Advertisement

ಉಡುಪಿ: 84 ಮಂದಿಗೆ ಸೋಂಕು ; ಕಿರಿಮಂಜೇಶ್ವರದ ವೃದ್ಧ  ಸಾವು

02:43 AM Jul 18, 2020 | Hari Prasad |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಒಂದು ಸಾವು, 309 ನೆಗೆಟಿವ್‌ ಮತ್ತು 84 ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ.

Advertisement

ಕುಂದಾಪುರದ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಿರಿಮಂಜೇಶ್ವರ ಮೂಲದ 80 ವರ್ಷ ಪ್ರಾಯದವರೊಬ್ಬರು ಮೃತಪಟ್ಟವರು.

ಎರಡು ದಿನಗಳ ಹಿಂದೆ ಅವರನ್ನು ಉಸಿರಾಟ, ಶ್ವಾಸಕೋಶದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ಪ್ರಸ್ತಾವವಿತ್ತು. ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು.

ಕೋವಿಡ್‌ ಮಾರ್ಗಸೂಚಿ ಪ್ರಕಾರ ಕುಂದಾಪುರದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ 19 ಕಾರಣದಿಂದ ಮೃತ ಪಟ್ಟವರ ಸಂಖ್ಯೆ 9ಕ್ಕೇರಿದೆ.

ಆರೋಗ್ಯ ಸಿಬಂದಿಗೆ ಕ್ವಾರಂಟೈನ್‌
ಉಡುಪಿ ನಗರಸಭೆಯ ಎಲ್ಲ ಆರೋಗ್ಯ ವಿಭಾಗದ ಸಿಬಂದಿ ಸ್ವ ಕಾರಂಟೈನ್‌ಗೆ ಒಳಗಾಗಿದ್ದಾರೆ. ಇತರ ವಿಭಾಗದ ಸಿಬಂದಿಗಳನ್ನು ಸೇರಿಸಿಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

ಸೀಲ್‌ಡೌನ್‌
ಉಡುಪಿ ಎಲ್‌ಐಸಿ ಕಚೇರಿ ಹಿಂಭಾಗದ ಒಂದು ಮನೆ, ಶಿವಳ್ಳಿ ಗ್ರಾಮದ 8 ಮನೆ, ಮೂಡ ನಿಡಂಬೂರು ಪಿಡಬ್ಲ್ಯುಡಿ ವಸತಿಗೃಹದ 2 ಮನೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಬೆಳ್ಮಣ್‌: ಮೂವರಿಗೆ ಪಾಸಿಟಿವ್‌
ಇತ್ತೀಚೆಗೆ ಕೋವಿಡ್ 19 ಪಾಸಿಟಿವ್‌ ಬಂದಿದ್ದ ಇಲ್ಲಿನ ಗ್ರಾ.ಪಂ. ಸದಸ್ಯರೊಬ್ಬರ ಸಂಬಂಧಿಯ ಮಗುವಿಗೂ ಕೋವಿಡ್ 19 ಪತ್ತೆಯಾಗಿದೆ. ಬೆಳ್ಮಣ್‌ ಪಂಚಾಯತ್‌ ವ್ಯಾಪ್ತಿಯ ಕೋಡಿಮಾರ್‌ ನಿವಾಸಿ 63ರ ವ್ಯಕ್ತಿಗೂ ಪಾಸಿಟಿವ್‌ ವರದಿಯಾಗಿದ್ದು, ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ವಿದೇಶದಿಂದ ಬಂದ ಬೆಳ್ಮಣ್‌ನ ನಿವಾಸಿರಲ್ಲಿ ಕೋವಿಡ್ 19 ಕಂಡುಬಂದಿದ್ದು, ಅವರನ್ನು ಕರೆದುಕೊಂಡು ಬಂದಿದ್ದ ಬೆಳ್ಮಣ್‌ನ ರಿಕ್ಷಾ ಚಾಲಕರೊಬ್ಬರಿಗೂ ಸೋಂಕು ದೃಢವಾಗಿದೆ.

