Advertisement

ಮೆರವಣಿಗೆಗೆ ಹೈಕೋರ್ಟ್‌ ನಕಾರ

11:54 AM Apr 29, 2022 | Team Udayavani |

ಬೆಂಗಳೂರು: ಕಾರ್ಮಿಕರ ದಿನಾಚರಣೆ ಅಂಗವಾಗಿ ಮೇ 1ರಂದು ನಗರದಲ್ಲಿ ಮೆರವಣಿಗೆ ನಡೆಸಲು ಕಾರ್ಮಿಕ ಸಂಘಟನೆ ಗಳಿಗೆ ಅನುಮತಿ ನೀಡಲು ಹೈಕೋರ್ಟ್‌ ನಿರಾಕರಿಸಿದೆ.

Advertisement

ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿ ಬೆಂಗಳೂರಿನ ಬೇರೆ ಯಾವುದೇ ಭಾಗದಲ್ಲೂ ಯಾವುದೇ ರಾಜಕೀಯ ಅಥವಾ ರಾಜಕಿಯೇತರ ಸಂಘಟನೆಗಳು ಮೆರವಣಿಗೆ, ಪ್ರತಿಭಟನೆ, ಬಹಿರಂಗ ಸಭೆ ನಡೆಯದಂತೆ ಹೈಕೋರ್ಟ್‌ ಮಾ.3ರಂದು ಆದೇಶಿಸಿತ್ತು. ಈ ಆದೇಶದ ಮೇರೆಗೆ ಮೇ 1ರಂದು ನಗರದಲ್ಲಿ ಶಾಂತಿಯುತ ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದನ್ನು ಆಕ್ಷೇಪಿಸಿ ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಎಐಟಿಯುಸಿ) ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳು ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದವು.

ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌. ದೇವದಾಸ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಮೇ 1ರಂದು ಹಗಲು ವೇಳೆ ಮೆರವಣಿಗೆ ನಡೆಸಲು ಕಾರ್ಮಿಕ ಸಂಘಟನೆಗಳು ಉದ್ದೇಶಿಸಿವೆ. ಇದರಿಂದ ವಾಹನ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಲಿದೆ. ಕಾರ್ಮಿಕರ ಮೆರವಣಿಗೆಯನ್ನು ಕರಗ ಮೆರವಣಿಗೆಯೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಕಾರ್ಮಿಕ ಸಂಘಟನೆಗಳ ಮೆರವಣಿಗೆಗೆ ಅನುಮತಿ ನಿರಾಕರಿಸಿತು. ಅಲ್ಲದೆ, ಅರ್ಜಿದಾರ ಸಂಘಟನೆಗಳ ಸದಸ್ಯರು ನಗರದ ರೈಲ್ವೆ ನಿಲ್ದಾಣ ಮತ್ತು ಟೌನ್‌ಹಾಲ್‌ ಬಳಿ ಸೇರಿ ಫ್ರೀಡಂ ಪಾರ್ಕ್‌ವರೆಗೆ ನಡೆದುಕೊಂಡು ಹೋಗುತ್ತಾರೆ ಎನ್ನುವುದಾದರೆ ಅದಕ್ಕಾಗಿ ಪೊಲೀಸರು ಮತ್ತು ನ್ಯಾಯಾಲಯದಿಂದ ಅನುಮತಿ ಪಡೆಯುವ ಅಗತ್ಯವಿಲ್ಲ.

