Advertisement

ಅನುದಾನ ತಾರತಮ್ಯದ ಕೋಲಾಹಲ

12:23 AM Oct 13, 2019 | Team Udayavani |

ವಿಧಾನಸಭೆ: ಕಾಂಗ್ರೆಸ್‌, ಜೆಡಿಎಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಶಾಸಕಾಂಗ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಡಿದ ಆರೋಪ ಸದನದಲ್ಲಿ ಕೆಲಕಾಲ ಕೋಲಾಹಲ ಸೃಷ್ಟಿಸಿತು. ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದರಿಂದ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು.ಕೊನೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು, ಉಭಯ ನಾಯಕರ ಮಾತಿಗೆ ಬೆಲೆ ನೀಡಿ ಸರಿಪರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ವಿಶ್ವಾಸವಿಡಿ ಎಂದು ಹೇಳಿ ಸಮಾಧಾನಪಡಿಸಿದರು.

Advertisement

ಧನವಿನಿಯೋಗ ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು ವಿಚಾರ ಪ್ರಸ್ತಾಪಿಸಿ, ಕಾಂಗ್ರೆಸ್‌, ಜೆಡಿಎಸ್‌ನ ಹಲವು ಶಾಸಕರ ಅನುದಾನದಲ್ಲಿ ಕಡಿತವಾಗಿದೆ. ಈ ರೀತಿಯ ತಾರತಮ್ಯ ಬೇಡ. ಈಗಾಗಲೇ ನೀಡಿರುವ ಅನುದಾನ ಕಡಿತ ಸರಿಯಲ್ಲ ಎಂದು ಹೇಳಿದರು. ಇದಕ್ಕೆ ದನಿಗೂಡಿಸಿದ ಎಚ್‌.ಡಿ.ಕುಮಾರಸ್ವಾಮಿ, ಈ ಹಿಂದೆ ಅನುಮೋದನೆಯಾಗಿದ್ದ ಹಲವು ಕಾರ್ಯಕ್ರಮಗಳನ್ನು ತಡೆಹಿಡಿದಿದ್ದು ಗೊಂದಲ ಸೃಷ್ಟಿಯಾಗಿದೆ. ಮುಖ್ಯಮಂತ್ರಿಗಳು ಇತ್ತ ಗಮನ ಹರಿಸಿದರೆ ಸಮಸ್ಯೆ ಬಗೆಹರಿಸಲಿದೆ ಎಂದು ತಿಳಿಸಿದರು.

ಅದಕ್ಕೆ ಸ್ಪಂದಿಸಿದ ಯಡಿಯೂರಪ್ಪ, ಬೇರೆ ಕಾಣಗಳಿಗೆ ಕೆಲ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಅದನ್ನು ಸರಿಪಡಿಸುವುದು ಮುಖ್ಯಮಂತ್ರಿಯಾದ ನನ್ನ ಕರ್ತವ್ಯ. ನಿಮ್ಮೆಲ್ಲರೊಂದಿಗೆ ಸಮಲೋಚಿಸಿ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಮೇಲೆ ವಿಶ್ವಾಸವಿಡಿ ಎಂದು ಹೇಳಿದರು. ಆಗ ಕಾಂಗ್ರೆಸ್‌ ನಾಯಕ ರಾಮಲಿಂಗಾರೆಡ್ಡಿ, ಬೆಂಗಳೂರಿನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ವರ್ಷಕ್ಕೆ 2,500 ಕೋಟಿ ರೂ. ಅನುದಾನ ನೀಡಲಾಗಿತ್ತು. ಆದರೆ ಮುಂದಿನ ಮೂರು ವರ್ಷಗಳಿಗೆ ತಲಾ 2,500 ಕೋಟಿ ರೂ. ನಂತೆ 7,500 ಕೋಟಿ ರೂ. ಸೇರಿದಂತೆ 8,015 ಕೋಟಿ ರೂ. ಅನುದಾನ ನೀಡಲಾಗಿತ್ತು. ಆದರೆ ಮುಖ್ಯಮಂತ್ರಿಗಳು ವೈಟ್‌ ಟಾಪಿಂಗ್‌ ಕಾಮಗಾರಿ ತಡೆಹಿಡಿದಿದ್ದಾರೆ. ಕಾಮಗಾರಿಯಲ್ಲಿ ಅಕ್ರಮವಾಗಿದ್ದರೆ ತನಿಖೆ ನಡೆಸಲಿ. ನಮ್ಮ ಆಕ್ಷೇಪಣೆ ಇಲ್ಲ ಎಂದು ಹೇಳಿದರು.

ಬೆಂಗಳೂರಿನ 28 ಕ್ಷೇತ್ರಗಳ ಶಾಸಕರಿಗೆ ಒಟ್ಟು 3752 ಕೋಟಿ ರೂ. ಅನುದಾನ ನೀಡಲಾಗಿತ್ತು. ಅದರಲ್ಲಿ 2809 ಕೋಟಿ ರೂ. ಕಡಿತಗೊಳಿಸಿ ಕೇವಲ 943 ಕೋಟಿ ರೂ.ಗೆ ಇಳಿಕೆ ಮಾಡಲಾಗಿದೆ. ಬಿಜೆಪಿ ಶಾಸಕರಿಗೆ ಹಿಂದೆ ಒಟ್ಟು 1671 ಕೋಟಿ ರೂ. ನೀಡಲಾಗಿತ್ತು. ಇದೀಗ ಹೆಚ್ಚುವರಿಯಾಗಿ 1828 ಕೋಟಿ ರೂ. ನೀಡಲಾಗಿದ್ದು, ನಗರದ ಬಿಜೆಪಿ ಶಾಸಕರಿಗೆ ಒಟ್ಟು 3499 ಕೋಟಿ ರೂ. ಅನುದಾನ ಕೊಡಲಾಗಿದೆ. ಜೆಡಿಎಸ್‌ ಶಾಸಕರಿದ್ದ ಕ್ಷೇತ್ರಗಳಿಗೆ ಒಟ್ಟು 952 ಕೋಟಿ ರೂ. ನೀಡಲಾಗಿತ್ತು. ಅದರಲ್ಲಿ 50 ಕೋಟಿ ರೂ. ಕಡಿತಗೊಳಿಸಲಾಗಿದೆ. ಅನರ್ಹತೆಗೊಂಡಿರುವ ಶಾಸಕರ ಕ್ಷೇತ್ರಗಳಿಗೆ 2778 ಕೋಟಿ ರೂ. ಅನುದಾನ ನೀಡಿ ತಾರತಮ್ಯ ಮಾಡಲಾಗಿದ ಎಂದು ಹೇಳಿದರು.

ಆಗ ಮಧ್ಯಪ್ರವೇಶಿಸಿದ ಯಡಿಯೂರಪ್ಪ, ಹಿಂದೆ ಕೆಲ ಶಾಸಕರಿಗೆ ಅತಿ ಹೆಚ್ಚು ಅನುದಾನ ನೀಡಲಾಗಿತ್ತು. ಅದನ್ನು ಕಡಿತಗೊಳಿಸಲಾಗಿದೆ. ಪ್ರತಿಪಕ್ಷಗಳ ನಾಯಕರಾದ ಸಿದ್ದರಾಮಯ್ಯ, ಕುಮಾರಸ್ವಾಮಿಯವರು ಹೇಳಿದಂತೆ ಸರಿಪಡಿಸಲು ಪ್ರಯತ್ನ ಮಾಡುತ್ತೇನೆ. ನೀವೆಲ್ಲಾ ಹಿಂದೆ ಎಷ್ಟು ಅನುದಾನ ಪಡೆದಿದ್ದೀರಿ ಎಂದು ನಾನು ಹೇಳಲೆ ಎಂದು ಪ್ರಶ್ನಿಸಿದರು. ಆಗ ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರು ಹಾಗೂ ಬಿಜೆಪಿ ಸದಸ್ಯರು ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದರಿಂದ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು. ಕಾಂಗ್ರೆಸ್‌ನ ಪಿ.ಟಿ.ಪರಮೇಶ್ವರ ನಾಯಕ್‌, ಅಧಿಕಾರ ವಹಿಸಿಕೊಂಡಾಗ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದ ಯಡಿಯೂರಪ್ಪ ಅವರು ಇದೀಗ ಅನುದಾನ ತಾರತಮ್ಯ ಮಾಡಿದ್ದಾರೆ ಎಂದು ದೂರಿದರು.

