Advertisement

ಜೀವಜಲ-ಗ್ರಾಮ ಸಬಲೀಕರಣಕ್ಕೆ ಪಾದಯಾತ್ರೆ

09:55 AM Feb 05, 2020 | Lakshmi GovindaRaj |

ಭೀಕಂಪುರ(ರಾಜಸ್ಥಾನ): ನೂರಾರು ಗ್ರಾಮಗಳಲ್ಲಿ ವರ್ಷಕ್ಕೆ ಮೂರು ಬಾರಿ ಪಾದಯಾತ್ರೆ ನಡೆಯುತ್ತದೆ. ಯಾವುದೇ ಬೇಡಿಕೆ, ಧಾರ್ಮಿಕ ಕಾರಣಕ್ಕಾಗಿ ಅಲ್ಲ, ಬದಲಾಗಿ ಜಲ, ಪರಿಸರ, ಗ್ರಾಮ ಸಬಲೀಕರಣದ ಜಾಗೃತಿಗಾಗಿ! ಮೂರು ವಿಷಯಗಳ ಮಹತ್ವವನ್ನು ಮತ್ತೆ ಮತ್ತೆ ಮನದಟ್ಟು ಮಾಡುವ ಸಾರ್ಥಕ ಯತ್ನ ಇದಾಗಿದೆ.  ಇಂತಹದ್ದೊಂದು ಪ್ರಯೋಜನಕಾರಿ ಪರಂಪರೆಯನ್ನು ತರುಣ ಭಾರತ ಸಂಘ ರಾಜಸ್ಥಾನದ ಅಲ್ವಾರ್‌ ಸೇರಿ ಕೆಲವೊಂದು ಜಿಲ್ಲೆಗಳಲ್ಲಿ ಮುಂದುವರಿಸಿಕೊಂಡು ಬರುತ್ತಿದ್ದು, ವಿವಿಧ ಗ್ರಾಮಗಳ ಜನರು ಇದಕ್ಕೆ ಸಾಥ್‌ ನೀಡುತ್ತಿದ್ದಾರೆ.

Advertisement

ಸಂಘದ ಕಾರ್ಯಕರ್ತರು, ಜಲಯೋಧರು, ಪರಿಸರ ಪ್ರೇಮಿಗಳು, ಪಾದ ಯಾತ್ರೆ ಯಲ್ಲಿ ಪಾಲ್ಗೊಳ್ಳುವ ಮೂಲಕ ಜಾಗೃತಿ ಮೂಡಿಸುತ್ತಾರೆ. ಯುವಕರು, ಮಕ್ಕಳಿಗೆ ಪ್ರೇರಣೆ ನೀಡತೊಡಗಿದ್ದಾರೆ. ರಾಜಸ್ಥಾನದಲ್ಲಿದ್ದಂತಹ ಸ್ಥಿತಿಯಲ್ಲೇ ಬರದ ದವಡೆಗೆ ಸಿಲುಕಿ ನಲುಗುತ್ತಿರುವ ಕರ್ನಾಟಕದ ಅನೇಕ ಗ್ರಾಮಗಳಲ್ಲಿ ಜಲಕ್ರಾಂತಿ ಜಾಗೃತಿ ಅಭಿಯಾನದ ಅವಶ್ಯಕತೆ ಇದೆ. ಜೀವಜಲದ ಮಹತ್ವದ ಜನರಿಗೆ ಮನನ ಮಾಡುವ, ಜಲ ಸಂರಕ್ಷಣೆ, ಸಂವರ್ಧನೆ ನಿಟ್ಟಿನಲ್ಲಿ ಜಲಯೋಧರನ್ನು ರೂಪಿಸುವ ಕಾರ್ಯ ಆಗಬೇಕಿದೆ.

