಂದ ಕದ್ದ ಹಣವನ್ನು ಕೇರಳದ ಮೈದಾನವೊಂದರಲ್ಲಿ ಹೂತಿಟ್ಟ ಕಳ್ಳರಿಗೆ ಲಾಕರ್‌ ತುಂಡರಿಸಲು ವೆಲ್ಡಿಂಗ್‌ ಕೆಲಸದಲ್ಲಿ ನೈಪುಣ್ಯತೆ ಹೊಂದಿದ ವ್ಯಕ್ತಿಯನ್ನು ಬಳಸಿಕೊಂಡಿದ್ದರೆಂಬ ಮಾಹಿತಿ ಪೊಲೀಸ್‌ ವಶದಲ್ಲಿರುವ ವ್ಯಕ್ತಿಗಳ ತನಿಖೆಯಿಂದ ಬಹಿರಂಗಗೊಂಡಿದೆ.

Advertisement

ಕಳ್ಳತನದಲ್ಲಿ ಭಾಗಿಯಾದ ಕೇರಳದ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು ನಗದು ಹಾಗೂ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಕಾಸರಗೋಡು ಕಡೆಯ ಮೂವರು ಕಳ್ಳರ ಜತೆಗೆ ಬಾಯಾರು ಗ್ರಾಮದ ವ್ಯಕ್ತಿಯೊಬ್ಬ ಭಾಗಿಯಾಗಿದ್ದಾನೆ. ಇವನನ್ನು ಬಂಧಿಸುವ ಜತೆಗೆ ಮನೆಯವರಲ್ಲಿದ್ದ ಬಂಗಾರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆನ್ನಲಾಗಿದೆ.

ಬಾಯಾರು ನಿವಾಸಿ ಊರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳನ್ನು ಖರೀದಿಸಲು ತಯಾರಾಗಿದ್ದಾನೆ. ಈ ನಡುವೆ ಅಡ್ಯನಡ್ಕಕ್ಕೆ ಆಗಮಿಸಿ ಮದ್ಯ ಸೇವನೆ ಮಾಡಿ ನಶೆಯಲ್ಲಿ ಬ್ಯಾಂಕ್‌ಗೆ ನುಗ್ಗಿ ಹಣ ಕಳವು ಮಾಡಿದ್ದು, ಯಾರು ಏನು ಮಾಡಿದರು ಎಂದು ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಇದನ್ನು ಪೊಲೀಸರಿಗೆ ಸ್ಥಳೀಯರು ತಿಳಿಸಿದ ಹಿನ್ನೆಲೆಯಲ್ಲಿ ಈತ ಸಿಕ್ಕಿಬಿದಿದ್ದಾನೆ ಎನ್ನಲಾಗಿದೆ.

ಪ್ರಥಮ ಪ್ರಯತ್ನದಲ್ಲಿ ವಿಫಲ
ಬಾಯಾರಿನ ಈತ ಈವರೆಗೆ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರಲಿಲ್ಲ ಎನ್ನಲಾಗಿದೆ. ಹಣ ಕಳ್ಳತನಗೈಯುವಲ್ಲಿ ಸಫಲನಾಗಿದ್ದರೂ, ಅದನ್ನು ತನ್ನದಾಗಿಸುವ ಪ್ರಥಮ ಪ್ರಯತ್ನದಲ್ಲಿ ವಿಫಲನಾಗಿದ್ದಾನೆ.
ಅಡ್ಯನಡ್ಕ ಬ್ಯಾಂಕ್‌ ಕಳ್ಳತನ ಪ್ರಕರಣ ಫೆ. 7ರ ರಾತ್ರಿ ನಡೆದಿದ್ದು, ಫೆ.8ರಂದು ಬೆಳಗ್ಗೆ ಬ್ಯಾಂಕ್‌ ಅಧಿಕಾರಿಗಳು ಕಚೇರಿಗೆ ತೆರಳುವ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು. ಆ ಬಳಿಕ ಸ್ಥಳೀಯ ಇಬ್ಬರನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸುವ ಜತೆಗೆ ವಾಹನದ ಚಲನವಲನವನ್ನು ಸಿಸಿ ಕೆಮರಾಗಳ ಮೂಲಕ ಪತ್ತೆ ಹಚ್ಚಿದ್ದರು. ವಾರದ ಹಿಂದೆ ಇಬ್ಬರು ಪ್ರಮುಖ ರೂವಾರಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು, ಕದ್ದ ವಸ್ತುಗಳನ್ನು ನಾಲ್ಕು ಪಾಲು ಮಾಡಿಕೊಂಡಿರುವ ವಿಚಾರ ಆ ಸಂದರ್ಭದಲ್ಲಿ ತಿಳಿದು ಬಂದಿತ್ತು.