Advertisement

ಶೂನ್ಯ ಅನುದಾನ: ಬಿಜೆಪಿಯ ಅರವಿಂದ ಲಿಂಬಾವಳಿ, ನನ್ನ ಕ್ಷೇತ್ರದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ. ಆದರೆ ನನ್ನ ಕ್ಷೇತ್ರಕ್ಕೆ ನೀಡುವುದು ನಗರದ ಕಸ. ಬೆಳ್ಳಂದೂರು ಕೆರೆಗೆ ಕೊಳಚೆ ನೀರು. 8 ಲಕ್ಷ ಜನ ಕ್ಷೇತ್ರದಲ್ಲಿ ನೆಲೆಸಿದ್ದು, 15 ಲಕ್ಷ ಮಂದಿ ಬಂದು ಹೋಗುತ್ತಾರೆ. ಅಂತಹ ಕ್ಷೇತ್ರಕ್ಕೆ ಕಳೆದ ವರ್ಷ ನೀಡಿರುವ ಅನುದಾನ ಶೂನ್ಯ. ಹಿಂದಿನಿಂದ ತಾರತಮ್ಯವಾಗಿದೆ. ಇದೀಗ ಹೆಚ್ಚು ಅನುದಾನ ಕೇಳುತ್ತಿದ್ದೇವೆ ಎಂದು ಹೇಳಿದರು.

