Advertisement

ಹದಿ ಹರೆಯದವರಿಗೆ ಮಾರ್ಗದರ್ಶನ ಅವಶ್ಯ

04:47 PM Sep 24, 2022 | Team Udayavani |

ಶಹಾಬಾದ: ಹದಿ ಹರೆಯದ ವಯಸ್ಸಿನ ಮಕ್ಕಳು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ತಲುಪುವ ಹಂತದಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಉಂಟಾಗುತ್ತವೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾದ ಅವಶ್ಯಕತೆಯಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ|ಅಬ್ದುಲ್‌ ರಹೀಮ್‌ ಹೇಳಿದರು.

Advertisement

ಶುಕ್ರವಾರ ನಗರದ ಎಂಸಿಸಿ ಶಾಲೆಯಲ್ಲಿ ಜಿಲ್ಲಾ ಪಂಚಾಯತ್‌, ರಾಷ್ಟ್ರೀಯ ಆರೋಗ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮುದಾಯ ಆರೋಗ್ಯ ಕೇಂದ್ರ ಶಹಾಬಾದ, ಎಂಸಿಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಹದಿಹರೆಯದ ಆರೋಗ್ಯ ಮತ್ತು ಕ್ಷೇಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ನಮ್ಮ ಎಲ್ಲ ಸಾಧನೆ, ಸಿದ್ಧಿಗಳಿಗೆ ತಳಹದಿ ಆರೋಗ್ಯ. ಹದಿಹರೆಯದ ಸಮಸ್ಯೆಗಳು ಅನೇಕ ದೈಹಿಕ, ಭಾವನಾತ್ಮಕ ಬದಲಾವಣೆ ಹಂತದಲ್ಲಿ ಸರಿಯಾದ ಮಾರ್ಗದರ್ಶನ ಇಲ್ಲದೇ ವಿದ್ಯಾರ್ಥಿಗಳು ತಮ್ಮ ಬದುಕನ್ನು ದುರ್ಭರಗೊಳಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಕುರಿತು ತಿಳಿವಳಿಕೆ ಪಡೆದು ಸಮಾಜದ ಆರೋಗ್ಯ ರಕ್ಷಣೆಗೆ ಕಾರಣ ಬದ್ಧರಾಗಬೇಕು ಎಂದು ತಿಳಿಸಿದರು.

ದಂತ ವೈದ್ಯೆ ಡಾ|ಸಂಧ್ಯಾ ಡಾಂಗೆ ಮಾತನಾಡಿ, ಹದಿ ಹರೆಯದ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಉಂಟಾಗಿ ಅವರ ಮನಸ್ಸಿನಲ್ಲಿ ಆತಂಕ, ಭಯ, ಖನ್ನತೆ ಉಂಟಾಗುತ್ತದೆ. ಇದು ಮಾನಸಿಕ ಚಂಚಲತೆಗೆ ಕಾರಣವಾಗಿ ದಾರಿ ತಪ್ಪಲು ಕಾರಣವಾಗುತ್ತದೆ. ಆದ್ದರಿಂದ ಪೋಷಕರು ಹಾಗೂ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.

ಎಂಸಿಸಿ ಶಾಲೆ ಮುಖ್ಯಾಧಿಕಾರಿ ಸಿಸ್ಟರ್‌ ಲಿನೆಟ್‌ ಸಿಕ್ವೇರಿಯಾ ಮಾತನಾಡಿ, ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು, ದುಶ್ಚಟಗಳಿಂದ ದೂರವಿರುವುದು, ಪೌಷ್ಟಿಕ ಆಹಾರ ಸೇವನೆ, ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರಿಂದ ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

Advertisement

ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಆಪ್ತ ಸಮಾಲೋಚಕ ಅಮರೇಶ ಮಾತನಾಡಿದರು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಡಾ|ಶಂಕರ ರಾಠೊಡ, ಸಮುದಾಯ ಆರೋಗ್ಯ ಕೇಂದ್ರದ ಕಚೇರಿ ಅಧಿಧೀಕ್ಷಕ ಮೋಹನಕುಮಾರ ಗಾಯಕ್ವಾಡ್‌, ಎನ್‌ಸಿಡಿ ಆಪ್ತ ಸಮಾಲೋಚಕಿ ಸುಮಂಗಲಾ ಕಿಣಗಿ, ಕಿರಿಯ ಪ್ರಯೋಗಶಾಲೆ ತಂತ್ರಜ್ಞ ಬಸಯ್ಯ ಹಿರೇಮಠ, ಆರೋಗ್ಯ ಸಂರಕ್ಷಣಾಧಿಕಾರಿ ಯುಸೂಫ್‌ ನಾಕೇದಾರ, ಶಂಕರ್‌ ವಾಲಿಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next