Advertisement

ಸಿಎಂ ಸಮಾರಂಭದಲ್ಲಿ ಆತಂಕ ಸೃಷ್ಟಿಸಿ ಮಾಯವಾದ ಬಿರುಗಾಳಿ…!

08:02 PM Sep 30, 2022 | Team Udayavani |

ವಿಜಯಪುರ : ಶುಕ್ರವಾರ ನಗರದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಆಗಮಿಸಿದ್ದ ವೇಳೆ, ಸಮಾರಂಭ ನಡೆಯುವ ಬೀಸಿದ ಬಿರುಗಾಳಿ, ಜೋರಾಗಿ ಬಂಧ ಮಳೆ ಕೆಲ ಕಾಲ ಆತಂಕ ಸೃಷ್ಟಿಸಿತ್ತು.

Advertisement

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಭಾಷಣ ಆರಂಭಿಸುವ ವೇಳೆಯಲ್ಲಿ ಜೋರಾಗಿ ಬೀಸಿದ ಬಿರುಗಾಳಿಗೆ ವೇದಿಕೆ ಮೇಲ್ಛಾಗಣಿಗೆ ಹಾಕಿದ್ದ ತಗಡುಗಳ ಭಾರಿ ಸದ್ದು ಆತಂಕ ಸೃಷ್ಟಿಸಿತು. ನಂತರ ಮುಖ್ಯಮಂತ್ರಿ ಬಸವರಾಜ ಭಾಷಣ ಆರಂಭಿಸಿದಾಗಲೂ ಬಿರುಗಾಳಿ, ಮಳೆಯ ಅಬ್ಬರ ಜೋರಾಗಿತ್ತು. ಸುಮಾರು ಐದಾರು ನಿಮಿಷದ ವರೆಗೆ ಬಿರುಗಾಳಿ ಬೀಸಿ, ಮಳೆ ಆರಂಭವಾದರೂ ಮೇಲ್ಛಾವಣಿ ಭದ್ರವಾಗಿದ್ದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ.

ಈ ಹಂತದಲ್ಲಿ ಜನರು ಮಳೆಯ ಅಬ್ಬರಕ್ಕೆ ಮಳೆನೀರಿನಿಂದ ರಕ್ಷಿಸಿಕೊಳ್ಳಲು ಕುಳಿತ ಕುರ್ಚಿಗಳನ್ನೇ ತಲೆಮೇಲೆ ಹೊತ್ತು ಮಳೆ ನೀರಿನಿಂದ ರಕ್ಷಣೆ ಪಡೆದರು. ಮಳೆಯ ಅಬ್ಬರ, ಜನರ ಧಾವಂತ ಅರಿತ ಸಮಾರಂಭದ ಸಾನ್ನಿಧ್ಯ ವಹಿಸಿದ್ಧ ಸಿದ್ಧೇಶ್ವರ ಶ್ರೀಗಳು ತಮ್ಮ ಆಶಿರ್ವಚನವನ್ನು ಕೆಲವೇ ಮಾತಿಗೆ ಮಿತಿಗೊಳಿಸಿದರು.

ಬಳಿಕ ಬಿರುಗಾಳಿ ಅಬ್ಬರ ಕಡಿಮೆಯಾಗಿ, ತುಂತುರು ಮಳೆ ಮುಂದುವರೆದಾಗ ತಮ್ಮ ಮಿತವಾದ ಮಾತಿಗೆ ವಿರಾಮ ಹೇಳಿದ್ದ ಸಿದ್ಧೇಶ್ವರ ಶ್ರೀಗಳು, ವೇದಿಕೆಯಲ್ಲೇ ಕೆಲಕಾಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಆತ್ಮೀಯ ಮಾತುಕತೆ ನಡೆಸಿದ್ದು ವಿಶೇವಾಗಿತ್ತು.

