Advertisement

ಎಪ್ಪತ್ತೈದು ಕೆರೆಗಳ ಅಭಿವೃದ್ಧಿಗೆ ಕ್ರಮ; ಸಂಸದ ಎಸ್‌. ಮುನಿಸ್ವಾಮಿ

06:42 PM Jun 06, 2022 | Team Udayavani |

ಕೋಲಾರ: ಅಮೃತ ಸರೋವರ ಯೋಜನೆಯಡಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಅನುದಾನದಲ್ಲಿ ಜಿಲ್ಲೆಯಲ್ಲಿ 75 ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದ ಎಸ್‌. ಮುನಿಸ್ವಾಮಿ ತಿಳಿಸಿದರು.

Advertisement

ಜಿಲ್ಲಾಡಳಿತ, ಜಿಪಂ ಅರಣ್ಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ನಗರದ ಸ್ಯಾನಿಟೋರಿಯಂ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ಪರಿಸರಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗುವುದರಿಂದ ಸಂಸದರ ನಿಧಿಯಿಂದಲೂ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಲು ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದು ತಿಳಿಸಿದರು.

ಪಕ್ಷಿಗಳ ಕಲರವಕ್ಕೆ ಗಿಡ ನೆಡೋಣ: ಪ್ರತಿಯೊಬ್ಬರೂ ಕನಿಷ್ಠ ಒಂದೊಂದು ಗಿಡ ನೆಟ್ಟು ಪೋಷಿಸುವ ಸಂಕಲ್ಪ ಮಾಡೋಣ ಇದರಿಂದ ಪಕ್ಷಿಗಳ ಕಲರವ ಕೇಳಬಹುದು, ನೀಲಗಿರಿ ನಾಶಪಡಿಸುವ ಮೂಲಕ ಅಂತರ್ಜಲ ಅಭಿವೃದ್ಧಿಗೆ ಕೈಜೋಡಿಸೋಣ, ಪ್ರತಿಯೊಬ್ಬರೂ ಗಿಡ ನೆಡುವ ಪ್ರತಿಜ್ಞೆ ಮಾಡೋಣ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶಕ್ಕೆ ಕಾರಣವಾಗಿದೆ ಎಂದು ಟೀಕಿಸಿ, ಕಾಡು ನಾಶದಿಂದ ಕಾಡುಪ್ರಾಣಿಗಳು ನಾಡಿಗೆ ಬರುವಂತಾಗಿದೆ ಎಂದರು.

ವಿಧಾನಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಕಳೆದ 25 ವರ್ಷದಿಂದ ಬಂದ ಸರ್ಕಾರಗಳು ಅರಣ್ಯ ಇಲಾಖೆಗೆ ಅಗತ್ಯ ಅನುದಾನ ನೀಡಿಲ್ಲ, ಇದರಿಂದ ಗಿಡ ಮರ ಬೆಳೆಸಲು ಅಡ್ಡಿಯಾಗಿದ್ದು, ಇದರ ಕುರಿತು ಸದನದಲ್ಲಿ ಪ್ರಸ್ತಾಪ ಮಾಡುವುದಾಗಿ ತಿಳಿಸಿ, ನೀಲಗಿರಿ ನಾಶಕ್ಕೆ ಪ್ರತಿಯೊಬ್ಬರೂ ಕೈಜೋಡಿಸೋಣ, ಪರಿಸರಕ್ಕೆ ಪೂರಕವಾದ ಮರಗಳನ್ನು ಬೆಳೆಸೋಣ ಎಂದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಇ.ಶಿವಶಂಕರ್‌, ಅರಣ್ಯ ಭೂಮಿಯನ್ನು ರಕ್ಷಿಸುವ ಕೆಲಸ ಮಾಡಿದ್ದೇವೆ, ಉಚಿತವಾಗಿ ನರ್ಸರಿಗಳ ಮೂಲಕ ಗಿಡಗಳನ್ನು ನೀಡುವ ಮೂಲಕ ಅರಣ್ಯಾಭಿವೃದ್ಧಿಗೆ ಒತ್ತು ನೀಡಿದ್ದೇವೆ ಎಂದರು.

Advertisement

ಡಿಹೆಚ್‌ಒ ಡಾ.ಜಗದೀಶ್‌ ಮಾತನಾಡಿದರು. ಸಾಮಾಜಿಕ ಅರಣ್ಯ ಉಪಅರಣ್ಯ ಸಂರಕ್ಷಣಾಧಿಕಾರಿ ಸಿ.ವೆಂಕಟೇಶ್‌ ಅರಣ್ಯಗಳ ಅಭಿವೃದ್ಧಿಗೆ ಇಲಾಖೆ ಕೈಗೊಂಡಿರುವ ಕ್ರಮಗಳು, ನರ್ಸರಿಗಳ ಮೂಲಕ ಗಿಡಮರಗಳ ವಿತರಣೆ ಮತ್ತಿರರ ಅಂಶಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಪರಿಸರ ದಿನದ ಅಂಗವಾಗಿ ನಡೆದ ಚಿತ್ರಕಲೆ ಸ್ವರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ತಾಲೂಕಿನ ವಿವಿಧೆಡೆ ಮನೆಗಳಿಗೆ ಬಂದ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ಪ್ರೇಮಿ ನಾಗರಾಜ್‌ರನ್ನು ಪುರಸ್ಕರಿಸಲಾಯಿತು.

ನಗರಸಭಾ ಸದಸ್ಯರಾದ ಮುರಳಿಗೌಡ, ಪ್ರವೀಣ್‌ಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್‌, ಎಸಿಎಫ್‌ ಸಹನ್‌ ಕುಮಾರ್‌, ವಲಯ ಅರಣ್ಯಾಧಿಕಾರಿ
ವಾಸುದೇವಮೂರ್ತಿ, ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ಬಿ.ಮಂಜುನಾಥ್‌, ಆನಂದ್‌, ಸಂತೋಷ್‌ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next