Advertisement

ಬಿಜೆಪಿ ಪ್ರಣಾಳಿಕೆಗೆ ಗಣ್ಯ ವೈದ್ಯರು, ವೈದ್ಯಕೀಯ ಸಂಸ್ಥೆಗಳ ಮುಖಂಡರಿಂದ ಸಲಹೆ

10:27 PM Mar 20, 2023 | Team Udayavani |

ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ಡಬಲ್‌ ಇಂಜಿನ್‌ ಸರ್ಕಾರ ಬೇಕು ಎಂಬ ಅಭಿಪ್ರಾಯ ಜನರ ಮನಸ್ಸಲ್ಲಿ ಈಗಾಗಲೇ ಮೂಡಿದ್ದು ನಿಚ್ಚಳ ಬಹುಮತದಿಂದ ಬಿಜೆಪಿ ಸರ್ಕಾರ ರಚಿಸುವುದು ಖಚಿತ ಎಂದು ಆರೋಗ್ಯ ಸಚಿವ, ರಾಜ್ಯ ಬಿಜೆಪಿ ಪ್ರಣಾಳಿಕೆ ಸಲಹಾ ಸಮಿತಿಯ ಅಧ್ಯಕ್ಷ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

Advertisement

ಸೋಮವಾರ ನಗರದ ಖಾಸಗಿ ಹೋಟೆಲ್‌ ಒಂದರಲ್ಲಿ ಬಿಜೆಪಿ ಪ್ರಣಾಳಿಕೆ ಸಲಹಾ ಸಮಿತಿಯ ಆಯೋಜಿಸಿದ್ದ ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಎಲ್‌. ಮಂಡವೀಯ, ರಾಜ್ಯದ ಗಣ್ಯ ವೈದ್ಯರು, ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರು, ವೈದ್ಯಕೀಯ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಬಿಜೆಪಿಯ ಪ್ರಣಾಳಿಕೆಗೆ ನೀಡಿದ ತಮ್ಮ ಬೇಡಿಕೆ, ಸಲಹೆಗಳನ್ನು ಸ್ವೀಕರಿಸಿ ಮಾತನಾಡಿದರು.

ಇಂದು ರಾಜ್ಯದಲ್ಲಿ 67 ಮೆಡಿಕಲ್‌ ಕಾಲೇಜ್‌ಗಳಿದ್ದು ಸುಮಾರು ಹನ್ನೊಂದು ಸಾವಿರ ವಿದ್ಯಾರ್ಥಿಗಳು ಎಂಬಿಬಿಎಸ್‌ ಓದುತ್ತಿದ್ದಾರೆ. ಸುಮಾರು 5 ಸಾವಿರ ಮಂದಿ ವೈದ್ಯಕೀಯ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ವೈದ್ಯಕೀಯ ರಂಗದಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ವೈದ್ಯಕೀಯ ರಂಗದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಜೊತೆಗೆ ತುರ್ತು ಚಿಕಿತ್ಸೆ, ಗಂಭೀರ ಆರೋಗ್ಯ ಸಮಸ್ಯೆಗಳ ನಿರ್ವಹಣೆಯ ಸವಾಲು ನಮ್ಮ ಮುಂದಿದೆ. ಆದರೆ ಕರ್ನಾಟಕ ಸರ್ಕಾರ ಈಗಾಗಲೇ ತನ್ನ ವಿವಿಧ ಯೋಜನೆಗಳ ಮೂಲಕ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಹಂತದ ವೈದ್ಯಕೀಯ ಕ್ಷೇತ್ರಕ್ಕೆ ಸಮಾನ ಒತ್ತು ನೀಡಿದೆ ಎಂದು ಆರೋಗ್ಯ ಸಚಿವರು ಹೇಳಿದರು.

ನಮ್ಮಲ್ಲಿ ವೈದ್ಯರ ಕೊರತೆಯಿಲ್ಲ. ಆದರೆ ವೈದ್ಯರ ನ್ಯಾಯಯುತ ಹಂಚಿಕೆ ಆಗಿಲ್ಲ. ನ್ಯಾಯ ಸಮ್ಮತ ರೀತಿಯಲಿ ಆರೋಗ್ಯ ಕಾಳಜಿಯ ಹಂಚಿಕೆಯಾಗಿಲ್ಲ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಮನಾರ ಆರೋಗ್ಯ ಮೂಲ ಸೌಕರ್ಯಗಳು ದೊರಕಬೇಕು. ಆರೋಗ್ಯ ಸೇವೆಗಳು ಎಲ್ಲರಿಗೂ ಸುಲಭ ಲಭ್ಯ, ಕೈಗೆಟಕುವಂತೆ ಇರಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.