ಬಳಿಕ ಎಚ್‌.ಡಿ.ಕುಮಾರಸ್ವಾಮಿ, ನನ್ನ ಅಧಿಕಾರಾವಧಿಯಲ್ಲಿ ಸಾಧ್ಯವಾದಷ್ಟು ಅನುದಾನ ಹಂಚಿಕೆ ಮಾಡಿದ್ದೇನೆ. ಆದರೆ ನನಗೆ ಪೂರ್ಣ ಅಧಿಕಾರ ಇರಲಿಲ್ಲ ಎಂದರು. ಮತ್ತೆ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯಾದ ಕಾಮಗಾರಿಗಳನ್ನು ತಡೆ ಹಿಡಿಯಲಾಗಿದೆ ಎಂಬ ದೂರುಗಳಿವೆ. ಹಾಗಾಗಿ ನಗರದ ಶಾಸಕರ ಸಭೆ ಕರೆದು ಚರ್ಚಿಸಿ ನಂತರ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವತ್ತ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಯಡಿಯೂರಪ್ಪ, ದ್ವೇಷದ ಕಾರಣಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿಲ್ಲ. 2009ರಲ್ಲಿ ನಗರದ ಕ್ಷೇತ್ರಗಳಿಗೆ ನಾನು ನೀಡಿದಷ್ಟು ಅನುದಾನವನ್ನು ಯಾವ ಮುಖ್ಯಮಂತ್ರಿಯೂ ನೀಡಿಲ್ಲ ಎಂಬುದನ್ನು ಜನರೇ ಮಾತಾಡಿಕೊಳ್ಳುತ್ತಾರೆ. ಹಣಕಾಸಿನ ಸ್ಥಿತಿ ನೋಡಿಕೊಂಡು ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ರಾಮಲಿಂಗಾ ರೆಡ್ಡಿ-ಸತೀಶ್‌ ರೆಡ್ಡಿ ಜಟಾಪಟಿ: ಕಾಂಗ್ರೆಸ್‌ನ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಬಿಟಿಎಂ ಲೇಔಟ್‌ ಕ್ಷೇತ್ರಕ್ಕೆ ನೀಡಿದ್ದ ಸಾಕಷ್ಟು ಅನುದಾನ ಕಡಿತ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಬಿಜೆಪಿ ಶಾಸಕ ಸತೀಶ್‌ರೆಡ್ಡಿ, ಬಿಟಿಎಂ ಲೇಔಟ್‌ ಕ್ಷೇತ್ರ ಹಿಂದಿನಿಂದ ಪಾಲಿಕೆ ವ್ಯಾಪ್ತಿಯಲ್ಲಿದೆ. ಆದರೆ ನಮ್ಮ ಕ್ಷೇತ್ರಗಳು ಹೊಸದಾಗಿ ಸೇರ್ಪಡೆಯಾಗಿವೆ. ಆದರೂ ಕಳೆದ ಬಾರಿ ನನ್ನ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಬಿಡಿಗಾಸು ಅನುದಾನ ನೀಡಿಲ್ಲ. ಆದರೆ ಆ ಕ್ಷೇತ್ರಗಳಿಗೆ ನೂರಾರು ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರಿಂದ ಸಿಡಿಮಿಡಿಗೊಂಡ ರಾಮಲಿಂಗಾರೆಡ್ಡಿ, ಹಿಂದೆ ಅವರು ಕೊಟ್ಟಿರಲಿಲ್ಲ ಎಂದು ಈಗ ನೀವು ಅನುದಾನ ಕೊಡುವುದಿಲ್ಲವೇ. ಇದು ದ್ವೇಷದ ರಾಜಕಾರಣವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು. ಇದಕ್ಕೆ ಸುಮ್ಮನಾಗದ ಸತೀಶ್‌ ರೆಡ್ಡಿ, ಹಿಂದೆಲ್ಲಾ ನಮಗೆ ಸಾಕಷ್ಟು ಅನ್ಯಾಯವಾಗಿದೆ. ಕಾಂಗ್ರೆಸ್‌, ಜೆಡಿಎಸ್‌ ಶಾಸಕರಿಗೆ ಸಾಕಷ್ಟು ಹಣ ನೀಡಲಾಗಿದೆ. ಹಳೆಯ ಪ್ರದೇಶವಾದ ಬಿಟಿಎಂ ಲೇಔಟ್‌ಗೂ ಸಾಕಷ್ಟು ಹಣ ನೀಡಲಾಗಿದೆ ಎಂದು ಆರೋಪಿಸಿದರು.

ಇದಕ್ಕೆ ಕೋಪಗೊಂಡ ರಾಮಲಿಂಗಾರೆಡ್ಡಿ, ಬಿಟಿಎಂ ಲೇಔಟ್‌ ಕ್ಷೇತ್ರಕ್ಕೆ ಸಂಬಂಧಪಟ್ಟ ಎರಡು ಫ್ಲೈಓವರ್‌ಗಳಿಗೆ ಅನುದಾನ ಪಡೆಯಲಾಗಿತ್ತು. ಈಜಿಪುರದಲ್ಲಿ ಫ್ಲೈಓವರ್‌ ನಿರ್ಮಿಸಿದರೆ ನಾನೊಬ್ಬನೆ ಓಡಾಡುತ್ತೇನೆಯೇ. ಆರ್‌.ಅಶೋಕ್‌, ವಿ.ಸೋಮಣ್ಣ ಅವರು ಸೇರಿ ಮಾಡಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಯಾರೋ ನಾಲ್ಕು ಮಂದಿ ಸೇರಿ ಈ ರೀತಿ ತಾರತಮ್ಯ ಮಾಡಿದ್ದಾರೆ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next