Advertisement

ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 883 ಮತಗಟ್ಟೆ ; 220 ಕ್ಲಿಷ್ಟಕರ, 663 ಸಾಮಾನ್ಯ

09:41 PM Apr 15, 2019 | Sriram |

ಮಹಾನಗರ: ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರ ವ್ಯಾಪ್ತಿಯ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ವಿಧಾನ ಸಭಾ ಕ್ಷೇತ್ರಗಳು ಬರುತ್ತಿದ್ದು, ಒಟ್ಟು 883 ಮತಗಟ್ಟೆಗಳಿವೆ. ಈ ಪೈಕಿ 220 ಕ್ಲಿಷ್ಟಕರ ಮತ್ತು 663 ಸಾಮಾನ್ಯ ಮತಗಟ್ಟೆಗಳು ಎಂಬುದಾಗಿ ಗುರುತಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

Advertisement

ಎ. 18ರಂದು ಮತದಾನ ಪ್ರಕ್ರಿಯೆ ಸುಸೂತ್ರವಾಗಿ ಮತ್ತು ಶಾಂತಿಯುತವಾಗಿ ನಡೆಯುವ ನಿಟ್ಟಿನಲ್ಲಿ 4 ವಿಧಾನ ಸಭಾ ಕ್ಷೇತ್ರಗಳ ಆಯ್ದ ಸೂಕ್ಷ್ಮ ಸ್ಥಳಗಳಲ್ಲಿ ತಲಾ 3 ಸಿಎಆರ್‌ ತುಕಡಿಗಳಂತೆ ಒಟ್ಟು 12 ಸಿಎಆರ್‌ ತುಕಡಿಗಳನ್ನು ಮತ್ತು 4 ಕೆಎಸ್‌ಆರ್‌ಪಿ ತುಕಡಿಗಳನ್ನು 8 ತುಕಡಿಗಳನ್ನಾಗಿ ವಿಭಾಗಿಸಿ ಒಂದೊಂದು ಶಾಸಕ ಕ್ಷೇತ್ರದಲ್ಲಿ ತಲಾ 2 ತುಕಡಿಗಳಂತೆ ನಿಯೋಜಿಸಲಾಗಿದೆ ಎಂದವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮತದಾನಕ್ಕೆ ಅಡ್ಡಿಪಡಿಸುವ ಶಂಕೆ: 501 ವ್ಯಕ್ತಿಗಳ ವಿರುದ್ಧ ಕ್ರಮ ಒಟ್ಟು 93 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, 220 ಸೂಕ್ಷ್ಮ ಮತ ಗಟ್ಟೆಗಳಿಗೆ ಸಂಬಂಧ ಪಟ್ಟ 501 ವ್ಯಕ್ತಿಗಳನ್ನು ಇಂಟಿಮಿಡೇಟರ್ (ರೌಡಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಿಗಿದವರು) ಎಂದು ಗುರುತಿಸಿ ಅವರ ವಿರುದ್ಧ ಸೂಕ್ತ ಕ್ರಮ ಜರಗಿಸಲಾಗಿದೆ ಎಂದರು.

1,500 ಪೊಲೀಸರು
220 ಸೂಕ್ಷ್ಮ ಮತಗಟ್ಟೆಗಳ ಪೈಕಿ 156 ಮತಗಟ್ಟೆಗಳಿಗೆ ಕೇಂದ್ರಿಯ ಪಡೆಗಳ ಭದ್ರತೆ ಕೂಡಾ ಇದ್ದು, ಇನ್ನುಳಿದ ಕ್ಲಿಷ್ಟಕರ ಮತಗಟ್ಟೆಗಳಿಗೆ ಮೈಕ್ರೋ ಒಬ್ಸರ್‌ವರ್‌ ಮತ್ತು ವೀಡಿಯ ಒಬ್ಸರ್‌ ವರ್‌ರವರ ಕಣ್ಗಾವಲು ಇದೆ. ಚುನಾವಣೆ ಬಂದೋಬಸ್ತು ಪ್ರಯುಕ್ತ ಡಿಸಿಪಿ 2, ಡಿವೈಎಸ್ಪಿ-ಎಸಿಪಿ 7, ಇನ್ಸ್‌ಪೆಕ್ಟರ್‌ 16, ಪಿಎಸ್‌ಐ 7, ಎಎಸ್‌ಐ 79, ಎಚ್‌ಸಿ/ಪಿಸಿ ಮತ್ತು ಹೋಂಗಾರ್ಡ್‌ ಸಹಿತ ಒಟ್ಟು 1500 ಪೊಲೀಸರು ಹಾಗೂ ಕೇಂದ್ರಿಯ ಪಡೆಯ 2 ಕಂಪನಿ ಮತ್ತು 8 ಕೆಎಸ್‌ಆರ್‌ಪಿ 12 ಸಿಎಆರ್‌ ತುಕಡಿಗಳನ್ನು ನಿಯೋಜಿಸಲಾಗಿದೆ.