ಮೂಡ್ಲಕಟ್ಟೆ: ಬಸ್‌ ಚಾಲಕರಿಗೆ ಪಾಸಿಟಿವ್‌
ಬಸ್ರೂರು: ಕಂದಾವರ ಗ್ರಾಮದ ಮೂಡ್ಲಕಟ್ಟೆ ಕೆಪ್ಪನಬೆಟ್ಟು ನಿವಾಸಿ 42ರ ಕೆಎಸ್ಸಾರ್ಟಿಸಿ ಬಸ್‌ ಚಾಲಕರೊಬ್ಬರಿಗೆ ಕೊರೊನಾ ಪಾಸಿಟಿವ್‌ ಬಂದಿದ್ದು, ಅವರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಪು: 13 ಪಾಸಿಟಿವ್‌
ಕಾಪು ತಾಲೂಕಿನ ವಿವಿಧೆಡೆ ಶುಕ್ರವಾರ ಮೂವರು ಪೊಲೀಸರ ಸಹಿತ 13 ಮಂದಿಗೆ ಕೋವಿಡ್ 19 ಸೋಂಕು ಬಾಧಿಸಿದೆ. ಕಾಪು ಠಾಣೆಯ ಮೂವರು ಸಿಬಂದಿ, ಕುರ್ಕಾಲು ಗಿರಿನಗರದ ಇಬ್ಬರು ಪುರುಷರು, 3 ವರ್ಷದ ಬಾಲಕ, ಮೂಳೂರಿನ ಮಹಿಳೆ, ಕಟಪಾಡಿ ಫಾರೆಸ್ಟ್‌ ಗೇಟ್‌ನ ಪುರುಷ, ಕಟಪಾಡಿ ಅಚ್ಚಡದ ವೃದ್ಧೆ, ಮೂಡಬೆಟ್ಟು, ಕಾಪು ಪಡುಗ್ರಾಮ, ಎಲ್ಲೂರು ಬೆಳ್ಳಿಬೆಟ್ಟು ಮತ್ತು ಪಡುಬಿದ್ರಿ ನಡ್ಪಾಲಿನ ವ್ಯಕ್ತಿಗಳಿಗೆ ಪಾಸಿಟಿವ್‌ ಬಂದಿದೆ. ಅವರಲ್ಲಿ 83 ವರ್ಷದ ವೃದ್ಧೆಯೂ ಇದ್ದಾರೆ. ಎಲ್ಲ ಪ್ರಕರಣಗಳೂ ಸ್ಥಳೀಯ ಸಂಪರ್ಕದ್ದೇ ಆಗಿರುವ ಕಾರಣ ಜನತೆ ಮುಂಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆ ವಿನಂತಿಸಿದೆ.

ಬಾಧಿತರು
47 ಪುರುಷರು, 32 ಮಹಿಳೆಯರು, ಮೂರು ಗಂಡು ಮಕ್ಕಳು, ಎರಡು ಹೆಣ್ಣು ಮಕ್ಕಳಿದ್ದಾರೆ. ಉಡುಪಿ ತಾಲೂಕಿನ 33 ಮಂದಿ, ಕುಂದಾಪುರದ 40, ಕಾರ್ಕಳದ 11 ಮಂದಿ ಇದ್ದಾರೆ. ಜ್ವರ ಬಾಧೆಯ 13 ಮಂದಿ, ಉಸಿರಾಟ ಸಮಸ್ಯೆಯ (ಸಾರಿ) ನಾಲ್ವರು, ಮುಂಬಯಿಯಿಂದ ಬಂದ ಏಳು, ಮಂಗಳೂರಿನಿಂದ ಬಂದ ಮೂವರು, ದುಬಾೖ, ಅಬುಧಾಬಿಯಿಂದ ತಲಾ ಒಬ್ಬರು, ಬೆಂಗಳೂರಿನಿಂದ ಬಂದ ಆರು ಮಂದಿ ಇದ್ದಾರೆ. ಒಟ್ಟು 49 ಮಂದಿ ಪ್ರಾಥಮಿಕ ಸಂಪರ್ಕದಿಂದ ಸೋಂಕಿತರಾಗಿದ್ದಾರೆ.

24 ಮಂದಿ ಗುಣಮುಖ
ಶುಕ್ರವಾರ 213 ಮಾದರಿ ಸಂಗ್ರಹಿಸಿದ್ದು 414ರ ವರದಿ ಬರಬೇಕಿವೆ. ಒಟ್ಟು 1,979 ಸೋಂಕಿತರ ಪೈಕಿ 1,543 ಜನರು ಗುಣಮುಖರಾಗಿದ್ದಾರೆ. 429 ಜನರು ಆಸ್ಪತ್ರೆಗಳಲ್ಲಿದ್ದಾರೆ. 2,124 ಜನರು ಮನೆಗಳಲ್ಲಿ ಮತ್ತು 163 ಮಂದಿ ಆಸ್ಪತ್ರೆಗಳ ಐಸೊಲೇಶನ್‌ ವಾರ್ಡ್‌ಗಳಲ್ಲಿ ನಿಗಾದಲ್ಲಿದ್ದಾರೆ. 32 ಜನರು ಐಸೊಲೇಶನ್‌ ವಾರ್ಡ್‌ಗಳಿಗೆ ಸೇರಿದ್ದು 24 ಮಂದಿ ಬಿಡುಗಡೆಗೊಂಡಿದ್ದಾರೆ.

