Advertisement

ವರ್ಣಮಯ ವ್ಯಕ್ತಿತ್ವದ ರಾಜಕೀಯ ಧುರೀಣ ಯು.ಆರ್‌. ಸಭಾಪತಿ

11:50 PM May 21, 2023 | Team Udayavani |

ಉಡುಪಿ: ಮಾಜಿ ಶಾಸಕ ಯು.ಆರ್‌. ಸಭಾಪತಿ ಅವರು ಅಸೌಖ್ಯದಿಂದಿದ್ದರೂ ಅವರ ನಿಧನದ ವಾರ್ತೆಯನ್ನು ರವಿವಾರ ಮಧ್ಯಾಹ್ನದ ವೇಳೆ ಕೇಳಿದವರಿಗೆ ಒಮ್ಮೆಗೆ ನಂಬಲಸಾಧ್ಯವಾಯಿತು. ಅವರು ಶಾಸಕರಾಗಿರಲೀ, ಮಾಜಿ ಶಾಸಕರಾಗಿರಲಿ ಅವರಿಗೆ ಇತರರೊಂದಿಗೆ, ಇತರರಿಗೆ ಅವರೊಂದಿಗೆ ಅಂತಹ ಆಪ್ತತೆ ಇತ್ತು ಎನ್ನುವುದೇ ಅವರ ಅಗಲುವಿಕೆಯನ್ನು ಒಮ್ಮೆಗೆ ಒಪ್ಪಿಕೊಳುವುದಕ್ಕೆ ತುಸು ಕಷ್ಟವಾಯಿ ತೆನ್ನಬಹುದು.

Advertisement

1980-90ರ ದಶಕದಲ್ಲಿ…
ಸದಾ ಕಾರ್ಯನಿರತ ಸಮಾಜ ಸೇವಕರಾಗಿದ್ದ ಸಭಾಪತಿ 1980-90ರ ದಶಕದಲ್ಲಿ ಪ್ರಭಾವಿ ನಾಯಕರಾಗಿದ್ದರು. 1987ರಲ್ಲಿ ದ.ಕ. ಜಿಲ್ಲಾ ಪರಿಷತ್‌ನ ಉದ್ಯಾವರ ಕ್ಷೇತ್ರದ ಸದಸ್ಯರಾಗಿ, ಪರಿಷತ್‌ನ ಶಿಕ್ಷಣ ಸ್ಥಾಯೀ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅದೇ ಸಂದರ್ಭದಲ್ಲಿ ದ.ಕ. ಜಿಲ್ಲೆಯ ಉತ್ತರ ವಿಭಾಗದ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಶಾಸಕರಾಗಿ ಆಯ್ಕೆ
1989ರಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಉಡುಪಿ ಕ್ಷೇತ್ರದಿಂದ ಟಿಕೆಟ್‌ ಸಿಗದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಮನೋರಮಾ ಮಧ್ವರಾಜ್‌ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 785 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. 1994ರಲ್ಲಿ ಎಸ್‌. ಬಂಗಾರಪ್ಪ ನೇತೃತ್ವದ ಕರ್ನಾಟಕ ಕಾಂಗ್ರೆಸ್‌ ಪಕ್ಷದಿಂದ ಉಡುಪಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಶಾಸಕರಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಆಗ ಕೆಸಿಪಿಯ ಐವರು ಶಾಸಕರ ತಂಡದ ನಾಯಕರಾದರು. ಅನಂತರ ಕೆಸಿಪಿ ಕಾಂಗ್ರೆಸ್‌ನಲ್ಲಿ ವಿಲೀನಗೊಂಡಿತ್ತು. 1999ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು ಶಾಸಕರಾಗಿ ಮರು ಆಯ್ಕೆ ಯಾಗಿದ್ದರು. 2004ರ ಚುನಾವಣೆಯಲ್ಲಿ ಕೆ. ರಘುಪತಿ ಭಟ್‌ ವಿರುದ್ಧ ಸೋಲನುಭವಿಸಿದ್ದರು. 2012ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್‌ ಸೇರಿ ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು. ಎಐಸಿಸಿ ಮೀನುಗಾರರ ವಿಭಾಗದ ಅಧ್ಯಕ್ಷರಾಗಿ, ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಕೇಂದ್ರದ ಮಾಜಿ ಸಚಿವ ಆಸ್ಕರ್‌ ಫೆರ್ನಾಂಡಿಸ್‌ ಸಹಿತ ಅನೇಕ ಉನ್ನತ ನಾಯಕರಿಗೆ ಆಪ್ತರಾಗಿದ್ದರು.

