Advertisement

ಆಧಾರ್ ಕಡ್ಡಾಯಗೊಳಿಸೋದು ದೇಶದ ಭದ್ರತೆಗೆ ಅಪಾಯ: ಸ್ವಾಮಿ

12:46 PM Oct 31, 2017 | Sharanya Alva |

ನವದೆಹಲಿ:ಆಧಾರ್ ಅನ್ನು ಕಡ್ಡಾಯಗೊಳಿಸುವುದು ದೇಶದ ಭದ್ರತೆಗೆ ದೊಡ್ಡ ಅಪಾಯ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮಂಗಳವಾರ ತಿಳಿಸಿದ್ದು, ಸುಪ್ರೀಂಕೋರ್ಟ್ ಸಂವಿಧಾನ ಪೀಠದಲ್ಲಿ ನಡೆಯಲಿರುವ ವಿಚಾರಣೆಯಲ್ಲಿ ಆಧಾರ್ ಕಡ್ಡಾಯ ಎಂಬುದನ್ನು ರದ್ದುಪಡಿಸುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

Advertisement

ಆಧಾರ್ ಅನ್ನು ಕಡ್ಡಾಯಗೊಳಿಸುವುದರಿಂದ ದೇಶದ ಭದ್ರತೆಗೆ ಯಾವ ರೀತಿಯಲ್ಲಿ ದೊಡ್ಡ ಮಟ್ಟದ ಅಪಾಯ ತಂದೊಡ್ಡಲಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ದೀರ್ಘ ವಿವರಣೆ ನೀಡುವುದಾಗಿ ಸ್ವಾಮಿ ಹೇಳಿದ್ದಾರೆ.

ಸರ್ಕಾರದ ವಿವಿಧ ಸೇವೆಗಳು ಮತ್ತು ಕಲ್ಯಾಣ ಕಾರ್ಯಕ್ರಮ ಯೋಜನೆಗಳನ್ನು ಪಡೆಯಲು ಆಧಾರ್‌ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಎಲ್ಲ ದೂರುಗಳ ವಿಚಾರಣೆಗಾಗಿ ಸುಪ್ರೀಂಕೋರ್ಟ್‌ ಸಂವಿಧಾನ ಪೀಠವನ್ನು ರಚಿಸಿದೆ. ನವೆಂಬರ್‌ ಕೊನೆಯ ವಾರದಂದು ಈ ಪೀಠ ವಿಚಾರಣೆ ಆರಂಭಿಸಲಿದೆ ಎಂದು ಮುಖ್ಯ ನ್ಯಾ.ದೀಪಕ್‌ ಮಿಶ್ರಾ, ನ್ಯಾ ಎ.ಎಂ.ಖನ್ವಿಲ್ಕರ್‌ ಮತ್ತು ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ. ಇದರಿಂದ ಆಧಾರ್‌ಗೆ ಸಂಬಂಧಿಸಿದ ಎಲ್ಲ ದೂರುಗಳನ್ನೂ ಒಂದೇ ವೇದಿಕೆಯಲ್ಲಿ ವಿಚಾರಣೆ ನಡೆಸಲು ಸಾಧ್ಯವಾಗಲಿದೆ.

ಈ ಹಿಂದೆ ಖಾಸಗಿತನ ಕುರಿತ ಅರ್ಜಿಯ ವಿಚಾರಣೆ ನಡೆಸಿದ್ದ ಒಂಬತ್ತು ನ್ಯಾಯಮೂರ್ತಿಗಳಿದ್ದ ಪೀಠವು, ಸಂವಿಧಾನದ ಪ್ರಕಾರ ಖಾಸಗಿತನದ ಹಕ್ಕು ಮೂಲಭೂತ ಹಕ್ಕಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಖಾಸಗಿತನದ ಹಕ್ಕನ್ನು ಆಧಾರ್‌ ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಹಲವರು ಈಗಾಗಲೇ ದೂರು ಸಲ್ಲಿಸಿದ್ದಾರೆ. ಇನ್ನೊಂದೆಡೆ, ಮೊಬೈಲ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಲಿಂಕ್‌ ಮಾಡುವುದಕ್ಕೆ ಸಂಬಂಧಿಸಿದಂತೆ ಡಿ. 31 ಕೊನೆಯ ದಿನವಾಗಿದ್ದು, ಆಧಾರ್‌ ಇಲ್ಲದವರಿಗೆ ಮುಂದಿನ ವರ್ಷದ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ದಿನಾಂಕದಲ್ಲಿ ಯಾವುದೇ ಬದಲಿಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next