Advertisement

“ದುಡಿದದ್ದು ಉಂಡಿಯೋ, ಗಳಿಸಿದ್ದು ದಕ್ಕಿತೋ’

01:14 AM Mar 30, 2021 | Team Udayavani |

ಭೂಮಿಯಲ್ಲಿ ಜನ್ಮವೆತ್ತಿ ಬಂದ ವ್ಯಕ್ತಿ ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಒಂದಲ್ಲ ಒಂದು ಕಾಯಕ ಮಾಡಲೇಬೇಕು. ಹುಟ್ಟಿಸಿದ ದೇವರು ಹುಲ್ಲು ತಿನ್ನಿಸಲಾರ. ಆದರೆ ಹೋಳಿಗೆಯನ್ನು ತುಪ್ಪ ಸವರಿ ನಮ್ಮ ಬಾಯಿಗೆ ಇಡಲಾರ ಕೂಡ. ಹೊಟ್ಟೆ ಹೊರೆಯಲು ಮಾನಸಿಕ, ದೈಹಿಕ ಶ್ರಮ ಮಾಡಿಯೇ ಆಗಬೇಕು. ಅದಕ್ಕೆ ಅಂದದ್ದು “ಕೈ ಕೆಸರಾದರೆ ಬಾಯಿ ಮೊಸರು’ ಎಂದು.

Advertisement

ಕೆಲವರು ಪ್ರಾಮಾಣಿಕವಾಗಿ ದುಡಿದು ತಕ್ಕಷ್ಟು ಸಂಪಾದನೆ ಮಾಡಿ ತಮ್ಮ ಹಾಗೂ ಕುಟುಂಬದ ಹೊಟ್ಟೆ ಬಟ್ಟೆಯ ಆವಶ್ಯಕತೆ ನೀಗಲು ಹೆಣಗುತ್ತಾರೆ. ಇನ್ನೂ ಕೆಲವರು ಏನಕೇನ ಪ್ರಕಾರೇಣ ಹಣ ಸಂಪಾದನೆ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಕೂಡಿ ಹಾಕುತ್ತಾರೆ. ಆದರೆ ಪ್ರಾಮಾಣಿಕ ದುಡಿಮೆ ಮಾತ್ರ ನಮಗೆ ದಕ್ಕಿದರೆ ಉಳಿದದ್ದು ನಂದರಾಯನ ಬದುಕಿನಂತೆ ನರಿ ನಾಯಿ ತಿಂದು ಹೋಗುತ್ತದೆ. ಅದಕ್ಕೆಂದೇ ಹೇಳು ವುದು “ದುಡಿದದ್ದು ಉಂಡಿಯೋ, ಗಳಿಸಿದ್ದು ದಕ್ಕಿತೋ’ ಅಂತ.

ನಮ್ಮ ದುಡಿಮೆಯ ಎಲ್ಲವನ್ನೂ ನಾವೊಬ್ಬರೆ ಅನುಭವಿಸಲು ಇತಿಮಿತಿಗಳು ಇರುತ್ತವೆ. ಎಷ್ಟೇ ಆಗರ್ಭ ಶ್ರೀಮಂತ ಇರಲಿ, ತಿನ್ನಬೇಕು ಅದೆ ಅನ್ನ, ರೋಟಿ, ಪಲ್ಯ ಹೆಚ್ಚೆಂದರೆ ಪಂಚತಾರಾ ಹೊಟೇಲಿನಲ್ಲಿ ಚಿನ್ನದ ತಟ್ಟೆಯಲ್ಲಿ ಹೊರತು ಚಿನ್ನ ಬೆಳ್ಳಿಯನ್ನು ತಿನ್ನಲಾದೀತೆ? ಒಂದೇ ಬಾರಿಗೆ ಮಣಗಟ್ಟಲೆ ಖಾದ್ಯ ತಿಂದು ಬಿಡಲು ಕೂಡಾ ಅಸಾಧ್ಯ.

ಕೆಲವರಿಗೆ ಕಾಯಿಲೆ ಕಸಾಲೆ ಕಾರಣ ಆರತಿ ತಗೊಂಡರೆ ಉಷ್ಣ, ತೀರ್ಥ ತಗೊಂಡರೆ ಶೀತ. ಸಕ್ಕರೆ ಕಾಯಿಲೆ ಇದ್ದರೆ ಮಿಠಾಯಿ ಅಂಗಡಿ ಮಾಲಕನಾದರೂ ಬರೀ ಕಣ್ಣಿಂದ ನೋಡಿ ನಾಲಗೆ ಚಪ್ಪರಿಸಿದರೆ ಮುಗಿಯಿತು. ರಕ್ತದ ಒತ್ತಡ ಇದ್ದವನಿಗೆ, ಹೃದಯದ ಕಾಯಿಲೆ ಇದ್ದರೆ ಉಪ್ಪಿನ ಖಾದ್ಯದ ಹೆದರಿಕೆ, ಎಣ್ಣೆಯಲ್ಲಿ ಕರಿದ ತಿಂಡಿ ನಿಷಿದ್ಧ!

