ಚಾಮರಾಜನಗರ: ವಕೀಲ ವೃತ್ತಿ ಶ್ರೇಷ್ಠ ವೃತ್ತಿಯಾಗಿದ್ದು, ಅದನ್ನು ವಕೀಲರು ಘನತೆಯಿಂದ ಕಾಪಾಡಿಕೊಂಡುಹೋಗುವ ಮೂಲಕ ವೃತ್ತಿಯ ಗೌರವ ಹೆಚ್ಚಿಸಬೇಕೆಂದು ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಸದಾಶಿವ ಸುಲ್ತಾನಪುರಿ ಹೇಳಿದರು.
ನಗರದ ಜಿಲ್ಲಾ ವಕೀಲರ ಸಂಘದಲ್ಲಿ ಏರ್ಪಡಿಸಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಜ್ಞಾನವೃದ್ಧಿ: ವಕೀಲರು ಹೆಚ್ಚು ಹೆಚ್ಚು ಕಾನೂನು ತಿಳಿದುಕೊಂಡರೆ ಉತ್ತಮ ವಕೀಲರಾಗಲು ಸಾಧ್ಯ. ವಕೀಲರು ನ್ಯಾಯಾಲಯದ ಕಾರ್ಯಕಲಾಪಗಳಲ್ಲಿಹೆಚ್ಚಿನ ಆಸಕ್ತಿಯಿಂದ ಭಾಗವಹಿಸಿದ್ದಲ್ಲಿ ಮಾತ್ರ ವೃತ್ತಿಪರತೆ ಹೆಚ್ಚುತ್ತದೆ. ಜತೆಗೆ ತಮ್ಮ ವೃತ್ತಿಯಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಹೆಚ್ಚು ಜ್ಞಾನವೃದ್ಧಿಯಾಗುತ್ತದೆ ಎಂದರು.
ವಕೀಲರು ಮತ್ತು ನ್ಯಾಯಾಧೀಶರ ಬಾಂಧವ್ಯ ಸ್ನೇಹಪೂರ್ವಕವಾಗಿ ಇದ್ದಲ್ಲಿ ವಾತಾವರಣ ಉತ್ತಮರೀತಿಯಲ್ಲಿ ಕೂಡಿರುತ್ತದೆ. ಕಕ್ಷಿದಾರರಿಗೆ ತ್ವರಿತ ನ್ಯಾಯ ಒದಗಿಸಬಹುದಾಗಿದೆ ಎಂದರು.
ವೃತ್ತಿ ಉತ್ತಮಗೊಳಿಸಿ: ಹಿರಿಯ ಸಿವಿಲ್ ನ್ಯಾಯಾಧೀಶ ಗಣಪತಿ ಜಿ.ಬಾದಾಮಿ ಮಾತನಾಡಿ, ವೃತ್ತಿ ಬದುಕಿನಲ್ಲಿಪ್ರಾಮಾಣಿಕತೆ, ಕಠಿಣ ಪರಿಶ್ರಮವಿದ್ದಾಗ ಮಾತ್ರ ಯಶಸ್ಸು ಕಾಣಬಹುದು. ಪ್ರಸ್ತುತದಲ್ಲಿ ಕಾನೂನು ತಿಳಿಯಲು ಅನೇಕ ಸೌಲಭ್ಯ ಲಭ್ಯವಿದ್ದು, ಇಂತಹ ಸೌಲಭ್ಯಗಳಿಂದ ವೃತ್ತಿಯನ್ನು ಉತ್ತಮಗೊಳಿಸಿ ಕೊಳ್ಳಬೇಕೆಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ವಕೀಲರು ಹಿರಿಯರ ಮಾರ್ಗದರ್ಶನ ಪಡೆದು ಓದಿನ ಕಡೆಗೆ ಹೆಚ್ಚು ಒತ್ತು ನೀಡಿ ಸಮಾಜದಲ್ಲಿ ಉತ್ತಮ ವಕೀಲರಾಗಿ ಹೊರ ಹೊಮ್ಮ ಬೇಕಾಗಿದೆ ಎಂದರು.
ಸನ್ಮಾನ: ವಕೀಲ ವೃತ್ತಿಯಲ್ಲಿ 60 ವರ್ಷ ಸೇವೆ ಸಲ್ಲಿಸಿರುವ ಹಿರಿಯ ವಕೀಲರಾದ ಕೆ.ಬಿ.ಶಿವರುದ್ರಪ್ಪ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್, ಪ್ರಧಾನ ಸಿವಿಲ್ ನ್ಯಾಯಾಧೀಶ ಮಹಮದ್ ರೋಷನ್ ಶಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಸ್.ವಿ.ಸ್ಮಿತಾ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಸ್.ಮಂಜು, ಪ್ರಧಾನ ಕಾರ್ಯದರ್ಶಿ ಎನ್.ಕೆ. ವಿರೂಪಾಕ್ಷಸ್ವಾಮಿ, ಖಜಾಂಚಿ ಆರ್.ಗಿರೀಶ್, ಜಂಟಿ ಕಾರ್ಯದರ್ಶಿ ಮಲ್ಲು ಇದ್ದರು.