Advertisement

ಕರೆಂಟ್‌ ಹೊರೆ; ರಾಜ್ಯಾದ್ಯಂತ ವಿದ್ಯುತ್‌ ದರ ಹೆಚ್ಚಳ; ಅ.1ರಿಂದಲೇ ಜಾರಿ

12:55 AM Sep 24, 2022 | Team Udayavani |

ಬೆಂಗಳೂರು: ಹಬ್ಬದ ಸಂಭ್ರಮದಲ್ಲಿರುವ ಜನತೆಗೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) “ಶಾಕ್‌’ ನೀಡಿದೆ. ಕೇವಲ ಐದು ತಿಂಗಳ ಅಂತರದಲ್ಲಿ ಮತ್ತೆ ವಿದ್ಯುತ್‌ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು,ಅಕ್ಟೋಬರ್‌ 1ರಿಂದಲೇ ಈ “ಪರಿಷ್ಕೃತ ಹೊರೆ’ ಜನ ಸಾಮಾನ್ಯರ ಮೇಲೆ ಬೀಳಲಿದೆ.

Advertisement

ಈ ಸಲದ ದರ ಏರಿಕೆಗೆ “ಇಂಧನ ಹೊಂದಾಣಿಕೆ ಶುಲ್ಕ’ದ ಕಾರಣ ನೀಡಲಾಗಿದೆ. ಸಾಮಾನ್ಯವಾಗಿ ರಾಜ್ಯದ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳು ವಿವಿಧ ವಿದ್ಯುತ್‌ ಉತ್ಪಾದನ ಕಂಪೆನಿಗಳಿಂದ ವಿದ್ಯುತ್‌ ಖರೀದಿಸುತ್ತವೆ. ಇದಕ್ಕೆ ತಗಲಿದ ವೆಚ್ಚವನ್ನು ಹೊಂದಾಣಿಕೆ ಶುಲ್ಕದ ರೂಪದಲ್ಲಿ ಗ್ರಾಹಕರಿಂದ ವಸೂಲು ಮಾಡಲು ಅವಕಾಶವಿದೆ. ಕೆಇಆರ್‌ಸಿ ಆದೇಶದ ಪ್ರಕಾರ, ಬೆಸ್ಕಾಂ ಪ್ರತಿ ಯೂನಿಟ್‌ಗೆ 43 ಪೈಸೆ, ಮೆಸ್ಕಾಂ 24 ಪೈಸೆ, ಸೆಸ್ಕ್ 34 ಪೈಸೆ, ಹೆಸ್ಕಾಂ ಮತ್ತು ಜೆಸ್ಕಾಂಗೆ ತಲಾ 35 ಪೈಸೆ ಹೆಚ್ಚಳ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ “ಹೊಂದಾಣಿಕೆ’ಯಲ್ಲಿ ಎಲ್ಲ ಪ್ರಕಾರದ ಗ್ರಾಹಕರಿಗೆ ಏಕರೂಪದ ಬರೆ ಬೀಳಲಿದೆ. ಅಂದರೆ ಗೃಹ ಬಳಕೆದಾರಿಂದ ಹಿಡಿದು ಬೃಹತ್‌ ಉದ್ದಿಮೆದಾರರವರೆಗೆ ಒಂದೇ ರೀತಿಯ ದರ ಹೆಚ್ಚಳ ಅನ್ವಯ ಆಗಲಿದೆ.

ಇದರೊಂದಿಗೆ ಕೇವಲ 9 ತಿಂಗಳ ಅವಧಿಯಲ್ಲಿ ಗ್ರಾಹಕರಿಗೆ ಪ್ರತೀ ಯೂನಿಟ್‌ಗೆ ಅಂದಾಜು 1 ರೂ.ವರೆಗೆ ಏರಿಸಿದಂತಾಗಿದೆ. 2021ರ ನವೆಂಬರ್‌ನಲ್ಲಿ ಪ್ರತೀ ಯೂನಿಟ್‌ಗೆ 31 ಪೈಸೆ ಹೆಚ್ಚಳ ಮಾಡಿ, 2021ರ ಎಪ್ರಿಲ್‌ನಿಂದಲೇ ಪೂರ್ವಾನ್ವಯ ಆಗುವಂತೆ ಆದೇಶಿಸಲಾಗಿತ್ತು. ಇದಾದ ಬಳಿಕ 2022ರ ಎಪ್ರಿಲ್‌ನಲ್ಲಿ ಸರಾಸರಿ 35 ಪೈಸೆ ಹೆಚ್ಚಿಸಲಾಯಿತು.