ಕುಂದಾಪುರ, ಬೈಂದೂರು: 25 ಮಂದಿಗೆ ಪಾಸಿಟಿವ್‌
ಕುಂದಾಪುರ ತಾಲೂಕಿನಲ್ಲಿ ಶುಕ್ರವಾರ 21 ಮಂದಿಗೆ ಮತ್ತು ಬೈಂದೂರು ತಾಲೂಕಿನಲ್ಲಿ ನಾಲ್ವರಿಗೆ ಕೋವಿಡ್ 19 ಪಾಸಿಟಿವ್‌ ದೃಢವಾಗಿದೆ. ಕುಂದಾಪುರದಲ್ಲಿ ಯಡಾಡಿ – ಮತ್ಯಾಡಿಯ ನಾಲ್ವರು, ಕಾವ್ರಾಡಿ ಗಂಗೊಳ್ಳಿ ತಲಾ ಮೂವರು, ಮೊಳಹಳ್ಳಿ, ಕರ್ಕುಂಜೆ, ಬಳ್ಕೂರು, ವಂಡ್ಸೆಯಲ್ಲಿ ತಲಾ ಇಬ್ಬರು, ಶಂಕನಾರಾಯಣ, ತ್ರಾಸಿ ಹಾಗೂ ಕುಂಭಾಶಿಯಲ್ಲಿ ತಲಾ ಒಬ್ಬರು ಬಾಧಿತರಿದ್ದಾರೆ. ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಮೂವರು ಹಾಗೂ ಪಡುವರಿಯ ಒಬ್ಬರಿಗೆ ಪಾಸಿಟಿವ್‌ ಬಂದಿದ್ದು, ಅವರು ಮಹಾರಾಷ್ಟ್ರದಿಂದ ಬಂದಿದ್ದ ಕೋವಿಡ್ 19 ಪಾಸಿಟವ್‌ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟವರಾಗಿದ್ದರು.

ಎರಡೇ ದಿನಕ್ಕೆ ಬಿಡುಗಡೆ
ವಂಡ್ಸೆ ಮೂಲದ ಕುಂದಾಪುರದ ಜುವೆಲರಿ ಮಳಿಗೆಯೊಂದರಲ್ಲಿ ಕೆಲಸ ಮಾಡುವ ಯುವತಿಯ ಗಂಟಲ ದ್ರವದ ಮಾದರಿಯನ್ನು ರ್‍ಯಾಂಡಮ್‌ ಪರೀಕ್ಷೆ ವೇಳೆ ಸಂಗ್ರಹಿಸಿದ್ದು, 10 ದಿನದ ಬಳಿಕ ಬಂದ ವರದಿಯಲ್ಲಿ ಪಾಸಿಟಿವ್‌ ಬಂದಿದ್ದು, ಚಿಕಿತ್ಸೆಗೆಂದು ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ, ಮನೆಯನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಆದರೆ ಅದಾಗಿ ಎರಡೇ ದಿನದಲ್ಲಿ ಮತ್ತೊಂದು ವರದಿಯಲ್ಲಿ ನೆಗೆಟಿವ್‌ ಬಂದಿದೆಯೆಂದು ಬಿಡುಗಡೆ ಮಾಡಲಾಗಿದೆ.

ಕಂಡ್ಲೂರು, ಬಳ್ಕೂರು: ಐವರಿಗೆ ಸೋಂಕು
ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಬದಿಯ ಒಂದೇ ಮನೆಯ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆ ಸೇರಿ ಒಟ್ಟು ಮೂವರಿಗೆ ಪಾಸಿಟಿವ್‌ ಬಂದಿದ್ದು, ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ಕೋವಿಡ್ ಸೋಂಕಿನಿಂದ ಗುಣಹೊಂದಿದ್ದ ಆಟೋ ಚಾಲಕರೊಬ್ಬರ ಪತ್ನಿ ಮತ್ತು ಮೊಮ್ಮಗಳಿಗೆ ಸೋಂಕು ದೃಢವಾಗಿದೆ.

