Advertisement

ಸಾಮರಸ್ಯ ಕಾಪಾಡಲು ಕ್ರಮ: ನರಸಿಂಹ ತಾಮ್ರಧ್ವಜ

06:52 PM Oct 24, 2020 | Suhan S |

ಜಗಳೂರು: ತಾಲೂಕಿನ ಸಂಚಾರ ಸಮಸ್ಯೆ ಸೇರಿದಂತೆ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಸನ್ನದ್ಧವಾಗಿದ್ದು, ಅಗತ್ಯಮುಂಜಾಗ್ರತಾ ಕ್ರಮ ಕೈಗೊಂಡು ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗುವುದು ಎಂದು ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ಹೇಳಿದರು.

Advertisement

ಪಟ್ಟಣದ ಪೊಲೀಸ್‌ ಠಾಣೆ ಆವರಣದಲ್ಲಿ ನಡೆದಎಸ್‌ಸಿ-ಎಸ್ಟಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಸಂಚಾರ ಸಮಸ್ಯೆ, ಆಟೋಗಳಲ್ಲಿ ವಿದ್ಯಾರ್ಥಿಗಳನ್ನು ತುಂಬಿಕೊಂಡು ಬರುವುದು. ಕಾಲೇಜುಗಳಿಗೆ ಪೊಲೀಸ್‌ ಸಿಬ್ಬಂದಿ ಗಸ್ತು, ನಿಯಮ ಉಲ್ಲಂಘಿಸುತ್ತಿರುವ ಕೆಲ ಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಗ್ರಾಮಗಳಲ್ಲಿ ಅಹಿತಕರ ಘಟನೆಗಳು ಕಂಡುಬಂದಲ್ಲಿ ಪೊಲೀಸ್‌ ಇಲಾಖೆಯ ಗಮನಕ್ಕೆ ತರಬೇಕು. ಕೆಲ ದಿನಗಳ ಹಿಂದೆ ತಾಲೂಕಿನ ಮುಷ್ಠಿಗರಹಳ್ಳಿ ಗ್ರಾಮದಲ್ಲಿ ಕೋಮುಗಲಭೆಯಿಂದಾಗಿ ಗಲಾಟೆಯಾಗಿದ್ದ ಸಂದರ್ಭದಲ್ಲಿ ನಾವೇ ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರನ್ನು ವಿಚಾರಿಸಿ ನಂತರ ಗ್ರಾಮಕ್ಕೆ ತೆರಳಿ ಎಲ್ಲಾ ಕೋಮಿನವರ ಸಮ್ಮುಖದಲ್ಲಿ ಸಾಮರಸ್ಯ ಸಭೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಕೆಲಸ ಮಾಡಲಾಗಿದೆ. ಕೆಲವು ಪ್ರಕರಣಗಳಲ್ಲಿ ಠಾಣೆಗೆ ಬರುವವರುಕೇಸ್‌ ದಾಖಲಿಸುವ ಮುನ್ನ ಬದ್ಧರಾಗಿರದೆ ಕೇವಲ ರಾಜಿ ಸಂಧಾನಕ್ಕೆ ಅಂಟಿಕೊಳ್ಳುವುದರಿಂದ ಪೊಲೀಸ್‌ ಇಲಾಖೆಗೆ ಗೊಂದಲವುಂಟಾಗುತ್ತಿದ್ದು, ಎಫ್‌ಐಆರ್‌ ದಾಖಲಿಸಿದರೆ ಅಗತ್ಯ ಕಾನೂನಿನಡಿಯಲ್ಲಿ ನ್ಯಾಯ ಪಡೆದುಕೊಳ್ಳಲು ಅನುಕೂಲವಾಗಲಿದೆ. ಮಾಸ್ಕ್ ಹಾಕದವರಿಗೆ ದಂಡ ಹಾಕುವ ಆದೇಶವನ್ನು ಸರ್ಕಾರ ಹೊರಡಿಸಿದ್ದು, ಇಲಾಖೆಯ ವತಿಯಿಂದ ಜನರಲ್ಲಿ ಜಾಗೃತಿ ಮೂಡಿಸಿ ಜತೆಗೆ ನಾವೇ ಖುದ್ದಾಗಿ ಮಾಸ್ಕ್ ವಿತರಿಸುತ್ತಿದ್ದೇವೆ. ಕೊರೊನಾ ನಿಯಂತ್ರಣಕ್ಕೆ ಎಸ್‌ಎಂಎಸ್‌ ಅಂದರೆ ಸ್ಯಾನಿಟೈಸರ್‌, ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಬಹುಮುಖ್ಯವಾಗಿದ್ದು, ಈ ನಿಟ್ಟಿಯಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ ಎಂದರು.

ಸಿಪಿಐ ದುರುಗಪ್ಪ ಮಾತನಾಡಿ, ಕಳೆದ ಆರು ತಿಂಗಳಿಂದ ಕೋವಿಡ್ ಸಂಕಷ್ಟದಲ್ಲಿ ಇಲಾಖೆ ಸಿಬ್ಬಂದಿ ಹಗಲಿರುಳೆನ್ನದೆ ಜನರಿಗೆ ಜಾಗೃತಿ ಮೂಡಿಸಿದ್ದು, ಇಲಾಖೆಯ 21 ಸಿಬ್ಬಂದಿಗೆ ಕೋವಿಡ್ ಪಾಸಿಟಿವ್‌ ಆಗಿದ್ದು, ಅದರಲ್ಲಿ ಒಬ್ಬ ಸಿಬ್ಬಂದಿ ಸಾವನ್ನಪ್ಪಿರುವುದು ದುರಾದೃಷ್ಟಕರ ಸಂಗತಿ ಎಂದರು.

ಪಿಎಸ್‌ಐ ಉಮೇಶ್‌ ಬಾಬು, ಬಿಳಿಚೋಡು ಪಿಎಸ್‌ಐ ಶ್ರೀಧರ್‌,ಎಎಸ್‌ಐ ಚಂದ್ರಶೇಖರ್‌, ಮಹೇಶ್‌, ವೆಂಕಟೇಶ ರೆಡ್ಡಿ, ಎಸ್‌ಸಿ, ಎಸ್ಟಿ ಸಮಾಜದ ಮುಖಂಡರು ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next