ಸಾಮಾನ್ಯವಾಗಿ ಕಲ್ಲಿದ್ದಲು ಖರೀದಿ ದರದಲ್ಲಾದ ಹೆಚ್ಚಳವನ್ನು ಸರಿದೂಗಿಸಲು 3 ತಿಂಗಳಿಗೊಮ್ಮೆ ಪರಿಷ್ಕರಣೆಗೆ ಅವಕಾಶ ಕಲ್ಪಿಸಲಾ ಗಿದೆ. ಆದರೆ, ಪದೇಪದೆ ಪರಿಷ್ಕರಣೆ ಯಿಂದ ಗ್ರಾಹಕರಿಗೆ ಹೊರೆ ಆಗುತ್ತದೆ ಎಂಬ ಕಾರಣಕ್ಕೆ ಮುಂದಿನ ಆರು ತಿಂಗಳ ಅವಧಿಗೆ (ಅಕ್ಟೋಬರ್‌- ಮಾರ್ಚ್‌) ಅನ್ವಯವಾಗುವಂತೆ ಹೆಚ್ಚಳ ಮಾಡಲಾಗಿದೆ.
ಎಲ್ಲ ಎಸ್ಕಾಂಗಳು ಮೊದಲ ತ್ತೈಮಾಸಿಕ (ಏಪ್ರಿಲ್‌-ಜೂನ್‌) ದಲ್ಲಿ ಕರ್ನಾಟಕ ವಿದ್ಯುತ್ಛಕ್ತಿ ನಿಗಮ (ಕೆಪಿಸಿಎಲ್‌), ಉಡುಪಿ ಪವರ್‌ ಕಾರ್ಪೊರೇಷನ್‌ ಲಿ., (ಯುಪಿಸಿಎಲ್‌), ಕೇಂದ್ರ ವಿದ್ಯುತ್ಛಕ್ತಿ ಉತ್ಪಾದನೆ ಕೇಂದ್ರ (ಸಿಜಿಎಸ್‌) ದಿಂದ 1,244 ಕೋಟಿ ರೂ. ಮೊತ್ತದ ವಿದ್ಯುತ್‌ ಖರೀದಿಸಿದ್ದು, ಈ ವೆಚ್ಚ ಸರಿದೂಗಿಸಲು ಮುಂದಿನ ಮೂರು ತಿಂಗಳಿಗೆ ಅನ್ವಯವಾಗುವಂತೆ ಸರಾಸರಿ ಪ್ರತಿ ಯೂನಿಟ್‌ಗೆ 75 ಪೈಸೆ ಹೆಚ್ಚಳಕ್ಕೆ ಎಸ್ಕಾಂಗಳು ಪ್ರಸ್ತಾವ ಸಲ್ಲಿಸಿದ್ದವು. ಮಾಡಲು ಆದರೆ, ಕೆಇಆರ್‌ಸಿಯು ಆರು ತಿಂಗಳ ಅವಧಿಗೆ ಯೂನಿಟ್‌ಗೆ ಸರಾಸರಿ ಅಂದಾಜು 37.41 ಪೈಸೆಗೆ ಅನುಮತಿಸಿದೆ.

ಉದ್ದಿಮೆದಾರರಿಗೆ
ದೊಡ್ಡ ಹೊಡೆತ
ದರ ಹೆಚ್ಚಳದಿಂದ ಸಾಮಾನ್ಯವಾಗಿ ಬೆಸ್ಕಾಂ ವ್ಯಾಪ್ತಿಯ ಒಬ್ಬ ಗೃಹ ಬಳಕೆದಾರ 100 ಯೂನಿಟ್‌ ವಿದ್ಯುತ್‌ ಬಳಸಿದರೆ, 43 ರೂ. ಹೆಚ್ಚುವರಿಯಾಗಿ ತೆರಬೇಕಿದೆ. ಅದೇ ರೀತಿ, ಒಬ್ಬ ಉದ್ಯಮಿ 1 ಲಕ್ಷ ಯೂನಿಟ್‌ ಬಳಸುತ್ತಿದ್ದರೆ, 4,300 ರೂ. ಹೆಚ್ಚುವರಿಯಾಗಿ ಪಾವತಿಸಬೇಕು. ಪ್ರಮುಖವಾಗಿ ಉದ್ದಿಮೆದಾರರಿಗೆ ಇದರಿಂದ ಹೊಡೆತ ಬೀಳಲಿದೆ. ಈಗಾಗಲೇ ಕಚ್ಚಾವಸ್ತುಗಳು, ತೈಲ ಬೆಲೆ ಏರಿಕೆಯಿಂದ ಸಾರಿಗೆ ಮತ್ತಿತರ ವೆಚ್ಚ ಹೆಚ್ಚಿದೆ. ಇದು ಕೈಗಾರಿಕೆಗಳು ನೆರೆ ರಾಜ್ಯಗಳ ಕಡೆ ಮುಖಮಾಡಲು ಅವಕಾಶ ನೀಡಬಹುದು ಎನ್ನುತ್ತಾರೆ ಉದ್ಯಮಿಗಳು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next