Advertisement

ಅಬಚೂರಿನ ಪೋಸ್ಟಾಫೀಸು ಕೃತಿ ಸಂವಾದ

05:39 PM Jun 28, 2018 | |

ಶಿರಸಿ: ಅಮಾನುಷ ವಸ್ತು ನಿಷ್ಠೆ ದಾಟಲು ನಗುವೊಂದೇ ಆಧಾರ ಎಂಬುದನ್ನು ತೇಜಸ್ವಿಯವರ ಹಲವು ಕೃತಿಗಳಲ್ಲಿ ಕಾಣಬಹುದಾಗಿದೆ. ಸಹಜತೆ ಮತ್ತು ಕೌತುಕದ ಮೂಲಕ ಹೊಸ ಜಗತ್ತನ್ನು ಅವರು ತೆರೆದಿಡುತ್ತಾರೆ ಎಂದು ಪ್ರಸಿದ್ಧ ಸಾಹಿತಿ ಶ್ರೀಧರ ಬಳಗಾರ ಹೇಳಿದರು. ನಗರದ ನೆಮ್ಮದಿ ಕುಟೀರದಲ್ಲಿ ನಡೆದ ತೇಜಸ್ವಿಯವರ ಅಬಚೂರಿನ ಪೋಸ್ಟಾಫೀಸು ಕೃತಿ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

Advertisement

ಈ ಕೃತಿ ಮೂಲಕ ತೇಜಸ್ವಿಯವರು ಅಸಂಗತ ಜಗತ್ತನ್ನು ಉತ್ತಮ ಪರಿಕಲ್ಪನೆ ಮೂಲಕ ಓದುಗರಿಗೆ ನೀಡಿದ್ದಾರೆ. ಚರಿತ್ರೆಯ ಓಟವನ್ನು ಹುಲು ಮಾನವರಾಗಿ ನಾವು ಅಸಹಾಯಕತೆಯಿಂದ ನೋಡಬೇಕಾಗುತ್ತದೆ. ಮನುಷ್ಯನ ಎಲ್ಲ ರೀತಿಯ ಹೋರಾಟ, ಇಚ್ಛೆ, ಆಯ್ಕೆಗಳನ್ನು ಯಕಶ್ಚಿತ್‌ ಎನ್ನುವಂತೆ ಚರಿತ್ರೆ ನೋಡುತ್ತದೆ. ಹೀಗಾಗಿ, ತೇಜಸ್ವಿ ಅವರಿಗೆ ಚರಿತ್ರೆ ಎನ್ನುವುದು ಅಮಾನುಷವಾದ, ವಸ್ತು ನಿಷ್ಠವಾದ ಓಟವಾಗಿ ಕಾಣುತ್ತದೆ. ಇದೇ ರೀತಿ, ಮನುಷ್ಯನ ದುಃಖ, ಸುಖ, ಹುಟ್ಟು, ಸಾವು ಎಲ್ಲವನ್ನೂ ಒಂದೇ ಬಗೆಯಾಗಿ ನೋಡುವ ಪ್ರಕೃತಿ ಕೂಡ ಅವರಿಗೆ ನಿರ್ದಯಿಯಾಗಿ ತೋರುತ್ತದೆ. ಗ್ರಾಮ ಭಾರತದ ಎಲ್ಲ ತತ್ವಗಳು, ದೇಸಿ ಜ್ಞಾನ ಸರ್ವನಾಶ ಮಾಡುವ ಆಧುನಿಕತೆ ಸಹ ಅವರಿಗೆ ಅಮಾನುಷತೆಯ ಕಲ್ಪನೆ ಕೊಡುತ್ತದೆ ಎಂದರು.

ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನವು ಕನ್ನಡಕ್ಕೆ ಹೊಸತನ ಕಟ್ಟಿಕೊಡುವ ಪ್ರಯತ್ನವಾಗಿದೆ. ಇದನ್ನು ತೇಜಸ್ವಿ ಅವರು ಪುಸ್ತಕದ ಮುನ್ನುಡಿಯಲ್ಲಿ ಸಹ ಹೇಳಿಕೊಂಡಿದ್ದಾರೆ. ಇದಕ್ಕಿಂತ ಹಿಂದಿನ ಕೃತಿಗಳು ಆತ್ಮಕೇಂದ್ರಿತ, ವ್ಯಕ್ತಿ ಕೇಂದ್ರಿತವಾದ ಅಸ್ತಿತ್ವವಾದ ಇಟ್ಟುಕೊಂಡಿದ್ದರೆ, ಈ ಕೃತಿಯು ಭಿನ್ನ ದಾರಿ ಹಿಡಿದು, ಸಮಾಜ ನಿಷ್ಠ, ಸಮುದಾಯ ಕೇಂದ್ರಿತವಾಗಿ ಸಾಗಿದೆ. ನವ್ಯವು ಅನೇಕ ಪ್ರತಿಭಾವಂತ ಸಾಹಿತಿಗಳನ್ನು ಕೊಟ್ಟಿದ್ದರೂ, ನಂತರದ ದಿನಗಳಲ್ಲಿ ಇದು ಬಿಡಿಸಲಾಗದ ರಾಹುವಾಗಿ ಕಾಡಿತು. ಕನ್ನಡಕ್ಕೆ ಅಂಟಿದ್ದ ಈ ರಾಹುವನ್ನು ಬಿಡಿಸಿದ್ದು ಅಬಚೂರಿನ ಪೋಸ್ಟಾಫೀಸು ಎಂದರು. ಪ್ರಮುಖರಾದ ಪಾಂಡುರಂಗ ಹೆಗಡೆ, ವಿ.ಪಿ. ಹೆಗಡೆ ವೈಶಾಲಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next