Advertisement

ಸಾಲ ಮರುಪಾವತಿಸದೆ 80 ಲಕ್ಷ ರೂ. ವಂಚನೆ: ನಾಲ್ವರ ವಿರುದ್ಧ ಪ್ರಕರಣ

01:10 AM Nov 06, 2022 | Team Udayavani |

ಮಂಗಳೂರು: ಬ್ಯಾಂಕ್‌ನಿಂದ ಸಾಲ ಪಡೆದು ಮರುಪಾವತಿಸದೆ 80ಲಕ್ಷ ರೂ. ವಂಚನೆ ಮಾಡಿರುವ ಕುರಿತಂತೆ ಶ್ರೀಧರ ಅಡಪ, ಹೆರಾಲ್ಡ್‌ ಅವಿನಾಶ್‌, ಮಂಜುನಾಥ ಪ್ರಸಾದ್‌, ಕಿರಣ್‌ ಕುಮಾರ್‌ ಎಂಬುವರ ವಿರುದ್ಧ ನಗರದ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

2016ನೇ ಡಿಸೆಂಬರ್‌ನಲ್ಲಿ ನಗರದ ಪೂಂಜಾ ಆರ್ಕೇಡ್‌ ನಲ್ಲಿರುವ ಆಂಧ್ರಾ ಬ್ಯಾಂಕ್‌ನಿಂದ ಶ್ರೀಧರ್‌ ಅಡಪ, ಅವಿನಾಶ್‌ ಎಂಬವರು ಕಿರಣ್‌ ಕುಮಾರ್‌ ಅತೋಳಿಗೆ ಮೂಲಕ ಬ್ಯಾಂಕ್‌ ಮುಖ್ಯ ಪ್ರಬಂಧಕ ಮಂಜುನಾಥ ಪ್ರಸಾದ್‌ಗೆ 45ಲಕ್ಷ ರೂ. ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಂತೆ 2017 ಜ.21ರಂದು 35ಲಕ್ಷ ರೂ. ವರ್ಗಾವಣೆಯಾಗಿದೆ.

ಸಾಲ ಪತ್ರದ ಕರಾರಿನಂತೆ ತಿಂಗಳಿಗೆ 34,051ರೂ. ಕಂತನ್ನು 10.90 ಬಡ್ಡಿ ದರದಲ್ಲಿ ಪಾವತಿಸಲು ಆರೋಪಿಗಳು ಒಪ್ಪಿಕೊಂಡಿದ್ದರು. 2018ರ ಮೇ 7ರಂದು ಸಾಲದ ಹಣವು ಅನುತ್ಪಾದಕ ಆಸ್ತಿ ಎಂದು ಪರಿವರ್ತನೆಗೊಂಡಿರುತ್ತದೆ. ಬ್ಯಾಂಕ್‌ನಿಂದ ಆರೋಪಿಗಳಿಗೆ ಡಿಮ್ಯಾಂಡ್‌ ನೋಟಿಸ್‌ ಜಾರಿಗೊಳಿಸಿದ್ದು, ಅದಕ್ಕೆ ಗಮನ ಹರಿಸಲಿಲ್ಲ.

ಬೆಂಗಳೂರಿನ ಸಾಲ ಮರುಪಾವತಿ ನ್ಯಾಯ ಮಂಡಳಿ-1ರಲ್ಲೂ ಬ್ಯಾಂಕ್‌ ಪ್ರಬಂಧಕರು ದೂರು ದಾಖಲಿಸಿದ್ದು, ಪ್ರಸ್ತುತ ಪ್ರಕರಣದ ತೀರ್ಪು ಬರಲು ಬಾಕಿ ಇದೆ. ಈ ನಡುವೆ 2021ರ ಡಿ.2ರಂದು ಬ್ಯಾಂಕ್‌ನ ಅಧಿಕಾರಿಗಳು ಸಂಬಂಧಪಟ್ಟ ಜಾಗಕ್ಕೆ ತೆರಳಿ ಪರೀಕ್ಷಿಸಿದಾಗ ಅಲ್ಲಿ ಯಾವುದೇ ಮನೆ ಕಟ್ಟದೇ ಜಾಗ ಖಾಲಿ ಬಿದ್ದಿರುವುದು ಕಂಡು ಬಂದಿದೆ. ನಾಲ್ವರು ಆರೋಪಿಗಳು ಸೇರಿ ಸಾಲ ಮರುಪಾವತಿಸದೆ ಒಟ್ಟು 80 ಲಕ್ಷ ರೂ. ಹಣವನ್ನು ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next