Advertisement

BMTC ಬಸ್‌ ಕಂಡಕ್ಟರ್‌ಗೆ ಕಲ್ಲಿನಿಂದ ಹೊಡೆದ ಆರೋಪಿ ಸೆರೆ, ಕೇಸ್‌ ದಾಖಲು

03:15 PM Oct 25, 2024 | Team Udayavani |

ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಕರ್ತವ್ಯನಿರತ ಬಿಎಂಟಿಸಿ ಬಸ್‌ ನಿರ್ವಾಹಕನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದ ಆರೋಪಿಯನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ನಾಗರಬಾವಿ ನಿವಾಸಿ ಹೇಮಂತ್‌ ಬಂಧಿತ. ಬಸ್‌ ನಿರ್ವಾಹಕ ಸಂಗಪ್ಪ ಚಿತ್ತಲಗಿ ಹಲ್ಲೆಗೊಳಾಗಿದ್ದು, ಈ ಸಂಬಂಧ ಚಾಲಕ ಬಸವರಾಜ್‌ ನೀಡಿದ ದೂರಿನ ಮೇರೆಗೆ ಹೇಮಂತ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಹೇಮಂತ್‌ ಬಿಕಾಂ ಪದವೀಧರನಾಗಿದ್ದು, ಮಾರತ್‌ಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಎಲೆಕ್ಟ್ರಾನಿಕ್‌ ಸಿಟಿ ಬಸ್‌ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಗಪ್ಪ ಅ.18ರ ಟಿನ್‌ ಫ್ಯಾಕ್ಟರಿ ಬಳಿ ಬಸ್‌ ನಿಲ್ಲಿಸಿ ಚಾಲಕನೊಂದಿಗೆ ಬಸ್‌ ನಲ್ಲಿ ಊಟ ಮಾಡುತ್ತಿರುವ ಈ ವೇಳೆ ಏಕಾಏಕಿ ಬಸ್‌ ಹತ್ತಿದ್ದ ಆರೋಪಿ ಕಲ್ಲಿನಿಂದ ಕಂಡಕ್ಟರ್‌ ತಲೆಗೆ ಹೊಡೆದು ಪರಾರಿಯಾಗಿದ್ದ.

ಕೂಡಲೇ ಆತನನ್ನು ಹಿಂಬಾಲಿಸಿದ್ದ ನಿರ್ವಾಹಕ ಮತ್ತು ಚಾಲಕ ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಿಚಾರಣೆ ನಡೆಸಿದಾಗ ಕೆಲ ದಿನಗಳ ಹಿಂದೆ ಪಾಸ್‌ ತೋರಿಸುವ ವಿಚಾರಕ್ಕಾಗಿ ಕಂಡಕ್ಟರ್‌ ಜತೆ ಮಾತಿನ ಚಕಮಕಿ ನಡೆದಿದ್ದರಿಂದ ಕೋಪಗೊಂಡು ಹಲ್ಲೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಆರೋಪಿ ತಂದೆಯೂ ಕೂಡ ಬಿಎಂಟಿಸಿ ನಿವೃತ್ತ ಬಸ್‌ ಕಂಡಕ್ಟರ್‌ ಆಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next