Advertisement

ಮರಳಿನಲ್ಲಿಯೇ ಅಕ್ಷರಾಭ್ಯಾಸ ಆರಂಭಿಸಿದ ಶಾಲೆ

06:16 PM Nov 08, 2019 | Team Udayavani |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1919 ಶಾಲೆ ಆರಂಭ
“ಅರಮನೆ ಕಾಡು ಶಾಲೆ’ ಎಂದು ಪ್ರಚಲಿತ

ಪಡುಬಿದ್ರಿಯಿಂದ 3ಕಿಮೀ ದೂರದಲ್ಲಿರುವ ನಂದಿಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಿರಿಯರ ಅಭಿಪ್ರಾಯ ಹಾಗೂ ದೊರೆತ ದಾಖಲಾತಿಗಳಂತೆ ಇಲ್ಲಿನ ದುರ್ಗಾಪರಮೇಶ್ವರೀ ದೇವಸ್ಥಾನದ ಗೋಪುರದಲ್ಲಿ ಬ್ರಿಟಿಷರ ಕಾಲದಿಂದಲೂ ನಡೆದುಕೊಂಡು ಬರುತ್ತಿತ್ತು. ನೂರು ವರ್ಷಗಳ ಹಿಂದೆ ಪಡುಬಿದ್ರಿ ರಾಮರಾವ್‌ ಎಂಬ ಶಿಕ್ಷಕರು ಕಾಲ್ನಡಿಗೆಯಲ್ಲಿ ಬಂದು ಮುಳಿಹುಲ್ಲಿನ ಛಾವಣಿಯಲ್ಲಿ ಯಾವೊಂದು ಮೂಲ ಸೌಕರ್ಯಗಳಿಲ್ಲದೆ ಮರಳಿನಲ್ಲಿಯೇ ಅಕ್ಷರಾಭ್ಯಾಸವನ್ನು ನಡೆಸಿದ ಶಾಲೆ ಇದು. “ಅರಮನೆ ಕಾಡು ಶಾಲೆ’ ಎಂದು ಪ್ರಚಲಿತಗೊಂಡು ಬೆರಳೆಣಿಕೆಯ ವಿದ್ಯಾರ್ಥಿಗಳನ್ನು ಹೊಂದಿ, ಮುಂದೆ ಅಭಿವೃದ್ಧಿ ಹೊಂದುತ್ತಾ 600 ವಿದ್ಯಾರ್ಥಿಗಳು ಹಾಗೂ ಸುಮಾರು 20 ಶಿಕ್ಷಕ ವರ್ಗವನ್ನು ಹೊಂದಿತ್ತು.

ಇಲ್ಲಿನ ಹಳೆ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ
ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳಲ್ಲಿ ಯಕ್ಷಗಾನ ಛಂದೋ ತಪಸ್ವಿ ಡಾ | ನಾರಾಯಣ ಶೆಟ್ಟಿ ಶಿಮಂತೂರು, ಅರ್ಥಶಾಸ್ತ್ರಜ್ಞರಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಉಪನಿರ್ದೇಶಕನ ಹುದ್ದೆಯನ್ನೂ ಅಲಂಕರಿಸಿದ ಡಾ | ಸದಾನಂದ ಎಲ್‌. ಶೆಟ್ಟಿ , ಈಚೆಗಷ್ಟೇ ಸರ್‌ ಸಿ. ವಿ. ರಾಮನ್‌ ಯುವ ವಿಜ್ಞಾನಿ ಪ್ರಶಸ್ತಿಯನ್ನು ಸ್ವೀಕರಿಸಿರುವ ಕೃಷಿ ವಿಜ್ಞಾನಿ ಡಾ | ಪಡುಬಿದ್ರಿ ಶಿವಪ್ರಸಾದ್‌ ರಾವ್‌ ಅವರಿದ್ದಾರೆ. ಅಲ್ಲದೆ ದೇಶದ ಸೇನೆ, ಉದ್ಯಮ, ಎಂಜಿನಿಯರಿಂಗ್‌, ವೈದ್ಯಕೀಯ, ಕೃಷಿ, ಯಕ್ಷಗಾನ, ಕಂಬಳ ಮತ್ತಿತರ ಕ್ಷೇತ್ರಗಳಲ್ಲೂ ಸಾಧನೆ ಮಾಡಿದವರಿದ್ದಾರೆ. ಸ್ವಂತ ಕಾಲ ಮೇಲೆ ನಿಲ್ಲುವಂತಹ ಮನೋಸ್ಥೈರ್ಯವನ್ನು ಪ್ರತಿಯೊರ್ವ ವಿದ್ಯಾರ್ಥಿಯಲ್ಲಿ ತುಂಬುವ ಕೆಲಸವನ್ನು ಈ ಸರಕಾರಿ ಶಿಕ್ಷಣ ಸಂಸ್ಥೆ ಮಾಡಿದೆ.

