ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕುಕ್ಕಾಜೆ ನಿವಾಸಿ ಸವಾದ್ (35) ಎಂಬವರ ಮೃತದೇಹ ಚಾರ್ಮಾಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿಗೆ ಕಾರಣವೇನು ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.
ಸವಾದ್ ಕಳೆದ ಸುಮಾರು 10 ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ. ಈತ ಗಾಂಜಾ ವ್ಯಸನಿಯಾಗಿದ್ದು, ಈ ಹಿಂದೆಯೂ ಕೆಲವು ಬಾರಿ ನಾಪತ್ತೆಯಾಗಿ ಹಲವು ದಿನಗಳ ಬಳಿಕ ಮನೆಗೆ ವಾಪಾಸಾಗುತ್ತಿದ್ದ. ಆದ್ದರಿಂದ ಈ ಬಾರಿಯೂ ಅದೇ ರೀತಿ ಆಗಿರಬಹುದು ಎಂದು ಮನೆಯವರು ಅಂದು ಕೊಂಡಿದ್ದರು.
ಆದರೆ ಆತನೊಂದಿಗೆ ಇರುತ್ತಿದ್ದ ಮಾರಿಪಳ್ಳದ ವ್ಯಕ್ತಿಯೊಬ್ಬ ಸವಾದ್ನ ಅಣ್ಣನಿಗೆ ನಿನ್ನ ತಮ್ಮ ಚಾರ್ಮಾಡಿಯಲ್ಲಿ ಕೊಲೆಯಾಗಿದ್ದಾನೆ ಎಂದು ತಿಳಿಸಿದ್ದಾನೆ. ಈ ಬಗ್ಗೆ ವಿಚಾರಿಸಿದಾಗ ಚಾರ್ಮಾಡಿಯಲ್ಲಿ ಮೃತದೇಹವೊಂದು ಪತ್ತೆಯಾಗಿರುವ ಬಗ್ಗೆ ಮನೆಯವರಿಗೆ ಮಾಹಿತಿ ಲಭ್ಯವಾಗಿದೆ. ಮೃತದೇಹ ಪತ್ತೆಯಾದ ಸ್ಥಳದ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲೆಗೆ ಸೇರಿದೆ. ಅಲ್ಲಿನ ಬಣಕಲ್ ಠಾಣೆಗೆ ತೆರಳಿ ವಿಚಾರಿಸಿದ್ದು, ಮೃತದೇಹದ ಮೈಮೇಲಿನ ಬಟ್ಟೆ ಮತ್ತು ಕೈಯಲ್ಲಿರುವ ನೂಲನ್ನು ಆಧರಿಸಿ ಅದು ಸವಾದ್ನದ್ದೇ ಮೃತದೇಹ ಎಂದು ಅಭಿಪ್ರಾಯಪಟ್ಟಿದ್ದಾರೆ. ಸವಾದ್ನೊಂದಿಗೆ ಇದ್ದ ಇತರ ಮೂವರು ಆತನನ್ನು ಕರೆದು ಕೊಂಡು ಹೋಗಿ ಕೊಲೆ ಮಾಡಿ ಬಿಸಾಕಿರಬಹುದು ಎಂದು ಶಂಕೆ ವ್ಯಕವಾಗಿದೆ.
ಮೃತದೇಹವನ್ನು ಚಿಕ್ಕಮಗಳೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ಇರಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
Related Articles
ಅಸಹಜ ಸಾವು ಪ್ರಕರಣ ದಾಖಲು:
ಚಾರ್ಮಡಿಯ ಬಣಕಲ್ ವ್ಯಾಪ್ತಿಯಲ್ಲಿ ಅಪರಿಚಿತ ಮೃತದೇಹವೊಂದು ಪತ್ತೆಯಾಗಿತ್ತು. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲು ಮಾಡಲಾಗಿದೆ. ಈ ನಡುವೆ ಮೃತ ವ್ಯಕ್ತಿಯ ಮನೆಯವರು ಬಂದು ಮೃತದೇಹವನ್ನು ನೋಡಿದ್ದು, ಶೇ.90ರಷ್ಟು ಹೋಲಿಕೆ ಇದೆ ಎಂದು ತಿಳಿಸಿದ್ದಾರೆ. ಶನಿವಾರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಶೇ.100 ರಷ್ಟು ಹೋಲಿಕೆಯಾಗದಿದ್ದರೆ ಡಿಎನ್ಎ ಟೆಸ್ಟ್ ನಡೆಸಿ, ಅವನದ್ದೇ ಆಗಿದ್ದರೆ ಎಫ್ಐಆರ್ ದಾಖಲಿಸಲಾಗುವುದು ಎಂದು ಬಣಕಲ್ ಠಾಣಾ ಪೊಲೀಸ್ ನಿರೀಕ್ಷಕರು ಉದಯವಾಣಿಗೆ ತಿಳಿಸಿದ್ದಾರೆ.
ಗಾಂಜಾ ಹಾವಳಿ ವ್ಯಾಪಕ:
ಕುಕ್ಕಾಜೆ ಸಹಿತ ಗ್ರಾಮಾಂತರ ಭಾಗದಲ್ಲಿ ಗಾಂಜಾ ಹಾವಳಿ ವ್ಯಾಪಕವಾಗಿದ್ದು, ಯುವಜನತೆ ಅದಕ್ಕೆ ಬಲಿ ಬೀಳುತ್ತಿದ್ದಾರೆ. ಸವಾದ್ ಸಾವಿಗೂ ಗಾಂಜಾ ಪ್ರಕರಣವೇ ಕಾರಣವಾಗಿರಬಹುದು. ಕೇರಳ ಗಡಿ ಭಾಗವಾಗಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಗಾಂಜಾ ಪೂರೈಕೆಯಾಗುತ್ತಿದೆ. ಪೊಲೀಸರು ಹಾಗೂ ಸಂಬಂಧ ಪಟ್ಟ ಇಲಾಖೆಯವರು ಈ ಕುರಿತು ಗಮನ ಹರಿಸಿ, ಗಾಂಜಾ ಹಾವಳಿಯನ್ನು ತಡೆಯಬೇಕು ಎಂದು ಸ್ಥಳೀಯರಾದ ರಝಾಕ್ ಕುಕ್ಕಾಜೆ ಆಗ್ರಹಿಸಿದ್ದಾರೆ.