Advertisement

ಪುಂಡರಿಗೆ ಪೊಲೀಸರ ಗುಂಡೇಟಿನ ಪಾಠ

12:15 PM Jul 30, 2018 | |

ಬೆಂಗಳೂರು: ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಆರೋಪಿಗಳಿಗೆ ಚುರುಕುಮುಟ್ಟಿಸಲು ಸಜ್ಜಾಗಿರುವ ರಾಜಧಾನಿ ಪೊಲೀಸರು ಗುಂಡೇಟಿನ ಮೂಲಕ ಪಾಠ ಕಲಿಸುತ್ತಿದ್ದಾರೆ.

Advertisement

ಕುಖ್ಯಾತ ರೌಡಿ ಸೈಕಲ್‌ ರವಿಯನ್ನು ಗುಂಡು ಹಾರಿಸಿ ಬಂಧಿಸಿದ ಪ್ರಕರಣದ ಬೆನ್ನಲ್ಲೇ ನಗರದಲ್ಲಿ ಮತ್ತೂಬ್ಬ ರೌಡಿಯನ್ನು ಶನಿವಾರ ತಡರಾತ್ರಿ ಗುಂಡು ಹಾರಿಸಿ ವಶಕ್ಕೆ ಪಡೆದಿರುವ ಪ್ರಕರಣ ನಡೆದಿದೆ.

ಹಳೆವೈಷಮ್ಯದ ಹಿನ್ನೆಲೆಯಲ್ಲಿ ಎದುರಾಳಿ ಗುಂಪಿನ ರೌಡಿಯ ಕೊಲೆಗೆ ಸಂಚು ರೂಪಿಸಿ ನಗರದಲ್ಲಿಯೇ ಠಿಕಾಣಿ ಹೂಡಿದ್ದ ಮೈಸೂರು ಮೂಲದ ರೌಡಿ ಕಿರಣ್‌ ಅಲಿಯಾಸ್‌ ಕಿರ್ಬ ಎಂಬಾತನ ಬಲಗಾಲಿಗೆ ಗುಂಡು ಹಾರಿಸಿರುವ ಕೆ.ಪಿ. ಅಗ್ರಹಾರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ರಾಜಧಾನಿಯಲ್ಲಿ ಕಳೆದ ಜನವರಿಯಿಂದ ಇದುವರೆಗೂ ರೌಡಿಗಳ ಮೇಲೆ ಗುಂಡು ಹಾರಿಸಿದ 13ನೇ ಪ್ರಕರಣ ಇದಾಗಿದೆ. ಕೊಲೆಯತ್ನ, ದರೋಡೆ, ಸರಗಳವು, ಕೊಲೆ ಸೇರಿದಂತೆ ಇನ್ನಿತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ  ತೊಡಗಿಸಿಕೊಂಡಿದ್ದ ದುಷ್ಕರ್ಮಿಗಳಿಗೆ ಗುಂಡು ಹಾರಿಸಿರುವ ನಗರ  ಪೊಲೀಸರು  18 ಮಂದಿ  ಹೆಡೆಮುರಿ ಕಟ್ಟಿದ್ದಾರೆ.

ಪೇದೆಗೆ ಮಚ್ಚಿನೇಟು, ಕಿರ್ಬನಿಗೆ ಗುಂಡೇಟು: ಆರೋಪಿ ಕೆಲದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದು ಸ್ಥಳೀಯ ರೌಡಿಗಳ ಜತೆ ಸೇರಿ ಜುಲೈ 25ರಂದು ರಾತ್ರಿ ಭುವನೇಶ್ವರಿ ನಗರ, ಚೋಳರ ಪಾಳ್ಯದದಲ್ಲಿರುವ ಕಾಂಗ್ರೆಸ್‌ ಪಕ್ಷದ ಕಚೇರಿಯ ಕಿಟಕಿ ಗ್ಲಾಸ್‌ ಹಾಗೂ  ರಸ್ತೆಬದಿ ನಿಲ್ಲಿಸಿದ್ದ ವಾಹನಗಳಳ ಗಾಜು ಪುಡಿ ಪುಡಿಮಾಡಿ ದಾಂಧಲೆ ನಡೆಸಿದ್ದರು. 

