Advertisement

ಪಕ್ಷಾಂತರದ ಭರದಲ್ಲಿ ಕಾರ್ಯಕರ್ತರ ಅವಗಣನೆ ಸಲ್ಲದು

12:55 AM Jan 16, 2023 | Team Udayavani |

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಸಹಜವಾಗಿಯೇ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಚುನಾವಣ ತಂತ್ರಗಾರಿಕೆ ರಚನೆ, ಪೂರ್ವ ಸಿದ್ಧತೆ, ಪ್ರಚಾರ ಕಾರ್ಯತಂತ್ರ, ಪ್ರಾಥಮಿಕ ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ಮತ್ತಿತರ ಚಟು ವಟಿಕೆಗಳಲ್ಲಿ ಪಕ್ಷದ ನಾಯಕರು ತಲ್ಲೀನರಾಗಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳು ಪಕ್ಷದ ಪ್ರಭಾವಿ ಮುಖಂಡರ ಮನೆಬಾಗಿಲಿಗೆ ತಡಕಾಡತೊಡಗಿದ್ದರೆ ಟಿಕೆಟ್‌ ಖಾತರಿಯಲ್ಲಿರುವವರು ಪ್ರಚಾರ ಕಾರ್ಯತಂತ್ರದ ರೂಪಣೆಯಲ್ಲಿ ನಿರತರಾಗಿದ್ದಾರೆ. ಈ ನಡುವೆ ಹಾಲಿ ಇರುವ ಪಕ್ಷದಲ್ಲಿ ಹಿನ್ನೆಲೆಗೆ ಸರಿದಿರುವ ಅಥವಾ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವ ಕೆಲವೊಂದಿಷ್ಟು ನಾಯಕರು ಇನ್ನೊಂದು ಪಕ್ಷಕ್ಕೆ ಹಾರಲು ಸಜ್ಜಾಗಿದ್ದಾರೆ. ಈ ಪಕ್ಷಾಂತರ ಪರ್ವಕ್ಕೆ ಶನಿವಾರ ಅಧಿಕೃತ ಚಾಲನೆ ಲಭಿಸಿದೆ.

Advertisement

ಯಾವುದೇ ಚುನಾವಣೆ ಸಮೀಪಿಸಿದಾಗಲೂ ನಾಯಕರ ಪಕ್ಷಾಂತರ ಮಾಮೂಲು. ತಮಗೆ ಅನುಕೂಲಕರ ಮತ್ತು ಒಂದಿಷ್ಟು ಸ್ಥಾನಮಾನ ಲಭಿಸೀತು ಎಂಬ ನಿರೀಕ್ಷೆಯಿಂದ ನಾಯಕರು ಇನ್ನೊಂದು ಪಕ್ಷವನ್ನು ಅಪ್ಪಿಕೊಳ್ಳುತ್ತಾರೆ. ಬಹುತೇಕ ಸಂದರ್ಭದಲ್ಲಿ ಇಂತಹ ನಾಯಕರು ಭವಿಷ್ಯದಲ್ಲಿ ಅಧಿಕಾರ ಲಭಿಸುವ ಸಾಧ್ಯತೆ ನಿಚ್ಚಳವಾಗಿರುವ ಪಕ್ಷವನ್ನು ನೆಚ್ಚಿಕೊಳ್ಳುವುದೇ ಅಧಿಕ. ಯಾವುದೇ ನಾಯಕ ಪಕ್ಷಾಂತರ ಮಾಡಿದ ಸಂದರ್ಭದಲ್ಲಿ ಆತನಿಗೆ ಯಾವುದಾದರೂ ಸ್ಥಾನಮಾನ ಅಥವಾ ಕನಿಷ್ಠ ಟಿಕೆಟ್‌ನ ಭರವಸೆಯಂತೂ ಸಿಕ್ಕೇ ಸಿಕ್ಕಿರುತ್ತದೆ. ಪ್ರಜಾತಂತ್ರದಲ್ಲಿ ಇದು ಸಾಮಾನ್ಯ ಪ್ರಕ್ರಿಯೆ ಹಾಗೂ ಇದು ಚುನಾವಣಾಪೂರ್ವದಲ್ಲಿನ ವಲಸೆಯಾಗಿದ್ದರಿಂದ ಈ ಪಕ್ಷಾಂತರಕ್ಕೆ ನೈತಿಕತೆಯ ಮೊಹರೂ ಇದೆ. ಹಾಗಾಗಿ ಈ ಬಗ್ಗೆ ಯಾರೂ ಚಕಾರ ಎತ್ತುವುದೂ ಇಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ಎಂಬಂತೆ ತಕರಾರುಗಳು ಕೇಳಿ ಬಂದರೂ ಅದಕ್ಕೆ ಕಿವಿಗೊಡುವ ಸ್ಥಿತಿಯಲ್ಲಿ ಯಾರೂ ಇರುವುದಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಈ ಪಕ್ಷಾಂತರ ಹಾವಳಿ ಹೆಚ್ಚುತ್ತಲೇ ಸಾಗಿದೆ. ಚುನಾವಣ ಹವಾ ಯಾವ ದಿಕ್ಕಿನತ್ತ ಬೀಸುತ್ತಿರುತ್ತದೋ ಅತ್ತ ಈ ಅತಂತ್ರ ನಾಯಕರು ಮುಖ ಮಾಡುತ್ತಾರೆ. ಪಕ್ಷಾಂತರ ಮಾಡಿದವರೆಲ್ಲರೂ ಚುನಾವಣೆ ಯಲ್ಲಿ ಜನಮತ ಗಳಿಸುವಲ್ಲಿ ಸಫ‌ಲರಾಗುತ್ತಾರೆ ಎಂದೇನಿಲ್ಲ.

