Advertisement

ಅರ್ಥಪೂರ್ಣ ಗ್ರಾಮೀಣ ದಸರಾ ಆಚರಣೆ

03:24 PM Sep 27, 2022 | Team Udayavani |

ಯಳಂದೂರು: ಯಳಂದೂರು ಪಟ್ಟಣದಲ್ಲಿ ಸೆ.29 ರಂದು ಗ್ರಾಮೀಣ ದಸರಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಶಾಸಕ ಎನ್‌. ಮಹೇಶ್‌ ಹೇಳಿದರು.

Advertisement

ಸೋಮವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದಸರಾ ನಾಡಹಬ್ಬವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಎರಡು ದಿನ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದರು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ 2 ತಾಲೂಕುಗಳಿದ್ದು ಸೆ.28 ರಂದು ಕೊಳ್ಳೇಗಾಲದಲ್ಲಿ ಗ್ರಾಮೀಣ ದಸರಾ ನಡೆಸಲು ತೀರ್ಮಾನಿಸಲಾಗಿದೆ. ಸೆ. 29 ರಂದು ಯಳಂದೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಗ್ಗೆ ವಿವಿಧ ಕಲಾತಂಡಗಳ ಜೊತೆಗೂಡಿ ಪಟ್ಟಣದ ಷಡಕ್ಷರ ದೇವರ ಗದ್ದುಗೆಯಿಂದ ಮೆರವಣಿಗೆ ನಡೆಯಲಿದೆ.

ಇದಕ್ಕೆ ಸ್ಥಳೀಯ ಕಲಾವಿದರನ್ನು ಬಳಸಿಕೊಳ್ಳಬೇಕು. ಪ್ರತಿ ಇಲಾಖೆಯಿಂದಲೂ ಇಲಾಖೆಯ ಕಾರ್ಯಕ್ರಮಗಳು, ಸರ್ಕಾರದ ಯೋಜನೆಗಳನ್ನು ಸಾರುವ ಕನಿಷ್ಠ 5 ಫೆಕ್ಸ್‌ಗಳನ್ನು ಮೆರವಣಿಗೆಯ ರಸ್ತೆಯುದ್ದಕ್ಕೂ ಹಾಕಬೇಕು. ಇದರಲ್ಲಿ ಕಡ್ಡಾಯವಾಗಿ ಮುಖ್ಯಮಂತ್ರಿ, ಸಂಬಂಧಪಟ್ಟ ಇಲಾಖೆಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಬೇಕು ಎಂದರು.

ಪಟ್ಟಣದ ಜಹಗೀರ್ದಾರ್‌ ಬಂಗಲೆ ಮುಂಭಾಗ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಮೈಸೂರು ಅರಸರ ಕೊಡುಗೆಗಳ ಬಗ್ಗೆ ವಿಚಾರವನ್ನು ಮಂಡಿಸಿ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ನಡೆಸ ಬೇಕು. ಶಾಲಾ ಮಕ್ಕಳ ಉತ್ತಮ ತಂಡಗಳು ಇಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡಬೇಕು. ಪಟ್ಟಣದ ಪ್ರಮುಖ ಬೀದಿಗಳಲ್ಲು ವಿದ್ಯುತ್‌ ದೀಪಾಲಂಕಾರ ಮಾಡಿಸಬೇಕು. ಪ್ರತಿ ಇಲಾಖೆಯ ಅಧಿಕಾರಿಗಳು ತಪ್ಪದೆ ಭಾಗವಹಿಸಬೇಕು. ಸ್ಕೌಟ್‌ ಅಂಡ್‌ ಗೈಡ್ಸ್‌ನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕು, ಮೆರವಣಿಗೆ ಮುಗಿದ ನಂತರ ಉಪಾಹಾರದ ವ್ಯವಸ್ಥೆ ಮಾಡಬೇಕು. ಪಟ್ಟಣದ ಅಲಂಕಾರ, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆಯನ್ನು ಪಟ್ಟಣ ಪಂಚಾಯಿತಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಲೈಟಿಂಗ್‌ ಹಾಕದಿದ್ದರೆ ಮನೆಗೆ ಹೋಗಬೇಕಾದಿತು, ಜೋಕೆ: ಪಟ್ಟಣದಲ್ಲಿ ಗ್ರಾಮೀಣ ದಸರಾ ಹಿನ್ನೆಯಲ್ಲಿ ಸೆಸ್ಕ್ ಇಲಾಖೆ ವಿದ್ಯುತ್‌ ದೀಪಾಲಂಕಾರ ಮಾಡಲು ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು. ಪ್ರತಿ ಬಾರಿಯೂ ಇವರ ಮೇಲೆ ದೂರುಗಳಿದ್ದು ಈ ಬಾರಿ ಈ ಜವಾಬ್ದಾರಿಯನ್ನು ನಿರ್ವಹಿಸದಿದ್ದರೆ ಎಇಇ ನಿಂಗರಾಜು ಮನೆಗೆ ಹೋಗಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಕೆ ನೀಡಿದರು. ಪಪಂ ಅಧ್ಯಕ್ಷೆ ಪ್ರಭಾವತಿ ರಾಜಶೇಖರ್‌, ಉಪಾಧ್ಯಕ್ಷೆ ಲಕ್ಷ್ಮೀಮಲ್ಲು, ಪಪಂ ಸದಸ್ಯ ಮಹೇಶ್‌ ತಹಶೀಲ್ದಾರ್‌ ಆನಂದಪ್ಪ ನಾಯಕ್‌, ಇಒ ಉಮೇಶ್‌, ಬಿಇಒ ಕೆ. ಕಾಂತರಾಜು, ಆರಕ್ಷಕ ವೃತ್ತ ನಿರೀಕ್ಷಕ ಶಿವಮಾದಯ್ಯ, ಮುಖ್ಯಾಧಿಕಾರಿ ಮಲ್ಲೇಶ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಕಲಾತಂಡಗಳ ಸದಸ್ಯರು, ಸಾರ್ವಜನಿಕರು ಇದ್ದರು.

Advertisement

ಕಂಬ ನೆಡಲು ನಾನು ಬರಲೇ! : ಸಿಡಿಪಿಒ ಸೋಮಶೇಖರ್‌ ಮಾತನಾಡಿ, ಇಲಾಖೆ ವತಿಯಿಂದ ಫ್ಲೆಕ್ಸ್‌ ಮಾಡಲಾಗುವುದು ಇದನ್ನು ನೆಡಲು ಕಂಬದ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದರು. ಇದಕ್ಕೆ ಉತ್ತರಿಸಿದ ಶಾಸಕರು ಇದನ್ನು ನೆಡಲು ನಾನು ಬರಬೇಕೇ? ಎಂದು ಪ್ರಶ್ನಿಸಿ ಸಂಪೂರ್ಣ ಜವಾಬ್ದಾರಿಯನ್ನು ಸಂಬಂಧಪಟ್ಟವರೆ ವಹಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next