Advertisement

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು ಬಸವೇಶ್ವರ ನಗರ ಹಾಗೂ ಕೆ.ಪಿ ಅಗ್ರಹಾರ ಪೊಲೀಸ್‌ ಠಾಣೆಗಳ ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿತ್ತು. ಅದರಂತೆ ಆರೋಪಿ ಶನಿವಾರ ರಾತ್ರಿ 12.30ರ ಸುಮಾರಿಗೆ ಬಿನ್ನಿ ಕ್ಯಾಂಟೀನ್‌ ರೈಲ್ವೇ ಬಿಡ್ಜ್ ಬಳಿ ಇರುವ ಮಾಹಿತಿ ತಿಳಿದು ಕೆ.ಪಿ ಅಗ್ರಹಾರ ಠಾಣೆ ಇನ್ಸ್‌ಪೆಕ್ಟರ್‌ ಎಸ್‌.ಎಸ್‌ ಮಂಜುನಾಥ್‌ ನೇತೃತ್ವದಲ್ಲಿ ಆರೋಪಿ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿತು.

ಪೊಲೀಸರನ್ನು ಕಂಡ ಕೂಡಲೇ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿ ಸಮೀಪದ ಪಾಳುಬಿದ್ದ ಗೋಡೆ ಹಾರಿ ಕತ್ತಲಿನಲ್ಲಿ ತರೆಮರೆಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್‌ ಮಂಜು ಅವರು, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಆರೋಪಿ ಕೇಳದೆ ಹಿಡಿಯಲು ಹೋದ ಮುಖ್ಯಪೇದೆ ನಾಗರಾಜಪ್ಪ  ಅವರ ಕೈಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಹೀಗಾಗಿ ಆತ್ಮರಕ್ಷಣೆಗಾಗಿ ಕಿರ್ಬನ ಬಲಗಾಲಿಗೆ ಪೊಲೀಸರು ಗುಂಡು ಹಾರಿಸಿದರು.

 ಕುಸಿದು ಬಿದ್ದ  ಆತನನ್ನು ಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಆರೋಪಿ ಬೀಸಿದ ಮಚ್ಚೇಟಿನಿಂದ ಗಾಯಗೊಂಡಿರುವ ಪೇದೆ  ನಾಗರಾಜಪ್ಪ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಬಿಡುಗಡೆಯಾಗಿ  ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

ಆರೋಪಿ ವಿರುದ್ಧ ವಿವಿಧ  ಪೊಲೀಸ್‌ ಠಾಣೆಗಳಲ್ಲಿ ಕೊಲೆಯತ್ನ, ಕೊಲೆ ಡಕಾಯಿತಿ ಸೇರಿ ಒಟ್ಟು ಒಂಬತ್ತು ಪ್ರಕರಣಗಳ ಆರೋಪಿಯಾಗಿದ್ದಾನೆ. ಕೆ.ಪಿ ಅಗ್ರಹಾರ ಠಾಣೆಯಲ್ಲಿ ಕೊಲೆಯತ್ನ  ಸಂಬಂಧ 3 ಪ್ರಕರಣಗಳಿದ್ದು, ಆರೋಪಿಗಳ ಸಹಚರರ ಬಂಧನಕ್ಕೆ ಬಲೆ ಬೀಸಿದ್ದು  ಪ್ರಕರಣದ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ವಿವರಿಸಿದರು.

ಕಾಂಗ್ರೆಸ್‌ ಮುಖಂಡನ ಹತ್ಯೆ ಪ್ರಕರಣ ಆರೋಪಿ!: ಮೈಸೂರಿನ ಊಟಿ ರಸ್ತೆಯ ನಿವಾಸಿಯಾಗಿರುವ ಕಿರಣ ಅಲಿಯಾಸ್‌ ಕಿರ್ಬ ಎರಡು ವರ್ಷಗಳ ಹಿಂದೆ ರಾಮನಗರದ ಜಾಲಮಂಗಲದ  ಗ್ರಾಮಪಂಚಾಯಿತಿ ಸದಸ್ಯ ಹಾಗೂ ಕಾಂಗ್ರೆಸ್‌ ಮುಖಂಡ ದತ್ತಾತ್ರೇಯ ಕುಮಾರ್‌ ಕೊಲೆ ಪ್ರಕರಣದ  ಆರೋಪಿಯಾಗಿದ್ದು ಬಂಧಿತನಾಗಿದ್ದ.

ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕಿರಣ, ಮೈಸೂರು, ರಾಮನಗರ ಸೇರಿ ಇನ್ನಿತರೆಡೆ ಅಪರಾಧಿಕ ಕೃತ್ಯಗಳಲ್ಲಿ  ತೊಡಗಿಸಿಕೊಂಡಿದ್ದಾನೆ. ಈ ಹಿಂದೆ ಆಟೋ ಚಾಲಕನಾಗಿದ್ದ ಕಿರಣ ಕಾಂಗ್ರೆಸ್‌ ಮುಖಂಡನ ಕೊಲೆ ಪ್ರಕರಣದ ಬಳಿಕ ಬೆಂಗಳೂರಿನ ರೌಡಿಗಳ ಸಂಪರ್ಕಕ್ಕೆ ಸಿಕ್ಕಿದ್ದ. ಬಳಿಕ ಇಲ್ಲಿ ಕೂಡ ಅಪರಾಧಿಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆ.

