Advertisement

ಕೋಲಾರದಲ್ಲಿ ಸಂಭ್ರಮದ ವಿಜಯದಶಮಿ

12:54 PM Oct 16, 2021 | Team Udayavani |

ಕೋಲಾರ: ಗ್ರಾಮೀಣ ದಸರಾ ಮಾದರಿಯಲ್ಲಿ ಜಿಲ್ಲಾ ಧಿಕಾರಿ ಡಾ.ಆರ್‌.ಸೆಲ್ವಮಣಿ, ಉಪವಿಭಾಗಾಧಿಕಾರಿ ಆನಂದ್‌ ಪ್ರಕಾಶ್‌ ಮೀನಾ ಬನ್ನಿಮರಕ್ಕೆ ಪೂಜೆ ಸಲ್ಲಿಸಿ ಕತ್ತಿಯಿಂದ ಕತ್ತರಿಸುವ ಮೂಲಕ ಶ್ರದ್ಧಾಭಕ್ತಿಯಿಂದ ವಿಜಯದಶಮಿಯನ್ನು ಗ್ರಾಮೀಣ ದಸರಾ ಮಾದರಿಯಲ್ಲಿ ಆಚರಿಸಲಾಯಿತು.

Advertisement

ನಗರದ ಹೊರವಲಯದ ಕೊಂಡರಾಜನಹಳ್ಳಿಯಲ್ಲಿರುವ ಆಂಜನೇಯಸ್ವಾಮಿ ದೇಗುಲ ಮುಂಭಾಗ ವಿಜಯದಶಮಿಯ ಸಂಜೆ ಈ ಗ್ರಾಮೀಣ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಪ್ರತಿವರ್ಷ ತಹಶೀಲ್ದಾರ್‌ ಅವರು ಬನ್ನಿಮರಕ್ಕೆ ಪೂಜೆ ಸಲ್ಲಿಸುತ್ತಿದ್ದು ವಾಡಿಕೆ ಆಗಿತ್ತು.

ಈ ಬಾರಿ ಜಿಲ್ಲಾಧಿಕಾರಿ ಡಾ.ಆರ್‌. ಸೆಲ್ವಮಣಿ ಹಾಗೂ ವಿಭಾಗಾಧಿಕಾರಿ ಆನಂದ್‌ ಪ್ರಕಾಶ್‌ ಮೀನಾ ಜಂಟಿಯಾಗಿ ಪೂಜೆ ನೆರವೇರಿಸಿದರು. ಬನ್ನಿಮರ ಕಡಿಯಲು ಬಂದ ಅಧಿಕಾರಿಗಳನ್ನು ಪೂರ್ಣ ಕುಂಭ ಮೇಳದೊಂದಿಗೆ ಸ್ವಾಗತಿಸಿ, ಮೈಸೂರು ಪೇಟಾ ತೊಡಿಸಿ ಮೆರವಣಿಗೆಯಲ್ಲಿ ಕರೆತರಲಾಯಿತು. ಈ ವೇಳೆ ಡೀಸಿ ಬಾಳೆ ಮತ್ತು ಬನ್ನಿಮರಕ್ಕೆ ಪೂಜೆ ಸಲ್ಲಿಸಿ, ಕತ್ತಿಯಿಂದ ಬಾಳೇಗಿಡ ಕತ್ತರಿಸುವ ಮೂಲಕ ಸಂಪ್ರದಾಯವನ್ನು ಈ ವರ್ಷವೂ ಮುಂದುವರಿಸಿದರು.

ಇದನ್ನೂ ಓದಿ:- ಇದು 14ನೇ ಬಾರಿಯ ಏರಿಕೆ; ಮುಂಬೈನಲ್ಲಿ ಪೆಟ್ರೋಲ್‌ ಲೀಟರ್‌ಗೆ 111.09 ರೂ.

ಕತ್ತರಿಸಿದ ಬಾಳೆಗಿಡದಲ್ಲಿ ಎಲೆ, ಕಾಯಿಯನ್ನು ನೂರಾರು ಜನ ಮುಗಿಬಿದ್ದು, ಕಿತ್ತುಕೊಂಡರು. ಇಲ್ಲಿ ಪೂಜಿಸಲ್ಪಟ್ಟ ಎಲೆಗಳು, ಬಾಳೆಕಾಯಿ ಮನೆಯಲ್ಲಿಟ್ಟು ಪೂಜಿಸಿದರೆ ಇಡೀ ವರ್ಷ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜನರದ್ದು. ಈ ಸಂದರ್ಭದಲ್ಲಿ ಜಾತ್ರೆ ನೆರೆದಿದ್ದು, ಸುತ್ತಮುತ್ತಲ ಗ್ರಾಮಸ್ಥರು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ನಗರ ಬೆಳೆದರೂ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮರೆಯದೇ ವಿಶಿಷ್ಟ ರೀತಿಯಲ್ಲಿ ಇಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಶಕ್ತಿದೇವತೆಗಳ ಉತ್ಸವ: ನಗರದ ಬಹುತೇಕ ಶಕ್ತಿ ದೇವತೆಗಳ ಉತ್ಸವ ಮೂರ್ತಿಗಳನ್ನು ಈ ದೇವಾಲಯಕ್ಕೆ ತಂದು ಪಲ್ಲಕ್ಕಿ ಉತ್ಸವ ನಡೆಸಲಾಯಿತು.

