ಯಾವುದೇ ಪಕ್ಷವಾಗಿರಲಿ ಅಲ್ಲಿನ ಕಾರ್ಯಕರ್ತರಿಗೂ, ಪತ್ರಕರ್ತರಿಗೂ ಒಂದು ಅವಿನಾಭಾವ ಸಂಬಂಧ. ಹದವಾದ ಸ್ನೇಹವಿರುತ್ತದೆ. ಇದರಿಂದಾಗಿಯೇ ಪಕ್ಷದ ವಿದ್ಯಮಾನಗಳು ಆಚೆಗೆ ಹರಿದು ಬರುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿಜೆಪಿಯಲ್ಲಿ ನಿಖರ ಸುದ್ದಿಗಳೇ ಆಚೆ ಬರುತ್ತಿಲ್ಲ. ಇದಕ್ಕೆ ಕಾರಣ, ಪಕ್ಷದ ನಿರ್ಧಾರಗಳು, ಚಟುವಟಿಕೆಗಳು ಖಾಸಗಿ ಸಂಸ್ಥೆಗಳಿಂದ ನಡೆಯುತ್ತಿವೆ. ಹೀಗಾಗಿ ಸುದ್ದಿ ಹೊರಬೀಳುತ್ತಿಲ್ಲ.
ಕಾರ್ಯಕರ್ತರು ಸುದ್ದಿ ಲೀಕ್ ಮಾಡುತ್ತಾರೆ ಎಂದು ಪಕ್ಷದ ಆಯಕಟ್ಟಿನ ಸ್ಥಾನ ದಲ್ಲಿರುವವರು ವಾದಿಸುತ್ತಿದ್ದರು. ಆದರೆ ಆ ವಾದಕ್ಕೇ ಈಗ ಕಳಂಕವಾಗುವ ಘಟನೆ ಕೆಲ ವು ದಿನಗಳ ಹಿಂದೆ ನಡೆದಿರುವುದು ಬಿಜೆಪಿಯಲ್ಲಿ ಭಲೇ ಚರ್ಚೆಗೆ ಕಾರಣವಾಗಿದೆ.
ವರ್ಷದಿಂದ ಖಾಸಗಿ ಸಂಸ್ಥೆಯೊಂದು ಬಿಜೆಪಿಯ ಚುನಾವಣ ಸರ್ವೇ ಕಾರ್ಯ ನಡೆಸುತ್ತಿದೆ. ಇದಕ್ಕೆ ಸೋಶಿಯಲ್ ಮೀಡಿಯಾ “ಪಂಟರ್” ಎಂದು ಕರೆಸಿಕೊಳ್ಳುವ ಕೆಲವು ಮಾಡರ್ನ್ ಕಾರ್ಯಕರ್ತರನ್ನು ಸೂಕ್ತ ಸಂಭಾವನೆಯೊಂದಿಗೆ ಸೇರಿಸಿಕೊಳ್ಳಲಾಗಿದೆ.
ಈ ಪೈಕಿ ಒಬ್ಬ ಕಾರ್ಯಕರ್ತೆ ಸರ್ವೇ ವರದಿಯನ್ನು ಲಕ್ಷಾಂತರ ರೂ.ಗೆ ಸೋರಿಕೆ ಮಾಡಿ ಸಿಕ್ಕಿಬಿದ್ದಿದ್ದಾಳಂತೆ. 6 ಲಕ್ಷ ರೂ.ಗೆ ಈ ವರದಿಯನ್ನು ಟಿಕೆಟ್ ಆಕಾಂಕ್ಷಿಯೊಬ್ಬರಿಗೆ ಮಾರಾಟ ಮಾಡುವ ಬಗ್ಗೆ ನಡೆದ ದೂರವಾಣಿ ಸಂಭಾಷಣೆ ಬಹಿರಂಗವಾಗಿದೆ. ಆ ಕಾರ್ಯಕರ್ತೆಯನ್ನು ಸದ್ಯಕ್ಕೆ ಆಚೆ ಹಾಕಲಾಗಿದೆ.
ಆದರೆ ಈ ಸುದ್ದಿ ತಡವಾಗಿ ಸೋರಿಕೆಯಾಗಿದ್ದು, ರಹಸ್ಯ ಮಾಹಿತಿ ಕಾಪಾಡುವ ತಂಡ “ಟಾಪ್ ಸೀಕ್ರೇಟ್ ಬಾಟಮ್ ಓಪನ್’ ಎಂಬಂತೆ ಕೆಲಸ ಮಾಡುತ್ತಿದೆ ಎಂದು ಜಗನ್ನಾಥ ಭವನದ ಹಳೆ ಕಾರ್ಯಕರ್ತರು ಮುಸಿಮುಸಿ ನಕ್ಕರಂತೆ.