ಸ್ಥಳೀಯ ಪುಡಿರೌಡಿಗಳ ಜತೆ ದರೋಡೆ ಸೇರಿ ಇನ್ನಿತರೆ ಕೃತ್ಯಗಳನ್ನು ಎಸಗಿ ಇಲ್ಲಿಯೇಸ್ನೇಹಿತರ ರೂಂ ಅಥವಾ ಲಾಡ್ಜ್ಗಳಲ್ಲಿ ತಂಗುತ್ತಿದ್ದ ಆತ, ಕೆಲವು  ದಿನ ಮೈಸೂರಿನಲ್ಲಿ ತಂಗುತ್ತಿದ್ದ. ಕಳೆದ ಭಾನುವಾರ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಸ್ಥಳೀಯ ರೌಡಿಯ ಹತ್ಯೆಗೆ ಸಂಚು ರೂಪಿಸಿ ನಗರಕ್ಕೆ ಬಂದಿದ್ದ ಎಂಬ ಮಾಹಿತಿ ಇದೆ. ಮತ್ತೂಬ್ಬ ರೌಡಿ ಶೀಟರ್‌ ನವೀನ್‌ ಎಂಬಾತನ ಜತೆ ಈತ ವಾಸವಿದ್ದ ಎಂದು ಹೇಳಲಾಗಿದೆ.

ಇನ್ಸ್‌ಪೆಕ್ಟರ್‌ ಮಂಜು ಅವರ ಎರಡನೇ ಫೈರಿಂಗ್‌: ಇನ್ಸ್‌ಪೆಕ್ಟರ್‌ ಮಂಜು ಅವರು ಇದೇ ವರ್ಷ ನಡೆಸಿದ ಎರಡನೇ ಫೈರಿಂಗ್‌ ಪ್ರಕರಣ ಇದಾಗಿದೆ. ಜನವರಿ 28ರಂದು ಕೆ.ಪಿ.ಅಗ್ರಹಾರ ನಿವಾಸಿ ಮಿನಿಬಸ್‌ ಚಾಲಕ ರಾಜೇಶ್‌ ಮತ್ತು ಮಾಲಾ ದಂಪತಿ ಪುತ್ರ ಚಂದನ್‌ನನ್ನು ಅಪಹರಣ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಒಬ್ಬನಾದ ಕಸ್ತೂರಬಾ ನಗರದ ದಿವ್ಯತೇಜ್‌ ಎಂಬಾತನನ್ನು  ಕೆಂಗೇರಿಯ ಸರ್‌.ಎಂ. ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಗುಂಡು ಹಾರಿಸಿ ಬಂಧಿಸಿದ್ದರು.

ಏಳು ತಿಂಗಳಲ್ಲಿ 13 ಶೂಟೌಟ್‌
ಜನವರಿ 28:
ಕೆಂಗೇರಿಯ ಸರ್‌ ಎಂ. ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ದಿವ್ಯತೇಜ್‌ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಕೆ.ಪಿ.ಅಗ್ರಹಾರ ಪೊಲೀಸರು.

ಫೆಬ್ರವರಿ 2: ಪೊಲೀಸರ ರೈಫ‌ಲ್‌ ಕಿತ್ತುಕೊಂಡು ಹೋಗಿದ್ದ ಮಧ್ಯಪ್ರದೇಶದ “ಭಿಲ್‌ ಗ್ಯಾಂಗ್‌’ ದುಷ್ಕರ್ಮಿಗೆ ಗುಂಡೇಟು, ನಾಲ್ಕು ಮಂದಿಯ  ಸೆರೆ.

ಮಾರ್ಚ್‌ 26: ಯುವತಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ತಮಿಳುನಾಡು ಮೂಲದ ಶಂಕರ್‌, ಸೆಲ್ವಕುಮಾರ್‌ಕಾಲಿಗೆ ವೈಟ್‌ಫೀಲ್ಡ್‌, ಬೆಳ್ಳಂದೂರು ಠಾಣೆ ಪೊಲೀಸರಿಂದ ಗುಂಡು.

