Advertisement

ಪ್ರಭುದೇವರ ಬೆಟ್ಟದಲ್ಲಿ ರಾಷ್ಟ್ರೀಯ ಹಬ್ಬಗಳಂದೇ ಜಾತ್ರೆ

06:14 PM Aug 15, 2022 | Nagendra Trasi |

ವಿಜಯಪುರ: ಬೆಳಗಾವಿ ಜಿಲ್ಲೆಯಿಂದ ಬಂದು ವಿಜಯಪುರ ಜಿಲ್ಲೆಯಲ್ಲಿರುವ ಪ್ರಭುದೇವರ ಬೆಟ್ಟದಲ್ಲಿ ನೆಲೆ ನಿಂತಿರುವ ಈ ಸ್ವಾಮೀಜಿಗೆ ದೇಶಭಕ್ತಿಯೇ ಪ್ರಧಾನ. ಈ ಕಾರಣಕ್ಕಾಗಿ ಕಳೆದ 42 ವರ್ಷಗಳಿಂದ ದೇಶದ ರಾಷ್ಟ್ರೀಯ ಹಬ್ಬಗಳಂದೇ ಇಲ್ಲಿ ಎರಡು ಬಾರಿ ಜಾತ್ರೆ ಮಾಡುವ ಈ ಸ್ವಾಮೀಜಿಯನ್ನು ಜನರು ರಾಷ್ಟ್ರೀಯವಾದಿ ಸ್ವಾಮೀಜಿ ಎಂದೇ ಗುರುತಿಸುತ್ತಾರೆ.ಇದರೊಂದಿಗೆ ಸ್ವಾತಂತ್ರ್ಯ ದಿನ ಹಾಗೂ ಗಣರಾಜ್ಯೋತ್ಸವ ಹಬ್ಬಕ್ಕೆ ಮೆರುಗು ನೀಡುತ್ತಿದ್ದಾರೆ.

Advertisement

ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ 1945-46ರಲ್ಲಿ ಬೆಳಗಾವಿಗೆ ಬಂದಿದ್ದಾಗ ಶಿವಯೋಗೀಶ್ವರರಿಗೆ ಹುಡುಕಾಟದ ಬಾಲ್ಯ. ಆದರೆ ಇಡಿ ದೇಶ ವೈವಿಧ್ಯಮ ರೀತಿ, ರೂಪ ಸ್ವರೂಪದಲ್ಲಿ ಸ್ವಾತಂತ್ರ್ಯಕ್ಕಾಗಿ ಸಂಗ್ರಾಮದಲ್ಲಿ ತೊಡಗಿದ್ದಾಗ ತಮ್ಮೂರ ಪರಿಸರದಲ್ಲಿ ವಾಲಿ ಚನ್ನಪ್ಪ, ಸಿದ್ನಾಳ ಶಿವರುದ್ರಪ್ಪ, ಬಸಪ್ಪ ಸಿದ್ನಾಳ ಅವರಂಥ ಸ್ವಾತಂತ್ರ್ಯ ಸೇನಾನಿಗಳ ಹೋರಾಟ ಬಾಲಕ ಶಿವಯೋಗೀಶ್ವರರಲ್ಲೂ ದೇಶಪ್ರೇಮ ಮೈಗೂಡಿಸಿತು.

ಬ್ರಿಟಿಷರು ಭಾರತದಿಂದ ಕಾಲ್ಕಿತ್ತು, ದೇಶಕ್ಕೆ 1947 ಆಗಸ್ಟ್‌ 15ರಂದು ಸ್ವಾತಂತ್ರ್ಯ ಸಿಕ್ಕಿದೆ ಎಂದು ತಿಳಿದಾಗ ಬೆಳಗಾವಿ ಜಿಲ್ಲೆಯ ಸಂಪಗಾಂವ ಗ್ರಾಮದ ಬಾಲಕ ಶಿವಯೋಗೀಶ್ವರರು ದ್ಯಾಮವ್ವನ ಗುಡಿಯ ಹಳ್ಳದ ದಡದಲ್ಲಿರುವ ಪತ್ರಿವನದಲ್ಲಿ ತಮ್ಮ ಪುಟ್ಟಸ್ನೇಹ ಬಳಗದೊಂದಿಗೆ ರಾಷ್ಟ್ರಧ್ವಜ ಹಾರಿಸಿ ಗೌರವ ವಂದನೆ ಸಲ್ಲಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರ ಸಂಗ್ರಾಮಗಳಿಂದ ಪ್ರಭಾವಿತರಾಗಿದ್ದ ಶಿವಯೋಗೀಶ್ವರರು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ದೇಶಕ್ಕಾಗಿ ತಾವು ಅವಿವಾಹಿತರಾಗಿ ಏನನ್ನಾದರೂ ಮಾಡಬೇಕು ಎಂದು ಛಲ ತೊಟ್ಟಿದ್ದರು.

ಅದರಲ್ಲಿ ಭಾರತೀಯ ಸೇನೆಗೆ ಸೇರುವುದು, ಪೊಲೀಸ್‌ ಅಧಿಕಾರಿ ಆಗುವುದು, ತಪ್ಪಿದರೆ ಸನ್ಯಾಸಿಯಾಗಬೇಕು ಎಂದುಕೊಂಡರು. ಮೊದಲಿನ ಎರಡೂ ಗುರಿ ಈಡೇರದಿದ್ದಾಗ ಸನ್ಯಾಸತ್ವದತ್ತ ವಾಲಿದರು.

ಸಿದ್ಧಾರೂಢ ಪರಂಪರೆಯಲ್ಲಿ ಸಾಗಿದ ಶ್ರೀಗಳು ದೇಶ ಸಂಚಾರ ನಡೆಸಿದರು. ಕಾಶಿ, ಹರಿದ್ವಾರಗಳಂಥ ಯಾತ್ರೆ ಮಾಡಿದ ಬಳಿಕ ವಿಜಯಪುರ ಜಿಲ್ಲೆಯಲ್ಲೂ ಸಂಚಾರ ನಡೆಸಿದ್ದರು. ಪರಿಣಾಮ ಇಂಡಿ ತಾಲೂಕಿನ ಬೆನಕನಹಳ್ಳಿ, ಶಿರಕನಹಳ್ಳಿ ಪ್ರದೇಶಗಳ ಮಠಗಳಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಲಚ್ಯಾಣ ಮಹಾರಾಜರು, ಬಂಥನಾಳ ಶಿವಯೋಗಿಗಳ ಪ್ರಭಾವ ಹಾಗೂ ಮಾರ್ಗದರ್ಶನದ ಬಳಿಕ 1966ರಿಂದ 1970ರವರೆಗ ಬೆನಕನಹಳ್ಳಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ತಮ್ಮ ಧಾರ್ಮಿಕ ಸೇವಾ ಆರಂಭಿಸಿದರು.

Advertisement

ಕೋಟಿ ಜಪಯಜ್ಞದಂಥ ಮಹಾಧಾರ್ಮಿಕ ಕಾರ್ಯವನ್ನು ಮಾಡಿ ಕೀರ್ತಿ ಸಂಪಾದಿಸಿದರು. ಬಳಿಕ ಮತ್ತೆ 10 ವರ್ಷ ದೇಶ ಸಂಚಾರ ಮಾಡಿದರು. ಅಂತಿಮವಾಗಿ 1980ರಲ್ಲಿ ವಿಜಯಪುರ ಜಿಲ್ಲೆಗೆ ಆಗಮಿಸಿದ ಶಿವಯೋಗೀಶ್ವರರು ಅಪ್ಪಟ ಸ್ವಾತಂತ್ರ್ಯ ಪ್ರೇಮಿ ಮನೆತನವಾದ ಜಂಬಗಿ ದೇಶಮುಖ ಕುಟುಂಬದ ಆಶಯದಂತೆ ಜಂಬಗಿ ಪ್ರಭುದೇವರ ಬೆಟ್ಟದಲ್ಲಿ 17 ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ನೆಲೆ ನಿಂತಿದ್ದಾರೆ.