ತಳಸ್ತರದಿಂದ ಬಂದ ನಾಯಕ
ರಥಬೀದಿಗೆ ಹೊಂದಿಕೊಂಡಿರುವ ಬಡಗುಪೇಟೆಯ ನಿವಾಸಿಯಾದ ಕಾರಣ ಶ್ರೀಕೃಷ್ಣ ಮಠ, ಅಷ್ಟಮಠಗಳ ಸ್ವಾಮೀಜಿಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಅನನ್ಯ ಭಕ್ತರಾಗಿ ಪರ್ಯಾಯೋತ್ಸವಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದರು. ಆರಂಭದಿಂದಲೂ ಕಾಂಗ್ರೆಸ್‌ ಸಕ್ರಿಯ ಕಾರ್ಯಕರ್ತರಾಗಿದ್ದ ಸಭಾಪತಿಯವರು ರಸ್ತೆ ಬದಿ ಬಾವುಟ ಕಟ್ಟುವ, ಪೋಸ್ಟರ್‌ ಅಂಟಿಸುವ ಸಾಮಾನ್ಯ ಕಾರ್ಯಕರ್ತರ ಸ್ತರದಿಂದ ಬಂದವರು. ಅಸೌಖ್ಯದಿಂದ ಇದ್ದರೂ ಮೇ 10ರಂದು ನಡೆದ ಮತದಾನದ ದಿನ ಮತದಾನ ಕರ್ತವ್ಯವೆಂದು ತಿಳಿದು ಮತ ಚಲಾಯಿಸಿದ್ದರು.

Advertisement

ಉಡುಪಿಯ ಶಾಸಕರಾಗಿದ್ದ ಅವಧಿಯಲ್ಲಿ ಮೊತ್ತ ಮೊದಲ ಬಾರಿಗೆ ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸಿದ್ದರು. ಜನಸಾಮಾನ್ಯರ ಕೆಲಸಗಳನ್ನು ಸರಕಾರಿ ಇಲಾಖೆಗಳ ಸ್ತರದಲ್ಲಿ ಮಾಡಿಸಿ ಕೊಡುವುದು ಸಭಾಪತಿಯವರ ಜನಪ್ರಿಯತೆಗೆ ಮುಖ್ಯ ಕಾರಣವಾಗಿತ್ತು. ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ, ಭಾವಜೀವಿಯಾಗಿದ್ದ ಸಭಾಪತಿ ಯವರು ವರ್ಣರಂಜಿತ ವ್ಯಕ್ತಿತ್ವದ ರಾಜಕಾರಣಿ ಎಂದು ಪರಿಗಣಿತ ರಾಗಿದ್ದರು. ತಂದೆ ರಾಮಪ್ಪರಿಂದ ಬಂದ ಆರ್ಯಸಮಾಜದ ಒಡನಾಟ ಅವರಿಗಿತ್ತು. ಯಾವುದೇ ಒಂದು ನಿರ್ದಿಷ್ಟ ಸಮುದಾಯದವರೆನ್ನದೆ ಸಭಾಪತಿ ಅವರು ಸರ್ವ ಸಮು ದಾಯದ ನಾಯಕರಾಗಿ ರೂಪು ಗೊಂಡಿ ದ್ದರು ಎಂಬುದು ಉಲ್ಲೇಖನೀಯ.

ಕಳೆದ ವರ್ಷ- ಈ ವರ್ಷ
ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಕಳೆದ ವರ್ಷ ನಡೆದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಸಭಾಪತಿಯವರು ಪಾಲ್ಗೊಂಡು ಮಾತನಾಡಿದ್ದರು. ಈ ವರ್ಷ ಇದೇ ದಿನ ಸಭಾಪತಿಯವರು ಇಹಲೋಕ ತ್ಯಜಿಸಿದರು ಎನ್ನುವುದು ವಿಶೇಷ.

ಅಂತಿಮ ನಮನ
ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಿತು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ, ಶಾಸಕ ಯಶಪಾಲ್‌ ಸುವರ್ಣ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕ ಕೆ. ರಘುಪತಿ ಭಟ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ ಕುಮಾರ್‌ ಕೊಡವೂರು, ಕಾಂಗ್ರೆಸ್‌ ಮುಖಂಡ ಪ್ರಸಾದ್‌ರಾಜ್‌ ಕಾಂಚನ್‌, ಬಿಜೆಪಿ ಮುಖಂಡ ಉದಯ ಕುಮಾರ್‌ ಶೆಟ್ಟಿ ಕಿದಿಯೂರು ಮೊದಲಾದ ಗಣ್ಯರು ಮನೆ, ರುದ್ರಭೂಮಿಗೆ ತೆರಳಿ ಅಂತಿಮ ನಮನ ಸಲ್ಲಿಸಿದರು.

