ಗಂಗಾವತಿ: ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು ತಡರಾತ್ರಿಯವರೆಗೆ ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಎಸಿಬಿ ಡಿವೈಎಸ್ ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದ ಸುಮಾರು 10 ಕ್ಕು ಹೆಚ್ಚು ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡು ದಾಖಲೆ ಪರಿಶೀಲನೆ ನಡೆಸಿದರು.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕೆಲಸ ವಿಳಂಬ ಹಾಗೂ ಲಂಚಕ್ಕಾಗಿ ಕೆಲಸ ವಿಳಂಬ ಮಾಡಲಾಗುತ್ತಿದೆ ಎಂದು ಹಲವು ದೂರುಗಳ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಗುರುವಾರ ಮಧ್ಯಾಹ್ನ 3.30 ಗಂಟೆಯಿಂದ ದಾಳಿ ನಡೆದಿದ್ದು ನೋಂದಣಿ ಸೇರಿ ವಿವಿಧ ಕೆಲಸದ ಮೇಲೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ ಸಾರ್ವಜನಿಕರನ್ನು ಬಾಗಿಲು ಮುಚ್ಚಿ ತಡರಾತ್ರಿವರೆಗೂ ಹೊರಗೆ ಬಿಡದೇ ಅಧಿಕಾರಿಗಳು ಸತಾಯಿಸಿದ ಪ್ರಸಂಗವೂ ಜರುಗಿದೆ. ತಡರಾತ್ರಿ ವರೆಗೆ ದಾಳಿ ನಡೆಸಿದ ಅಧಿಕಾರಿಗಳು ಪತ್ರಿಕಾ ಮಾಧ್ಯಮ ದವರಿಗೆ ಸೂಕ್ತ ಮಾಹಿತಿ ನೀಡದೇ ಇರುವುದು ಕಂಡುಬಂದಿದೆ.
ದಾಖಲಾಗದ ದೂರು: ಸುಮಾರು10 ತಾಸಿಗೂ ಅಧಿಕ ಸಮಯದಲ್ಲಿ ಇಲ್ಲಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ತನಿಖೆ ಮಾಡಿದ ಎಸಿಬಿ ಅಧಿಕಾರಿಗಳು ಯಾವುದೇ ದೂರು ದಾಖಲಿಸಿಲ್ಲ ಪಂಚನಾಮೆ ಮಾಡಿ ಕೈತೊಳೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು ದೂರು ದಾಖಿಸಿದ ಕುರಿತು ನಂತರ ಮಾಹಿತಿ ನೀಡಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