ಜಂಬಗಿ ಪ್ರಭುದೇವರ ಬೆಟ್ಟದಲ್ಲಿರುವ ಶಿವಲಿಂಗ ಪೂಜಾ ಸೇವೆಯ ಜೊತೆಗೆ ಈ ಭಾಗದ ಯುವಕರಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿ, ಸಮಾಜ ಸೇವೆ, ಯೋಗಸಿದ್ಧಿಗಳಂಥ ಜೀವನ ಮುಕ್ತಿ ಸಾಧನಗಳ ಮಾರ್ಗದರ್ಶನ ಮಾಡುತ್ತ ಬರುತ್ತಿದ್ದಾರೆ. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಯುವಕರು, ಮಕ್ಕಳಿಗೆ ಅಪ್ಪಟ ಖಾದಿ ಹಾಗೂ ಕೈಮಗ್ಗದ ನೇಯ್ದ ರಾಷ್ಟ್ರ ಧ್ವಜಗಳನ್ನು ವಿತರಿಸುತ್ತ ಬರುತ್ತಿದ್ದಾರೆ.

ಕಳೆದ 42 ವರ್ಷಗಳಿಂದ ಜಂಬಗಿ ಗ್ರಾಮದಲ್ಲಿ ಆಚರಿಸುವ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಬೆಳಗಾವಿಯ ದೇಶಪ್ರೇಮಿ ಗ್ರಾಮಗಳಾದ ಹಾಗೂ ಅಪ್ಪಟ ಸಂಹಿತೆಯಲ್ಲೇ ರಾಷ್ಟ್ರ ಧ್ವಜ ರೂಪಿಸುವ ಬೆಳಗಾವಿ ಜಿಲ್ಲೆಯ ಗರಗ ಹಾಗೂ ಹುದಲಿ ಗ್ರಾಮಗಳ ಕೈಮಗ್ಗದಲ್ಲಿ ನೇಯ್ದ ರಾಷ್ಟ್ರ ಧ್ವಜಗಳನ್ನೇ ಬಳಸುತ್ತಿರುವುದು ಗಮನೀಯ. ನಕಲಿ ಹಾಗೂ ಕಳಪೆ ರಾಷ್ಟ್ರ ಧ್ವಜದ ಹಾವಳಿ ಹಾಗೂ ರಾಷ್ಟ್ರ ಧ್ವಜಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಮನೆತನಗಳ ನೆಲದಿಂದ ರಾಷ್ಟ್ರ
ಧ್ವಜ ತರಿಸುವುದು ನನಗೂ ಹೆಮ್ಮೆ ಎನ್ನುವುದು ಶ್ರೀಗಳ ಮಾತು.

ಎಲ್ಲಕ್ಕಿಂತ ಹೆಚ್ಚಾಗಿ ಪ್ರಭುದೇವರ ಬೆಟ್ಟದಲ್ಲಿ ದೇಶ ಸ್ವಾತಂತ್ರ್ಯ ಪಡೆದ ಸ್ಮರಣೆಗಾಗಿ ಆ. 15ರಂದು ಭಾರತ ಮಾತೆಯ ಜಾತ್ರೆ ಮಾಡುತ್ತಾರೆ. ಸ್ವಾತಂತ್ರ್ಯ ಭಾರತ ಲಿಖೀತ ಸಂವಿಧಾನ ಅಂಗೀಕರಿಸಿದ ಜನೆವರಿ 26ರಂದು ದೇಶ ಗಣರಾಜ್ಯೋತ್ಸವದಂದೇ ಅಲ್ಲಮಪ್ರಭು ದೇವರ ಜಾತ್ರೆ ಮಾಡುತ್ತಾರೆ. 12ನೇ ಶತಮಾನದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನುಭವ ಮಂಟಪ ಸ್ಥಾಪಿಸಿ, ಅದರ ಪೀಠಾಧಿಪತಿಯಾಗಿದ್ದ ಪ್ರಭುದೇವರ ಜಾತ್ರೆಯನ್ನು ಗಣರಾಜ್ಯೋತ್ಸವ
ದಿನದಂದೇ ಮಾಡುತ್ತ ಬರುತ್ತಿದ್ದಾರೆ.

