Advertisement

ಇತಿಹಾಸ ಪ್ರಸಿದ್ಧ ಕೆರೆ; ಕರಡಕಲ್‌ ಕೆರೆಗೆ ಅಭಿವೃದ್ಧಿಯ ಟಚ್‌

05:01 PM Sep 19, 2022 | Team Udayavani |

ಲಿಂಗಸುಗೂರು: ಜಿಲ್ಲೆಯಲ್ಲೇ ವಿಶಾಲವಾದ ಕೆರೆ ಎಂದೇ ಖ್ಯಾತಿ ಹೊಂದಿದ ಪಟ್ಟಣದ ಕರಡಕಲ್‌ ಕೆರೆಯ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿವೆ. ಒಂದು ಕಾಲದಲ್ಲಿ ಊರಿನ ತ್ಯಾಜ್ಯ ತನ್ನೊಡಲಲ್ಲಿ ತುಂಬಿಕೊಂಡು ಮಲೀನವಾಗಿದ್ದ ಈ ಕೆರೆಗೆ ಈಗ ಅಭಿವೃದ್ಧಿಯ ಯೋಗ ಕೂಡಿ ಬಂದಿದೆ.

Advertisement

ಕೆರೆಯಲ್ಲಿ ಬೋಟಿಂಗ್‌ -ಉದ್ಯಾನವನ ನಿರ್ಮಿಸುವ ಯೋಜನೆ ಕೈಗೆತ್ತಿಕೊಂಡಿದ್ದು, ಕಾಮಗಾರಿ ಅಷ್ಟೇ ವೇಗದಿಂದ ಸಾಗಿದೆ. ವಿವಿಧ ಕೆರೆಗಳ ಅಭಿವೃದ್ಧಿಯ ಮಾದರಿಯನ್ನಿಟ್ಟುಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಯೋಜನೆಯಡಿ ನಾಲ್ಕು ಹಂತದಲ್ಲಿ 6.43 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಕೈಗಾರಿಕೆ ಕಚೇರಿ ಹತ್ತಿರದಿಂದ ಒಳಾಂಗಣ ಕ್ರೀಡಾಂಗಣದ ಮುಖ್ಯ ರಸ್ತೆವರೆಗೂ ವಾಯು ವಿಹಾರಕ್ಕೆ 900 ಮೀಟರ್‌ ಉದ್ದದ ವಾಕಿಂಗ್‌ ಟ್ರ್ಯಾಕ್‌ ಜತೆಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ವಾಕಿಂಗ್‌ ಟ್ರ್ಯಾಕ್‌ ಉದ್ದಕ್ಕೂ ಸೋಲಾರ್‌ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುತ್ತಿದೆ. ಡಿವೈಎಸ್‌ಪಿ ಕಚೇರಿ ಭಾಗದ ಎರಡು ಎಕರೆ ಪ್ರದೇಶದಲ್ಲಿ ಉದ್ಯಾನವನ, ಅಲ್ಲಿ ಎರಡು ಮನಮೋಹಕ ನೀರಿನ ಕಾರಂಜಿಗಳು, ಮಕ್ಕಳ ಆಟಿಕೆ ಸಾಮಗ್ರಿ, ಬಯಲು ರಂಗಮಂದಿರ, ಗಾರ್ಡನ್‌ನಲ್ಲಿ ವಾಕಿಂಗ್‌ ಟ್ರ್ಯಾಕ್‌ ಮಾಡಲಾಗುತ್ತಿದೆ.

ಅರಣ್ಯ ಇಲಾಖೆ ಹಾಗೂ ಕ್ಲಬ್‌ ಹಿಂದುಗಡೆ ಕ್ಯಾಂಟಿನ್‌, ಶೌಚಾಲಯ ನಿರ್ಮಿಸಲಾಗುತ್ತಿದೆ. ಈ ಎಲ್ಲ ಪ್ರಯತ್ನ ಸರಿದಾರಿಯಲ್ಲಿ ಸಾಗಿದರೆ, ನಾಗರಿಕರು ಸಹಕಾರ ನೀಡಿ ಕೆರೆ ಸಂರಕ್ಷಣೆಗೆ ಕಾಳಜಿ ವಹಿಸಿದರೆ ಐತಿಹಾಸಿಕ ಕೆರೆ ಸ್ವಚ್ಛತೆ ಹಾಗೂ ಸೌಂದರ್ಯೀಕರಣದಿಂದ ಕಂಗೊಳಿಸಲಿದೆ.

