ಬಳಗಾನೂರು: ನಿತ್ಯ ಸಂಚರಿಸುವ ಮಸ್ಕಿ ಸಾರಿಗೆ ಘಟಕದ ಬಾಗಲಕೋಟೆ-ಬಳಗಾನೂರು ಬಸ್ ಬಾರದ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರಗಳಾದ ಮಸ್ಕಿ, ಸಿಂಧನೂರು, ಲಿಂಗಸುಗೂರು ತೆರಳುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ಪರದಾಡುವಂತಾಯಿತು.
ಇದರಿಂದ ಆಕ್ರೋಶ ವ್ಯಕ್ತಪಡಿಸಿದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪಾಲಕರು, ಸಾರ್ವಜನಿಕರು ಕೆಲ ಬಸ್ಗಳನ್ನು ತಡೆದು ಪತ್ರಿಭಟನೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿಗಳ ಮನವೊಲಿಸಿ ಬಸ್ ಸಂಚಾರ ಸುಗಮಗೊಳಿಸಿದರು. ಬೆಳಗ್ಗೆ 7.15 ನಿಮಿಷಕ್ಕೆ ಪಟ್ಟಣದಿಂದ ಹೊರಡುವ ಬಸ್ ಬಾರದ ಹಿನ್ನೆಲೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಲೆ-ಕಾಲೇಜುಗಳಿಗೆ ತೆರಳಲು ತಡವಾಯಿತು. ಇನ್ನೂ ಕೆಲ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಗೈರು ಆಗುವಂತಾಯಿತು. ಪೂರ್ವ ಸಿದ್ಧತೆ ಪರೀಕ್ಷೆ ಬರೆಯಲು ತೆರಳುವ ವಿದ್ಯಾರ್ಥಿಗಳು ಸ್ಥಳೀಯ ಹಾಗೂ ಸಂಚಾರ ಘಟಕದ ವ್ಯವಸ್ಥೆಗೆ ಹಿಡಿಶಾಪ ಹಾಕಿದರು. ಈ ಕುರಿತು ಘಟಕ ವ್ಯವಸ್ಥಾಪಕರಿಗೆ ಸೂಕ್ತ ಸಮಯದಲ್ಲಿ ಬಸ್ ಸಂಚಾರ ಕಲ್ಪಿಸಲು ಆದೇಶಿಸುವುದಾಗಿ ಹೇಳಿದರು.
ಚಾಲಕ ನಿರ್ವಾಹಕರಿಗೆ ಸಾರ್ವಜನಿಕರೊಂದಿಗೆ ಸಹಕರಿಸಲು ಸೂಚಿಸುವದಾಗಿ ರಾಯಚೂರು ವಿಭಾಗೀಯ ನಿಯಂತ್ರಣ ಅಧಿಕಾರಿ ವೆಂಕಟೇಶ ಭರವಸೆ ನೀಡಿದರು.