ಧನ್ವೀರ್ ಗೌಡ ಅಭಿನಯದ “ವಾಮನ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಸದ್ದಿಲ್ಲದೆ ಎರಡು ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಈಗ ಮೂರನೇ ಹಂತದ ಚಿತ್ರೀಕರಣದಲ್ಲಿ ಬಿಝಿಯಾಗಿದೆ. ಇದರ ನಡುವೆಯೇ ಚಿತ್ರತಂಡದ ಕಡೆಯಿಂದ ಹೊಸದೊಂದು ಸುದ್ದಿ ಹೊರಬಂದಿದೆ. ಅದೇನೆಂದರೆ, “ವಾಮನ’ನ ಎದುರು ಗುದ್ದಾಡಲು ಅಖಾಡಕ್ಕೆ ಖಡಕ್ ಖಳನಾಯಕನ ಎಂಟ್ರಿಯಾಗಿದೆ.
ಹೌದು, “ವಾಮನ’ ಚಿತ್ರದಲ್ಲಿ ಬಹುಭಾಷಾ ನಟ ಸಂಪತ್ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರತಂಡದ ಮೂಲಗಳ ಪ್ರಕಾರ, “ವಾಮನ’ ಚಿತ್ರದಲ್ಲಿ ಮಾಫಿಯಾ ಕಿಂಗ್ ಆಗಿ ಸಂಪತ್, ಮೂರು ಶೇಡ್ನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರಂತೆ. “ಸಂಪತ್ ಅವರ ಪಾತ್ರಕ್ಕಾಗಿಯೇ ಪ್ರತ್ಯೇಕವಾಗಿ ಕಾಸ್ಟ್ಯೂಮ್ ಡಿಸೈನ್ ಮಾಡಿಸಲಾಗಿದೆ. ಹಿಂದಿನ ಯಾವ ಸಿನಿಮಾ ಗಳಲ್ಲೂ ಕಾಣಿಸಿಕೊಂಡಿರದ ಡಿಫರೆಂಟ್ ಲುಕ್ ಈ ಸಿನಿಮಾದಲ್ಲಿ ಅವರಿಗಿದೆ’ ಎಂಬುದು ನಿರ್ದೇಶಕ ಶಂಕರ್ ರಾಮನ್ ಮಾತು.
ಇನ್ನು “ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್’ ಬ್ಯಾನರ್ನಲ್ಲಿ ಚೇತನ್ ಗೌಡ ನಿರ್ಮಿಸುತ್ತಿರುವ “ವಾಮನ’ ಚಿತ್ರದಲ್ಲಿ ನಾಯಕ ಧನ್ವೀರ್ಗೆ ಜೋಡಿಯಾಗಿ ರಚನಾ ರೈ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮೊದಲ ಬಾರಿ ರಾಷ್ಟ್ರೀಯ ತಂಡದ ಕರೆ ಪಡೆದ ಧೋನಿ ಗರಡಿಯ ಹುಡುಗ ರಾಹುಲ್ ತ್ರಿಪಾಠಿ
ಚಿತ್ರಕ್ಕೆ ಮಹೇನ್ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಿದೆ. ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಥಾಹಂದರ ಹೊಂದಿರುವ “ವಾಮನ’ ಚಿತ್ರಕ್ಕೆ ಅರ್ಜುನ್ ರಾಜ್, ಜಾಲಿ ಬಾಸ್ಟಿನ್ ಸಾಹಸ ಸಂಯೋಜನೆಯಿದೆ.
ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ “ವಾಮನ’ ಚಿತ್ರದ ಟೈಟಲ್ ಪೋಸ್ಟರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸದ್ಯ ಚಿತ್ರೀಕರಣದಲ್ಲಿ ನಿರತವಾಗಿರುವ ಚಿತ್ರತಂಡ ಇದೇ ವರ್ಷಾಂತ್ಯದಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