ಯತ್ನಾಳ ಕೆಲಸ ನನಗೆ ಪ್ರೇರಣೆ : ಬೊಮ್ಮಾಯಿ

Advertisement

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವಿಜಯಪುರ ಜನತೆಗೆ ಆರೋಗ್ಯ ಸೇವೆ ನೀಡಲು ಜ್ಞಾನಯೋಗಿ ಶ್ರೀಸಿದ್ಧೇಶ್ವರ ಶ್ರೀಗಳ ಹೆಸರಿನಲ್ಲಿ ಚಾರಿಟಿ ಆಸ್ಪತ್ರೆ ಸ್ಥಾಪಿಸಿ, ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ. ಅವರ ಈ ಸೇವೆ ನಮಗೂ ಪ್ರೇರಣೆದಾಯಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ಬಂಡುಕೋರ ಶಾಸಕ ಎಂದೇ ಹೆಸರಾದ ಬಸನಗೌಡ ಯತ್ನಾಳ ಅವರ ಕಾರ್ಯವನ್ನು ಶ್ಲಾಘಿಸಿದರು.

ನಗರದಲ್ಲಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ಸಮಾರಂಭದಲ್ಲಿ, ಶಾಸಕ ಯತ್ನಾಳ ಅವರನ್ನು ಮುಕ್ತಕಂಠದಿಂದ ಹೊಗಳಿದರು.

ತಮ್ಮ ಅಧ್ಯಕ್ಷತೆಯಲ್ಲಿರುವ ಶ್ರೀಸಿದ್ದೇಶ್ವರ ಸಂಸ್ಥೆ ಹಾಗೂ ಸಿದ್ಧಸಿರಿ ಸೌಹಾರ್ದ ಬ್ಯಾಂಕ್ ಗಳಿಸುವ ಲಾಭವನ್ನು ಸದರಿ ಜೆಎಸ್‍ಎಸ್ ಚಾರಿಟಿ ಆಸ್ಪತ್ರೆಯ ಬಡ ರೋಗಿಗಳ ಆರೋಗ್ಯ ಸೇವೆಗೆ ವಿನಿಯೋಗಿಸುವ ಕಾರ್ಯದ ಮೂಲಕ ಶಾಸಕ ಯತ್ನಾಳ ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ. ಯತ್ನಾಳ ಅವರಿಂದ ಪ್ರೇರಣೆಗೊಂಡಿರುವ ನಾನು ನಮ್ಮ ಟ್ರಸ್ಟ್ ಮೂಲಕ ಹುಬ್ಬಳ್ಳಿ ಪರಿಸರದಲ್ಲಿ ಚಾರಿಟಿ ಆಸ್ಪತ್ರೆ ಸ್ಥಾಪಿಸಲು ಯೋಜಿಸಿದ್ದೇನೆ ಎಂದರು.

ಸದರಿ ಆಸ್ಪತ್ರೆಗೆ ನಡೆದಾಡುವ ದೇವರು ಶ್ರೀಸಿದ್ದೇಶ್ವರ ಶ್ರೀಗಳ ಹೆಸರು ಇರಿಸಿರುವುದು ಇನ್ನೂ ಅರ್ಥಪೂರ್ಣವಾಗಿದೆ. ಶ್ರೀಗಳ ಹೆಸರನ್ನು ಆಸ್ಪತ್ರೆಗೆ ಅರ್ಥಪೂರ್ಣವಾಗಿದ್ದು, ಸಿದ್ಧೇಶ್ವರ ಶ್ರೀಗಳ ಹೆಸರು ಕೇಳಿಯೇ ಆಸ್ಪತ್ರೆಗೆ ಬರುವ ರೋಗಿಗಳ ಅರ್ಧ ರೋಗ ಗುಣಮುಖವಾಗುತ್ತದೆ ಎಂದರು.

ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯಪುರ ನಗರದಲ್ಲಿ ನವೆಂಬರ್ ನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ ಸಮ್ಮೇಳನದ ಲಾಂಛನವನ್ನು ಲೋಕಾರ್ಪಣೆ ಮಾಡಿದರು.