ಇತಿಹಾಸ ಪ್ರಸಿದ್ಧ ಕೆರೆ
ಇತಿಹಾಸ ಪ್ರಸಿದ್ಧ ಈ ಕೆರೆಯನ್ನು ಕರಡಿಕಲ್‌ ಸಂಸ್ಥಾನ 800ನ್ನು ಆಳಿದ 3ನೇ ಬಿಲ್ಲಮನು(ಕ್ರಿ. ಶ.1025-1050)ನಿರ್ಮಿಸಿದ್ದಾರೆ ಎನ್ನಲಾಗಿದೆ. ಹೈದರಾಬಾದ್‌ ನಿಜಾಮರ ಹಾಗೂ ಬ್ರಿಟೀಷರ ಆಡಳಿತ ಅವ ಧಿಯಲ್ಲಿ ಲಿಂಗಸುಗೂರು ಜಿಲ್ಲಾ ಕೇಂದ್ರವನ್ನಾಗಿಸಿ ತಮ್ಮ ದಂಡಿನ ತಾಣವನ್ನಾಗಿ ಮಾಡಿ ವಿಹಾರಕ್ಕಾಗಿ ಕೆರೆಗೆ ಬರುತ್ತಿದ್ದರು. ಸೈನಿಕರಿಗೆ-ಕುದುರೆಗಳಿಗೆ ನೀರೊದಗಿಸಲು ಉಪಯೋಗಿಸುತ್ತಿದ್ದರು. ಸಂಜೆ ಹೊತ್ತು ವಿಹರಿಸಲು ಕೆರೆಯ ದಡದಲ್ಲಿ ಎತ್ತರದಲ್ಲಿ ಮಹಲು
ನಿರ್ಮಿಸಲಾಗಿದ್ದು,ಅಧಿಕಾರಿಗಳ ಸ್ಫೋರ್ಟ್ಸ್ ಕ್ಲಬ್‌ ಆಗಿ ಮಾರ್ಪಾಟ್ಟಿದೆ. ರಾಂಪುರ ಏತ ನೀರಾವರಿ ಕಾಲುವೆಯಿಂದ ಹರಿಯುವ ಹೆಚ್ಚುವರಿ ನೀರನ್ನು ಕಾಲುವೆ ಮೂಲಕ ಈ ಕೆರೆಗೆ ಬಿಡಲಾಗುತ್ತಿದೆ. ಇದರಿಂದ ಅಂತರ್ಜಲವೂ ಹೆಚ್ಚಿಸಿದೆ.

Advertisement

ಕರಡಕಲ್‌ ಅಭಿವೃದ್ಧಿಗಾಗಿ ಶಾಸಕರು ಆಸಕ್ತಿ ವಹಿಸಿ ಕೆಕೆಆರ್‌ಡಿಬಿಯಿಂದ ನಾಲ್ಕು ಹಂತದಲ್ಲಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಕಾಮಗಾರಿ ವೇಗದಿಂದ ಸಾಗಿದೆ. ಇನ್ನೂ ಎರಡು ತಿಂಗಳಲ್ಲಿ ಕಾಮಗಾರಿ ಮುಗಿಸಿ ಉದ್ಯಾನವನ ಲೋಕಾರ್ಪಣೆಗೊಳಿಸಲಾಗುವುದು.
ಶಿವಕುಮಾರ, ಎಇಇ, ಆರ್‌ಡಿಪಿಆರ್‌
ಲಿಂಗಸುಗೂರು.

ಕರಡಕಲ್‌ ಕೆರೆ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು. ಪುರಸಭೆ ಆಡಳಿತ ಮಂಡಳಿಯವರು ಕೆರೆ ಉದ್ಯಾನವನ ಹಾಳಾಗದಂತೆ ನೋಡಿಕೊಂಡು ಹೋಗಬೇಕಿದೆ.
ಡಿ.ಎಸ್‌.ಹೂಲಗೇರಿ, ಶಾಸಕರು,
ಲಿಂಗಸುಗೂರು

ಶಿವರಾಜ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next