Advertisement

ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಸೇರಿಸಿ

02:08 PM Aug 02, 2022 | Team Udayavani |

ಕಲಬುರಗಿ: ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ವೀರಶೈವ -ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನು ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸುವ ಮುಖಾಂತರ ಸಾಮಾಜಿಕ ನ್ಯಾಯ ಕಲ್ಪಿಸುವಂತೆ ಆಗ್ರಹಿಸಿ ಸೋಮವಾರ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಶೈಕ್ಷಣಿಕ ಪ್ರವೇಶಾತಿ ಹಾಗೂ ಉದ್ಯೋಗಾವಕಾಶಗಳಲ್ಲಿ ವೀರಶೈವ ಲಿಂಗಾಯತ ವರ್ಗ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರದ ಕಾರಣಕ್ಕೆ ಅನ್ಯಾಯ ಹಾಗೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಸಮುದಾಯದಲ್ಲೂ ಬಡವರಿದ್ದು, ಅವರೆಲ್ಲ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಒಬಿಸಿ ಪಟ್ಟಿಯಲ್ಲಿ ಸೇರಿಸುವಂತೆ ಹಲವು ಸಲ ಮನವಿ ಸಲ್ಲಿಸಲಾಗಿದ್ದರೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಬೀದಿಗಿಳಿಯಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ವೀರಶೈವ-ಲಿಂಗಾಯತ ಸಮುದಾಯದ ಪ್ರತಿಭಾವಂತರು ದಶಕಗಳಿಂದ ಹತ್ತು ಹಲವಾರು ಅವಕಾಶಗಳಿಂದ ವಂಚಿತರಾಗಿರುತ್ತಾರೆ. ಇದರಿಂದಾಗಿ ಕೇಂದ್ರ ಸರ್ಕಾರದ ಅಖೀಲ ಭಾರತ ಸೇವೆಗಳಲ್ಲಿ ಕೇಂದ್ರದ ಸಾರ್ವಜನಿಕ ಉದ್ಯಮಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ ಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದವರು ಬೆರಣಿಕೆಯಷ್ಟು ಇರುತ್ತಿರುತ್ತಾರೆ. ಅದೇ ರೀತಿ ಕೇಂದ್ರ ಸ್ವಾಮ್ಯದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಾದ ಐಐಟಿ, ಐಐಎಂ, ಎನ್‌ಐಟಿ, ಎನ್‌ಇಇಟಿ, ಎಮ್ಸ್‌, ಕೇಂದ್ರೀಯ ವಿವಿ, ನವೋದಯ ಕಾಲೇಜುಗಳು ಸೇರಿ ಇತರ ಸಂಸ್ಥೆಗಳಲ್ಲೂ ವೀರಶೈವ-ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಹೀಗಾಗಿ ಈ ಕೂಡಲೇ ಒಬಿಸಿ ಪಟ್ಟಿಯಲ್ಲಿ ಸೇರಿಸಿ ನ್ಯಾಯ ಕಲ್ಪಿಸಬೇಕೆಂದು ಆಗ್ರಹಿಸಿದರು.

ಅಖೀಲ ಭಾರ ವೀರಶೈವ ಮಹಾಸಭಾದ ಅಧ್ಯಕ್ಷ ಶರಣು ಮೋದಿ ಮಾತನಾಡಿ, ವೀರಶೈವ-ಲಿಂಗಾಯತ ಸಮುದಾಯದ ಎಲ್ಲ ಒಳ ಪಂಗಡಗಳು ಸೇರಿಸುವಂತೆ ಇಂದು ರಾಜ್ಯಾದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈಗಲಾದರೂ ಕೇಂದ್ರ ಸರ್ಕಾರ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕೆಂದರು.