ಚುನಾವಣೆ ಸಂದರ್ಭ ಯಾವುದೇ ಅಕ್ರಮ ಚಟುವಟಿಕೆ, ಅಹಿತಕರ ಘಟನೆ ಬಗ್ಗೆ ಮಾಹಿತಿ ದೊರೆಯಲ್ಲಿ ಕೂಡಲೇ ಕಂಟ್ರೋಲ್‌ ರೂಂ 0824-2220800 ಅಥವಾ 100 ಸಂಖ್ಯೆಗೆ ಕರೆ ಮಾಡಿ ತಿಳಿಸ ಬಹುದು. ಮಾಹಿತಿ ನೀಡಿದವರು ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದರು.ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್‌ ಉಪಸ್ಥಿತರಿದ್ದರು.

Advertisement

1,500 ಕಿಟ್‌ ವಿತರಣೆ
ನಗರ ವ್ಯಾಪ್ತಿಯ ಮತಗಟ್ಟೆ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡ 1500 ಮಂದಿ ಇಲಾಖಾ ಸಿಬಂದಿ ಮತ್ತು ಗೃಹರಕ್ಷಕ ಸಿಬಂದಿಗೆ ಅವರ ಅವಶ್ಯಕತೆಗೆ ಸಂಬಂಧಿಸಿ 1500 ಕಿಟ್‌ ಬಾಕ್ಸ್‌ ನೀಡಲಾಗುತ್ತಿದೆ. ಅದರಲ್ಲಿ ಟೂತ್‌ ಪೇಸ್ಟ್‌, ಬ್ರಷ್‌, ಸೋಪ್‌, ಬೆಂಕಿ ಪೊಟ್ಟಣ, ಕ್ಯಾಂಡಲ್‌, ಶೇವಿಂಗ್‌ ಬ್ಲೇಡ್‌, ಸೊಳ್ಳೆ ನಿರೋಧಕ ಔಷಧ ಇರುತ್ತದೆ.

ಗೂಂಡಾಗಳ ಗಡೀಪಾರು, ಮುಚ್ಚಳಿಕೆ
ಮುಂಜಾಗ್ರತಾ ಕ್ರಮವಾಗಿ 17 ರೌಡಿಶೀಟರ್‌ಗಳ ಗಡೀಪಾರಿಗೆ ಆದೇಶಿಸಲಾಗಿದೆ. 430 ರೌಡಿಗಳಿಂದ ಮುಂಜಾಗ್ರತಾ ಕ್ರಮವಾಗಿ ಸಿಆರ್‌ಪಿಸಿ ಕಲಂ 107, 109, 110 ರನ್ವಯ ಕಾನೂನು ಸುವ್ಯವಸ್ಥೆ ಭಂಗ ಮಾಡದಂತೆ ಮುಚ್ಚಳಿಕೆ ಪಡೆಯಲಾಗಿದೆ. ನಗರದಲ್ಲಿ ಚುನಾವಣ ನೀತಿ ಸಂಹಿತೆ ಉಲ್ಲಂಘಿಸಿದ ಬಗ್ಗೆ 3 ಪ್ರಜಾ ಪ್ರತಿನಿಧಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ. 2011 ಆಯುಧಗಳಲ್ಲಿ 1949 ಆಯುಧ ಈಗಾಗಲೇ ಡಿಪಾಸಿಟ್‌ ಮಾಡಿಸಿಕೊಳ್ಳಲಾಗಿದ್ದು, ಕೆಲವೊಂದು ಅತಿ ಅನಿವಾರ್ಯ ಕಾರಣಗಳ ಕೋರಿಕೆಯಂತೆ ಇನ್ನುಳಿದ 62 ಆಯುಧಗಳಿಗೆ ಡಿಪಾಸಿಟ್‌ ವಿನಾಯಿತಿ ನೀಡಲಾಗಿದೆ.