ಪಕ್ಷವೊಂದರಲ್ಲಿ ಗುರುತಿಸಿಕೊಂಡ ಬಳಿಕ ಆತ ಕಾರ್ಯಕರ್ತರ ಮಟ್ಟದಲ್ಲಿ ತನ್ನ ಛಾಪನ್ನು ಉಳಿಸಿಕೊಂಡಲ್ಲಿ ಪಕ್ಷಾಂತರದ ಅನಿವಾರ್ಯತೆ ಸೃಷ್ಟಿಯಾಗುವುದೇ ಇಲ್ಲ. ಅಧಿಕಾರ ಇರಲಿ, ಬಿಡಲಿ, ರಾಜಕೀಯ ಕುತಂತ್ರಗಳೇನೇ ಇರಲಿ ನಾಯಕನಾದವ ತನ್ನ ನಿಷ್ಠೆ, ಕರ್ತವ್ಯಬದ್ಧತೆ, ಸಾಮಾಜಿಕ ಕಳಕಳಿ ಮತ್ತು ಜನರೊಂದಿಗೆ ಪರಿಪೂರ್ಣವಾಗಿ ಬೆರೆತದ್ದೇ ಆದಲ್ಲಿ ಆತ ಪಕ್ಷಾಂತರ ಮಾಡುವ ಪರಿಸ್ಥಿತಿ ಸೃಷ್ಟಿಯಾಗಲಾರದು. ಪಕ್ಷಾಂತರ ಎನ್ನುವುದು ಒಂದರ್ಥದಲ್ಲಿ ಅವಕಾಶವಾದಿ ರಾಜಕಾರಣ. ರಾಜಕೀಯದಲ್ಲಿ ತನ್ನ ಅಸ್ತಿತ್ವ ಅಲುಗಾಡತೊಡಗಿದೆ ಎಂಬ ಭಾವನೆ ಕಾಡ ತೊಡಗಿದಾಗ ನಾಯಕನಾದವ ಅದನ್ನು ಉಳಿಸಿಕೊಳ್ಳುವ ಕೊನೆಯ ಪ್ರಯ ತ್ನವಾಗಿ ಪಕ್ಷಾಂತರದ ಮೊರೆ ಹೋಗುತ್ತಾನೆ. ಪ್ರಜಾಪ್ರಭುತ್ವದಲ್ಲಿ ಇದು ಸಹ್ಯ ಎಂದೆನಿಸಿದರೂ ಸ್ವಯಂಹಿತವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಮಾಡುವ ಪಕ್ಷಾಂತರವನ್ನು ಸಮರ್ಥಿಸಿಕೊಳ್ಳುವುದು ಒಂದಿಷ್ಟು ಕಷ್ಟ ಸಾಧ್ಯವೇ. ಇದರ ಜತೆಯಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರಿಗೆ ಅವ ಮಾನ ಮಾಡಿದಂತೆಯೇ. ಇದನ್ನು ನಾಯಕರಾದವರು ಮೊದಲು ಅರ್ಥೈ ಸಿಕೊಳ್ಳಬೇಕು. ಹಾಗಾದಾಗ ಇಂಥ ಪಕ್ಷಾಂತರಕ್ಕೆ ಕಡಿವಾಣ ಬೀಳುತ್ತದೆ ಮಾತ್ರವಲ್ಲದೆ ಕಾರ್ಯಕರ್ತರ ಶ್ರಮಕ್ಕೂ ಒಂದಿಷ್ಟು ಬೆಲೆ ಲಭಿಸೀತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next