ಬೆಂಗಳೂರು ನಗರದ ರಸ್ತೆಯಲ್ಲಿ ಮೆರವಣಿಗೆ ನಡೆಸಬಾರದು ಹಾಗೂ ಅದಕ್ಕೆ ಅನುಮತಿ ನೀಡ ಬಾರದು ಎಂದು ಈ ಹಿಂದೆ ಹೈಕೋರ್ಟ್‌ ಹೊರಡಿಸಿರುವ ಆದೇಶಕ್ಕೆ ಅನುಗುಣವಾಗಿ ಪೊಲೀಸರು ಕೈಗೊಂಡಿರುವ ನಿರ್ಧಾರ ಸೂಕ್ತವಾಗಿದೆ. ಆದ್ದರಿಂದ ಕಾರ್ಮಿಕರ ಸಂಘಟನೆಗಳ ಸದಸ್ಯರ ಮೆರವಣಿಗೆಗೆ ಅನುಮತಿ ನೀಡಬೇಕೆಂಬ ಕೋರಿಕೆಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಒಂದು ವೇಳೆ ಅರ್ಜಿದಾರರ ಸಂಘಟನೆಗಳ ಸದಸ್ಯರು ಫ್ರೀಡಂ ಪಾರ್ಕ್‌ ಆವರಣದಲ್ಲಿ ಸೇರಿ ಸಭೆ ನಡೆಸುವುದಾದರೆ, ಅದಕ್ಕೆ ಅನುಮತಿ ನೀಡಬಹುದು ಎಂದ ಹೈಕೋರ್ಟ್‌, ನಗರದಲ್ಲಿ ಮೆರೆವಣಿಗೆ ನಡೆಸಲು ಅರ್ಜಿದಾರರಿಗೆ ನ್ಯಾಯಾಲಯ ಯಾವುದೇ ಅನುಮತಿ ನೀಡಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿ ಅರ್ಜಿ ಇತ್ಯರ್ಥಪಡಿಸಿತು.

Advertisement

ಕಾರ್ಮಿಕ ದಿನಾಚರಣೆ ಅಂಗವಾಗಿ ಸಂಘಟನೆಗಳು ಅನುಮತಿ ಕೋರಿದ್ದ ಅರ್ಜಿ ವಜಾಕರಗ ಮೆರವಣಿಗೆ ಹೋಲಿಕೆ ಸರಿ ಅಲ್ಲ ವಿಚಾರಣೆ ವೇಳೆ ಅರ್ಜಿದಾರ ಸಂಘಟನೆಗಳ ಪರ ವಕೀಲರು, ಕರಗ ಮೆರವಣಿಗೆ ನಡೆಸಲು ಹೈಕೋರ್ಟ್‌ ಏ.13ರಂದು ಅನುಮತಿ ನೀಡಿತ್ತು. ಮೇ 1ರಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಇದೆ. ಆದ್ದರಿಂದ ಅರ್ಜಿದಾರರ ಸಂಘಟನೆಗಳ ಸದಸ್ಯರು ನಗರದ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಮತ್ತು ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ ವರಗೆ ಶಾಂತಿಯುತ ಮೆರವಣಿಗೆ ನಡೆಸುತ್ತಾರೆ. ಬಳಿಕ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಸಭೆಗೆ ಹಾಜರಾಗುತ್ತಾರೆ. ಹಾಗಾಗಿ, ಮೆರವಣಿಗೆ ನಡೆಸಲು ಕಾರ್ಮಿಕರ ಸಂಘಟನೆಗಳಿಗೂ ಅನುಮತಿ ನೀಡಬೇಕು ಎಂದು ಕೋರಿದರು.

ಇದನ್ನು ಆಕ್ಷೇಪಿಸಿದ ಸರ್ಕಾರಿ ವಕೀಲರು, ಕರಗ ಉತ್ಸವ ಹಿನ್ನೆಲೆಯನ್ನು ಪರಿಗಣಿಸಿ ಮೆರವಣಿಗೆ ನಡೆಸಲು ಹೈಕೋರ್ಟ್‌ ಅನುಮತಿ ನೀಡಿತ್ತು. ಮುಖ್ಯವಾಗಿ ಕರಗ ಮೆರವಣಿಗೆ ರಾತ್ರಿವೇಳೆ ನಡೆಯುತ್ತದೆ. ಆದರೆ, ಆ ಕರಗ ಮೆರವಣಿಗೆಗೆ ಕಾರ್ಮಿಕ ದಿನಾಚರಣೆ ಅಂಗವಾಗಿ ನಡೆಸಲು ಉದ್ದೇಶಿಸಿರುವ ಮೆರವಣಿಗೆಯನ್ನು ಹೋಲಿಸಲು ಆಗುವುದಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next