ಮೂರು ವಿಭಿನ್ನ ಪಾದಯಾತ್ರೆ: ರಾಜಸ್ಥಾನದ ಅಲ್ವಾರ್‌ ಸೇರಿ ವಿವಿಧ ಜಿಲ್ಲೆಗಳ ಗ್ರಾಮಗಳಲ್ಲಿ ವರ್ಷದಲ್ಲಿ 3 ಬಾರಿ ಪಾದಯಾತ್ರೆ ಕೈಗೊಳ್ಳಲಾಗುತ್ತಿದೆ. 3 ಪಾದಯಾತ್ರೆಗಳು ವಿಭಿನ್ನ ವಿಷಯಗಳನ್ನು ಒಳಗೊಂಡಿರುತ್ತದೆ.

ಏಕಾದಶಿ ಪಾದಯಾತ್ರೆ: ಏಕಾದಶಿ ದಿನದಂದು ನಡೆಯುವ ಪಾದಯಾತ್ರೆ ಜಲ ಸಂರಕ್ಷಣೆ, ಜಲ ಸಂವರ್ಧನೆ, ಜಲಮೂಲಗಳಿಗೆ ಧಕ್ಕೆಯಾಗದಂತೆ ಪ್ರತಿಜ್ಞೆಗೈಯುವ, ನೀರಿನ ಮಿತಬಳಕೆ ಜಾಗೃತಿಯನ್ನು ನೀಡುವುದಾಗಿದೆ. ಪಾದಯಾತ್ರೆಯಲ್ಲಿ ಆಗಮಿಸುವ ಜಲಯೋಧರು, ಟಿಬಿಎಸ್‌ ಪದಾಧಿ ಕಾರಿಗಳು ವಿದ್ಯಾರ್ಥಿಗಳು, ಯುವಕರಿಗೆ ರಾಜಸ್ಥಾನ ದಲ್ಲಿದ್ದ ಜಲ ಸಂಕಷ್ಟ, ಸಮಸ್ಯೆ ಹೇಗಿತ್ತು. ಇದನ್ನು ನಿವಾರಿಸಲು ಟಿಬಿಎಸ್‌ ನೇತೃತ್ವದಲ್ಲಿ ಏನೆಲ್ಲಾ ಪ್ರಯತ್ನ, ಹೋರಾಟಗಳು ನಡೆದವು. ಜಲ ಸಂರಕ್ಷರಣೆ ಏನೇನು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಕುರಿತು ಜಾಗೃತಿ ಮೂಡಿಸಲಾಗುತ್ತದೆ.

ವೃಕ್ಷಬಂಧನ ಪಾದಯಾತ್ರೆ: ಸಹೋದರತ್ವದ ಪ್ರತೀಕವಾದ ರಕ್ಷಾಬಂಧನ ದಿನದಂದು ಸಹೋದರಿ ತನ್ನ ಸಹೋದರಿಗೆ ರಾಖೀ ಕಟ್ಟುವ ಪರಂಪರೆ ಇದೆ. ಅದೇ ದಿನ ಟಿಬಿಎಸ್‌ ವೃಕ್ಷಬಂಧನ ಪಾದಯಾತ್ರೆ ಕೈಗೊಳ್ಳುತ್ತದೆ. ಮರಗಳಿಗೆ ರಾಖೀ ಕಟ್ಟುವ ಅವುಗಳನ್ನು ರಕ್ಷಿಸುವುದಾಗಿ ಪ್ರತಿಜ್ಞೆಗೈಯುವ ಕೆಲಸ ಕೈಗೊಳ್ಳ ಲಾಗುತ್ತಿದ್ದು, ಆ ಮೂಲಕ ಜಲಮೂಲಗಳಿಗೆ ಆಸರೆ ಯಾಗುವ ಗಿಡ-ಮರಗಳನ್ನು ಬೆಳೆಸುವ, ಅರಣ್ಯ ವೃದ್ಧಿಸುವ ಪಾದಯಾತ್ರೆ ನಡೆಯಲಿದೆ.