ಮಾರ್ಚ್‌ 28: ಬನಶಂಕರಿ 6ನೇ ಹಂತದ ನೈಸ್‌ ರಸ್ತೆಯಲ್ಲಿ ಕಾಟನ್‌ಪೇಟೆ ಠಾಣೆ ರೌಡಿಶೀಟರ್‌ ರೂಪೇಶ್‌ (29) ಎಡಗಾಲಿಗೆ ಗುಂಡು ಹಾರಿಸಿ ಚಾಮರಾಜಪೇಟೆ ಪೊಲೀಸರಿಂದ ಬಂಧನ.

ಏಪ್ರಿಲ್‌ 1: ಬಂಧಿಸಲು ಹೋದ ಪೊಲೀಸರ ಮೇಲೆ ಪಿಸ್ತೂಲ್‌ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಕೆಂಬತ್ತಹಳ್ಳಿ ಪರಮೇಶ್‌, ಸಂತೋಷ್‌ಗೆ ತಲ್ಲಘಟ್ಟಪುರ ಪೊಲೀಸರ ಗುಂಡೇಟಿನ ಉತ್ತರ.

ಏಪ್ರಿಲ್‌ 5: ಸ್ನೇಹಿತನ ಕೊಂದ ಆರೋಪದಲ್ಲಿ ಬಂಧಿಸಲು ಹೋದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಚರಣ್‌ ರಾಜ್‌ಗೆ ಮಹದೇವಪುರ ಠಾಣೆ ಪೊಲೀಸರಿಂದ ಗುಂಡು, ಬಂಧನ.

ಏಪ್ರಿಲ್‌ 11: ಸರ ಚೋರ, ಉತ್ತರ ಪ್ರದೇಶದ ಬಾವಾರಿಯಾ ಗ್ಯಾಂಗ್‌ನ ರಾಮ್‌ಸಿಂಗ್‌ (35) ಮೇಲೆ ಗುಂಡು ಹಾರಿಸಿ ಬಂಧಿಸಿದ ಆರ್‌ಎಂಸಿ ಯಾರ್ಡ್‌ ಪೊಲೀಸರು.

ಜೂನ್‌ 5: ದರೋಡೆ ಪ್ರಕರಣದ ಆರೋಪಿ ಬ್ಯಾಡರಹಳ್ಳಿಯ ಶರವಣ ಅಲಿಯಾಸ್‌ ತರುಣ್‌ಗೆ ಗುಂಡೇಟು. ವಿಜನಗರ ಠಾಣೆ ಪೊಲೀಸರ ಕಾರ್ಯಾಚರಣೆ.

ಜೂನ್‌ 18: ಬೈಕ್‌ನಲ್ಲಿ ಬಂದು ಮಹಿಳೆಯರ ಸರ ಕಸಿದು ಹೋಗುತ್ತಿದ್ದ ಸರಗಳ್ಳ ಅಚ್ಯುತ್‌ ಕುಮಾರ್‌ ಅಲಿಯಾಸ್‌ ಗಣಿ ಕಾಲಿಗೆ ಬನಶಂಕರಿ 6ನೇ ಹಂತ  ಬಳಿ ಗುಂಡು ಹಾರಿಸಿ ಬಂಧಿಸಿದ ಕೆಂಗೇರಿ ಪೊಲೀಸರು.

ಜೂನ್‌ 20: ರಾಜಗೋಪಾಲನಗರ ಠಾಣೆ ವ್ಯಾಪ್ತಿಯ ಕರೀಂಸಾಬ್‌ ಲೇಔಟ್‌ ಬಳಿ ರೌಡಿಶೀಟರ್‌ಗಳಾದ ಬಸವೇಶ್ವರನಗರದ ರಫೀಕ್‌ (28), ಶ್ರೀರಾಮಪುರದ ಸುಧಾಕರ್‌ (30)  ಗುಂಡೇಟು.

ಜೂನ್‌ 22: ರೌಡಿಶೀಟರ್‌ನನ್ನು ಕೊಂದ ರೌಡಿಶೀಟರ್‌ ಚರಣ್‌ ರಾಜ್‌ನಿಂದ, ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಗುಂಡು ಹಾರಿಸಿ ಬಂಧಿಸಿದ ಕೆ.ಆರ್‌ ಪುರ ಪೊಲೀಸರು.

ಜೂನ್‌ 27: ಉತ್ತರಹಳ್ಳಿಯ ಮುಖ್ಯರಸ್ತೆಯಲ್ಲಿ ರೌಡಿಶೀಟರ್‌ ಹಾಗೂ ಸುಪಾರಿ ಕಿಲ್ಲರ್‌ ಸೈಕಲ್‌ ರವಿ ಕಾಲಿಗೆ ಗುಂಡು ಹಾರಿಸಿ ಸಿಸಿಬಿ ಪೊಲೀಸರಿಂದ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next