ಸ್ಟ್ರಾಂಗ್‌ ರೂಂ ಎಸ್ಪಿ ದರ್ಜೆ ಸಿಬಂದಿ ನಿಗಾ
ಮಸ್ಟರಿಂಗ್‌ ಮತ್ತು ಡಿ- ಮಸ್ಟರಿಂಗ್‌ ಸೆಂಟರ್‌ಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗಿದ್ದು, ಸ್ಟ್ರಾಂಗ್‌ ರೂಂ ಉಸ್ತುವಾರಿಗೆ ಎಸ್ಪಿ ದರ್ಜೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುವುದು. ಎ. 18ರಂದು ಡೀಮಸ್ಟರಿಂಗ್‌ ಪ್ರಕ್ರಿಯೆ ಬಳಿಕ ಎಲ್ಲ 8 ವಿಧಾನಸಭಾ ಕ್ಷೇತ್ರದ ಇವಿಎಂ ಮತ್ತು ವಿವಿ ಪ್ಯಾಟ್‌ ಮೆಷಿನ್‌ಗಳನ್ನು ಭದ್ರತಾ ಕೋಣೆಯಲ್ಲಿ ಕೇಂದ್ರೀಯ ಪಡೆ ಮತ್ತು ಸ್ಥಳೀಯ ಪೊಲೀಸ್‌ ಭದ್ರತೆಯಲ್ಲಿ ಮತ ಎಣಿಕೆ ತನಕ ಇಡಲಾಗುತ್ತಿದೆ. ಸುಮಾರು ಒಂದು ತಿಂಗಳ ಕಾಲ ಮತ ಎಣಿಕೆ ಕೇಂದ್ರದ ಸುತ್ತ ಬಂದೋಬಸ್ತ್ ನಡೆಸಲಾಗುವುದು.

28,25,295ರೂ. ವಶ
ನಗರ ವ್ಯಾಪ್ತಿಯಲ್ಲಿ ಮತ್ತು ಅಂತಾರಾಜ್ಯ ಗಡಿಭಾಗದಲ್ಲಿ 21ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಈ ಪೈಕಿ 10 ಎಸ್‌ಎಸ್‌ಟಿ ಮತ್ತು 11 ಪೊಲೀಸ್‌ ಚೆಕ್‌ಪೋಸ್ಟ್‌ ಗಳಿವೆ. ಎಎಸ್‌ಟಿ ತಂಡ ಮತ್ತು ಪ್ಲೈಯಿಂಗ್‌ ಸರ್ವಿಲೆನ್ಸ್‌ ಟೀಮ್‌ ಕಾರ್ಯಾಚರಣೆ ನಡೆಸಿ 28,25,295 ರೂ. ನಗದು ವಶ‌ಪಡಿಸಿಕೊಂಡು ಸೂಕ್ತ ದಾಖಲಾತಿ ಪರಿಶೀಲಿಸಿ ವಿಲೇವಾರಿ ಮಾಡಲಾಗಿದೆ.

1,039 ವಾರಂಟು
ನೀತಿ ಸಂಹಿತೆ ಘೋಷಣೆಯಾದ ಬಳಿಕ 1,039 ವಾರಂಟುಗಳು ಕಮಿಷನರೆಟ್‌ನಲ್ಲಿ ಸ್ವೀಕೃತವಾಗಿದ್ದು, ಈ ಪೈಕಿ 846 ವಾರಂಟ್‌ಗಳನ್ನು ಜಾರಿಗೊಳಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next