Advertisement

ಅಧಿಕಾರ ದುರುಪಯೋಗ: ಎಫ್ಐಆರ್‌

01:36 PM Oct 18, 2021 | Team Udayavani |

ಹಾಸನ: ನಗರದ ಪ್ರತಿಷ್ಠಿತ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ( ಎಂಟಿಇಎಸ್‌) ಅಧ್ಯಕ್ಷ ಅಶೋಕ್‌ ಹಾರನಹಳ್ಳಿ, ಕಾರ್ಯದರ್ಶಿ ಆರ್‌.ಟಿ.ದ್ಯಾವೇಗೌಡ ಸೇರಿದಂತೆ ಸಂಸ್ಥೆಯ 6 ಜನರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಸಂಸ್ಥೆಯಲ್ಲಿ ಅವ್ಯವಹಾರ, ಅಧಿಕಾರ ದುರು ಪಯೋಗ ನಡೆದಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಯೊಂದರ ಜಿಲ್ಲಾಧ್ಯಕ್ಷ ಜಾನೇಕೆರೆ ಹೇಮಂತ್‌ ಅವರ ದೂರು ಆಧರಿಸಿ ನ್ಯಾಯಾಲಯದ ನಿರ್ದೇಶನದಂತೆ ಎಂಟಿಇಎಸ್‌ ಅಧ್ಯಕ್ಷ, ಪದಾಧಿಕಾರಿಗಳ ವಿರುದ್ಧ ಅವ್ಯವಹಾರದ ಆರೋಪದ ಮೇಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಸಂಸ್ಥೆಯ ಸದಸ್ಯರಿಗೆ ಮುಜುಗರವನ್ನುಂಟು ಮಾಡಿದೆ.

Advertisement

ಪ್ರಕರಣದ ಹಿನ್ನಲೆ: ಮಲೆನಾಡು ಎಂಜಿನಿಯರಿಂಗ್‌ ಕಾಲೇಜು, ಎವಿಕೆ ಪದವಿ ಪೂರ್ವ, ಪ್ರಥಮ ದರ್ಜೆ ಕಾಲೇಜು, ಎಂ. ಕೃಷ್ಣ ಕಾನೂನು ಕಾಲೇಜು, ಹಾರನಹಳ್ಳಿ ರಾಮಸ್ವಾಮಿ ಉನ್ನತ ಶಿಕ್ಷಣ ಸಂಸ್ಥೆಗಳನ್ನೊಳಗೊಂಡ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಹಾಸನದ ಬಸ್‌ ನಿಲ್ದಾಣದ ಬಳಿ ( ಈಗಿನ ನಗರ ಬಸ್‌ ನಿಲ್ದಾಣದ ಎದರು) ವಿದ್ಯಾ ಸಂಸ್ಥೆಗೆ ಸುಮಾರು 3 ಎಕರೆ ಭೂಮಿ ಮಂಜೂರಾಗಿತ್ತು.

ಅಲ್ಲಿ ಎವಿಕೆ ಕಾಲೇಜು ನಿರ್ಮಾಣದೊಂದಿಗೆ ವಿದ್ಯಾಭವನ್‌ ಬಿಲ್ಡಿಂಗ್‌ ನಿರ್ಮಾಣವಾಗಿದ್ದು, ಅದರಲ್ಲಿ ಹತ್ತಾರು ವಾಣಿಜ್ಯ ಮಳಿಗೆಗಳು ನಿರ್ಮಾಣವಾಗಿವೆ.ಅವುಗಳನ್ನು ಎಂಟಿಇಎಸ್‌ ಬಾಡಿಗೆಗೆ ನೀಡಿದೆ. ವಿದ್ಯಾಭವನದ ಒಂದು ಭಾಗವನ್ನು (ಹೇಮಾವತಿ ಪ್ರತಿಮೆ ಕಡೆ) ಎಂಟಿಇಎಸ್‌ಗೆ ಗುರಪ್ಪ ಅವರು ಅಧ್ಯಕ್ಷ, ಹಾರನಹಳ್ಳಿ ರಾಮಸ್ವಾಮಿ ಅವರು ಕಾರ್ಯದರ್ಶಿಯಾಗಿದ್ದಾಗ ಅರವಿಂದ್‌ ಉದ್ಯೋಗ್‌ ಎಂಬ ಸಂಸ್ಥೆಗೆ 40 ವರ್ಷಗಳ ದೀರ್ಘಾವಧಿಗೆ ಗುತ್ತಿಗೆ ನೀಡಲಾಗಿತ್ತು. ಅದರ ಅವಧಿ 2014ಕ್ಕೆ ಮುಗಿದಿತ್ತು.

ಅರವಿಂದ್‌ ಉದ್ಯೋಗ್‌ ನೀಡಿದ್ದ ಗುತ್ತಿಗೆಯನ್ನು 2014ರ ನಂತರವೂ ಮತ್ತೆ ದೀರ್ಘಾವಧಿಗೆ ಮುಂದುವರಿಸಬೇಕು ಎಂದು ಎಂಬ ಬೇಡಿಕೆ ಬಂದಾಗ ಎಂಟಿಇಎಸ್‌ ನಿರಾಕರಿಸಿತ್ತು. ಆನಂತರ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು. ಕೋರ್ಟ್‌ನಲ್ಲಿ ಎಂಟಿಇಎಸ್‌ ಪರವಾಗಿ ತೀರ್ಪು ಬಂದಿತ್ತು ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆ ಆಧರಿಸಿ ಎಂಟಿಇಎಸ್‌ನಲ್ಲಿ ಅವ್ಯವಹಾರ, ಅಧಿಕಾರದ ದುರುಪಯೋಗ ನಡೆದಿದೆ ಎಂದು ಹಿಂದೂ ಸಂಘಟನೆಯೊಂದರ ಜಿಲ್ಲಾಧ್ಯಕ್ಷ ಜಾನೇಕೆರೆ ಹೇಮಂತ್‌ ಕೋರ್ಟ್‌ ಮೆಟ್ಟಿಲೇರಿದ್ದರು. ದೂರಿನ ವಿಚಾರಣೆ ಕೈಗೆತ್ತಿಕೊಂಡ ಹಾಸನ 4ನೇ ಹೆಚ್ಚುವರಿ ನ್ಯಾಯಾಲಯವು ತನಿಖೆ ನಡೆಸಬೇಕೆಂದು ಪೊಲೀಸರಿಗೆ ನಿರ್ದೇಶನ ನೀಡಿದೆ.

