ಶಿರಸಿ : ಮಹಾರಾಷ್ಟ್ರದ ಇಸ್ಲಾಂಪುರದಲ್ಲಿ ನಡೆಯಲಿರುವ 24 ನೇ ರಾಷ್ಟ್ರ ಮಟ್ಟದ ಯುವ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಕರ್ನಾಟಕದ ಶಿರಸಿಯ ಕನ್ನಡದ ಯುವಕನೊರ್ವ ಆಯ್ಕೆಯಾಗಿದ್ದಾನೆ.
ಮೂಲತಃ ಶಿರಸಿ ತಾಲೂಕಿನ ಬಾಬನಕಟ್ಟೆ ನಿವಾಸಿಯಾಗಿರುವ ಹಾಗೂ ಹಾಲಿ ನವಿಮುಂಬಯಿ ನಿವಾಸಿಗಳಾದ ಭಾರತಿ ಮತ್ತು ಸತೀಶ್ ಹೆಗಡೆ ದಂಪತಿಯ ಪುತ್ರನಾಗಿರುವ ಆದಿತ್ಯ ಹೆಗಡೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈತ ಮಹಾರಾಷ್ಟ್ರ ರಾಜ್ಯದ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದು ವಿಶೇಷವಾಗಿದೆ.
ಈ ಹಿಂದೆ ಜೂನಿಯರ್ ವಿಭಾಗ, ಸೀನಿಯರ್ ವಿಭಾಗದಲ್ಲಿ ಆಡಿ ವಿಶ್ವ ವಿದ್ಯಾಲಯ ಮಟ್ಟದಲ್ಲಿ, ರಾಜ್ಯ, ರಾಷ್ಟ್ರಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಆಡಿರುವ ಆದಿತ್ಯ ಹೆಗಡೆ ಈಗ ಮಹಾರಾಷ್ಟ್ರದ ಯುವ ತಂಡದಲ್ಲಿ ಕನ್ನಡದ ಹುಡುಗ ನಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ.
ಸ್ಪೋರ್ಟ್ಸ್ ಆಥಾರಿಟಿ ಆಫ್ ಇಂಡಿಯಾ ರಾಸಾಯನಿಯ ಅಡಿಯಲ್ಲಿ ತರಬೇತಿ ಪಡೆಯುತ್ತಿರುವ ಈತ ಪಿಲ್ಲೈ ಪನ್ವೇಲ್ ಕಾಲೇಜ್ ನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದಾನೆ.
ಈತ ಮುಂಬಯಿಯ ಮಕ್ಕಳಿಗಾಗಿ ಇರುವ ಕನ್ನಡಭಾಷೆ – ಸಂಸ್ಕಾರ-ಸಂಸ್ಕೃತಿ ಕಲಿಕಾ ಶಾಲೆ ಚಿನ್ನರಬಿಂಬ, ನೆರುಲ್ ಶಿಬಿರ, ಚಿನ್ಮಯಾ ಮಿಶನ್ ನ ಬಾಲವಿಹಾರದಲ್ಲಿಯೂ ಮಾರ್ಗದರ್ಶನ ಪಡೆದುಕೊಂಡಿದ್ದಾನೆ.