Advertisement

ಈ ಬಾರಿಯೂ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಉತ್ಸವಮೂರ್ತಿಗಳನ್ನು ಇಲ್ಲಿಗೆ ತರಲಾಗಿತ್ತು. ಬನ್ನಿಮರ ಕಡಿಯುವ ಕಾರ್ಯ ಮುಗಿಯುತ್ತಿದ್ದಂತೆ ವಿವಿಧ ದೇವಾನುದೇವತೆಗಳ 20ಕ್ಕೂ ಹೆಚ್ಚು ಪಲ್ಲಕ್ಕಿಗಳಿಗೆ ಪೂಜೆ ಸಲ್ಲಿಸಿ ಪಾನಕ ಹೆಸರುಬಾಳೆ ಹಂಚಲಾಯಿತು. ಈ ಗ್ರಾಮೀಣ ದಸರಾ ಈ ವರ್ಷವೂ ನಡೆಯುವ ಮೂಲಕ ವಿಶೇಷ ಆಕರ್ಷಣೆ ಆಗಿತ್ತು. ನೆನಪಿನ ಕಾಣಿಕೆ ನೀಡಿಕೆ: ಸೀತಾರಾಮ ಕಲ್ಯಾಣ ಮಂಟಪ ಹಾಗೂ ಆಂಜನೇಯಸ್ವಾಮಿ ದೇವಾಲಯದ ಸಮಿತಿಯಿಂದ ಭಾಗವಹಿಸಿದ್ದ ಪಲ್ಲಕ್ಕಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು.

ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ವಿ.ಶ್ರೀನಿವಾಸಯಾದವ್‌, ಸಿಎಂಆರ್‌ ಶ್ರೀನಾಥ್‌, ವೆಂಕಟರಮಣಪ್ಪ, ಗ್ರಾಪಂ ಸದಸ್ಯ ಚಲಪತಿ, ಜಯಕರ್ನಾಟಕ ತ್ಯಾಗರಾಜ್‌, ಕೆ.ಮಂಜುನಾಥ್‌, ಜಿ. ಶ್ರೀನಿವಾಸ್‌, ಜಿ.ಮುನಿಯಪ್ಪ, ಭಜರಂಗದಳದ ಬಾಬು, ಅಪ್ಪಿ, ಮಲ್ಲಿಕಾರ್ಜುನ್‌, ಮಂಜು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು

ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ಬಾಣ ಹೊಡೆದ ತಹಶೀಲ್ದಾರ್‌ ಶ್ರೀ ನಿವಾಸ್‌-

ಶ್ರೀನಿವಾಸಪುರ: ದಸರಾ ವೈಭವ ಬಿಂಬಿಸುವ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ಬಾಣ ಹೂಡೆಯುವ ಮೂಲಕ ವಿಜಯದಶಮಿಯನ್ನು ತಹಶೀಲ್ದಾರ್‌ ಎಸ್‌.ಎಂ. ಶ್ರೀನಿವಾಸ್‌ ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಪಟ್ಟಣದ ವರದ ಬಾಲಾಂಜನೇಯ ಸ್ವಾಮಿ ಕ್ಷೇತ್ರ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಬನ್ನಿ ಮಂಟಪಕ್ಕೆ ಹಸಿರಿನ ಚಪ್ಪರ ಹಾಕಿ ಶೃಂಗಾರಗೊಳಿಸಲಾಗಿತ್ತು. ಅದೇ ರೀತಿ ಮಂಟಪದ ಮುಂಭಾಗ ರಂಗೋಲಿ ಬಿಡಿಸಿ, ಸ್ಥಳದಲ್ಲಿ ಬನ್ನಿ ಗಿಡವನ್ನು ನೆಟ್ಟಿದ್ದರು. ಪ್ರತಿ ವರ್ಷದಂತೆ ಬನ್ನಿ ಗಿಡಕ್ಕೆ ವೇದ ಮಂತ್ರಗಳ ಪಠಣದೊಂದಿಗೆ ಪೂಜೆ ಸಲ್ಲಿಸಲಾಯಿತು. ಇದೇ ಮೊದಲ ಬಾರಿಗೆ ತಹಶೀಲ್ದಾರ್‌ ಎಸ್‌. ಎಂ.ಶ್ರೀನಿವಾಸ್‌ ತಮ್ಮ ಪತ್ನಿ ಮಕ್ಕಳೊಂದಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸಿ ಬಾಣ ಹೂಡಿದ ನಂತರ ಆಗಮಿಸಿದ್ದ ಭಕ್ತರು ಬನ್ನಿ ಗಿಡದ ಎಲೆಗಳನ್ನು ವಿಜಯದ ಸಂಕೇತವಾಗಿ ಪ್ರಸಾದ ರೂಪದಲ್ಲಿ ಪಡೆದುಕೊಂಡರು. ಈ ಸಂದರ್ಭದಲ್ಲಿ ವೈ.ಆರ್‌.ಶಿವಪ್ರಕಾಶ್‌, ಗೋಪಿನಾಥ್‌, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರಾದ ಬಿ.ವಿ.ಮುನಿರೆಡ್ಡಿ, ಗ್ರಾಮ ಲೆಕ್ಕಿಗರಾದ ಹರಿನಾಥ್‌, ಭೀಮರಾವ್‌, ಸೇವಾಕರ್ತರಾದ ಕೊಳ್ಳೂರು ಕೆ.ಆರ್‌.ಶ್ರೀನಿವಾಸ್‌, ಗ್ರಾಮ ಸಹಾಯಕ ಕೊಳ್ಳೂರು ನಾಗರಾಜ್‌ ದೇವಾಲಯದ ಅರ್ಚಕರು ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next