Advertisement

ನಾವು ರೋಗ ಗುಣಪಡಿಸುವ ಚಿಕಿತ್ಸಾ ಕ್ರಮಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಆದರೆ ವಿದೇಶದಲ್ಲಿ ಈಗಾಗಲೇ ರೋಗವನ್ನು ಮೊದಲ ಊಹಿಸುವ ಮತ್ತು ರೋಗ ಬಾರದಂತೆ ತಡೆಯುವ ಚಿಕಿತ್ಸಾ ಕ್ರಮಗಳು ರೂಪುಗೊಳ್ಳುತ್ತಿವೆ. ವೈದ್ಯಕೀಯ ವಿದ್ಯಾರ್ಥಿಗಳು ಈ ಚಿಕಿತ್ಸಾ ಕ್ರಮದ ಬಗ್ಗೆಯೂ ಆಸಕ್ತರಾಗಿರಬೇಕು ಎಂದು ಡಾ. ಸುಧಾಕರ್‌ ಅಭಿಪ್ರಾಯ ಪಟ್ಟರು.

ವೈದ್ಯಕೀಯ ಶಿಕ್ಷಣ ಖರ್ಚು ಕಡಿಮೆ ಮಾಡುವ ಚಿಂತನೆ
ವೈದ್ಯಕೀಯ ಶಿಕ್ಷಣ ಎಲ್ಲೆಡೆಯೂ ದುಬಾರಿಯಾಗಿದೆ. ಇದನ್ನು ಹೇಗೆ ಕಡಿಮೆ ಮಾಡಬಹುದು ಅನ್ನುವುದನ್ನು ಹಲವು ಯೋಜನೆಗಳ ಮೂಲಕ ಜಾರಿಗೊಳಿಸುತ್ತಿದ್ದೇವೆ. ಅದು ಇನ್ನೂ ಕೂಡ ಕಡಿಮೆಯಾಗಬೇಕಿದೆ. ವೈದ್ಯಕೀಯ ಶಿಕ್ಷಣ ಎಲ್ಲರಿಗೂ ಕೈಗೆಟಕುವಂತಾಗಬೇಕು. ನಮ್ಮ ಸರ್ಕಾರ ಎಂಬಿಬಿಎಸ್‌ ಶುಲ್ಕವನ್ನು ಹೆಚ್ಚಳ ಮಾಡಿಲ್ಲ ಎಂದು ಸಚಿವರು ಹೇಳಿದರು.

ಸರ್ಕಾರ ಈಗಾಗಲೇ ಜನೌಷಧಿ ಮಳಿಗೆಗಳ ಮೂಲಕ ಜನರ ವೈದ್ಯಕೀಯ ವೆಚ್ಚದ ಹೊರೆ ತಗ್ಗಿಸಿದೆ. 21 ಮೆಡಿಕಲ್‌ ಕಾಲೇಜುಗಳಲ್ಲಿ ಅಂಗ ಕಸಿ ಘಟಕ ತೆರೆಯಲಾಗಿದೆ. ನಮ್ಮ ಕ್ಲಿನಿಕ್‌ ತೆರೆದು ನಗರ ಪ್ರದೇಶದ ಬಡ ಜನರಿಗೂ ಆರೋಗ್ಯ ಸೌಕರ್ಯ ಒದಗಿಸಲಾಗುತ್ತಿದೆ. ಇದರಿಂದ ಎಲ್ಲರೂ ನಿಯಮಿತ ತಪಾಸಣೆ ಮಾಡಿಸಿಕೊಳ್ಳಲು ಅನುಕೂಲವಾಗಲಿದೆ. ಮಹಿಳೆಯರಿಗೆ 258 ಆಯುಷ್ಮತಿ ಕ್ಲಿನಿಕ್‌ ಅನ್ನು ಇನ್ನು ಮೂರು ದಿನದಲ್ಲಿ ತೆರೆಯಲಾಗುವುದು. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮೊದಲ ಎದೆ ಹಾಲು ಬ್ಯಾಂಕ್‌ ಸ್ಥಾಪಿಸಲಾಗಿದ್ದು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸಾಕ್ಷಿಗಳು ಎಂದು ಅವರು ಹೇಳಿದರು.