ಇದರನ್ವಯ ಹಾಸನ ಕೆ.ಆರ್‌.ಪುರಂ ಬಡಾವಣೆ ಪೊಲೀಸ್‌ ಇನ್‌ ಸ್ಪೆಕ್ಟರ್‌ ಐಪಿಸಿ 420, 506 ಮತ್ತಿತರ ಸೆಕ್ಷನ್‌ಗಳನ್ವ ಯ ಎಂಟಿಇಸ್‌ ಅಧ¤ಕ್ಷ ಅಶೋಕ್‌ ಹಾರನಹಳ್ಳಿ, ಕಾರ್ಯದರ್ಶಿ ಆರ್‌.ಟಿ.ದ್ಯಾವೇಗೌಡ, ಉಪಾಧ್ಯಕ್ಷ ಚೌಡುವಳ್ಳಿ ಪುಟ್ಟರಾಜು ಸೇರಿ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

Advertisement

ಇದನ್ನೂ ಓದಿ;- ಕನ್ನಡದ ಹಿರಿಯ ನಟ ಶಂಕರ್ ರಾವ್ ವಿಧಿವಶ

ಅಶೋಕ್‌ ಘನತೆಗೆ ಧಕ್ಕೆ ತರುವ ಹುನ್ನಾರ

ರಾಜ್ಯ ಸರ್ಕಾರದ ಮಾಜಿ ಅಡ್ವೋಕೇಟ್‌ ಜನರಲ್‌ ಅಗಿದ್ದ ಅಶೋಕ್‌ ಹಾರನಹಳ್ಳಿ ಅವರು ಇದೀಗ ರಾಜ್ಯ ಬ್ರಾಹ್ಮಣರ ಸಂಘದ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಮುಂದೆ ನಡೆಯಲಿರುವ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಶೋಕ್‌ ಅವರಿಗೆ ಮುಜುಗರವನ್ನುಂಟು ಮಾಡುವ ದುರುದ್ಧೇಶದಿಂದ ಈ ಬೆಳವಣಿಗೆ ನಡೆದಿದೆ ಎಂದು ಅಧ್ಯಕ್ಷರ ಪರವಾಗಿರುವ ಎಂಟಿಇಎಸ್‌ನ ಕೆಲ ನಿರ್ದೇಶಕರ ಆರೋಪವಾಗಿದೆ.

ಅರವಿಂದ್‌ ಉದ್ಯೋಗ್‌ ಸಂಸ್ಥೆಗೆ ವಿದ್ಯಾಭವನದ ಒಂದು ಭಾಗವನ್ನು ದೀರ್ಘಾವಧಿ ಗುತ್ತಿಗೆ ನೀಡುವ ಸಂದರ್ಭದಲ್ಲಿ ಈಗಿನ ಪದಾಧಿಕಾರಿಗಳು ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರೇ ಆಗಿರಲಿಲ್ಲ. ಹಾಗಿದ್ದೂ ಅದಕ್ಕೆ ಹೇಗೆ ಹೊಣೆಗಾರರನ್ನಾಗಿ ಮಾಡಲು ಸಾಧ್ಯ ಎಂದೂ ಪ್ರಶ್ನಿಸುವ ಸದಸ್ಯರು ಪ್ರಕರಣ ದಾಖಲಾಗಿರುವುದರ ಹಿಂದೆ ವೈಯಕ್ತಿಕ ಹಿತಾಸಕ್ತಿ, ಸೇಡಿನ ಮನೋಭಾವ ಇದೆ ಎಂದೂ ದೂರುತ್ತಾರೆ.

ಸಾರ್ವಜನಿಕ ದೇಣಿಗೆ ಪಡೆದ ಸಂಸ್ಥೆ ದೂರುದಾರ ಜಾನೇಕೆರೆ ಹೇಮಂತ್‌ ಹೇಳುವಂತೆ ಎಂಟಿಇಎಸ್‌ಗೆ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಸಾವಿರಾರು ಮಂದಿ ದೇಣಿಗೆ ನೀಡಿದ್ದಾರೆ. ಸರ್ಕಾರವೂ ಕಟ್ಟಡಗಳ ನಿರ್ಮಾಣಕ್ಕೆ ಭೂಮಿ ನೀಡಿದೆ. ಹಾಗಾಗಿ ಸಾರ್ವಜನಿಕರ ಹಿತಾಸಕ್ತಿ ಕಾಪಾಡಬೇಕಾದ ಸಂಸ್ಥೆಯಲ್ಲಿ ಅಕ್ರಮಗಳು ನಡೆದಿರುವಾಗ ಪ್ರಕರಣ ದಾಖಲಿಸುವುದು ಕಾನೂನು ಬದ್ದವಾಗಿದೆ. ಹಾಗಾಗಿ ನಾನು ಪ್ರಕರಣ ದಾಖಲು ಮಾಡಿರುವುದಾಗಿ ಸ್ಪಷ್ಟಪಡಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next