ಪ್ರತಿಭಟನಾಕಾರರು ಬೇಕೆ, ಬೇಕು- ನ್ಯಾಯ ಬೇಕು ಎಂಬ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಹಾಗೂ ಶಾಸಕರಾದ ಎಂ.ವೈ. ಪಾಟೀಲ್‌, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್‌, ಅಮರನಾಥ ಪಾಟೀಲ್‌, ಅಲ್ಲಮಪ್ರಭು ಪಾಟೀಲ್‌, ಕ್ರೆಡೆಲ್‌ ಅಧ್ಯಕ್ಷ ಚಂದು ಪಾಟೀಲ್‌, ಮುಖಂಡರಾದ ನೀಲಕಂಠರಾವ ಮೂಲಗೆ, ಅಖೀಲ ಭಾರತ ವೀರಶೈವ ಸಮಾಜದ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಡಾ| ಎಸ್‌.ಬಿ. ಪಾಟೀಲ್‌, ರಾಜುಗೌಡ ನಾಗನಹಳ್ಳಿ, ಡಾ| ಸುಧಾ ಹಾಲಕಾಯಿ, ಶರಣಬಸಪ್ಪ ಭೂಸನೂರ, ಈರಣ್ಣ ಗೊಳೆದ, ಚೆನ್ನಪ್ಪ ಡಿಗ್ಗಿ, ಅಶೋಕ ಮಾನಕರ್‌, ಡಾ| ಶಂಭುಲಿಂಗ ಬಳಬಟ್ಟಿ, ಅಪ್ಪು ಕಣಕಿ, ರಾಜಶೇಖರ ಸೀರಿ, ಅಪ್ಪಾರಾವ ಅಕ್ಕೋಣಿ, ಶಿವಾನಂದ ತೊರವಿ, ಶರಣಬಸಪ್ಪ ಆರ್‌ ಟೆಂಗಳಿ, ವೈಜನಾಥ ತಡಕಲ್‌, ಶರಣು ಪಾಟೀಲ್‌ ಆಳಂದ, ರಾಜು ಲೇಂಗಟಿ, ಅಪ್ಪಾಸಾಬ ಪಾಟೀಲ್‌, ಬಸವರಾಜ ಪಾಟೀಲ್‌ ಬಿರಾಳ, ಸೋಮಶೇಖರ ಹಿರೇಮಠ, ನಾಗಲಿಂಗಯ್ಯ ಹಿರೇಮಠ, ಎಂ.ಎಸ್‌. ಪಾಟೀಲ್‌ ನರಿಬೋಳ, ಮಚೇಂದ್ರನಾಥ ಮೂಲಗೆ, ಉದಯವಕುಮಾರ ಜೇವರ್ಗಿ, ಅಪ್ಪಾಜಿ ಪಾಟೀಲ್‌, ಬಸವರಾಜ ಸೊನ್ನ, ಶರಣಬಸಪ್ಪ ಪಾಟೀಲ್‌ ನಿಂಬರ್ಗಾ ಸೇರಿದಂತೆ ಮುಂತಾದವರಿದ್ದರು.

Advertisement

ಕೇಂದ್ರ ಸರ್ಕಾರ ವಿರುದ್ಧ ಘೋಷಣೆಗೆ ಆಕ್ಷೇಪ

ವೀರಶೈವ ಲಿಂಗಾಯತ ಸಮುದಾಯ ಒಬಿಸಿ ಪಟ್ಟಿಗೆ ಸೇರಿಸುವಂತೆ ಅಖೀಲ ಭಾರತ ವೀರಶೈವಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಎನ್ನದೇ ಎಲ್ಲ ಪಕ್ಷಗಳು ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ವೀರಶೈವ-ಲಿಂಗಾಯತ ಸಮುದಾಯ ಒಬಿಸಿ ಪಟ್ಟಿಗೆ ಸೇರಲೇಬೇಕು. ಬೇಕೆ ಬೇಕು-ನ್ಯಾಯ ಬೇಕು ಎಂದು ಘೋಷಣೆ ಕೂಗಿದರಲ್ಲದೇ ಪ್ರತಿಭಟನಾಕಾರರೊಬ್ಬರಲ್ಲಿ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್‌ ನರಿಬೋಳ, ಅಮರನಾಥ ಪಾಟೀಲ್‌ ಸೇರಿದಂತೆ ಮುಂತಾದವರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಲ ಕ್ಷಣ ಕಾಲ ಗೊಂದಲಯ ವಾತಾವರಣ ನಿರ್ಮಾಣವಾಯಿತು. ನಂತರ ಸಮಾಜದ ಅಧ್ಯಕ್ಷರಾದ ಶರಣು ಮೋದಿ, ಯಾರ ವಿರುದ್ಧ ಘೋಷಣೆ ಬೇಡ, ಏನಿದ್ದರೂ ನಮ್ಮ ಬೇಡಿಕೆಗಳಿಗೆ ಮಾತ್ರ ಆಗ್ರಹಿಸಿ ಘೋಷಣೆ ಕೂಗಿ ಎಂದು ಮನವಿ ಮಾಡಿದರು. ತದನಂತರ ಪರಿಸ್ಥಿತಿ ತಿಳಿಸಿಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next