Advertisement

ಅಕ್ಷಯ ತೃತೀಯ ಪಾದಯಾತ್ರೆ: ಅಕ್ಷಯ ತೃತೀಯದಂದು ನಡೆಸುವ ಪಾದಯಾತೆ ಗ್ರಾಮಗಳ ಸಬಲೀಕರಣ ಉದ್ದೇಶವನ್ನು ಹೊಂದಿದೆ. ಗ್ರಾಮೀಣ ಜನರಿಗೆ ಸ್ವತ್ಛತೆ, ಆರೋಗ್ಯ ಸುರಕ್ಷತೆ, ವಿವಿಧ ಸೌಲಭ್ಯಗಳ ಮಾಹಿತಿ, ಕೃಷಿಗೆ ಪೂರಕ ವೃತ್ತಿಗಳ ಮಹತ್ವ, ಪಶುಸಂಗೋಪನೆ ಕುರಿತು ಜನರಿಗೆ ಮಾಹಿತಿ ನೀಡುವ ಜತೆಗೆ, ಗ್ರಾಮಸಬಲೀಕರಣ ಮಹತ್ವವನ್ನು ತಿಳಿಸಿ ಕೊಡಲಾಗುತ್ತದೆ.

ಪರಿಹಾರ ಧಿಕ್ಕರಿಸಿ ಭೂಮಿ ಪಡೆದರು: ಅಲ್ವಾರ್‌ ಜಿಲ್ಲೆಯಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದ ಜನ ರನ್ನು ಅರಣ್ಯ ಇಲಾಖೆ ಸ್ಥಳಾಂತರಿಸಲು ನಿರ್ಧರಿ ಸಿತ್ತು. ಒಂದು ಕಟುಂಬಕ್ಕೆ 10ಲಕ್ಷ ರೂ.ವರೆಗೆ ಪರಿಹಾರ ನೀಡು ವುದಾಗಿ ಘೋಷಿಸಿತ್ತು. ಆದರೆ, ಹೆಚ್ಚಿನ ಸಂಖ್ಯೆ ಯವರು ಪರಿಹಾರದ ಹಣದ ಆಸೆಗೆ ಸಿಲುಕದೆ, ತಮಗೆ ಭೂಮಿ ಬೇಕೆಂದು ಪಟ್ಟು ಹಿಡಿದರು. ಕೊನೆಗೆ ಜನರ ಬೇಡಿಕೆಗೆ ಮಣಿದ ಸರ್ಕಾರ ಪ್ರತಿ ಕುಟುಂಬಕ್ಕೆ 4 ಎಕರೆ ಜಮೀನು ನೀಡಿದೆ. 20 ಗ್ರಾಮಗಳ ಜನರು ಭೂಮಿ ಪಡೆದಿದ್ದಾರೆ.

ಹನಿ ನೀರಿಗೂ ಸಂಕಷ್ಟವಿದ್ದ ಸ್ಥಿತಿಯಲ್ಲಿ 10 ಲಕ್ಷ ರೂ. ಪರಿಹಾರದ ಆಸೆಗೆ ಕೈ ಚಾಚದೆ, ಭವಿಷ್ಯದ ದೃಷ್ಟಿಯಿಂದ ಭೂಮಿಗಾಗಿ ಪಟ್ಟು ಹಿಡಿದೆವು. ಟಿಬಿಎಸ್‌ ಜಾಗೃತಿ, ಮಾರ್ಗದರ್ಶನದೊಂದಿಗೆ ಜಲಸಂವರ್ಧನೆಗೆ ಮುಂದಾಗಿ ಬಾಂದಾರ, ನೀರಿನ ಹೊಂಡಗಳ ನಿರ್ಮಿಸಿ ದೆವು. ಅರಣ್ಯ ನಾಶ ಮಾಡುತ್ತಾರೆಂದು ಅರಣ್ಯ ಇಲಾಖೆಯವರು ನಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದರು. ಆದರೆ, ನಾವು ಪಡೆದ ಭೂಮಿಯಲ್ಲಿ ಕೃಷಿ ಮಾಡುತ್ತಲೇ ಸುತ್ತಮುತ್ತಲ ಪ್ರದೇಶದಲ್ಲಿ ಇಲಾಖೆಗಿಂತಲೂ ಹೆಚ್ಚಿನ ರೀತಿಯಲ್ಲಿ ಅರಣ್ಯ ಬೆಳೆಸಿದ್ದೇವೆ. 70-80 ಅಡಿಗೆ ನೀರು ಸಿಗುತ್ತಿದೆ. ನನ್ನ ಹೊಲದಲ್ಲಿ ಎರಡುವರೆ ಇಂಚು ನೀರು ಬಂದಿದೆ ಎನ್ನುತ್ತಾರೆ ದೇವರಿಗೋಡಾದ ಗಿರಿರಾಜ ಪ್ರಸಾದ್‌.

