ಭರಮಸಾಗರ: ಭರಮಸಾಗರ ಕೆರೆಯಲ್ಲಿ ನಡೆಯುತ್ತಿರುವ ಏತ ನೀರಾವರಿ ಯೋಜನೆಯ ಜಾಕ್ವೆಲ್ ಕಾಮಗಾರಿ ನವೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಇಲ್ಲಿನ ದೊಡ್ಡಕೆರೆಗೆ ಏತ ನೀರಾವರಿ ಯೋಜನೆಯಡಿ ತುಂಗಭದ್ರಾ ನದಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಬಾರಿ ಕೆರೆ ವೀಕ್ಷಣೆ ಮತ್ತು ಇತರೆ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಶ್ರೀಗಳು ಮಾತನಾಡಿದರು.
ಏತ ನೀರಾವರಿ ಯೋಜನೆಗಳು ಯಶಸ್ವಿಯಾಗಲ್ಲ ಎಂಬ ಕಲ್ಪನೆ ಐಎಎಸ್ ಅಧಿ ಕಾರಿಗಳಿಗಿದೆ. ಐಎಎಸ್, ಐಪಿಎಸ್ ಅಧಿ ಕಾರಿಗಳು ಒಂದು ವರ್ಷದ ನೈನಿತಾಲ್ ತರಬೇತಿ ಬದಲು ಹಳ್ಳಿಗಳಲ್ಲಿ ಒಂದು ವರ್ಷ ವಾಸ ಮಾಡಿ ತರಬೇತಿ ಪಡೆಯುವಂತಾಗಬೇಕು. ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡಿದರೆ ಸಾಲದು. ಅಧಿ ಕಾರಿಗಳು ಹವಾನಿಯಂತ್ರಿತ ವ್ಯವಸ್ಥೆಯಿಂದ ಹೊರ ಬಂದು ಹಳ್ಳಿಗಳ ಜನರ ಕಷ್ಟ-ಸುಖಗಳನ್ನು ಅರ್ಥ ಮಾಡಿಕೊಳ್ಳಬೇಕು. ಆಗ ನೀರಾವರಿ ಯೋಜನೆ ಸೇರಿದಂತೆ ಇತರೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. 2015ರಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಿಂದ ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ವಿಶ್ವ ಬ್ಯಾಂಕ್ ವತಿಯಿಂದ 40 ಕೆರೆಗಳನ್ನು ಕೆರೆ ಸಮಿತಿಗಳ ಮೂಲಕ ಅಭಿವೃದ್ಧಿಪಡಿಸುವ ಕೆಲಸವನ್ನು ಮೊಟ್ಟ ಮೊದಲ ಬಾರಿ ನಡೆಸಲಾಯಿತು. ಬಳಿಕ ಚನ್ನಗಿರಿ ತಾಲೂಕಿನ ಉಬ್ರಾಣಿ ಮತ್ತು ಅಮೃತಾಪುರ ಏತ ನೀರಾವರಿ ಯೋಜನೆಯ ಅನುಷ್ಠಾನಕ್ಕೆ ಹತ್ತು ವರ್ಷಗಳ ಕಾಲ ಶ್ರಮಿಸಲಾಯಿತು ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಬಜೆಟ್ನಲ್ಲಿ ಮಠಕ್ಕೆ ಏನು ನೀಡಬೇಕು ಎಂದು ಕೇಳಿದ್ದರು. ಆಗ ಸಿರಿಗೆರೆ ಸುತ್ತಮುತ್ತ ಕುಡಿಯುವ ನೀರಿಗೆ ಸಂಬಂ ಧಿಸಿದಂತೆ ಸೂಳೆಕೆರೆಯಿಂದ ನೀರು ಪೂರೈಸುವ ಯೋಜನೆಗೆ ಅನುದಾನ ನೀಡುವಂತೆ ಸೂಚಿಸಲಾಗಿತ್ತು. ಅವರು 25 ಕೋಟಿ ರೂ. ಗಳನ್ನು ಕುಡಿಯುವ ನೀರಿಗೆ ಬಿಡುಗಡೆ ಮಾಡಿದ್ದರು. ಹೀಗಾಗಿ ಸಿರಿಗೆರೆ ಸುತ್ತಮುತ್ತಲಿನ ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ ಎಂದು ತಿಳಿಸಿದರು. ಜಗಳೂರು ಮತ್ತು ಭರಮಸಾಗರ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರ ಮುಂದೆ ಪ್ರಸ್ತಾಪ ಮಾಡಲಾಗಿತ್ತು. 15 ದಿನಗಳಲ್ಲಿ ಬಜೆಟ್ ನಲ್ಲಿ 500 ಕೋಟಿ ರೂ. ಮೀಸಲಿಟ್ಟರು. ಬಳಿಕ ಎರಡು ಯೋಜನೆಗಳ ಅನುಷ್ಠಾನಕ್ಕೆ ಬೆನ್ನು ಬಿದ್ದೆವು. ದಾವಣಗೆರೆ ಜೆಎಂಐಟಿಯಲ್ಲಿ ಎರಡು ಯೋಜನೆಗಳ ಅನುಷ್ಠಾನಕ್ಕೆ ಸಂಬಂ ಧಿಸಿದಂತೆ ಹಲವಾರು ಅ ಧಿಕಾರಿಗಳು ಮತ್ತು ರಾಜಕಾರಣಿಗಳ ಸಭೆಗಳನ್ನು ನಡೆಸಲಾಯಿತು. ಎಮ್ಮೆಹಟ್ಟಿ ಬದಲು ಭರಮಸಾಗರ ಕೆರೆಗೆ ರೈಸಿಂಗ್ ಮೇನ್ ಮೂಲಕ ನೀರು ಹರಿಸಲು ಪಟ್ಟು ಹಿಡಿಯಲಾಯಿತು. ರೈಸಿಂಗ್ ಮೇನ್ ಮೂಲಕ ಇತರೆ ಕೆರೆಗಳಿಗೆ ನೀರು ಹರಿಸುವ ಯೋಜನೆಯ ರೂಪುರೇಷೆಯನ್ನು ತಾಂತ್ರಿಕ ಅಡಚಣೆ ಆಗುವ ಹಿನ್ನೆಲೆಯಲ್ಲಿ ನೇರವಾಗಿ ಭರಮಸಾಗರ ಕೆರೆಗೆ ನೀರು ಬೀಳುವಂತೆ ಬದಲಾವಣೆ ತರಲಾಯಿತು. ಹರಿಹರದ ಪಂಪ್ಹೌಸ್ ಬಳಿ ಏನಾದರೂ ವಿದ್ಯುತ್ ಸಮಸ್ಯೆ ಆದರೆ ಕೇವಲ ಆರು ನಿಮಿಷಗಳಲ್ಲಿ ಪಂಪ್ ರಿಪೇರಿಯಾಗಿ ನೀರು ನೇರವಾಗಿ ಭರಮಸಾಗರ ಕೆರೆ ತಲುಪುತ್ತದೆ. ಎರಡು ಮೋಟಾರ್ಗಳಿಂದ ಕೆರೆಗೆ ನೀರು ಹರಿಸುವ ಕೆಲಸ ಆಗುತ್ತಿದೆ. ಐದು ಮೋಟಾರ್ ಗಳು ಕೆಲಸ ಮಾಡಿದರೆ ಕೆರೆಯಲ್ಲಿನ ಇಂಟೆಕ್ ವೆಲ್ ಒಡೆದು ಹೋಗುವ ಮಟ್ಟಿಗೆ ನೀರು ಬರಲಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಅದು ಕಿತ್ತು ಹೋಗಲ್ಲ. ಆ ರೀತಿ ಎಂಜಿನಿಯರ್ ಗಳು ಡಿಸೈನ್ ಮಾಡಿದ್ದಾರೆ ಎಂದರು. ಕೆರೆಗೆ ನೀರು ಬಂದು ಬೀಳುವ ಸ್ಥಳದ ಡಿಸೈನ್ ಅನ್ನು ನೀರಾವರಿ ಇಲಾಖೆ ಅ ಧಿಕಾರಿಗಳಿಗೆ ನಾವೇ ಸ್ವತಃ ಸಿದ್ಧಪಡಿಸಿ ಕೊಟ್ಟಿದ್ದೆವು. ಡೆಲಿವೆರಿ ಚೇಂಬರ್ ಜಾಕ್ ವೆಲ್ ಬಳಿಯೇ ಕಟ್ಟಲು ಒಂದು ವರ್ಷದ ಹಿಂದೆಯೇ ಸೂಚಿಸಿದ್ದೆವು. ನೀರಾವರಿ ಇಲಾಖೆ ಎಂಡಿಯವರೇ ನಾವು ಕೆರೆ ಯೋಜನೆಯ ಬದಲಾವಣೆಗಳಿಗೆ ಸೂಚಿಸಿದ್ದನ್ನು ಕಂಡು ಆಶ್ಚರ್ಯಕ್ಕೆ ಒಳಗಾದರು. ನಾವು ಎಂಜಿನಿಯರಿಂಗ್ ಓದದೆ ಇದ್ದರೂ ತರ್ಕಶಾಸ್ತ್ರ ಅಧ್ಯಯನ ಮಾಡಿದ್ದೇವೆ. ಸಾಮಾನ್ಯಜ್ಞಾನವನ್ನು ಮಾತ್ರ ಬಳಕೆ ಮಾಡಿ ನೀರಾವರಿ ಇಲಾಖೆ ಅ ಧಿಕಾರಿಗಳ ಸಹಾಯ ಹಾಗೂ ತಾರ್ಕಿಕ ವಿವೇಚನೆಯಿಂದ ಕೆಲ ಬದಲಾವಣೆ ಮಾಡಿದೆವು ಎಂದು ಹೇಳಿದರು. ಕೆರೆ ನೀರು ತುಂಬಿಸುವ ಹೋರಾಟ ಸಮಿತಿ ಅಧ್ಯಕ್ಷ ಶಶಿ ಪಾಟೀಲ್, ಜಿಪಂ ಮಾಜಿ ಸದಸ್ಯರಾದ ಡಿ.ವಿ. ಶರಣಪ್ಪ, ಎಚ್.ಎನ್. ತಿಪ್ಪೇಸ್ವಾಮಿ, ಎಪಿಎಂಸಿ ಅಧ್ಯಕ್ಷ ಕೋಗುಂಡೆ ಮಂಜುನಾಥ್, ಶೈಲೇಶ್ಕುಮಾರ್,
ಹನುಮಂತಪ್ಪ, ಪ್ರವೀಣ್ಕುಮಾರ್, ಜಿ.ಎಸ್. ಮಂಜುನಾಥ್, ತೀರ್ಥಪ್ಪ, ನೀರಾವರಿ ಇಲಾಖೆ ಎಂಜಿನಿಯರ್ ಮಲ್ಲಪ್ಪ ಇತರರು ಇದ್ದರು.
ಯೋಜನೆಗೆ ಭೂಮಿ ಕೊಟ್ಟವರಿಗೆ ಸನ್ಮಾನ
ಏತ ನೀರಾವರಿ ಯೋಜನೆ ಉದ್ಘಾಟನೆ ವೇಳೆಗೆ ಯೋಜನೆಯ ಪೈಪ್ಲೈನ್ಗೆ ಭೂಮಿ ಕೊಟ್ಟವರನ್ನು ಸನ್ಮಾನಿಸಬೇಕು. ಉದ್ಘಾಟನಾ ಸಮಾರಂಭ ಪûಾತೀತ ಸಮಾರಂಭ ಆಗಬೇಕು. ಗ್ರಾಪಂ ವತಿಯಿಂದ ದೊಡ್ಡ ಕೆರೆ ಏರಿ ಮೇಲೆ ಲೈಟಿಂಗ್, ಬೆಂಚ್ಗಳ ವ್ಯವಸ್ಥೆ ಕಲ್ಪಿಸಬೇಕು. ಸಂಜೆ ವೇಳೆ ತಿನಿಸುಗಳ ಮಾರಾಟಕ್ಕೆ ಹಾಗೂ ವಾಯುವಿಹಾರಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಕೆರೆಯ ಬಳಿ ಉದ್ಯಾನವನ, ಬೋಟಿಂಗ್ಗೆ ಅವಕಾಶ ಕಲ್ಪಿಸಲು ಸಂಬಂಧಿಸಿದವರೊಂದಿಗೆ ಚರ್ಚಿಸಲಾಗಿದೆ. ಕೆರೆ ಅಭಿವೃದ್ಧಿಗೆ ಸಮಿತಿ ರಚಿಸಿ ಒಂದು ಕೋಟಿ ರೂ. ನಿ ಧಿಯನ್ನು ಸ್ಥಾಪಿಸಬೇಕು. ಇದಕ್ಕೆ ಸ್ಥಳೀಯರು ಕೈಜೋಡಿಸಬೇಕು ಎಂದು ತರಳಬಾಳು ಶ್ರೀಗಳು ಸೂಚಿಸಿದರು.