Advertisement

Karnataka: ಸುಳ್ಳಿಗೆ ಗುದ್ದು- ಸುಳ್ಳು ಸುದ್ದಿ ಪ್ರಸಾರ ಕಟ್ಟಿ ಹಾಕಲು ಚೌಕಟ್ಟು

09:24 PM Sep 14, 2023 | Team Udayavani |

ಬೆಂಗಳೂರು: ಸುಳ್ಳು ಸುದ್ದಿ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಕಾನೂನು ಚೌಕಟ್ಟು ರೂಪಿಸಲು ಮುಂದಾಗಿದ್ದು, ಈ ಸಂಬಂಧ ಮೂರು ಹಂತದ ಸಮಿತಿ ರಚಿಸಲು ನಿರ್ಧರಿಸಿದೆ. ಐಟಿಬಿಟಿ ಇಲಾಖೆಯ ಈ ಪ್ರಸ್ತಾವಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ| ಪರಮೇಶ್ವರ ಅವರಿಂದ ತಾತ್ತಿ$Ìಕ ಒಪ್ಪಿಗೆ ಲಭಿಸಿದ್ದು, ಆದಷ್ಟು ಶೀಘ್ರ ಜಾರಿಯಾಗಲಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಈ ಬಗ್ಗೆ ಐಟಿಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಸುದೀರ್ಘ‌ ವಿವರಣೆ ನೀಡಿದರು. ರಾಜಕೀಯ ದ್ವೇಷ ಸಾಧನೆ ಅಥವಾ ಮಾಧ್ಯಮವನ್ನು ಕಟ್ಟಿಹಾಕುವ ಉದ್ದೇಶದಿಂದ ನಾವು ಈ ಚೌಕಟ್ಟು ರೂಪಿಸುತ್ತಿಲ್ಲ. ಸುಳ್ಳು ಸುದ್ದಿ ಪ್ರಸಾರದಿಂದ ಸಮಾಜದ ಮೇಲೆ ಆಗುತ್ತಿರುವ ಒಟ್ಟು ದುಷ್ಪರಿಣಾಮವನ್ನು ಕಡಿಮೆ ಮಾಡುವುದಕ್ಕಾಗಿ ಈ ಪ್ರಯತ್ನ. ಪ್ರಚಾರ, ಅಪಪ್ರಚಾರ ಎರಡನ್ನೂ ಪರಿಶೀಲನೆ ಮಾಡುವ ಗುರುತರ ಜವಾಬ್ದಾರಿ ಇದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುಳ್ಳು ಸುದ್ದಿಗಳಿಂದ ಸಾಮಾಜಿಕ ಸ್ವಾಸ್ಥ್ಯದ ಮೇಲಾಗುವ ಪರಿಣಾಮದ ಬಗ್ಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ಪ್ರಧಾನಿ ನರೇಂದ್ರ ಮೋದಿ, ಎಡಿಟರ್ ಗಿಲ್ಡ್‌ ಸಹಿತ ಎಲ್ಲ ಪ್ರಾತಿನಿಧಿಕ ಸಂಸ್ಥೆ ಮತ್ತು ವ್ಯಕ್ತಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುವ ಮುನ್ನ ಫ್ಯಾಕ್ಟ್ ಚೆಕ್‌ ಮಾಡುವುದು ನಮ್ಮ ಜವಾಬ್ದಾರಿ ಎಂದು ಖುದ್ದು ಪ್ರಧಾನಿ ಕಚೇರಿಯಂದಲೇ ಟ್ವೀಟ್‌ ಮಾಡಲಾಗಿತ್ತು. ನಾನು ನಮ್ಮ ಪ್ರಧಾನಿಗಳ ಆದೇಶವನ್ನು ಪಾಲನೆ ಮಾಡುತ್ತಿದ್ದೇನೆ. ಈ ಕಾರಣಕ್ಕೆ ಬಿಜೆಪಿಯವರು ನನ್ನ ಮೇಲೆ ಸಿಟ್ಟಾಗುವುದೇಕೆ ಎಂದು ವ್ಯಂಗ್ಯವಾಡಿದರು.

ವಾಕ್‌ ಸ್ವಾತಂತ್ರ್ಯಕ್ಕೆ ತೊಂದರೆ ಇಲ್ಲ

ಸುಳ್ಳು ಸುದ್ದಿ ನಿಯಂತ್ರಣಕ್ಕೆ ಸಿದ್ದಪಡಿಸುವ ಈ ಚೌಕಟ್ಟಿನ ಮೂಲಕ ತಪ್ಪು ಮಾಹಿತಿ, ದುರುದ್ದೇಶ ಪೂರಿತ ತಪ್ಪು ಮಾಹಿತಿ, ದ್ವೇಷ ಸಮಾಚಾರ ಹರಡುವಿಕೆಗೆ ಕಡಿವಾಣ ಹಾಕಲು ನಿರ್ಧರಿಸಿದ್ದೇವೆ. ಇದರಿಂದ ವಾಕ್‌ ಸ್ವಾತಂತ್ರ್ಯ ಅಥವಾ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲ. ಸಾರ್ವಜನಿಕ ಅಭಿಪ್ರಾಯವನ್ನು ಸೃಷ್ಟಿಸುವ ವಿಧಾನದಲ್ಲಿ ಸರಿ-ತಪ್ಪು; ಇದೆಯೋ, ಇಲ್ಲವೋ ಎಂಬುದು ಮುಖ್ಯವಾಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಕೆಲವು ರಾಜಕೀಯ ಪಕ್ಷ ಹಾಗೂ ಸಂಸ್ಥೆಗಳು ಅಪಪ್ರಚಾರ ಮಾಡುವುದನ್ನೇ ತಮ್ಮ ಉದ್ದೇಶವಾಗಿಸಿಕೊಂಡಿವೆ ಎಂದು ಕಳವಳ ವ್ಯಕ್ತಪಡಿಸಿದರು.

