ಮಣಿಪಾಲ: ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ದಾವಣಗೆರೆ ಮೂಲದ ಮಹಿಳೆಗೆ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಸಾಧನದೊಂದಿಗೆ ಯಶಸ್ವಿಯಾಗಿ ಚಿಕಿತ್ಸೆಯನ್ನು ಮಣಿಪಾಲದ ಕಸ್ತೂರ್ಬಾ ವೈದ್ಯರ ತಂಡ ನೀಡಿದ್ದು, ಕರಾವಳಿ ಕರ್ನಾಟಕದಲ್ಲಿ ಮೊದಲನೇ ಸಾಧನೆ ಇದಾಗಿದೆ.
ಮಹಿಳೆ 12 ವರ್ಷಗಳಿಂದ ನರ ದೌರ್ಬಲ್ಯದಿಂದ ಬಳಲುತ್ತಿದ್ದರು. ಕೈಕಾಲುಗಳಲ್ಲಿ ನಡುಕ, ಬಿಗಿತ ಮತ್ತು ನಿಧಾನಗತಿ ಕಾರಣದಿಂದ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಸಮಸ್ಯೆಯಾಗಿತ್ತು. ನರಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ಗಿರೀಶ್ ಮೆನನ್, ನರವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ| ಅಪರ್ಣಾ ಪೈ, ನರವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ| ದುಷ್ಯಂತ್ ಬಾಬು ಮತ್ತು ನರಶಸ್ತ್ರ ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕ ಡಾ| ಅಜಯ್ ಹೆಗ್ಡೆ ಅವರ ತಂಡ ಸಮಗ್ರ ಮೌಲ್ಯಮಾಪನ ನಡೆಸಿ, ರೋಗಿಯನ್ನು ಹತ್ತು ಗಂಟೆಗಳ ಶಸ್ತ್ರಚಿಕಿತ್ಸೆಗೆ ಒಳಪಡಿಸಿತು.
ನಿರಂತರ ಇಂಟ್ರಾ-ಆಪರೇಟಿವ್ ಮೇಲ್ವಿಚಾರಣೆಯಲ್ಲಿ ರೋಗಿಯನ್ನು ಎಚ್ಚರದಲ್ಲಿರುವಂತೆ ನೋಡಿಕೊಂಡು, ಮೆದುಳಿನ ಭಾಗದ ಸೂಕ್ಷ್ಮಾತಿಸೂಕ್ಷ್ಮ ವಲಯಗಳಲ್ಲಿ ಬ್ರೈನ್ಸೆನ್ಸ್ ತಂತ್ರಜ್ಞಾನದೊಂದಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆಯ 3 ವಾರಗಳಲ್ಲಿ ರೋಗಿಯ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ
ಯೊಂದಿಗೆ ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ. ಕಳೆದ 5-6 ವರ್ಷಗಳಿಂದ ಸೇವಿಸುತ್ತಿದ್ದ ಔಷಧಗಳನ್ನು ಶೇ. 60ರಷ್ಟು ಕಡಿಮೆ ಮಾಡಲು ಮತ್ತು ದೈನಂದಿನ ಚಟು ವಟಿಕೆಗಳನ್ನು ನಿರ್ವಹಿಸಲು ಮಹಿಳೆ ಈಗ ಶಕ್ತಳಾಗಿದ್ದಾರೆ.
ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ, ಅಪರೂಪದ ಮತ್ತು ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿ ಯಾಗಿ ಮಾಡಿದ ವೈದ್ಯರ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದರು.
Related Articles
ಮಾಹೆ ಮಣಿಪಾಲದ ಬೋಧನ ಆಸ್ಪತ್ರೆಯ ಸಿಒಒ ಡಾ| ಆನಂದ್ ವೇಣುಗೋಪಾಲ್ ಮಾತನಾಡಿ, ಬೆಂಗಳೂರು, ಮುಂಬಯಿಯಂಥ ಮಹಾ ನಗರಗಳಲ್ಲಿ ಮಾತ್ರ ನಡೆಸ ಲಾಗುತ್ತಿದ್ದ ಈ ರೀತಿಯ ಸಂಕೀರ್ಣ ಪ್ರಕ್ರಿಯೆ ಈಗ ಕಡಿಮೆ ವೆಚ್ಚದಲ್ಲಿ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದರು.