Advertisement

ಪರಂಪರೆ- ಆಧುನಿಕತೆಯ ಅನುಸಂಧಾನದ ಕವಿಗೆ ಸಮ್ಮೇಳನಾಧ್ಯಕ್ಷತೆಯ ಗೌರವ

10:14 AM Dec 09, 2019 | mahesh |

ಪು. ತಿ. ನರಸಿಂಹಾಚಾರ್‌, ಕೆ. ಎಸ್‌. ನರಸಿಂಹಸ್ವಾಮಿ, ಜಿ. ಎಸ್‌. ಶಿವರುದ್ರಪ್ಪ , ಎಂ. ಗೋಪಾಲಕೃಷ್ಣ ಅಡಿಗ ಮೊದಲಾದವರ ಪ್ರೇರಣೆಯಿಂದ, ತಮ್ಮದೇ ಆದ ಕಾವ್ಯಪಥವನ್ನು ರೂಪಿಸಿದ ನಮ್ಮ ಕಾಲದ ಮಹಣ್ತೀದ ಕವಿ ಎಚ್‌. ಎಸ್‌. ವೆಂಕಟೇಶಮೂರ್ತಿಯವರಿಗೆ ಕಲ್ಬುರ್ಗಿಯಲ್ಲಿ ಬರುವ ಫೆಬ್ರವರಿಯಲ್ಲಿ ನಡೆಯಲಿರುವ 85ನೆಯ ಆಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಲಭಿಸಿದೆ. ಕತೆ, ಕಾದಂಬರಿ, ನಾಟಕ, ಪ್ರಬಂಧ, ಶಿಶುಸಾಹಿತ್ಯ ಹೀಗೆ ಹಲವು ಪ್ರಕಾರಗಳಲ್ಲಿ ಕೃಷಿ ನಡೆಸಿದರೂ ಅವರೊಳಗಿರುವುದು ಅಪ್ಪಟ ಕವಿಹೃದಯ. ಅವರು ಬರೆದರೂ ಒರೆದರೂ ಕಾವ್ಯವೇ..

Advertisement

ವಿಚಾರಗೋಷ್ಠಿಯಲ್ಲಿ ಎಚ್‌. ಎಸ್‌. ವೆಂಕಟೇಶಮೂರ್ತಿ ಅವರು ಬರಗೂರು ರಾಮಚಂದ್ರಪ್ಪ , ಕೆ. ಎಸ್‌. ನಿಸಾರ್‌ ಅಹಮದ್‌, ದೊಡ್ಡರಂಗೇಗೌಡರೊಂದಿಗೆ

ಕನ್ನಡ ಸಾರಸ್ವತ ಲೋಕಕ್ಕೆ ನೂರಕ್ಕಿಂತಲೂ ಅಧಿಕ ಕೃತಿಗಳನ್ನು ನೀಡಿರುವ ಎಚ್‌ಎಸ್‌ವಿಯವರು ಹಿರಿಯ ತಲೆಮಾರಿನ ಸಾಹಿತಿಗಳೊಂದಿಗೆ ನಿಕಟವಾಗಿ ಒಡನಾಡಿದವರು. ವಿದ್ವದ್ವಿನಯಗಳು ಅವರ ವ್ಯಕ್ತಿಣ್ತೀದಲ್ಲಿ ಸಹಜವಾಗಿ ಮಿಳಿತಗೊಂಡಿವೆ. ಅವರು ಅನೌಪಚಾರಿಕವಾಗಿ, ಆತ್ಮೀಯವಾಗಿ ಮಾತನಾಡಿದಾಗ…

ದಾವಣಗೆರೆ ಜಿಲ್ಲೆಯ ಹೊದಿಗೆರೆಯಿಂದ ತೊಡಗಿ, ಹೊಳಲ್ಕೆರೆಯ ಮೂಲಕ ಚಿತ್ರದುರ್ಗವಾಗಿ ಬೆಂಗಳೂರಿಗೆ ಬಂದಿರಿ. ಈಗ ಮರಳಿ ಕಲ್ಬುರ್ಗಿಗೆ ಹೊರಟು ನಿಂತಿರುವಿರಿ. ಈ ಪಯಣದ ಕುರಿತು ಹೇಗನ್ನಿಸುತ್ತದೆ?
-ದೂರದಾರಿಯ ಪಯಣ- ಕೆ. ಎಸ್‌. ನ. ಹೇಳುವಂತೆ. ಊರು ಸೇರುವ ತನಕ ಈ ಪಯಣ ಸಾಗಲೇಬೇಕು. ಚಲನೆಯೇ ಜೀವನ, ನಿಶ್ಚಲತೆ ಮರಣ ಎನ್ನುವ ಕವಿವಾಕ್ಯವನ್ನು ನಾವು ಮರೆಯಲಿಲ್ಲ.

ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದೀರಿ. ನೂರು ವರ್ಷಗಳ ಹಿಂದಿನ ಸಮ್ಮೇಳನದ ಕಲ್ಪನೆ ಇಂದಿಗೂ ಪ್ರಸ್ತುತ ಎನ್ನಿಸುತ್ತಿದೆಯೆ?
-ನಮ್ಮ ಉತ್ಸವ-ಜಾತ್ರೆಗಳು ಸಾವಿರಾರು ವರ್ಷದಷ್ಟು ಹಳೆಯ ಕಲ್ಪನೆಗಳೇ. “ಕಳ್ಳೇಕಾಯಿ ಪರಿಷೆ’ ಬೆಂಗಳೂರಿನಲ್ಲಿ ಈಗಲೂ ಚಾಲ್ತಿಯಲ್ಲಿದೆ. ಸ್ಥೂಲಾಕಾರಗಳು ಹಳೆಯವೇ. ತಿರುಳು ಹೊಸಕಾಲಕ್ಕೆ ತಕ್ಕಂತೆ ಬದಲಾಗಬೇಕಾಗುವುದು. ಸಾಹಿತ್ಯ ಸಮ್ಮೇಳನಗಳು ನಿಧಾನವಾಗಿ ಸಾಹಿತ್ಯಿಕ ನೆಲೆಯಿಂದ ಸಾಂಸ್ಕೃತಿಕ ನೆಲೆಗೆ ಹೊರಳಿಕೊಳ್ಳುತ್ತ ಬಂದಿವೆ. ಕರ್ನಾಟಕದ ಎಲ್ಲ ಸಮಸ್ಯೆಗಳ ಕುರಿತಂತೆ ಈಗ ಸಮ್ಮೇಳನಗಳಲ್ಲಿ ಗೋಷ್ಠಿಗಳಿರುವುದನ್ನು ಗಮನಿಸಬಹುದು.

Advertisement

ಪು. ತಿ. ನರಸಿಂಹಾಚಾರ್‌ ಅವರ ಇಕ್ಕೆಲಗಳಲ್ಲಿ ಎಚ್‌. ಎಸ್‌. ವೆಂಕಟೇಶಮೂರ್ತಿ, ಬಿ. ಸಿ. ರಾಮಚಂದ್ರ ಶರ್ಮ

ಇದು ಅವಸರದ ಕಾಲ. ಎಲ್ಲೆಡೆ ಗೌಜಿ-ಗದ್ದಲ. ನಡುವೆ ನಿಮ್ಮದೇ “ಶಂಖದೊಳಗಿನ ಮೌನ’ವನ್ನು ಧ್ಯಾನಿಸುತ್ತಿರುವಿರಾ?
-ಶಬ್ದದೊಳಗಣ ನಿಶ್ಯಬ್ದ ಎಂಬುದು ವಚನಕಾರರ ನುಡಿಗಟ್ಟು. ಈಗ ಸಂತರ ಮೌನಾನುಸಂಧಾನ ನಡೆಯಬೇಕಾಗಿದೆ. ನಡೆಯುವ ಅಗತ್ಯವೂ ಇದೆ.

ಸಭೆಗಳು ದೊಡ್ಡ-ದೊಡ್ಡದಾಗಿ, ಸಾಮೂಹಿಕ, ಸಾಮುದಾಯಿಕವಾಗಿ ಬೆಳೆದ ಹಾಗೆಲ್ಲ “ವೈಯಕ್ತಿಕ’ ಸೂಕ್ಷ್ಮಗಳು ಮಾಸಿಹೋಗುತ್ತವೆಯೆ?
-ಸಭೆ ದೊಡ್ಡದಾಗುವುದು ಸಮುದಾಯದ ಹಿಗ್ಗಿಗೆ ಅಗತ್ಯ. ಉತ್ಸವ ನಡೆಯಬೇಕಾದ್ದೇ ಹಾಗೆ. ಅದು ಕನ್ನಡದ ಶಕ್ತಿವಿಸ್ತಾರವನ್ನು ಸೂಚಿಸುವುದು. ಇದು ಲೋಕಾಂತ. ಇನ್ನು ಏಕಾಂತವು ಆತ್ಮದ ಸಂಸ್ಕಾರಕ್ಕೆ ಅಗತ್ಯವಾದುದು. ಲೋಕಾಂತದಿಂದ ಏಕಾಂತಕ್ಕೆ, ಏಕಾಂತಕ್ಕೆ ಚಲಿಸುತ್ತಲೇ ಬಾಳಿನ ಪತ್ತಲ ಸಿದ್ಧವಾಗುವುದು.

ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಉತ್ತರಕರ್ನಾಟಕ ಶ್ರೀಮಂತವಾಗಿದ್ದರೂ “ರಾಜಧಾನಿ ಕೇಂದ್ರಿತ ಯೋಚನ ಕ್ರಮ’ ದಲ್ಲಿ ಆ ಪ್ರದೇಶದ ಬಗ್ಗೆ ಒಂದು ಬಗೆಯ ಅವಜ್ಞೆ ಇದ್ದಂತೆ ಅನ್ನಿಸುತ್ತದೆಯೆ?
-ಸಾಹಿತ್ಯಸಮ್ಮೇಳನಗಳು ಕರ್ನಾಟಕದ ಬೇರೆಬೇರೆ ಭಾಗಗಳಲ್ಲಿ ನಡೆಯುತ್ತಿರುವುದು ಅವಜ್ಞೆಯನ್ನು ಹೋಗಲಾಡಿಸುವ ಯತ್ನವೆಂದು ನನ್ನ ಭಾವನೆ.

ಟಿ. ಎಸ್‌. ರಾಧಾಕೃಷ್ಣ , ನರಹಳ್ಳಿ ಬಾಲಸುಬ್ರಹ್ಮಣ್ಯ, ಬಿ. ಆರ್‌. ಲಕ್ಷ್ಮಣ ರಾವ್‌ ಅವರೊಂದಿಗೆ ಎಚ್‌ಎಸ್‌ವಿ.

ಇವತ್ತು ಕನ್ನಡ ಭಾಷೆ-ಸಂಸ್ಕೃತಿ “ಬೆಳೆಯುತ್ತಿದೆ’ ಅಂತನ್ನಿಸುತ್ತಿದೆಯೆ?
-ಭಾಷೆ-ಸಂಸ್ಕೃತಿ ಯಾವತ್ತೂ ನಿಂತ ನೀರಲ್ಲ. ಸದಾ ಪರಿವರ್ತನಶೀಲ. ಅದನ್ನು ಬೆಳವಣಿಗೆ ಎನ್ನುವುದಕ್ಕಿಂತ ಬದಲಾವಣೆ ಎಂದು ಗುರುತಿಸಿ ವ್ಯಾಖ್ಯಾನಿಸಬೇಕು.
ಕನ್ನಡ ಭಾಷೆಯ ಬಗ್ಗೆ ಕನ್ನಡ ಅಧ್ಯಾಪಕರಿಗಿಂತ ಉಳಿದವರು ಆಸಕ್ತಿ ತಳೆದಿದ್ದಾರೆ ಅಂತನ್ನಿಸುತ್ತಿದೆಯೆ?

-ಸಾಮಾನ್ಯಿಕರಣ ಸರಿಯಲ್ಲ. ಆದರೆ, ಒಂದು ಮಾತು ಹೇಳಲೇಬೇಕು. ಬೇರೆಬೇರೆ ವೃತ್ತಿ, ವಲಯಗಳಲ್ಲಿರುವ ಲೇಖಕರು ಈಗ ಮಹಣ್ತೀದ ಕೃತಿಗಳನ್ನು ರಚಿಸುತ್ತಿದ್ದಾರೆ. ಸಾಹಿತ್ಯದ ಅಭ್ಯಾಸ ಮಾಡುತ್ತಿದ್ದಾರೆ.

ಕನ್ನಡದಲ್ಲಿ ಪಂಡಿತ ಪರಂಪರೆ ಕ್ಷೀಣವಾಗುತ್ತಿದೆಯೆ?
-ಪಂಡಿತ ಪರಂಪರೆ (ಅದನ್ನು ವಿದ್ವತ್‌ ಪರಂಪರೆ ಎಂದು ಕರೆಯಲು ಬಯಸುತ್ತೇನೆ) ಕ್ಷೀಣಿಸುತ್ತಿರುವುದು ನಿಜ.

ಇಂಗ್ಲಿಶ್‌-ಹಿಂದಿಗಳು ಕನ್ನಡದ ಬೆಳವಣಿಗೆಗೆ ಸವಾಲಾಗಿವೆಯೆ?
-ಇಂಗ್ಲಿಷ್‌ ಹಿಂದಿಗಳು ಕನ್ನಡದ ಬೆಳವಣಿಗೆಗೆ ಕಂಟಕಕಾರಿ ಸವಾಲುಗಳು.

Advertisement

Udayavani is now on Telegram. Click here to join our channel and stay updated with the latest news.

Next