ಪ್ರೇರಕ ಶಕ್ತಿ ಭೀಕಂಪುರ ಆಶ್ರಮ: ಜಲ ಸಂವರ್ಧನೆ ಜಾಗೃತಿ ಸಾಧನೆಯ ಹಿಂದೆ ಪ್ರೇರಕ ಶಕ್ತಿಯಾಗಿರುವುದು ಭಿಕಂಪುರದಲ್ಲಿ ಇರುವ ತರುಣ ಭಾರತ ಸಂಘದ ಆಶ್ರಮ. ಇದೊಂದು ಜಲ-ಪರಿಸರ ವಿವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ವರ್ಷದ 12 ತಿಂಗಳು ಆಶ್ರಮದಲ್ಲಿ ಜಲ-ಪರಿಸರ ಕುರಿತಾಗಿ ತರಬೇತಿ, ಜಾಗೃತಿ ಚಿಂತನ-ಮಂಥನ, ಗೋಷ್ಠಿಗಳು ನಡೆಯುತ್ತಲೇ ಇರುತ್ತವೆ. ವರ್ಷದಲ್ಲಿ ಮೂರು ಬಾರಿ ಕೈಗೊಳ್ಳುತ್ತಿರುವ ಪಾದಯಾತ್ರೆಯಿಂದ ಜಲ, ಪರಿಸರ, ಗ್ರಾಮ ಸಬಲೀಕರಣ ನಿಟ್ಟಿನಲ್ಲಿ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದೆ. ಜೀವಜಲ ಉಳಿವಿಕೆಗೆ ಗ್ರಾಮಸ್ಥರು ಪಾಲ್ಗೊಳ್ಳುತ್ತಿದ್ದಾರೆ ಎನ್ನುತ್ತಾರೆ ಜಲ ಸಂರಕ್ಷಣೆಯ ಸೇವೆಯಲ್ಲಿ ತೊಡಗಿದ ಛೋಟಾಲಾಲ್‌, ಗೋಪಾಲ

ನಮ್ಮಲ್ಲಿ ನದಿ, ಹಳ್ಳ, ಬಾಂದಾರ, ಹೊಂಡಗಳಿಂದ ಕೃಷಿಗೆ ನೇರವಾಗಿ ನೀರು ಪಡೆಯುವುದಿಲ್ಲ. ಬದಲಾಗಿ ತೆರೆದ ಬಾವಿ ಇಲ್ಲವೆ ಕೊಳವೆ ಬಾವಿಯಿಂದಲೇ ನೀರು ಪಡೆಯುತ್ತೇವೆ. ಗೋಧಿ, ಸಾಸಿವೆ, ಕಡಲೆ ಇನ್ನಿತರ ಬೆಳೆ ಬೆುುಳೆ¿ತ್ತಿದ್ದು, ಪಶುಪಾಲನೆಯೊಂದಿಗೆ ಹಾಲು ಮಾರಾಟ ಮಾಡುತ್ತೇವೆ. ಕೋವಾ ಮಾಡಿಯೂ ಮಾರಾಟ ಮಾಡುತ್ತೇವೆ.
-ಗಿರಿರಾಜ ಪ್ರಸಾದ, ದೇವರಿಗೋಡಾ, ರಾಜಸ್ಥಾನ

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next