Advertisement

ತಿರುಚುವ ಸುದ್ದಿಗಳ ಮೇಲೆ ನಿಗಾ

ಎಂದೋ ಹೇಳಿದ ಮಾತುಗಳನ್ನು ಇನ್ಯಾವುದೋ ಸಂದರ್ಭ ಅಥವಾ ಘಟನೆಯ ಜತೆಗೆ ಜೋಡಿಸಿ ತಪ್ಪು ಸಂದೇಶ ರವಾನೆ ಮಾಡುವುದು, ಸಂಬಂಧ ಇಲ್ಲದ ವಿಚಾರಗಳನ್ನು ಪ್ರಚಾರ ಮಾಡುವುದು ಹೆಚ್ಚುತ್ತಿದೆ. ಕೆಲವೊಮ್ಮೆ ಅಚಾತುರ್ಯದಿಂದ ಆದ ಘಟನೆಗಳಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ಆದರೆ ನಾವು ಮೂರು ಹಂತದಲ್ಲಿ ರಚನೆ ಮಾಡುವ ಸಮಿತಿ ಇದೆಲ್ಲದರ ಬಗ್ಗೆ ನಿಗಾ ವಹಿಸುತ್ತದೆ. ಇದು ಸುಳ್ಳು ಸುದ್ದಿ ಪ್ರಸಾರದ ವಿರುದ್ಧ ನಡೆಸುವ ನಿರ್ಣಾಯಕ ಯುದ್ಧವಾಗಬೇಕೆಂದು ನಾವು ಬಯಸುತ್ತೇವೆ. ಇದಕ್ಕಾಗಿ ರಾಜ್ಯ ಸರಕಾರ ಯಾವುದೇ ನೀತಿ ಅಥವಾ ಕಾನೂನು ತಿದ್ದುಪಡಿ ಮಾಡುವುದಿಲ್ಲ. ಇರುವ ವ್ಯವಸ್ಥೆಯೊಳಗೆ ಚೌಕಟ್ಟು ರೂಪಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದಕ್ಕಾಗಿ ರಾಜ್ಯಮಟ್ಟದ ಸಮಿತಿ ರಚಿಸುತ್ತೇವೆ. ಇದರ ಅಡಿಯಲ್ಲಿ ಪರಿಶೀಲನ ಸಮಿತಿ ಹಾಗೂ ನೋಡಲ್‌ ಅಧಿಕಾರಿಗಳು ಇರುತ್ತಾರೆ. ಫಾಕ್ಟ್ ಚೆಕ್‌ ಹಂತದಲ್ಲಿ ಹಂಚಿಕೆಯಾದ ಮಾಹಿತಿಯ ಸರಿ-ತಪ್ಪುಗಳ ಪರಿಶೀಲನೆ ನಡೆಯುತ್ತದೆ. ಆ ಬಳಿಕ ತಾಂತ್ರಿಕ ಪರಿಣತರನ್ನು ಒಳಗೊಂಡ ವಿಶ್ಲೇಷಕ ಮಂಡಳಿ ಇರುತ್ತದೆ. ಜತೆಗೆ ಸಾಮರ್ಥ್ಯ ವರ್ಧನೆಗೆ ವ್ಯವಸ್ಥೆ ರೂಪಿಸುತ್ತೇವೆ ಎಂದು ವಿವರಿಸಿದರು.

ಸಮಿತಿಯಲ್ಲಿ ಯಾರಿರುತ್ತಾರೆ?

ಈ ಸಮಿತಿಯಲ್ಲಿ ಎಡಿಜಿಪಿ ಸಿಐಡಿ ಅಥವಾ ಅದೇ ದರ್ಜೆಯ ಪೊಲೀಸ್‌ ಅಧಿಕಾರಿ, ಮಾಹಿತಿ ಮತ್ತು ಸಾರ್ವಜನಿಕ ಪ್ರಚಾರ ಇಲಾಖೆಯಿಂದ ಒಬ್ಬ ಪ್ರತಿನಿಧಿ, ಐಟಿಬಿಟಿ ಇಲಾಖೆ, ಐಐಟಿ-ಡೀನ್‌, ಸೈಬರ್‌ ಸೆಕ್ಯುರಿಟಿ ಕೇಂದ್ರದ ಒಬ್ಬ ಪ್ರತಿನಿಧಿ, ಜತೆಗೆ ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಈ ಸಮಿತಿಯ ಸದಸ್ಯರನ್ನಾಗಿ ಮಾಡುತ್ತೇವೆ. ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳಿಗೂ ಅವಕಾಶ ನೀಡುತ್ತೇವೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next