ಅಂತೂ ಈ ನಿಷೇಧ ನಿಮಿತ್ತ ನಾವು ದುಡಿದು ತಂದರೂ ಅನುಭವಿಸುವ ಭಾಗ್ಯದಿಂದ ವಂಚಿತರು. ಇಷ್ಟೆಲ್ಲ ಇತಿಮಿತಿಗಳ ನಡುವೆ ಅನಿಯಮಿತ ಸಂಪತ್ತು ಅನ್ಯಾಯ ಮಾರ್ಗದಲ್ಲಿ ಕೂಡಿ ಹಾಕುವ ಗೀಳು ಕೆಲವರಿಗೆ. ಏನು ಕಡಿದು ಕಟ್ಟೆ ಹಾಕಿದರೂ ಪ್ರಯೋಜನ ಶೂನ್ಯ.ಆದರೂ ದುರಾಸೆಗೆ ಮಿತಿ, ಕಡಿವಾಣ ಇಲ್ಲ ಅನ್ನುವುದೇ ವಿಚಿತ್ರ. ಪ್ರಕೃತಿಯ ಈ ವಿಕೃತ ಮನೋಭಾವ ಬರೀ ಮಾನವ ರಾಶಿಗೆ ಸೀಮಿತ ಅನ್ನುವುದು ಇನ್ನೊಂದು ಸತ್ಯ.

Advertisement

ಸಮಾಜಜೀವಿ ಆದ ಈ ಮಾನವ ತನ್ನ ಗಳಿಕೆ ಸಂಪತ್ತು ಪಡೆಯುವುದು ಸಮಾಜದಿಂದ. ಕೆಲವೊಮ್ಮೆ ಪ್ರಾಮಾಣಿಕ ದುಡಿಮೆಯಿಂದ ಕೂಡ ನಮಗೆ ಜಗಿದು ತಿನ್ನಲಾಗದಷ್ಟು ಸಂಪತ್ತು ಗಳಿಕೆ ಆಗುವುದೂ ಇದೆ. ಅದೇಕೊ ದೇವರ ದಯೆ ಒಂಚೂರು ಜಾಸ್ತಿಯೇ ಸಿಗುತ್ತದೆ. ಇಂತಿಪ್ಪ ಸಂದರ್ಭ ನಾವು ದೇವರ ಈ ಔದಾರ್ಯಕ್ಕೆ ಕೃತಾರ್ಥರಾಗಿ ಮನುಷ್ಯ ಸಹಜವಾಗಿ ಸಮಾಜಕ್ಕೆ ಪ್ರತಿಫ‌ಲ ನೀಡಬೇಕು. ಸಮಾಜದಿಂದ ದೊರೆತ ಸಂಪತ್ತನ್ನು “ಕೆರೆಯ ನೀರನು ಕೆರೆಗೆ ಚೆಲ್ಲಿ’ ಸಮಾಜದ ಋಣ ತೀರಿಸಿ ಕೃತಾರ್ಥರಾಗಬೇಕು. ಜೀವನದ ಸಾಫ‌ಲ್ಯ ಇರುವುದೇ ಇಂತಹ ಔದಾರ್ಯದ ಕಾಯಕದಲ್ಲಿ. ಗಳಿಸಿದ್ದನ್ನು ಆವಶ್ಯಕತೆಗೆ ಬೇಕಷ್ಟು ಉಳಿಸಿಕೊಂಡು, ಸಮಾಜದ ಋಣ ತೀರಿಸಲೂ ಮಿಗತೆಯನ್ನು ಕೊಡುವುದು ಜನುಮ ಸಾರ್ಥಕ್ಯ ಆದಂತೆಯೇ. ಅದು ಪ್ರಕೃತಿ ಸಹಜ ಕೂಡಾ.

ನನ್ನ ಗಳಿಕೆ, ನನ್ನಿಷ್ಟದಂತೆ ನಾನು ಮೋಜು. ಮಸ್ತಿ ಮಾಡಿದರೆ ನಿನ್ನ ಗಂಟೇನು ಹೋಯಿತು? ಅನ್ನುವವರಿಗೆ ಕೊರತೆ ಇಲ್ಲ. ಕೊಟ್ಟು ಕೆಟ್ಟವರಿಲ್ಲ. ತಾನು ಕೊಡುವುದು ತಾನು ಪಡೆದದ್ದು ಮಾತ್ರ. ಹಸಿದವನಿಗೆ ಒಂದು ಹಿಡಿ ಅನ್ನ, ಚಳಿಗೆ ನಡುಗುವ ದೇಹಕ್ಕೆ ಒಂದು ಹೊದಿಕೆ ಅಷ್ಟೆ. ನಮ್ಮ ಪರಿಮಿತಿಗೆ ಅನುಸರಿಸಿ ಸಮಾಜಕ್ಕೆ ನಮ್ಮ ಕೊಡುಗೆ ಎಂಬ ಕರ್ತವ್ಯ ನಿರ್ವಹಣೆ.

– ಬಿ. ನರಸಿಂಗ ರಾವ್‌, ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next