Advertisement

Petrol ಬಂಕ್‌ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಟಿಪ್ಪರ್‌ ಹರಿದು ಸ್ಥಳದಲ್ಲೇ ಸಾವು  

09:42 PM Nov 24, 2023 | Shreeram Nayak |

ಸಾಗರ: ಪೆಟ್ರೋಲ್‌ ಬಂಕ್‌ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಟಿಪ್ಪರ್‌ ಲಾರಿ ಹರಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಉಡುಪಿ ಜಿಲ್ಲೆ ಹೆಬ್ರಿ ಸೋಮೇಶ್ವರ ಪೆಟ್ರೋಲ್‌ ಬಂಕ್‌ ಆವರಣದಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.

Advertisement

ಮೃತನನ್ನು ತಾಲೂಕಿನ ತ್ಯಾಗರ್ತಿ ಸಮೀಪದ ಕೊರ್ಲಿಕೊಪ್ಪದ ಶಿವರಾಜ್‌ (36) ಎಂದು ಗುರುತಿಸಲಾಗಿದೆ. ಶಿವರಾಜ್‌ ತನ್ನ ಪಿಕಪ್‌ ವಾಹನದಲ್ಲಿ ಇಬ್ಬರು ಕಾರ್ಮಿಕರೊಂದಿಗೆ ಗುರುವಾರ ರಾತ್ರಿ ಬಾಳೆಕಾಯಿ ತುಂಬಿಕೊಂಡು ಆಗುಂಬೆ-ಸೋಮೇಶ್ವರ ಮಾರ್ಗದಲ್ಲಿ ಉಡುಪಿಗೆ ತೆರಳುತ್ತಿದ್ದರು. ಸೋಮೇಶ್ವರ ತಲುಪಿದಾಗ ತಡರಾತ್ರಿ ಆಗಿದ್ದ ಹಿನ್ನೆಲೆಯಲ್ಲಿ ಪೆಟ್ರೋಲ್‌ ಬಂಕ್‌ನ ಆವರಣದಲ್ಲಿಯೇ ವಾಹನ ನಿಲ್ಲಿಸಿ ಅದರ ಎದುರು ಮಲಗಿದ್ದರು.

ಬೆಳಗಿನ ಜಾವ ಟಿಪ್ಪರ್‌ ಲಾರಿ ಚಾಲಕ ಡೀಸೆಲ್‌ ತುಂಬಿಸಿಕೊಂಡು ತಿರುಗಿಸುವಾಗ ಅಲ್ಲಿ ಮಲಗಿದ್ದ ಇಬ್ಬರು ಕಾರ್ಮಿಕರ ಮೈಮೇಲೆ ಹತ್ತಿಸಿಕೊಂಡು ಹೋಗಿದ್ದಾನೆ. ಈ ದುರಂತದಲ್ಲಿ ಶಿವರಾಜ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇನ್ನೋರ್ವ ಕಾರ್ಮಿಕ ಕುಂದೂರು ಮಹೇಂದ್ರ ತೀವ್ರ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದ ಒಳಗೆ ಮಲಗಿದ್ದ ಯೋಗೇಶ್‌ ಪಾರಾಗಿದ್ದಾರೆ. ಮೃತ ಶಿವರಾಜ್‌ ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next