ಕೋಟ ಹೋಬಳಿ: ಐದು ಪ್ರಕರಣ
ಕೋಟ ಹೋಬಳಿಯ ವಿವಿಧ ಕಡೆಗಳಲ್ಲಿ ಶುಕ್ರವಾರ 5 ಪಾಸಿಟಿವ್‌ ಪ್ರಕರಣ ವರದಿಯಾಗಿವೆ. ಸಾಲಿಗ್ರಾಮದ ರೆಡಿಮೇಡ್‌ ವಸ್ತ್ರದಂಗಡಿಯ ನೌಕರ ಕಾರ್ಕಡದ ನಿವಾಸಿ ಹಾಗೂ ಕೋಟ ತಟ್ಟಿನ ಇಬ್ಬರು, ಮಣೂರು ಕಂಬಳಗದ್ದೆಯ ಓರ್ವ, ಬಾರಕೂರು ಹೊಸಾಳದ ಬಾಲಕ ಬಾಧಿತರು.

ಕುಂದಾಪುರದ ಕ್ರೀಡಾಪಟು ಕುವೈಟ್‌ನಲ್ಲಿ ಸಾವು
ಕುವೈಟ್‌ನಲ್ಲಿ ಕೋವಿಡ್ 19 ಸೋಂಕಿಗೆ ಕುಂದಾಪುರದ ಮಾಜಿ ಕ್ರೀಡಾಪಟುವೊಬ್ಬರು ಬಲಿಯಾಗಿದ್ದಾರೆ. 80ರ ದಶಕದಲ್ಲಿ ಭಂಡಾರ್‌ಕಾರ್ಸ್‌ ಕಾಲೇಜಿನ ಮಾಜಿ ಆ್ಯತ್ಲೆಟಿಕ್ಸ್‌ ಚಾಂಪಿಯನ್‌, ಕಬಡ್ಡಿ ಮತ್ತು ವಾಲಿಬಾಲ್‌ ಆಟಗಾರ ಇಲ್ಲಿನ ಖಾರ್ವಿಕೇರಿ ನಿವಾಸಿ ಶೇಕ್‌ ಮಹ್ಮದ್‌ ಸಯೀದ್‌ (56) ಅವರು ಕುವೈಟ್‌ನಲ್ಲಿ ಜು.16ರಂದು ಮೃತಪಟ್ಟಿದ್ದಾರೆ.

ಕುವೈಟ್‌ನ ಕೆ. ಆರ್‌. ಎಚ್‌. ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಅವರು ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿ ತಪಾಸಣೆ ನಡೆಸಿದಾಗ ಕೋವಿಡ್‌ 19 ಸೋಂಕು ತಗಲಿರುವುದು ದೃಢಪಟ್ಟಿತ್ತು. ಅವರು 22 ದಿನಗಳಿಂದ ಆಸ್ಪತ್ರೆಯಲ್ಲಿದ್ದರು. ಅಂತ್ಯಕ್ರಿಯೆಯನ್ನು ಕುವೈಟ್‌ನಲ್ಲಿಯೇ ನಡೆಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರು ಯುವ ಆಟಗಾರರಿಗೆ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು. ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಕ್ವಾರಂಟೈನ್‌ ಉಲ್ಲಂಘನೆ 11 ಪ್ರಕರಣ ದಾಖಲು
ಉಡುಪಿ:
ಹೋಂ ಕ್ವಾರಂಟೈನ್‌ ಉಲ್ಲಂಘಿಸುವವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ-2005, ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897 ಮತ್ತು ಭಾರತೀಯ ದಂಡ ಸಂಹಿತೆಯಡಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ಸರಕಾರದಿಂದ ನಿರ್ದೇಶನ ಇದ್ದು, ಅದರಂತೆ ಜಿಲ್ಲೆಯಲ್ಲಿ ಈಗಾಗಲೇ 11 ಎಫ್ಐಆರ್‌ ದಾಖಲಿಸಲಾಗಿದೆ.

ಹೋಂ ಕ್ವಾರಂಟೈನ್‌ ನಿಯಮ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವನ್ನು ಕೈಗೊಳ್ಳಲು ಆಯಾ ತಾಲೂಕಿನ ತಹಶೀಲ್ದಾರರು, ಕಾರ್ಯ ನಿರ್ವಾಹಣಾಧಿಕಾರಿಗಳು ಮತ್ತು ಫ್ಲೈಯಿಂಗ್‌ ಸ್ಕ್ವಾಡ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next