Advertisement

ಕೆಲವು ವರ್ಷಗಳಿಂದ ವೆಲ್ಡರ್‌ ಆಗಿ ಕೆಲಸ ನಿರ್ವಹಿಸುತ್ತಿರುವ ಬಾಯಾರು ಪೈವಳಿಕೆ ಗಾಳಿಯಡ್ಕ ನಿವಾಸಿ ಬ್ಯಾಂಕ್‌ ನ ಲಾಕರ್‌ಗಳನ್ನು ತುಂಡರಿಸಲು ಕಳ್ಳರ ಜತೆಗೆ ಸೇರಿಕೊಂಡಿದ್ದಾನೆ ಎಂಬುದು ಬಹಿರಂಗಗೊಂಡಿತ್ತು. ಲಾಕರ್‌ಗಳನ್ನು ತುಂಡರಿಸಿರುವ ಶೈಲಿಯನ್ನು ಗಮನಿಸಿದ ಪೊಲೀಸರಿಗೆ ಆಗಲೇ ಕಬ್ಬಿಣ ತುಂಡರಿಸಿ ನೈಪುಣ್ಯತೆ ಹೊಂದಿರುವ ವ್ಯಕ್ತಿ ಭಾಗಿಯಾಗಿರುವ ಅನುಮಾನ ಮೂಡಿದ್ದು, ತನಿಖೆಯಿಂದ ದೃಢ ಪಟ್ಟಿದೆ. ವೆಲ್ಡರ್‌ ಹಾಗೂ ಬ್ಯಾಂಕ್‌ನಲ್ಲಿ ಹಿಂದೆ ಇದ್ದ ಅಧಿಕಾರಿಯೊಬ್ಬರು ಸಂಬಂಧಿಕರಾಗಿದ್ದು, ಅವರಿಂದ ಮಾಹಿತಿ ಪಡೆಯಲಾಗಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ.

ಕಳ್ಳತನಗೈದ ನಗದು ಮತ್ತು ಚಿನ್ನಾಭರಣಗಳನ್ನು ಪೊಸಡಿ ಗುಂಪೆ ಗುಡ್ಡದ ತಪ್ಪಲಿನ ಸಜಂಕಿಲ ಸಮೀಪ ನಿರ್ಜನ ಪ್ರದೇಶದಲ್ಲಿರುವ ಆಟದ ಮೈದಾನವೊಂದರಲ್ಲಿ ಕಳ್ಳರು ಹೂತಿಟ್ಟಿದ್ದರೆನ್ನಲಾಗಿದೆ.

ಸ್ಥಳೀಯರು ವಾಲಿಬಾಲ್‌ ಆಡುವ ಸಂದರ್ಭದಲ್ಲಿ 3ರಿಂದ 4ಸಾವಿರ ರೂಗಳಿಗೆ ಬೆಟ್ಟಿಂಗ್‌ ನಿಲ್ಲುತ್ತಿದ್ದ ಈತನ ಮೇಲೆ ಅನುಮಾನಗೊಂಡ ಕೆಲವರು ಆತನನ್ನು ಪ್ರಶ್ನಿಸಿದಾಗ ತನಗೆ ಲಾಟರಿಯಲ್ಲಿ ಹಣ ಬಂದಿದೆ ಎಂದು ಹೇಳಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next