ಜಾತ್ರೆ ದಿನ ಪ್ರಭುದೇವರ ಬೆಟ್ಟದಲ್ಲಿ ವಿಶೇಷವಾಗಿ ದೇವಸ್ಥಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಿ, ಧ್ವಜ ವಂದನೆ ಸಲ್ಲಿಸುತ್ತ ಬರಲಾಗುತ್ತದೆ. ಶಿವಯೋಗೀಶ್ವರರು ರಾಷ್ಟ್ರೀಯ ಹಬ್ಬಗಳಂದೇ ತಮ್ಮೂರ ಪ್ರಭುದೇವರ ಬೆಟ್ಟದಲ್ಲಿ ವರ್ಷದಲ್ಲಿ ಎರಡು ಬಾರಿ ಜಾತ್ರೆ ಮಾಡುವ ಸಂಕಲ್ಪಕ್ಕೆ ಊರ ಜನರೂ ಕೈ ಜೋಡಿಸುತ್ತ ಬರುತ್ತಿದ್ದಾರೆ. ಜಾತ್ರೆ ಸಂದರ್ಭದಲ್ಲಿ ಬರುವ ಭಕ್ತರಿಗೆ ಇಲ್ಲಿ ಪ್ರಸಾದ ವ್ಯವಸ್ಥೆಯನ್ನೂ ಮಾಡುತ್ತಾರೆ.

ಗಮನೀಯ ಅಂಶ ಎಂದರೆ ಅಪ್ಪಟ ದೇಶಭಕ್ತಿಯ ಸ್ವಾಭಿಮಾನದ ಶಿವಯೋಗೀಶ್ವರರ ಸರ್ಕಾರದ ಮುಂದೆ ಬಿಡಿಗಾಸಿಗೂ ಕೈಚಾಚಿ ನಿಂತಿಲ್ಲ ಎಂಬುದು. ಈ ಕಾರಣಕ್ಕಾಗಿ ಜಂಬಗಿ ಭಾಗದ ಜನರ ಪಾಲಿಗೆ ಶಿವಯೋಗೀಶ್ವರ  ಪ್ರಭುದೇವರ ವಾಣಿಯಂತೆ ಪಾಲನೆಗೆ ಕಾರಣವಾಗಿದೆ.

ರಾಷ್ಟ್ರೀಯ ಹಬ್ಬಗಳಂದು ಸ್ವಾತಂತ್ರ್ಯ ದೇವಿ ಭಾರತಮಾತೆಗಿಂತ ದೇವರಿಲ್ಲ. ಪ್ರಜಾಪ್ರಭುತ್ವದ ಅನುಭವ ಮಂಟಪದ ಸಂಸತ್‌ ಅಧಿಪತಿ ಪ್ರಭು ದೇವರ ಜಾತ್ರೆ ದೇಶ ಗಣರಾಜ್ಯವಾದ ದಿನವೇ ಸೂಕ್ತ ಎಂದು ಭಾವಿಸಿದ್ದೇನೆ. ರಾಷ್ಟ್ರೀಯ ಹಬ್ಬಗಳಂದೇ ದೇವತೆಗಳ ಜಾತ್ರೆ ಮಾಡಿದಲ್ಲಿ ಮಕ್ಕಳಲ್ಲಿ, ಯುವಕರಲ್ಲಿ ದೇಶಪ್ರೇಮ ಮೈಗೂಡಿಸಲು ಸಾಧ್ಯ.
ಶಿವಯೋಗೀಶ್ವರರ ಮಹಾರಾಜ
ರಾಷ್ಟ್ರೀಯವಾದಿ ಸ್ವಾಮೀಜಿ
ಪ್ರಭುದೇವರ ಬೆಟ್ಟ, ಜಂಬಗಿ, ತಾ| ಇಂಡಿ

ಜಿ.ಎಸ್‌. ಕಮತರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next