ದೂರಗಾಮಿ ಆಲೋಚನೆಗಳಿಂದ ಪ್ರತಿಯೊಂದು ವರ್ಗದ ಜನರನ್ನು ಸಬಲೀಕರಣ ಮಾಡುವಂತಹ, ನಿರ್ದಿಷ್ಟ ಕಾರ್ಯಕ್ರಮಗಳನ್ನು ಬಿಜೆಪಿ ಹೊಂದಿದೆ. ಕಾಂಗ್ರೆಸ್‌ ಘೋಷಣೆಗಳಿಗೆ ಯಾವುದೇ ಕಿಮ್ಮತ್ತಿಲ್ಲ. ಯಾರೂ ನಂಬುವುದಿಲ್ಲ. ರಾಜಸ್ಥಾನ, ಛತ್ತೀಸ್ಗಢದಲ್ಲಿ ಕೊಟ್ಟ ಭರವಸೆ 5 ವರ್ಷವಾದರೂ ಈಡೇರಿಲ್ಲ. ಈಗ ಚುನಾವಣೆ ಬಂತೆಂದು ಅಲ್ಲಿನ ಬಜೆಟ್ ನಲ್ಲಿ ಈ ಬಾರಿ ಘೋಷಿಸಿದ್ದಾರೆ. ಈಗ ಇಲ್ಲಿ ಹೊಸದಾಗಿ ಆರಂಭಿಸಿದ್ದಾರೆ.

ಬಿಜೆಪಿಗೆ ಪ್ರಣಾಳಿಕೆ ಎಂಬುದು ಭಗವದ್ಗೀತೆ ಇದ್ದಂತೆ ಸುಳ್ಳು ಭರವಸೆಗಳಿಂದ ಜನರನ್ನು ವಂಚಿಸಿ, ಮತ ಕಸಿಯುವ ಕೆಲಸವನ್ನು ಬಿಜೆಪಿ ಮಾಡುವುದಿಲ್ಲ. ಜನರ ಸಲಹೆಗಳನ್ನು ಸ್ವೀಕರಿಸಿಯೇ ಅವರಿಗೆ ನೆರವಾಗುವ ಪ್ರಣಾಳಿಕೆಯನ್ನು ಬಿಜೆಪಿ ರೂಪಿಸಲಿದೆ ಎಂದು ಡಾ. ಸುಧಾಕರ್‌ ಹೇಳಿದರು.

ಬಿಜೆಪಿ ಪ್ರಣಾಳಿಕೆ ನೈಜತೆಯಿಂದ ಕೂಡಿರಲಿದೆ. ಮತ ಕಸಿಯಲು ಅಥವಾ ಸುಳ್ಳು ಹೇಳಲು ಬಿಜೆಪಿ ತಯಾರಿಲ್ಲ. ಬಿಜೆಪಿಗೆ ಪ್ರಣಾಳಿಕೆಯು ಪವಿತ್ರವಾದುದು. 50-60 ಕ್ಷೇತ್ರಗಳ ಜನರ ಜೊತೆ ಸಭೆ, ಸಮಾಲೋಚನೆ ಮಾಡಿ, ಸಲಹೆ ಪಡೆದು, ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇವೆ. ಪ್ರತಿಯೊಬ್ಬರ ಆಲೋಚನೆ, ಕನಸುಗಳಿಗೂ ಇಲ್ಲಿ ಜಾಗವಿದೆ ಎಂದರು.

ಪ್ರಣಾಳಿಕೆಯನ್ನು ಯಾರೂ ಬೇಕಾದರೂ ಘೋಷಿಸಬಹುದು. ಆದರೆ ನಾವು ಎಲ್ಲರ ಬಳಿಯೂ ಅಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆ ಮಾಡುತ್ತೇವೆ. ಎಲ್ಲಾ ವರ್ಗದ ಅಭಿಪ್ರಾಯ ಆಲಿಸಿ ಜನಪ್ರಿಯ ಕಾರ್ಯಕ್ರಮವನ್ನು ರೂಪಿಸಲು ಬಯಸಿದ್ದೇವೆ. ನಿಮ್ಮ ಸಲಹೆಗಳನ್ನು ಸಲಹಾ ಬಾಕ್ಸ್‌ಗಳಲ್ಲಿ, ಪತ್ರದ ಮೂಲಕ ಅಥವಾ ಬಿಜೆಪಿಯ ವೆಬ್‌ಸೈಟ್‌ ಮೂಲಕ ನಮಗೆ ಕಳುಹಿಸಬಹುದು ಎಂದು ಆರೋಗ್ಯ ಸಚಿವರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next