ಕಾರಜೋಳ ಸಾಹೇಬ್ರ ಸ್ವಲ್ಪ ಇತ್ಲಾಗ ಲಕ್ಷ ಕೊಡ್ರಿ…

ಅಧ್ಯಕ್ಷತೆ ಭಾಷಣ ಸಂದರ್ಭದಲ್ಲೂ ವಿಜಯಪುರ ನಗರ ಶಾಸಕ ಯತ್ನಾಳರು ಉಲ್ಲೇಖಿಸಿದ ಅನೇಕ ವಿಷಯಗಳು ಗಮನ ಸೆಳೆದವು. ವೇದಿಕೆ ಮೇಲಿದ್ದ ಕಾರಜೋಳ ಅವರು ಬೇರೆಲ್ಲೋ ಚಿತ್ತ ನೆಟ್ಟಿದ್ದಾಗ ಎರಡು ಮೂರು ಬಾರಿ ಕಾರಜೋಳರ ಗಮನ ಸೆಳೆಯುತ್ತಾ, ನಗುತ್ತಲೇ ಸಾಹೇಬ್ರೇ ಇತ್ಲಾಗ ಸವಲ್ಪ ಲಕ್ಷ ಕೊಡ್ರಿ. ವಿಜಯಪುರ ಜಿಲ್ಲಾದಾಗ ಜಿಲ್ಲಾಡಳಿತದ ಈಗಿನ ಎಲ್ಲಾ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಾಕತ್ಯಾರ, ಹಿಂಗಾಗಿ ಯಾರನ್ನೂ ಬದಲಿಸಬೇಡಿ ಎಂದು ಮನವಿ ಮಾಡಿದರು.

ಮತ್ತೊಂದೆಡೆ ವೇದಿಕೆ ಮೇಲಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಉದ್ಧೇಶಿಸಿ ಮಾತನಾಡಿ, ಈ ಹಿಂದೆ ನಾನು ದಿ.ಅನಂತಕುಮಾರ ಅವರ ಹಿಂದೆ ಇರುತ್ತಿದ್ದೆ, ಈಗ ಪ್ರಹ್ಲಾದ್ ಜೋಶಿ ಅವರಲ್ಲಿ ಅನಂತಕುಮಾರ ಅವರನ್ನು ಕಾಣುತ್ತಿದ್ದೇನೆ. ಹೀಗಾಗಿ ನೀವು ನಮ್ಮನ್ನು ಹಿಡಿದುಕೊಂಡು ಹೋಗಬೇಕು ಎಂದು ಮಾಡಿದ ಮನವಿ ಗಮನ ಸೆಳೆಯಿತು. ಇದಕ್ಕೆ ತಮ್ಮ ಭಾಷಣದ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಂದಿಸುವ ಭರವಸೆ ನೀಡಿದರು.

ಭವಿಷ್ಯದ ಶಾಸಕ

ಮತ್ತೊಂದೆಡೆ ವೇದಿಕೆ ಮೇಲಿದ್ದ ಬಸವನಬಾಗೇವಾಡಿ ಬಿಜೆಪಿ ಟಿಕೇಟ್ ಆಕಾಂಕ್ಷಿ ಅಪ್ಪುಗೌಡ ಪಾಟೀಲ ಮನಗೂಳಿ ಅವರನ್ನು ಸ್ವಾಗತಿಸುವಾಗ ಬಾಗೇವಾಡಿಯ ಭವಿಷ್ಯದ ಶಾಸಕ ಎಂದು ಸಂಬೋಧಿಸುವ ಮೂಲಕ ಪಕ್ಷದಲ್ಲಿ ಇನ್ನೋರ್ವ ಟಿಕೇಟ್ ಆಕಾಂಕ್ಷಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರನ್ನು ಪರೋಕ್ಷವಾಗಿ ಟಿಕೇಟ್ ಅಸಾಧ್ಯ ಎಂಬ ಸಂದೇಶ ನೀಡಿದರು.

ಇದಲ್ಲದೇ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ತಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ವಿ.ಸೋಮಣ್ಣ, ಸಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ ಕತ್ತಿ ಅವರ ಸಹಕಾರವನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next