ಪ್ರಸ್ತುತ 37 ವಿದ್ಯಾರ್ಥಿಗಳ ವ್ಯಾಸಂಗ
1954 ರಲ್ಲಿ ಚೀಂಕ್ರಿಗುತ್ತು ರಾಘು ಶೆಟ್ಟಿ ಹಾಗೂ ಗ್ರಾಮಸ್ಥರ ನೆರವಿನಿಂದ ಶಾಲೆಯ ನೂತನ ಕೊಠಡಿಗಳು ನಿರ್ಮಾಣಗೊಂಡವು. ಈ ಶಾಲೆಯಲ್ಲಿ ವಿದ್ಯಾರ್ಜನೆಯನ್ನು ಮಾಡಿದ ಸಹಸ್ರಾರು ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಸಾಧನೆ ಗೈದಿರುವುದು ಸಂಸ್ಥೆಯ ಗೌರವವಾಗಿದೆ. ಒಂದರಿಂದ ಏಳನೇ ತರಗತಿವರೆಗಿರುವ
ಈ ಶಾಲೆಯಲ್ಲಿ ಇತ್ತೀಚಿನ ಕೆಲ ಬೆಳವಣಿಗೆಗಳು, ಆಂಗ್ಲ ಮಾಧ್ಯಮ ಶಾಲೆಗಳ ಪೈಪೋಟಿ ಮತ್ತು ಸರಕಾರಿ ಶಾಲೆಗಳ ಮೇಲೆ ಜನರ ನಿರುತ್ಸಾಹ, ಮೂಲಸೌಕರ್ಯದ ಕೊರತೆಯಿಂದಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಗೆ ಕಾರಣವಾಯಿತು. ಪ್ರಸ್ತುತ ಶಾಲೆಯಲ್ಲಿ ಒಂದರಿಂದ ಏಳನೆ ತರಗತಿವರೆಗೆ ಕೇವಲ ಮೂವತ್ತೇಳು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

Advertisement

ವಿವಿಧ ಅಭಿವೃದ್ಧಿ ಕಾರ್ಯ
ಶತಮಾನೋತ್ಸವದ ಸಂಭ್ರಮದಲ್ಲಿ ಶಿಥಿಲಗೊಂಡಿರುವ ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಿ ಅಗತ್ಯವಿರುವ ಮೂಲ ಸೌಕರ್ಯಗಳಾದ ಕಲಿಕಾ ಸಾಮಾಗ್ರಿಗಳು, ಪೀಠೊಪಕರಣ, ತರಗತಿ ಕೊಠಡಿಗಳಿಗೆ ವಿದ್ಯುತ್‌ ದೀಪಗಳ ಜೋಡಣೆ, ಕುಡಿಯುವ ನೀರು, ನಳ್ಳಿ ನೀರಿನ ವ್ಯವಸ್ಥೆ, ಅಕ್ಷರ ದಾಸೋಹ ಕೊಠಡಿಯ ನವೀಕರಣ, ಶಾಲಾ ಕಚೇರಿಗೆ ಆಧುನಿಕ ಸ್ಪರ್ಶ, ವಿದ್ಯಾರ್ಥಿಗಳಿಗೆ ಮತ್ತು ಕಚೇರಿ ಉಪಯೋಗಕ್ಕಾಗಿ ಕಂಪ್ಯೂಟರ್‌ ಹಾಗೂ ಪ್ರಿಂಟರ್‌ ವ್ಯವಸ್ಥೆ, ಶೌಚಾಲಯ ದುರಸ್ತಿ, ನಲಿ-ಕಲಿ ತರಗತಿಗೆ ಸಲಕರಣೆಗಳ ಜೋಡಣೆ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.

ಶಾಲಾ ಹಳೆ ವಿದ್ಯಾರ್ಥಿಯಾಗಿ ಹೆಮ್ಮೆ ಎನಿಸಿದೆ. ಶಾಲಾಭಿವೃದ್ದಿಗಾಗಿ ನಂದಿಕೂರು ಎಜ್ಯುಕೇಶನ್‌ ಟ್ರಸ್ಟ್‌ ಸಂಸ್ಥೆಯನ್ನು ಸ್ಥಾಪಿಸಿಕೊಂಡು 2019ರ ಜನವರಿಯಲ್ಲಿ ಶಾಲಾ ಶತಮಾನೋತ್ಸವ ಆಚರಿಸಲಾಗಿದೆ. ಇಲ್ಲಿದೆ.
– ಲಕ್ಷ್ಮಣ್‌ ಶೆಟ್ಟಿವಾಲ್‌,ಶಾಲಾ ಹಳೆ ವಿದ್ಯಾರ್ಥಿ.

4ವರ್ಷಗಳ ಹಿಂದೆ ವರ್ಗಾವಣೆ ಗೊಂಡು ನಂದಿಕೂರು ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವೆನು. ಶತಮಾನೋತ್ಸವ ಕಂಡಿರುವ ಸರಕಾರಿ ಶಾಲೆ ಎಂಬ ಬಗೆಗೆ ತನಗೆ ಹೆಮ್ಮೆ ಇದೆ. ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ‌- ವಿಮಲಾ, ಪ್ರಭಾರ ಶಾಲಾ ಮುಖ್ಯ ಶಿಕ್ಷಕಿ.

– ಆರಾಮ

Advertisement

Udayavani is now on Telegram. Click here to join our channel and stay updated with the latest news.

Next