ಮುಖ್ಯಮಂತ್ರಿ ಸಂತಾಪ
ಬೆಂಗಳೂರು: ಯು.ಆರ್‌. ಸಭಾಪತಿ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತ ಪಡಿಸಿದ್ದಾರೆ. ಅವರ ಹಠಾತ್‌ ನಿಧನ ದಿಂದಾಗಿ ಆಘಾತಕ್ಕೀಡಾಗಿರುವುದಾಗಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಗಣ್ಯರ ಸಂತಾಪ
ಪೇಜಾವರ, ಪಲಿಮಾರು, ಪುತ್ತಿಗೆ, ಸೋದೆ, ಕಾಣಿಯೂರು, ಅದಮಾರು, ಕೇಮಾರು ಮಠಾಧೀಶರು, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ ನಾಯಕ್‌, ಇಂಟಕ್‌ ರಾಜ್ಯ ಕಾರ್ಯಾಧ್ಯಕ್ಷ ರಾಕೇಶ್‌ ಮಲ್ಲಿ, ಇಂಟಕ್‌ ದ.ಕ. ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಿ, ಮಾಜಿ ಶಾಸಕ ವಿಜಯಕುಮಾರ್‌ ಶೆಟ್ಟಿ, “ಉದಯವಾಣಿ’ ವಿಶ್ರಾಂತ ಸಂಪಾದಕ ಎನ್‌. ಗುರುರಾಜ್‌ ಸಂತಾಪ ಸೂಚಿಸಿದ್ದಾರೆ.

ಉಡುಪಿ ಜಿಲ್ಲೆಯ ಉದಯದ ವೇಳೆ…
ಉಡುಪಿ ಜಿಲ್ಲೆ ಉದಯವಾದದ್ದು 1997ರ ಆಗಸ್ಟ್‌ 25ರಂದು, ಶ್ರೀಕೃಷ್ಣ ಲೀಲೋತ್ಸವ/ ವಿಟ್ಲಪಿಂಡಿ ಸಡಗರದ ದಿನದಂದು. ಅಂದು ಜಿಲ್ಲೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರನ್ನು ಅಧ್ಯಕ್ಷತೆ ವಹಿಸಿದ್ದ ಶಾಸಕ ಸಭಾಪತಿಯವರು ಯಕ್ಷಗಾನದ ಕಿರೀಟವನ್ನು ತೊಡಿಸಿ ಸಮ್ಮಾನಿಸಿದ್ದರು. ಅಂದಿನ ಉಸ್ತುವಾರಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆ, ಸಚಿವರಾಗಿದ್ದ ಬಿ.ಎ. ಮೊದೀನ್‌, ವಿಧಾನ ಪರಿಷತ್‌ ಸದಸ್ಯ ಡಾ| ವಿ.ಎಸ್‌. ಆಚಾರ್ಯ, ಶಾಸಕರಾಗಿದ್ದ ಯೋಗೀಶ್‌ ಭಟ್‌ ಮೊದಲಾದವರಿದ್ದರು.

ರೈಲು ಹಳಿ ಮೇಲೆ ಪಾದಯಾತ್ರೆ
ಕೊಂಕಣ ರೈಲ್ವೇಯಿಂದ ಭೂ ಸಂತ್ರಸ್ತರಿಗೆ ಪರಿಹಾರ ದೊರಕದೆ ಇದ್ದಾಗ ಮಂಗಳೂರಿನಿಂದ ಬೈಂದೂರು ವರೆಗೆ ರೈಲು ಹಳಿಯ ಮೇಲೆ ಪಾದಯಾತ್ರೆ ನಡೆಸಿದ್ದರು. ಗುಜರಾತ್‌ನ ಕಚ್‌ನಲ್ಲಿ 2001ರಲ್ಲಿ ಭೂಕಂಪ ಸಂಭವಿಸಿದಾಗ ಶಾಸಕ ರಾಗಿದ್ದ ಸಭಾಪತಿಯವರು ತಂಡ ಕರೆದೊಯ್ದು ಪರಿಹಾರದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next